'ಶಾಸಕ ರೋಷನ್ ಬೇಗ್ ರಿಂದ 400 ಕೋಟಿ ರು ವಸೂಲಿ ಮಾಡಿ'
ಬೆಂಗಳೂರು ಜುಲೈ 07: ಐಎಂಎ ಹಗರಣದ ರೂವಾರಿಯಾದ ಐಎಂಎ ಮಾಲೀಕ ಮನ್ಸೂರ್ ಖಾನ್ ಪ್ರಸ್ತಾಪಿಸಿರುವಂತೆ ಶಿವಾಜಿನಗರದ ಶಾಸಕ ರೋಷನ್ ಬೇಗ್ ಅವರಿಂದ 400 ಕೋಟಿ ರೂಪಾಯಿಗಳನ್ನು ವಸೂಲಿ ಮಾಡಿ ಹೂಡಿಕೆದಾರರಿಗೆ ನೀಡುವಂತೆ ಒತ್ತಾಯಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ರಾಜ್ಯಾಧ್ಯಕ್ಷ ಡಾ ಸಿ ಎಸ್ ರಘು ಅವರ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆಯನ್ನು ನಡೆಸಲಾಯಿತು.
ನಗರದ ಪುಟ್ಟಣ್ಣ ಚೆಟ್ಟಿ ಪುರಭವನದ ಎದುರು ನಡೆದ ಈ ಪ್ರತಿಭಟನೆಯ ನೇತೃತ್ವ ವಹಿಸಿದ್ದ ಡಾ ಸಿ ಎಸ್ ರಘು ಮಾತನಾಡಿ, ರಾಜ್ಯದಲ್ಲಿ ಅದರಲ್ಲೂ ರಾಜಧಾನಿಯಲ್ಲಿ ಬೋಗಸ್ ಕಂಪನಿಗಳ ಹಾವಳಿ, ನಕಲಿ ಹಣಕಾಸು ಸಂಸ್ಥೆಗಳೂ, ಲ್ಯಾಂಡ್ ಮಾಫಿಯಾ, ಲಾಟರಿ ಮಾಫಿಯಾ ಹಣ ದ್ವಿಗುಣಗೊಳಿಸುವ ಆಮಿಷಗಳನ್ನು ಸೃಷ್ಟಿ ಮಾಡಿ ಅನಕ್ಷರಸ್ಥ ಅಮಾಯಕ ಸಾರ್ವಜನಿಕರನ್ನು ವಂಚಿಸಿ ಅಕ್ರಮವಾಗಿ ಹಣಗಳಿಸುತ್ತಿದ್ದಾರೆ.
ಇಂತಹ ನಕಲಿ ಸಂಸ್ಥೆಗಳ ಬೆನ್ನೆಲುಬಾಗಿ ರಾಜಕಾರಣಿಗಳೇ ನಿಂತಿರುವುದು ನಾಚಿಕೆಗೇಡಿನ ಸಂಗತಿಯಾಗಿರುತ್ತದೆ. ಅದರಲ್ಲೂ ಚಾಲ್ತಿಯಲ್ಲಿರುವ ಸದ್ಯದ ಸುದ್ದಿ ಎಂದರೆ ಐ ಎಂ ಎ ಸಂಸ್ಥೆಯ ಮಾಲೀಕ ಮೊಹಮ್ಮದ್ ಮನ್ಸೂರ್ ಖಾನ್ ಹಾಗೂ ಶಿವಾಜಿನಗರ ಪ್ರಭಾವಿ ಶಾಸಕರಾದ ರೋಷನ್ ಬೇಗ್ ಅವರ ಒಡನಾಟ.
ಖಡಕ್ ಹಾಗೂ ಪ್ರಾಮಾಣಿಕ ಪೊಲೀಸ್ ಅಧಿಕಾರಿ ಎಂದೇ ಜನಪ್ರಿಯರಾಗಿರುವ ಅಲೋಕ್ ಕುಮಾರ್ ಪೊಲೀಸ್ ಆಯುಕ್ತರಾಗಿ ಅಧಿಕಾರವಹಿಸಿಕೊಂಡ ಮೇಲೆ ಜನರು ಸೂಕ್ತ ನ್ಯಾಯ ದೊರಕಿಸುತ್ತಾರೆ ಎನ್ನುವ ನಂಬಿಕೆಯಲ್ಲಿ ಇದ್ದಾರೆ. ಈ ಸಂಧರ್ಭದಲ್ಲಿ ನಮ್ಮ ಬೇಡಿಕೆ ಎಂದರೆ ಹಣಬಾಕ ವಂಚಕ ಸಂಸ್ಥೆಗಳನ್ನು ಕಾನೂನು ಬದ್ದವಾಗಿ ನಿರ್ನಾಮ ಮಾಡುವುದರೊಂದಿಗೆ ಆರೋಪಿತರಿಗೆ ಕಠಿಣ ಶಿಕ್ಷೆಯಾಗಬೇಕು.
ಮನ್ಸೂರ್ ಖಾನ್ ಗೆ ಜೀವ ಬೆದರಿಕೆ
ಈ ಸುದ್ದಿ ಯಾಕಿಲ್ಲಿ ಪ್ರಸ್ತುತ ಎಂದರೆ ಮೊಟ್ಟ ಮೊದಲಿಗೆ ಮನ್ಸೂರ್ ಖಾನ್ ದಿನಾಂಕ 9/06/2019 ರಂದು ತಾನು ಬಿಡುಗಡೆ ಮಾಡಿ ಅಂದಿನ ಪೊಲೀಸ್ ಆಯುಕ್ತರಾದ ಟಿ ಸುನೀಲ್ ಕುಮಾರ್ ಅವರಿಗೆ ಕಳುಹಿಸಿದ ಮೊದಲ ಆಡಿಯೋದಲ್ಲಿ ಶಿವಾಜಿನಗರದ ಎಂಎಲ್ಎ ರೋಷನ್ ಬೇಗ್ ಅವರಿಗೆ 400 ಕೋಟಿ ರೂಪಾಯಿಗಳಷ್ಟು ಹಣ ನೀಡಿದ್ದು ಹಣ ವಾಪಾಸ್ ನೀಡಲು ಕೇಳಿದಾಗ ಇದೇ ರೋಷನ್ ಬೇಗ್ ಲೋಕಲ್ ರೌಡಿಗಳನ್ನು ಬಿಟ್ಟು ಮನ್ಸೂರ್ ಖಾನ್ ಗೆ ಜೀವ ಬೆದರಿಕೆ ಹಾಕಿದ್ದರಿಂದ ಇದೇ ಮನ್ಸೂರ್ ಖಾನ್ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂದು ಇದೇ ಆಡಿಯೋದಲ್ಲಿ ಉಲ್ಲೇಖಿಸಿದೆ.
ಮನ್ಸೂರ್ ಖಾನ್ ಬಿಡುಗಡೆ ಮಾಡಿದ ಆಡಿಯೋ
ನಂತರ ವಂಚಕ ಮನ್ಸೂರ್ ಖಾನ್ ದಿನಾಂಕ 22/06/2019 ರಂದು ಬಿಡುಗಡೆ ಮಾಡಿದ ವಿಡಿಯೋದಲ್ಲಿ ತಾನು ಭಾರತಕ್ಕೆ ಬರಲು ಸಿದ್ದನಿದ್ದು ಈಗ ದುಬೈನಲ್ಲಿ ನಲೆಸಿದ್ದೇನೆ. ಕಳೆದ 14 ನೇ ತಾರೀಖಿನಂದು ವಿಮಾನದ ಟಿಕೆಟ್ ನ್ನು ಬುಕ್ ಮಾಡಿ ಕಾರಣಾಂತರದಿಂದ ನಾನು ಭಾರತಕ್ಕೆ ಬರಲಾಗಲಿಲ್ಲಾ. ಆಡಿಯೋದಲ್ಲಿ ನೀಡಿದ್ದ ತನ್ನ ಹೇಳಿಕೆಯನ್ನು ಸಮರ್ಥಿಸಿಕೊಂಡಿರುವ ಅವರು ರೋಷನ್ ಬೇಗ್ ಅವರಿಗೆ 400 ಕೋಟಿ ರೂಪಾಯಿ ನೀಡಿರುವುದನ್ನು ಮತ್ತೊಮ್ಮೆ ಒತ್ತಿ ಹೇಳಿದ್ದಾರೆ.
ಬೇಗ್ ರವರನ್ನು ವಿಚಾರಣೆಗೊಳಪಡಿಸಿ
ಪ್ರಕರಣ ನಡೆದು ಇಷ್ಟು ದಿನಗಳಾದರೂ ಸಹ ಶಿವಾಜಿನಗರದ ಸ್ಥಳೀಯ ಶಾಸಕರಾದ 400 ಕೋಟಿ ಆರೋಪಿತ ರೋಷನ್ ಬೇಗ್ ರವರನ್ನು ಇದುವರೆಗೂ ಯಾವುದೇ ರೀತಿಯ ತನಿಖೆ ಹಾಗೂ ವಿಚಾರಣೆ ಮಾಡದೆ ನಿರ್ಲಕ್ಷತೆ ವಹಿಸಿರುತ್ತಾರೆ. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಖುದ್ದು ಸರಕಾಋದ ಪ್ರಭಾವಿ ಸಚಿವರಾದ ಆರ್ ವಿ ದೇಶಪಾಂಡೆ ಅವರ ಹತ್ತಿರಕ್ಕೆ ರೋಷನ್ ಬೇಗ್, ಆರೋಪಿತ ಮನ್ಸೂರ್ ಖಾನ್ ನನ್ನು ಕರೆದುಕೊಂಡು ಹೋಗಿ ಆರ್ಬಿಐ ನಿಂದ 600 ಕೋಟಿ ರೂಪಾಯಿ ಸಾಲ ಪಡೆಯಲು ಸರಕಾರದಿಂತೆ ಕ್ಲೀನ್ ಚಿಟ್ ನೀಡಲು ಸಹಕರಿಸಿ ಎಂದು ಸಚಿವ ಆರ್ ವಿ ದೇಶಪಾಂಡೆ ರವರೇ ನುಡಿದಿದ್ದಾರೆ.
ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ
ಆದರೆ, ರೋಷನ್ ಬೇಗ್ ಮೇಲೆ ಇದುವರೆಗೂ ಯಾವುದೇ ರೀತಿಯ ಕಾನೂನು ರೀತ್ಯಾ ಪ್ರಕ್ರಿಯೆಗಳು ನಡೆಯದೇ ಇರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಪ್ರಮುಖವಾಗಿ ಗಮನಿಸಬೇಕಾದ ವಿಷಯವೆಂದರೆ ಮನ್ಸೂರ್ ಖಾನ್ ಬಿಡುಗಡೆ ಮಾಡಿರುವ ಯಾವುದೇ ಆಡಿಯೋ ಅಥವಾ ವಿಡಿಯೋದಲ್ಲಿ ಚಾಮರಾಜಪೇಟೆ ಶಾಸಕ ಜಮೀರ್ ಅಹ್ಮದ್ ಖಾನ್ ಹೆಸರು ಉಲ್ಲೇಖವಿಲ್ಲ. ಇದು ವಿಡಿಯೋದಲ್ಲಿ ಬಹಳ ಸ್ಪಷ್ಟವಾಗಿ ಉಲ್ಲೇಖವಾಗಿದೆ. ಹಣ ವಾಪಾಸ್ ಕೇಳಿದ್ದಕ್ಕೆ ರೌಡಿಗಳಿಂದ ಜೀವಬೆದರಿಕೆ ಹಾಕಿಸಿದ ಆರೋಪ ಮಾಡಿರುವ ರೋಷನ್ ಬೇಗ್ ಅವರನ್ನು ತೀವ್ರ ತನಿಖೆಗೆ ಒಳಪಡಿಸುವಂತೆ ಈ ಮೂಲಕ ಒತ್ತಾಯಿಸುತ್ತಿದ್ದೇವೆ.
ರಾಜಕಾರಣಿಯಾದರೂ ಅವರು ಕ್ಷಮೆಗೆ ಅರ್ಹರಲ್ಲ
ಈ ಪ್ರಕರಣದಲ್ಲಿ ಭಾಗಿಯಾದ ಯಾವುದೇ ರಾಜಕಾರಣಿಯಾದರೂ ಅವರು ಕ್ಷಮೆಗೆ ಅರ್ಹರಲ್ಲ. ಇಡೀ ಪ್ರಕರಣದ ಕುರಿತು ಕಾನೂನು ರಿತ್ಯ ಕ್ರಮಕ್ಕಾಗಿ ಮೊಟ್ಟಮೊದಲಬಾರಿ ಒತ್ತಾಯಿಸಿದ್ದೇ ಜಮೀರ್ ಅಹ್ಮದ್ ಖಾನ್ ಅವರು. ಈ ಹಿನ್ನಲೆಯಲ್ಲಿ ಮಾನ್ಯ ಪೋಲೀಸ್ ಆಯುಕ್ತರಾದ ಅಲೋಕ್ ಕುಮಾರ್ ಅವರಲ್ಲಿ ದ.ಸಂ.ಸ ಮನವಿ ಮಾಡಿಕೊಳ್ಳುವುದೇನೆಂದರೆ, ಪ್ರಕರಣದ ರೂವಾಗಿ ಐಎಂಎ ಮಾಲೀಕ ಮನ್ಸೂರ್ ಖಾನ್ ಬಂಧಿಸಿ ರೋಷನ್ ಬೇಗ್ ಅವರಿಗೆ ನೀಡಿರುವ 400 ಕೋಟಿ ಮುಟ್ಟುಗೋಲು ಹಾಕಿಕೊಂಡು ಹೂಡಿಕೆದಾರರು ಹಾಗೂ ಅಮಾಯಕ ಸಾರ್ವಜನಿಕರಿಗೆ ವಾಪಾಸ್ ಕೊಡಿಸುವಂತೆ ಆಗ್ರಹಿಸಿದೆ.