ಐಎಂಎ ವಂಚನೆ: ಐಪಿಎಸ್ ಅಧಿಕಾರಿಯ ವಿಚಾರಣೆ ನಡೆಸಿದ ಎಸ್ಐಟಿ
ಬೆಂಗಳೂರು, ಆಗಸ್ಟ್ 02: ಐಎಂಎ ವಂಚನೆ ಪ್ರಕರಣದಲ್ಲಿ ಉನ್ನತ ಅಧಿಕಾರಿಗಳು, ರಾಜಕಾರಣಿಗಳು ಒಬ್ಬರ ಹಿಂದೊಬ್ಬರು ವಿಚಾರಣೆ ಎದುರಿಸುತ್ತಲೇ ಇದ್ದಾರೆ.
ಐಎಂಎ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಐಪಿಎಸ್ ಅಧಿಕಾರಿಯೊಬ್ಬರನ್ನು ಎಸ್ಐಟಿಯು ವಿಚಾರಣೆಗೆ ಒಳಪಡಿಸಿತು.
ಪೂರ್ವ ವಲಯದ ಡಿಸಿಪಿ ಆಗಿದ್ದ ಅಜಯ್ ಹಿಲೋರಿ ಅವರು ಇಂದು ಎಸ್ಐಟಿ ಮುಂದೆ ವಿಚಾರಣೆಗೆ ಹಾಜರಾದರು. ಇವರು ಈ ಹಿಂದೆ ಐಎಂಎ ಸಂಸ್ಥೆಗೆ ಕ್ಲೀನ್ ಚಿಟ್ ನೀಡಿದ್ದರು. ಹಾಗಾಗಿ ಎಸ್ಐಟಿಯು ಇವರನ್ನು ವಿಚಾರಣೆಗೆ ಒಳಪಡಿಸಿತ್ತು.
ಐಎಂಎ ಹಗರಣ : ಮನ್ಸೂರ್ ಖಾನ್ಗೆ 14 ದಿನ ನ್ಯಾಯಾಂಗ ಬಂಧನ
ಐಎಂಎ ಸಂಸ್ಥೆಯ ಬಗ್ಗೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ, ಮಾರುಕಟ್ಟೆ ಗುಪ್ತಚರ ಇಲಾಖೆಯು ಮಾಹಿತಿ ನೀಡಿದ್ದರೂ ಸಹ ಅಜಯ್ ಲಿಹೋರಿ ಅವರು ಆಗ ಐಎಂಎ ಸಂಸ್ಥೆ ಬಗ್ಗೆ ಕ್ಲೀನ್ ಚಿಟ್ ಅನ್ನು ಅಂದಿನ ಅಪರಾಧ ವಿಭಾಗದ ಹೆಚ್ಚುವರಿ ಪೊಲೀಸ್ ಕಮೀಷನರ್ ಅವರಿಗೆ ನೀಡಿದ್ದರು.
ಕ್ಲೀನ್ ಚೀಟ್ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಸರ್ಕಾರವನ್ನು ಮರು ತನಿಖೆಗೆ ಒತ್ತಾಯ ಮಾಡಿತ್ತು. ಆಗ ಮತ್ತೆ ಇದೇ ಅಧಿಕಾರಿಯು ಐಎಂಎ ಸಂಸ್ಥೆಗೆ ಕ್ಲೀನ್ ಚಿಟ್ ನೀಡಿದ್ದರು.
ಇದೇ ಪ್ರಕರಣದಲ್ಲಿ ಪುಲಕೇಶಿ ನಗರದ ಆಗಿನ ಎಸಿಪಿ ಆಗಿದ್ದ ಎಸ್.ರಮೇಶ್ ಕುಮಾರ್, ಕಮರ್ಶಿಯಲ್ ಸ್ಟ್ರೀಟ್ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಎಂ.ರಮೇಶ್ ಅವರಿಗೂ ಎಸ್ಐಟಿಯು ವಿಚಾರಣೆಗೆ ಕರೆದಿದ್ದು, ಇಬ್ಬರೂ ಕ್ರಮವಾಗಿ ಆಗಸ್ಟ್ 4 ಮತ್ತು 6 ರಂದು ಎಸ್ಐಟಿ ಮುಂದೆ ಹಾಜರಾಗಲಿದ್ದಾರೆ.
ಐಎಂಎ ಹಗರಣದಲ್ಲಿ ಐಪಿಎಸ್ ಅಧಿಕಾರಿಗಳು, ರಾಜಕಾರಣಿಗಳು
ಐಎಂಎ ಪ್ರಕರಣದಲ್ಲಿ ಈಗಾಗಲೇ ಜಿಲ್ಲಾಧಿಕಾರಿ ವಿಜಯ್ ಶಂಕರ್, ಎಸಿ ನಾಗರಾಜು ಅವರನ್ನು ಎಸ್ಐಟಿ ಬಂಧಿಸಿ ವಿಚಾರಣೆ ನಡೆಸಿತ್ತು. ಆದರೆ ಇದೇ ಮೊದಲ ಬಾರಿಗೆ ಐಪಿಎಸ್ ಅಧಿಕಾರಿಯನ್ನು ವಿಚಾರಣೆಗೆ ಒಳಪಡಿಸಲಾಗಿದೆ.
ಜಮೀರ್ ಅಹ್ಮದ್, ರೋಷನ್ ಬೇಗ್ ಅವರನ್ನೂ ಎಸ್ಐಟಿಯು ವಿಚಾರಣೆ ನಡೆಸಿದೆ. ರೋಷನ್ ಬೇಗ್ ಅವರಿಗೆ ನೊಟೀಸ್ ನೀಡಿದೆಯಾದರೂ ಅವರಿನ್ನೂ ಹಾಜರಾಗಿಲ್ಲ.