ಬೆಂಗಳೂರು: ಆಸ್ಪತ್ರೆಗೆ ದಾಖಲಾಗಿರುವ ಕೊರೊನಾ ಸೋಂಕಿತರಲ್ಲಿ ಲಸಿಕೆ ಪಡೆದವರೇ ಹೆಚ್ಚು
ಬೆಂಗಳೂರು, ಆಗಸ್ಟ್ 04: ಬೆಂಗಳೂರಿನಲ್ಲಿ ಕೊರೊನಾ ಸೋಂಕು ತಗುಲಿ ಆಸ್ಪತ್ರೆಗೆ ದಾಖಲಾದ ಶೇ.56ರಷ್ಟು ಮಂದಿ ಕನಿಷ್ಠ ಒಂದು ಕೊರೊನಾ ಲಸಿಕೆ ಪಡೆದವರಾಗಿದ್ದಾರೆ ಎನ್ನುವ ಆಘಾತಕಾರಿ ವಿಚಾರ ತಿಳಿದುಬಂದಿದೆ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ನೀಡಿರುವ ಮಾಹಿತಿ ಪ್ರಕಾರ, ಜುಲೈ 2 ರಿಂದ 27ರ ನಡುವೆ 2,700 ಮಂದಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅದರಲ್ಲಿ 1600 ಮಂದಿ ಕನಿಷ್ಠ ಒಂದು ಡೋಸ್ ಲಸಿಕೆ ಪಡೆದಿದ್ದಾರೆ, 1,200 ಮಂದಿ ಕೋವಿಶೀಲ್ಡ್, 400 ಮಂದಿ ಕೋವ್ಯಾಕ್ಸಿನ್ ಲಸಿಕೆ ಪಡೆದವರಾಗಿದ್ದಾರೆ ಎಂದು ತಿಳಿಸಿದೆ.
RTPCR ವರದಿ ಇಲ್ಲದ ಈ 2 ರಾಜ್ಯದ ಪ್ರಯಾಣಿಕರಿಗೆ ಕ್ವಾರಂಟೈನ್ ಕಡ್ಡಾಯ
ಕೋವಿಶೀಲ್ಡ್ ಲಸಿಕೆ ಪಡೆದ 1200 ಮಂದಿಯಲ್ಲಿ 450 ಮಂದಿ ಸಂಪೂರ್ಣ ಲಸಿಕೆ ಪಡೆದಿದ್ದಾರೆ, 400 ಮಂದಿ ಕೋವ್ಯಾಕ್ಸಿನ್ ಲಸಿಕೆ ಪಡೆದವರ ಪೈಕಿ 180 ಮಂದಿ ಎರಡೂ ಲಸಿಕೆಯನ್ನು ಪಡೆದಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಆಯುಕ್ತ ಗೌರವ್ ಗುಪ್ತಾ ಮಾತನಾಡಿ " ನೀವು ಸಾಮಾನ್ಯವಾಗಿ 45 ನಂತರದ ವಯಸ್ಸಿನ ಗುಂಪಿನ ಡೇಟಾವನ್ನು ತೆಗೆದುಕೊಂಡರೆ ಶೇ.82ರಷ್ಟು ಮಂದಿಗೆ ಲಸಿಕೆ ಹಾಕಲಾಗಿದೆ. ಆಸ್ಪತ್ರೆಗೆ ದಾಖಲಾದ ಬಹುತೇಕ ಮಂದಿ ಲಸಿಕೆ ಹಾಕಿಸಿಕೊಂಡವರು ಎಂಬುದರಲ್ಲಿ ಯಾವುದೇ ಆಶ್ಚರ್ಯವಿಲ್ಲ'' ಎಂದರು.
ಕೇರಳ ಹಾಗೂ ಮಹಾರಾಷ್ಟ್ರ ರಾಜ್ಯಗಳಿಂದ ನಗರಕ್ಕೆ ರಸ್ತೆಗಳ ಮೂಲಕ ಆಗಮಿಸುವರನ್ನು ಗಡಿ ತಪಾಸಣಾ ಠಾಣೆಗಳ ಬಳಿ ಪರಿಶೀಲನೆಗೆ ಒಳಪಡಿಸಲಾಗುತ್ತಿದೆ. ಈ ರಾಜ್ಯಗಳ ಪ್ರಯಾಣಿಕರು 72 ಗಂಟೆಳ ಈಚೆಗೆ ಮಾಡಿಸಿರುವ ಆರ್ಟಿಪಿಸಿಆರ್ ಪರೀಕ್ಷಾ ವರದಿಯನ್ನು ಪರಿಶೀಲಿಸಲು ತಪಾಸಣಾ ತಂಡಗಳನ್ನು ನಿಯೋಜನೆ ಮಾಡಲಾಗಿದೆ. ತಪಾಸಣಾ ಕಾರ್ಯವನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲಿದ್ದೇವೆಂದು ಹೇಳಿದ್ದಾರೆ.
ಬಳಿಕ ಮಾತನಾಡಿದ ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಅವರು, ನಗರದಲ್ಲಿ ಕೋವಿಡ್ ನಿಯಂತ್ರಿಸಲು ಪೊಲೀಸ್ ಇಲಾಖೆಯಿಂದ ಅಗತ್ಯ ಸಹಕಾರ ನೀಡಲಾಗುವುದು. ಕೊವಿಡ್ ನಿಯಮಗಳನ್ನು ಪಾಲಿಸದಿರುವವರ ಮೇಲೆ ಪ್ರಕರಣಗಳನ್ನು ದಾಖಲಿಸಲಾಗುವುದು ಎಂದು ತಿಳಿಸಿದರು.
ಬಿಬಿಎಂಪಿ ಆಡಳಿತಾಧಿಕಾರಿ ರಾಕೇಶ್ ಸಿಂಗ್ ಮಾತನಾಡಿ, ನಗರದಲ್ಲಿ ಕೋವಿಡ್ ಹರಡುವಿಕೆಯನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಲು ಪಾಲಿಕೆ ಹಾಗೂ ಪೊಲೀಸ್ ಇಲಾಖೆಗಳು ಸಮನ್ವಯದಿಂದ ಕೆಲಸ ಮಾಡಬೇಕು.
ಕೋವಿಡ್ ನಿಯಂತ್ರಣ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಜನರಲ್ಲಿ ಜಾಗೃತಿ ಮೂಡಿಸಬೇಕು. ಆ ಬಳಿಕವೂ ನಿಯಮ ಪಾಲಿಸದಿದ್ದಲ್ಲಿ ದಂಡ ವಿಧಿಸಬೇಕು. ಅಗತ್ಯ ಬಿದ್ದರೆ, ಪ್ರಕರಣಗಳನ್ನು ದಾಖಲಿಸುವುದಕ್ಕೂ ಹಿಂದೇಟು ಹಾಕಬಾರದು ಎಂದರು.
ಇಬ್ಬರಲ್ಲೂ ಏನಾದರೂ ವ್ಯತ್ಯಾಸ ಇದೆಯೇ?
ಲಸಿಕೆ ಹಾಕಿಸಿಕೊಂಡವರು ಮತ್ತು ಲಸಿಕೆ ಹಾಕಿಸಿಕೊಳ್ಳದವರಲ್ಲಿ ಏನಾದರೂ ವ್ಯತ್ಯಾಸ ಇದೆಯೇ ಎಂದು ನಾವು ವೈದ್ಯರ ಅಭಿಪ್ರಾಯ ಕೇಳಬೇಕು. ಅದಕ್ಕು ಮೊದಲು ಯಾವುದೇ ತೀರ್ಮಾನಕ್ಕೆ ಬರಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಅಪೋಲೊ ಆಸ್ಪತ್ರೆ
ಅಪೋಲೋ ಆಸ್ಪತ್ರೆಯಲ್ಲಿ ನಡೆಸ ಸಂಶೋಧನೆಯಲ್ಲಿ ಮಧ್ಯಮ ಮತ್ತು ತೀವ್ರ ಕೋವಿಡ್ 19 ನ್ಯುಮೋನಿಯಾ ಹೊಂದಿರುವ 500 ರೋಗಿಗಳನ್ನು ಪರೀಕ್ಷಿಸಿದ್ದು, ಏಪ್ರಿಲ್ 21 ಮತ್ತು ಮೇ 30ರ ನಡುವೆ 40 ದಿನಗಳವರೆಗೆ ನಿಗಾ ಇರಿಸಲಾಗಿತ್ತು. ಅದರಲ್ಲಿ 148 ಮಂದಿಗೆ ಲಸಿಕೆ ನೀಡಲಾಗಿತ್ತು.
124(84%) ಕೋವಿಶೀಲ್ಡ್, 24(16%) ಕೋವ್ಯಾಕ್ಸಿನ್ ಲಸಿಕೆ ಪಡೆದವರಾಗಿದ್ದರು ಅವರ ವಯಸ್ಸು 58 ವರ್ಷದ ಆಸುಪಾಸಿತ್ತು. 125ಲಸಿಕೆ ಪಡೆಯದ ಜನರಿಗೆ ಹೋಲಿಕೆ ಮಾಡಿದರೆ ಶೇ.19.5ರಷ್ಟು(29) ಲಸಿಕೆ ಪಡೆದಿರುವ ಜನರಿಗೆ ತೀವ್ರ ಸೋಂಕು ತಗುಲಿತ್ತು, ಅಂತ್ಯದಲ್ಲಿ 20 ಮಂದಿ ಮೃತಪಟ್ಟಿದ್ದರು ಅವರೆಲ್ಲರೂ ಕನಿಷ್ಠ ಒಂದು ಡೋಸ್ ಲಸಿಕೆ ಪಡೆದವರಾಗಿದ್ದರು. ಎರಡೂ ಲಸಿಕೆ ಪಡೆದ 14 ಮಂದಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.
ಎರಡೂ ಲಸಿಕೆ ಪಡೆದರೆ ಕೊರೊನಾ ಸೋಂಕು ಮರುಕಳಿಸುವಿಕೆ ಹಾಗೂ ತೀವ್ರತೆ ಕಡಿಮೆ ಇರುತ್ತದೆ ಎಂಬುದು ವೈದ್ಯರ ಅಭಿಪ್ರಾಯವಾಗಿದೆ.
ಆರ್ಟಿಪಿಸಿಆರ್ ವರದಿ ಕಡ್ಡಾಯ
ಕೋವಿಡ್-19 ಸೋಂಕು ಹೆಚ್ಚಾಗಿರುವ ಕೇರಳ ಮತ್ತು ಮಹಾರಾಷ್ಟ್ರದಿಂದ ಬೆಂಗಳೂರಿಗೆ ಬರುವವರಿಗೆ ತಕ್ಷಣದಿಂದ ಆರ್ಟಿಟಿ-ಪಿಸಿಆರ್ ವರದಿ ಮತ್ತು ಸಾಂಸ್ಥಿಕ ಕ್ವಾರಂಟೈನ್ ಕಡ್ಡಾಯ ಮಾಡಿದ್ದೇವೆಂದು ಪಾಲಿಕೆ ಮುಖ್ಯ ಆಯುಕ್ತ ಗೌರವ್ ಗುಪ್ತಾ ಅವರು ಹೇಳಿದ್ದಾರೆ. ಕೋವಿಡ್-19 ಪರೀಕ್ಷೆ ವರದಿ ಇಲ್ಲದೆ ಬೆಂಗಲೂರಿಗೆ ಬರುವ ಪ್ರಯಾಣಿಕರನ್ನು ವಿಮಾನ ನಿಲ್ದಾಣ, ರೈಲ್ವೇ ನಿಲ್ದಾಣ ಮತ್ತು ಬಸ್ ನಿಲ್ದಾಣಗಳಲ್ಲಿಯೇ ಕೋವಿಡ್ ಪರೀಕ್ಷೆಗೆ ಒಳಪಡಿಸಲಾಗುವುದು. ನೆಗೆಟಿವ್ ವರದಿ ಕೈ ಸೇರುವವರೆಗೂ ಅವರು ಮನೆಯಲ್ಲಿಯೇ ಕ್ವಾರಂಟೈನ್ ಇರಬೇಕು. ಇಲ್ಲದಿದ್ದರೆ, ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
Recommended Video
ಕ್ವಾರಂಟೈನ್ಗೆ ಸಿದ್ಧರಾಗಿ
ಕ್ವಾರಂಟೈನ್ ಮತ್ತು ಮೈಕ್ರೋ ಕಂಟೈನ್ಮೆಂಟ್ ಬಗ್ಗೆ ಈಗಾಗಲೇ ವಲಯವಾರು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಪಾಲಿಕೆಯೊಂದಿಗೆ ಪೊಲೀಸ್ ಇಲಾಖೆಯೂ ಕೈಜೋಡಿಸಿದ್ದು, ಯಾರಾದರೂ ಕೋವಿಡ್ ನಿಯಮ ಅಥವಾ ಕ್ವಾರಂಟೈನ್ ಕುರಿತು ನಿರ್ಲಕ್ಷ್ಯ ವಹಿಸಿದರೆ ಕಾನೂನು ಕ್ರಮಕ್ಕೆ ಸೂಚಿಸಲಾಗಿದೆ. ಜೊತೆಗೆ ಎಲ್ಲೆಡೆ ಪರೀಕ್ಷೆಗಳನ್ನೂ ಹೆಚ್ಚಿಸಲಾಗಿದೆ ಎಂದು ತಿಳಿಸಿದರು.
ಕೋವಿಡ್ ಮೂರನೇ ಅಲೆ ಆರಂಭವಾಗಿರುವ ಕುರಿತು ಆರೋಗ್ಯ ತಜ್ಞರು ದೃಢಪಡಿಸಿಲ್ಲ. ಆದರೂ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದ್ದೇವೆ. ಎರಡನೇ ಅಲೆಯಲ್ಲಿ ಸಿದ್ಧತೆ ಮಾಡಿಕೊಂಡಿದ್ದ ಸರ್ಕಾರಿ ಆಸ್ಪತ್ರೆಗಳ ಹಾಸಿಗೆ ವ್ಯವಸ್ಥೆ, ಕೋವಿಡ್ ಆರೈಕೆ ಕೇಂದ್ರಗಳನ್ನು ಹಾಗೆಯೇ ಉಳಿಸಿಕೊಳ್ಳಲಾಗಿದೆ. ಸದ್ಯ ಪ್ರತಿ ದಿನ 500ಕ್ಕಿಂತ ಕಡಿಮೆ ಕೋವಿಡ್ ಪ್ರಕರಣಗಳು ವರದಿಯಾಗುತ್ತಿವೆ. ಕೋವಿಡ್ ನಿಯಮಗಳ ಕುರಿತು ಜನರಲ್ಲಿ ಜಾಗೃತಿ ಹೆಚ್ಚಾಗಬೇಕು.
ಮಾಸ್ಕ್, ಸಾಮಾಜಿಕ ಅಂತರ ಸೇರಿದಂತೆ ಕೊರೋನಾ ಮಾರ್ಗಸೂಚಿಗಳನ್ನು ಕಡ್ಡಾಯ ಪಾಲನೆ ಮಾಡಬೇಕು. ಈ ಮೂಲಕ ಸೋಂಕು ನಿಯಂತ್ರಣಕ್ಕೆ ಸಹಕರಿಸಬೇಕೆಂದು ಹೇಳಿದರು.