ಐಎಂಎ ಹಗರಣ; ಸಿಬಿಐ ವಿಚಾರಣೆ ಎದುರಿಸಿದ ಹೇಮಂತ್ ನಿಂಬಾಳ್ಕರ್
ಬೆಂಗಳೂರು, ಅಕ್ಟೋಬರ್ 03 : ಬಹುಕೋಟಿ ರೂಪಾಯಿ ಐಎಂಎ ಹಗರಣದ ತನಿಖೆಯನ್ನು ಸಿಬಿಐ ಚುರುಕುಗೊಳಿಸಿದೆ. ಐಪಿಎಸ್ ಅಧಿಕಾರಿ ಹೇಮಂತ್ ನಿಂಬಾಳ್ಕರ್ ಇಂದು ಸಿಬಿಐ ವಿಚಾರಣೆ ಎದುರಿಸಿದರು.
ಗುರುವಾರ 1998ನೇ ಬ್ಯಾಚ್ ಐಪಿಎಸ್ ಅಧಿಕಾರಿ ಮತ್ತು ಬೆಂಗಳೂರು ನಗರ ಆಡಳಿತ ವಿಭಾಗದ ಹೆಚ್ಚುವರಿ ಆಯುಕ್ತ ಹೇಮಂತ್ ನಿಂಬಾಳ್ಕರ್ ಸಿಬಿಐ ಮುಂದೆ ಹಾಜರಾಗಿದ್ದರು. ಸುಮಾರು 3 ಗಂಟೆಗಳ ಕಾಲ ಅವರ ವಿಚಾರಣೆ ನಡೆಸಲಾಗಿದೆ.
ಐಎಂಎ ಹಗರಣ; 4 ಅಧಿಕಾರಿಗಳ ಹೆಸರು ಚಾರ್ಜ್ಶೀಟ್ನಲ್ಲಿ ಇಲ್ಲ!
ಈಗಾಗಲೇ ಒಂದು ಬಾರಿ ಸಿಬಿಐ ಹೇಮಂತ್ ನಿಂಬಾಳ್ಕರ್ ವಿಚಾರಣೆ ನಡೆಸಿತ್ತು. ಗುರುವಾರ 2ನೇ ಬಾರಿಗೆ ಹಗರಣಕ್ಕೆ ಸಂಬಂಧಿಸಿದಂತೆ ಅವರ ವಿಚಾರಣೆ ನಡೆಸಲಾಗಿದೆ.
ಐಎಂಎ ಸಂಸ್ಥಾಪಕ ಮೊಹಮದ್ ಮನ್ಸೂರ್ ಖಾನ್ ವಿದೇಶಕ್ಕೆ ಪರಾರಿಯಾಗಲು ಆಗಿನ ಸಿಐಡಿ ಐಜಿಪಿ ಆಗಿದ್ದ ಹೇಮಂತ್ ನಿಂಬಾಳ್ಕರ್ ಸಹಕಾರ ನೀಡಿದ್ದಾರೆ ಎಂಬುದು ಆರೋಪ. ಐಎಂಎ ಪ್ರಕರಣದ ತನಿಖೆಯನ್ನು ನಡೆಸುತ್ತಿರುವ ಸಿಬಿಐ ಈ ಕುರಿತು ವಿಚಾರಣೆ ನಡೆಸಿದೆ.
ಐಎಂಎ ಹಗರಣ: 25 ಕೆಜಿ ಚಿನ್ನ, 13 ಕೋಟಿ ಲಂಚ ಪಡೆದಿದ್ದ ಐಪಿಎಸ್ ಅಧಿಕಾರಿ
ಐಎಂಎ ಪ್ರಕರಣದ ತನಿಖೆ ನಡೆಸುತ್ತಿರುವ ಸಿಬಿಐ ಐಪಿಎಸ್ ಅಧಿಕಾರಿಗಳಾದ ಅಜಯ್ ಹಿಲೋರಿ ಮತ್ತು ಹೇಮಂತ್ ನಿಂಬಾಳ್ಕರ್ ವಿಚಾರಣೆ ನಡೆಸಿದೆ. ಐಎಎಸ್ ಅಧಿಕಾರಿ ರಾಜ್ ಕುಮಾರ್ ಖತ್ರಿಯ ವಿಚಾರಣೆಯನ್ನು ಸಹ ನಡೆಸಲಾಗಿತ್ತು.
ದುಬೈಗೆ ಹಾರುವ ಮುನ್ನ 38 ಕೆಜಿ ಚಿನ್ನ ಕರಗಿಸಿದ್ದ ಮನ್ಸೂರ್ ಖಾನ್
ಸಿಬಿಐ ಮನ್ಸೂರ್ ಖಾನ್ ಸೇರಿದಂತೆ 19 ಜನರ ವಿರುದ್ಧ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಕೆ ಮಾಡಿದೆ. ಮನ್ಸೂರ್ ಖಾನ್ ವಿಚಾರಣೆ ನಡೆಸಿದಾಗ ಐಪಿಎಸ್ ಮತ್ತು ಐಎಎಸ್ ಅಧಿಕಾರಿಗಳ ಹೆಸರನ್ನು ಆತ ಹೇಳಿದ್ದು, ಅವರನ್ನು ಈಗ ವಿಚಾರಣೆ ನಡೆಸಲಾಗುತ್ತಿದೆ.
ಜೂನ್ನಲ್ಲಿ ಮನ್ಸೂರ್ ಖಾನ್ ವಿದೇಶಕ್ಕೆ ಪರಾರಿಯಾದ ಬಳಿಕ ಐಎಂಎ ಹಗರಣ ಬೆಳಕಿಗೆ ಬಂದಿತ್ತು. ಕರ್ನಾಟಕದಲ್ಲಿ ಅಧಿಕಾರದಲ್ಲಿದ್ದ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ತನಿಖೆಯನ್ನು ಎಸ್ಐಟಿಗೆ ವಹಿಸಿತ್ತು. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ತನಿಖೆ ಸಿಬಿಐಗೆ ಹಸ್ತಾಂತರವಾಗಿದೆ.
ಐಪಿಎಸ್ ಅಧಿಕಾರಿ ಅಜಯ್ ಹಿಲೋರಿಗೆ 25 ಕೆಜಿ ಚಿನ್ನ, ತಿಂಗಳಿಗೆ 1 ಕೋಟಿಯಂತೆ 13 ಕೋಟಿ ನೀಡಲಾಗಿದೆ ಎಂದು ಮನ್ಸೂರ್ ಖಾನ್ ಹೇಳಿದ್ದು ಭಾರಿ ಚರ್ಚೆಗೆ ಗ್ರಾಸವಾಗಿದೆ. ಈ ಕುರಿತು ಸಿಬಿಐ ಒಂದು ಬಾರಿ ಅಜಯ್ ಹಿಲೋರಿ ವಿಚಾರಣೆ ನಡೆಸಿದೆ.