ಐಎಂಎ ವಂಚನೆ ಪ್ರಕರಣ: ಹೇಮಂತ್ ನಿಂಬಾಳ್ಕರ್ಗೆ ಬಿಗ್ ರಿಲೀಫ್
ಬೆಂಗಳೂರು, ಮಾರ್ಚ್ 19: ಐಎಂಎ ಬಹುಕೋಟಿ ವಂಚನೆ ಪ್ರಕರಣ ಸಂಬಂಧ ಹಿರಿಯ ಐಪಿಎಸ್ ಅಧಿಕಾರಿ ಹೇಮಂತ್ ನಿಂಬಾಳ್ಕರ್ ವಿರುದ್ಧ ಸಿಬಿಐ ಸಲ್ಲಿಸಿದ್ದ ದೋಷಾರೋಪ ಪಟ್ಟಿಯನ್ನು ಹೈಕೋರ್ಟ್ ರದ್ದು ಮಾಡಿದೆ. ಐಎಂಎ ಸಂಕಟದಲ್ಲಿ ಸಿಲುಕಿದ್ದ ನಿಂಬಾಳ್ಕರ್ಗೆ ಇದೀಗ ಕೋರ್ಟ್ನಿಂದ ತಾತ್ಕಾಲಿಕವಾಗಿ ಬಿಗ್ ರಿಲೀಫ್ ಸಿಕ್ಕಿದಂತಾಗಿದೆ. ಹೇಮಂತ್ ನಿಂಬಾಳ್ಕರ್ ವಿರುದ್ಧ ಸಿಬಿಐ ದಾಖಲಿಸಿದ್ದ ಪ್ರಕರಣವನ್ನು ಹೈಕೋರ್ಟ್ ರದ್ದು ಮಾಡಿದೆ.
ಜನ ಸಾಮಾನ್ಯರಿಗೆ ದುಬಾರಿ ಬಡ್ಡಿ ನೀಡುವುದಾಗಿ ಹೂಡಿಕೆ ಮಾಡಿಸಿಕೊಂಡು ಕೈ ಎತ್ತಿದ ವಂಚಕ ಕಂಪನಿ ಐಎಂಎ. ಸಾರ್ವಜನಿಕರಿಂದ ಕಾನೂನು ಬಾಹಿರವಾಗಿ ಹಣ ಕಟ್ಟಿಸಿಕೊಂಡು ವಂಚಿಸುತ್ತಿರುವ ಬಗ್ಗೆ ಭಾರತೀಯ ರಿಸರ್ವ್ ಬ್ಯಾಂಕ್ ಗಮನಿಸಿತ್ತು. ಈ ಕುರಿತು ತನಿಖೆ ನಡೆಸಿ ಕ್ರಮ ಜರುಗಿಸುವಂತೆ ಕೂಡ ಆರ್ಬಿಐ ನಿರ್ದೇಶನ ನೀಡಿತ್ತು. ಚಿನ್ನದ ಮೇಲಿನ ಹೂಡಿಕೆ, ದುಬಾರಿ ಬಡ್ಡಿ ಆಸೆ ಹುಟ್ಟಿಸಿ ಸಾವಿರಾರು ಮಂದಿಯಿಂದ ಸಾವಿರಾರು ಕೋಟಿ ವಸೂಲಿ ಮಾಡಿದ್ದ ಐಎಂಎ ಅದಾಗಲೇ ಜನರಿಗೆ ಮರು ಪಾವತಿ ಮಾಡದೇ ಬೀದಿಗೆ ಬರುವ ಹಂತದಲ್ಲಿತ್ತು.
ಐಎಂಎ ಬಹುಕೋಟಿ ವಂಚನೆ ಪ್ರಕರಣ: ಕಡಿಮೆ ಹೂಡಿಕೆ ಮಾಡಿದವರಿಗೆ ಲಾಟರಿ !
ಈ ಕುರಿತು ತನಿಖೆ ನಡೆಸಿ ವರದಿ ನೀಡಬೇಕಿದ್ದ ಅಧಿಕಾರಿಗಳು ಕಂಪನಿಯಲ್ಲಿ ಏನೂ ನಡದೇ ಇಲ್ಲ ಎಂದು ವರದಿ ನೀಡಿದ್ದರು. ಇದಕ್ಕಾಗಿ ಕೋಟ್ಯಂತರ ರೂಪಾಯಿ ಕಿಕ್ ಬ್ಯಾಕ್ ಪಡೆದ ಆರೋಪ ಕೇಳಿ ಬಂದಿತ್ತು.
ಇದೇ ಪ್ರಕರಣದಲ್ಲಿ ಬೆಂಗಳೂರು ನಗರ ಜಿಲ್ಲಾಧಿಕಾರಿ ವಿಜಯ್ ಶಂಕರ್ ಆತ್ಮಹತ್ಯೆಗೆ ಶರಣಾದರು. ಉಪ ವಿಭಾಗಾಧಿಕಾರಿ ಎಲ್.ಸಿ. ನಾಗರಾಜ್ ಅಕ್ರಮದಲ್ಲಿ ಸಿಕ್ಕಿಬಿದ್ದರು. ಕಂದಾಯ ಅಧಿಕಾರಿಗಳ ಜತೆಗೆ ರಾಜ್ಯದ ಉನ್ನತ ಹುದ್ದೆಯಲ್ಲಿದ್ದ ಪೊಲೀಸ್ ಅಧಿಕಾರಿಗಳಿಗೂ ಐಎಂಎ ಕಂಟಕ ಉರುಳಾಗಿತ್ತು. ಹಿರಿಯ ಐಪಿಎಸ್ ಅಧಿಕಾರಿ ಹೇಮಂತ್ ನಿಂಬಾಳ್ಕರ್, ಅಜಯ್ ಹಿಲೋರಿ, ಡಿವೈಎಸ್ಪಿ ಶ್ರೀಧರ್, ಇನ್ಸ್ಪೆಕ್ಟರ್ ರಮೇಶ್ ಮತ್ತಿತರ ಕರ್ತವ್ಯಲೋಪ ಮತ್ತು ಅಕ್ರಮ ಸಿಬಿಐ ತನಿಖೆಯಲ್ಲಿ ಕಂಡು ಬಂದಿತ್ತು. ಹೇಮಂತ್ ನಿಂಬಾಳ್ಕರ್ ಹೊರತು ಪಡಿಸಿ ಉಳಿದ ಆರೋಪಿತ ಅಧಿಕಾರಿಗಳನ್ನು ಸರ್ಕಾರ ಅಮಾನತು ಮಾಡಿ ಕ್ರಮ ಜರುಗಿಸಿತ್ತು.
ಐಎಂಎ ವಂಚನೆ : ಹಾಕಿದ್ದು ಇಷ್ಟು! ಬರೋದು ಎಷ್ಟು? ನೀವೇ ಲೆಕ್ಕ ಹಾಕಿ
ಐಎಂಎ ವಂಚನೆ ಪ್ರಕರಣ ಸಂಬಂಧ ಸಿಬಿಐ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿತ್ತು. ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ ಅಡಿ ಹೇಮಂತ್ ನಿಂಬಾಳ್ಕರ್ ಇತರೆ ಅಧಿಕಾರಿಗಳ ವಿರುದ್ಧವೂ ದೋಷಾರೋಪ ಹೊರಿಸಲಾಗಿತ್ತು. ಸಿಬಿಐ ಸಲ್ಲಿಸಿದ್ದ ದೋಷಾರೋಪಪಟ್ಟಿಯನ್ನು ಹೇಮಂತ್ ನಿಂಬಾಳ್ಕರ್ ಪ್ರಶ್ನಿಸಿದ್ದರು. ಸಿಬಿಐ ದಾಖಲಿಸಿರುವ ಪ್ರಕರಣ ರದ್ದು ಕೋರಿ ಅರ್ಜಿ ಸಲ್ಲಿಸಿದ್ದ ಹೇಮಂತ್ ನಿಂಬಾಳ್ಕರ್ ಪರ ಹಿರಿಯ ವಕೀಲ ಅಶೋಕ್ ಹಾರನಹಳ್ಳಿ ವಾದ ಮಂಡಿಸಿದ್ದರು.
Recommended Video
ವಾದ ಆಲಿಸಿದ ನ್ಯಾ. ಮೈಕಲ್ ಡಿ. ಕುನ್ನಾ ಅವರು ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ ಅಡಿ ಒಬ್ಬ ಅಧಿಕಾರಿ ವಿರುದ್ಧ ಕೇಸು ದಾಖಲಿಸುವ ಮುನ್ನ ಸಕ್ಷಮ ಪ್ರಾಧಿಕಾರದಿಂದ ಪೂರ್ವಾನುಮತಿ ಪಡೆಯಬೇಕು. ಆದರೆ, ನಿಂಬಾಳ್ಕರ್ ವಿರುದ್ಧ ಸಿಬಿಐ ದಾಖಲಿಸಿರುವ ಪ್ರಕರಣದಲ್ಲಿ ಪೂರ್ವಾನುಮತಿ ಪಡೆಯುವಲ್ಲಿ ದೋಷಪೂರಿತವಾಗಿರುವುದನ್ನು ಉಲ್ಲೇಖಿಸಿ ಪ್ರಕರಣ ರದ್ದು ಮಾಡಿ ತೀರ್ಪು ನೀಡಿದ್ದಾರೆ.