ಐಎಂಎ ಪ್ರಕರಣದಲ್ಲಿ ನಿಂಬಾಳ್ಕರ್ ವಿರುದ್ಧ ಯಾಕೆ ಶಿಸ್ತು ಕ್ರಮವಿಲ್ಲ ?
ಬೆಂಗಳೂರು, ಜನವರಿ 11: ನಿರ್ಭಯ ನಿಧಿ ಅಡಿಯಲ್ಲಿ ಬೆಂಗಳೂರಿನಲ್ಲಿ ಸಿಸಿಟಿವಿ ಹಾಕಿ ಮಹಿಳಾ ಸುರಕ್ಷತೆ ಕೈಗೊಳ್ಳುವ ಸೇಫ್ ಸಿಟಿ ಯೋಜನೆ ಕುರಿತ ಇಬ್ಬರ ಐಪಿಎಸ್ ಅಧಿಕಾರಿಗಳ ಗುದ್ದಾಟ ಐಎಂಎ ಪ್ರಕರಣವನ್ನು ಎಳೆದು ತಂದಿದೆ. ಸೇಫ್ ಸಿಟಿ ಪ್ರಕರಣದ ವಿವಾದಲ್ಲಿ ಇಬ್ಬರು ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದೆ. ಇದಕ್ಕಿಂತಲೂ ಮೊದಲೇ ನಡೆದ ಐಎಂಎ ವಂಚನೆ ಪ್ರಕರಣದಲ್ಲಿ ಐಪಿಎಸ್ ಅಧಿಕಾರಿ ವಿರುದ್ಧ ಕ್ರಮಕ್ಕೆ ಸಿಬಿಐ ಸೂಚಿಸಿದ್ದರೂ ಈವರೆಗೂ ಯಾಕೆ ಕ್ರಮ ಕೈಗೊಂಡಿಲ್ಲ ಎಂಬ ಪ್ರಶ್ನೆ ಎದ್ದಿದೆ !
ಸೇಫ್ ಸಿಟಿ ವಿವಾದದಲ್ಲಿ ವರ್ಗಾವಣೆ ಮುನ್ನ ಗೃಹ ಇಲಾಖೆಯ ಕಾರ್ಯದರ್ಶಿಯಾಗಿ ರೂಪಾ ಅವರು ಐಎಂಎ ವಂಚನೆ ಪ್ರಕರಣದಲ್ಲಿ ಆರೋಪಿತ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಂತೆ ಕೋರಿ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯ ಭಾಸ್ಕರ್ ಅವರಿಗೆ ಶಿಫಾರಸು ಮಾಡಿದ್ದಾರೆ. ಸಿಬಿಐ ಶಿಫಾರಸಿನಂತೆ ಹಿರಿಯ ಐಪಿಎಸ್ ಅಧಿಕಾರಿ ಹೇಮಂತ್ ನಿಂಬಾಳ್ಕರ್ ವಿರುದ್ಧ ಕ್ರಮ ಜರುಗಿಸುವಂತೆ ಕೋರಿದ್ದಾರೆ. ವಿಜಯ ಭಾಸ್ಕರ್ ನಿವೃತ್ತಿ ಎರಡು ದಿನ ಮುನ್ನವೇ ರೂಪಾ ಅವರು ಪತ್ರ ಬರೆದಿದ್ದಾರೆ. ಹಿರಿಯ ಐಎಎಸ್ ಅಧಿಕಾರಿ ರವಿ ಸರ್ಕಾರದ ಮುಖ್ಯ ಕಾರ್ಯದರ್ಶಿಯಾಗಿದ್ದು, ರೂಪಾ ಅವರ ವರದಿ ಪರಿಗಣಿಸಿ ಕ್ರಮ ಜರುಗಿಸುತ್ತಾರೆಯೇ ಎಂಬುದು ಸಾರ್ವಜನಿಕ ವಲಯದಲ್ಲಿ ಭಾರೀ ಚರ್ಚೆಗೆ ನಾಂದಿ ಹಾಡಿದೆ.
ಡಿ ರೂಪಾ, ಹೇಮಂತ್ ನಿಂಬಾಳ್ಕರ್ ಸೇರಿ ಹಲವು ಐಪಿಎಸ್ ಅಧಿಕಾರಿಗಳ ವರ್ಗಾರ್ವಣೆ
ಐಎಂಎ ವಂಚನೆ ಪ್ರಕರಣದಲ್ಲಿ ಕಂಪನಿ ಅಕ್ರಮವನ್ನು ಐಪಿಎಸ್ ಅಧಿಕಾರಿಗಳು ಮುಚ್ಚಿ ಹಾಕಿ ವರದಿ ನೀಡಿದ್ದರು ಎಂಬ ಅಂಶ ಸಿಬಿಐ ತನಿಖೆಯಲ್ಲಿ ಬೆಳಕಿಗೆ ಬಂದಿತ್ತು. ಈ ಕುರಿತು ಸಬ್ ಇನ್ಸ್ಪೆಕ್ಟರ್ ಗೌರಿಶಂಕರ್ ಇನ್ಸ್ಪೆಕ್ಟರ್ ರಮೇಶ್, ಡಿವೈಎಸ್ ಪಿ ಶ್ರೀಧರ್ ಐಪಿಎಸ್ ಅಧಿಕಾರಿ ಅಜಯ್ ಹಿಲೋರಿ ಮತ್ತು ಹಿರಿಯ ಐಪಿಎಸ್ ಅಧಿಕಾರಿ ಹೇಮಂತ್ ನಿಂಬಾಳ್ಕರ್ ಅವರ ಹೆಸರು ಪ್ರಸ್ತಾಪವಾಗಿತ್ತು. ಕಿರಿಯ ಅಧಿಕಾರಿಗಳನ್ನು ಅಮಾನತು ಮಾಡಿರುವ ಗೃಹ ಇಲಾಖೆ ಹಿರಿಯ ಐಪಿಎಸ್ ಅಧಿಕಾರಿ ಹೇಮಂತ್ ನಿಂಬಾಳ್ಕರ್ ವಿರುದ್ಧ ಯಾವುದೇ ಕ್ರಮ ಜರುಗಿಸಿರಲಿಲ್ಲ. ಎಫ್ಐಆರ್ ರದ್ದು ಕೋರಿ ಅವರು ಹೈಕೋರ್ಟ್ ಮೊರೆ ಹೋಗಿದ್ದರು.
ಸೇಫ್ ಸಿಟಿ ಯೋಜನೆ ಕುರಿತ ವಿವಾದ ಏಳುತ್ತಿದ್ದಂತೆ ಗೃಹ ಕಾರ್ಯದರ್ಶಿಯಾಗಿದ್ದ ರೂಪಾ ಮೌದ್ಗಿಲ್ ಅವರನ್ನು ಕರ್ನಾಟಕ ಕೈ ಮಗ್ಗ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕರನ್ನಾಗಿ ವರ್ಗಾವಣೆ ಮಾಡಿತ್ತು. ಹಿರಿಯ ಐಪಿಎಸ್ ಅಧಿಕಾರಿ ಹೇಮಂತ್ ನಿಂಬಾಳ್ಕರ್ ಅವರನ್ನು ಆಂತರಿಕ ಭದ್ರತಾ ಇಲಾಖೆಗೆ ವರ್ಗಾವಣೆ ಮಾಡಿ ಗೃಹ ಇಲಾಖೆ ಕ್ರಮ ಜರುಗಿಸಿತ್ತು. ಇದಕ್ಕಿಂತೂ ಮೊದಲೇ ದಾಖಲಾದ ಪ್ರಕರಣ ಐಎಂಎ ವಂಚನೆ. ಈ ಪ್ರಕರಣದಲ್ಲಿ ಗಂಭೀರ ಆರೋಪ ಎದುರಿಸುತ್ತಿರುವ ಐಪಿಎಸ್ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಸಿಬಿಐ ಸರ್ಕಾರಕ್ಕೆ ಶಿಫಾರಸು ಮಾಡಿತ್ತು. ಕೆಳ ಹಂತದ ಅಧಿಕಾರಿಗಳ ಮೇಲೆ ಕ್ರಮ ಜರುಗಿಸಿದ ಗೃಹ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯಲ್ ಯಾಕೆ ಈ ಪ್ರಕರಣದಲ್ಲಿ ಕ್ರಮಕ್ಕೆ ಶಿಫಾರಸು ಮಾಡಿಲ್ಲ. ಹಿರಿಯ ಅಧಿಕಾರಿಗಳನ್ನು ರಕ್ಷಣೆ ಮಾಡುತ್ತಿರುವ ಉದ್ದೇಶವೇನು ಎಂದು ರೂಪಾ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಇತ್ತೀಚೆಗೆ ನಿವೃತ್ತಿಯಾದ ಸರ್ಕಾರದ ಮುಖ್ಯ ಕಾರ್ಯದರ್ಶಿ ವಿಜಯ ಭಾಸ್ಕರ್ ಅವರಿಗೆ ನಿವೃತ್ತಿ ಮುನ್ನ ಪತ್ರ ಬರೆದಿರುವ ಮಾಜಿ ಗೃಹ ಕಾರ್ಯದರ್ಶಿ ರೂಪಾ ಅವರು, ಐಎಂಎ ಪ್ರಕರಣದಲ್ಲಿ ಹೇಮಂತ್ ನಿಂಬಾಳ್ಕರ್ ಅವರ ವಿರುದ್ಧ ಕ್ರಮ ಜರುಗಿಸಿ ಎಂದು ಕೋರಿದ್ದಾರೆ. ಈ ಪ್ರಕರಣದಲ್ಲಿ ಆರೋಪಿತ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸುವ ಸಂಬಂಧ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಗೆ ವರದಿ ನೀಡುವಲ್ಲಿ ಇಲಾಖೆ ಸಂಪೂರ್ಣ ವಿಫಲವಾಗಿದೆ ಎಂದು ಪ್ರಸ್ತಾಪಿಸಿದ್ದಾರೆ.
Recommended Video
ಕಿರಿಯ ಅಧಿಕಾರಿಗಳ ಮೇಲೆ ಕ್ರಮ ಜರುಗಿಸಿ ಹಿರಿಯ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವುದನ್ನು ಸ್ಥಗಿತಗೊಳಿಸುವುದು ತಾರತಮ್ಯ. ಈ ಕುರಿತು ಗೃಹ ಇಲಾಖೆ ಯಾಕೆ ಕ್ರಮ ಕೈಗೊಳ್ಳದೇ ಮೀನಾ ಮೇಷ ಎಣಿಸುತ್ತಿದೆ ಎಂಬ ಪ್ರಶ್ನೆ ಎದ್ದಿದೆ. ಹಿರಿಯ ಅಧಿಕಾರಿಗೊಂದು ನ್ಯಾಯ. ಕಿರಿಯ ಅಧಿಕಾರಿಗೊಂದು ನ್ಯಾಯವೇ ? ಇದು ಸಾರ್ವಜನಿಕ ವಲಯದಲ್ಲಿ ಭಾರೀ ಚರ್ಚೆಗೆ ನಾಂದಿ ಹಾಡಿದೆ.