ಐಎಂಎ ವಂಚನೆ : 101 ಬ್ಯಾಂಕ್ ಖಾತೆಯಿಂದ 116 ಕೋಟಿ ರು ವಶ
ಬೆಂಗಳೂರು, ಜುಲೈ 01: ಐ.ಎಂ.ಎ ಸಂಸ್ಥೆಯ ಬಹುಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ನಾಮನಿರ್ದೇಶಿತ ಸದಸ್ಯರ(ಕಾರ್ಪೋರೇಟರ್) ಬಂಧನವಾಗಿದೆ. ಜೊತೆಗೆ ಹಲವು ಮಹತ್ವದ ದಾಖಲಾತಿಗಳ ವಶಪಡಿಸಿಕೊಳ್ಳಲಾಗಿದೆ. ಅಲ್ಲದೇ, ಇದುವರೆಗೆ ರೂ.1,16,94,307 ಹಣ ಇದ್ದ ಐ.ಎಂ.ಎ ಒಡೆತನದ ಕಂಪನಿಗಳ ಹೆಸರಿನ ಒಟ್ಟು 101 ಬ್ಯಾಂಕ್ ಖಾತೆಗಳ ಪತ್ತೆಯಾಗಿದೆ ಎಂದು ಬೆಂಗಳೂರು ಪೊಲೀಸರು ಹೇಳಿದ್ದಾರೆ.
ಐ.ಎಂ.ಎ ಸಂಸ್ಥೆಯ ಬಹುಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ವಿಶೇಷ ಪೊಲೀಸ್ ತನಿಖಾ ತಂಡವು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ನಾಮನಿರ್ದೇಶಿತ (ನಾಮಿನೇಟೆಡ್) ಸದಸ್ಯರಾದ ಸೈಯದ್ ಮುಜಾಹಿದ್ ರವರನ್ನು ಜೂನ್ 30ರಂದು ದಸ್ತಗಿರಿ ಮಾಡಿದೆ.
ಐಎಂಎ ವಂಚನೆ ರುವಾರಿ ಮನ್ಸೂರ್ ಖಾನ್ ಶೀಘ್ರ ಭಾರತಕ್ಕೆ
ಫ್ರೇಜರ್ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಆರೋಪಿ ಸೈಯದ್ ಮುಜಾಹಿದ್ ರವರ ವಾಸದ ಮನೆಯನ್ನು ಶೋಧನೆ ಮಾಡಲಾಗಿದ್ದು, ಶೋಧನಾ ಸಮಯದಲ್ಲಿ ಕೃತ್ಯಕ್ಕೆ ಸಂಬಂಧಿಸಿದ ಹಲವು ಮಹತ್ವದ ಕಾಗದ ಪತ್ರಗಳು, ಒಂದು ಫಾರ್ಚುನರ್ ಕಾರು ಹಾಗೂ ಎರಡು ಮೊಬೈಲ್ ಪೋನ್ಗಳನ್ನು ವಶಪಡಿಸಿಕೊಳ್ಳಲಾಗಿರುತ್ತದೆ. ಆರೋಪಿಯನ್ನು ಮಾನ್ಯ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದು, ಮಾನ್ಯ ನ್ಯಾಯಾಧೀಶರು ಆರೋಪಿಯನ್ನು 13 ದಿನಗಳ ಕಾಲ ಪೊಲೀಸ್ ವಶಕ್ಕೆ ನೀಡಿರುತ್ತಾರೆ. ಆರೋಪಿಯ ವಿಚಾರಣೆಯು ತೀವ್ರಗತಿಯಲ್ಲಿ ಇರುತ್ತದೆ.
ಇದಲ್ಲದೇ, ತನಿಖಾ ಕಾಲದಲ್ಲಿ ಐ.ಎಂ.ವಿ ಒಡೆತನದ ವಿವಿಧ ಕಂಪನಿಗಳ ಹೆಸರಿನಲ್ಲಿದ್ದ ಒಟ್ಟು 101 ವಿವಿಧ ಬ್ಯಾಂಕ್ ಖಾತೆಗಳನ್ನು ಪತ್ತೆ ಹಚ್ಚಿದ ಎಸ್.ಐ.ಟಿ ತಂಡವು ಈ ಖಾತೆಗಳಲ್ಲಿ ರೂ. 1,16,94,307 ಹಣ ಇರುವುದನ್ನು ತಿಳಿದು ಈ ಎಲ್ಲಾ ಖಾತೆಗಳ ಮುಂದಿನ ವ್ಯವಹಾರವನ್ನು ಸ್ಥಗಿತಗೊಳಿಸುವ ಕ್ರಮ ತೆಗೆದುಕೊಂಡಿರುತ್ತದೆ.
ಐಎಂಎ ವಂಚನೆ: ಮನ್ಸೂರ್ಗೆ ಸೇರಿದ 206 ಕೋಟಿ ಆಸ್ತಿ ವಶ
ಈ ಕಾರ್ಯಾಚರಣೆಯನ್ನು ಐ.ಎಂ.ಎ ಪ್ರಕರಣದ ವಿಶೇಷ ತನಿಖಾ ತಂಡದ ಮುಖ್ಯಸ್ಥರಾದ ಬಿ.ಆರ್.ರವಿಕಾಂತೇಗೌಡ, ಐಪಿಎಸ್, ಡಿಐಜಿ & ಜಂಟಿ ಪೊಲೀಸ್ ಆಯುಕ್ತರು, ಅಪರಾಧ, ಬೆಂಗಳೂರು ನಗರ ರವರ ಮತ್ತು ಗಿರೀಶ್.ಎಸ್, ಐಪಿಎಸ್, ಡಿಸಿಪಿ, ಅಪರಾಧ, ಬೆಂಗಳೂರು ನಗರ ರವರ ಮಾರ್ಗದರ್ಶನದಲ್ಲಿ ಡಿವೈಎಸ್ಪಿಗಳಾದ ಕೆ.ರವಿಶಂಕರ್, ಅಬ್ದುಲ್ ಖಾದರ್, ಬದ್ರಿನಾಥ್ ಹಾಗೂ ಪೊಲೀಸ್ ಇನ್ಸ್ಪೆಕ್ಟರ್ ಕೆ.ಅಂಜನ್ಕುಮಾರ್ ರವರನ್ನೊಳಗೊಂಡ ವಿಶೇಷ ಪೊಲೀಸ್ ತನಿಖಾ ತಂಡವು ನಿರ್ವಹಿಸಿರುತ್ತವೆ.