ಐಎಂಎ ಹಗರಣ: ಮನ್ಸೂರ್ ಖಾನ್ ನ್ಯಾಯಾಂಗ ಬಂಧನ ವಿಸ್ತರಣೆ
ಬೆಂಗಳೂರು, ಆಗಸ್ಟ್ 17: ಐಎಂಎ ಹಗರಣ ಪ್ರಮುಖ ಆರೋಪಿ ಐಎಂಎ ಸಂಸ್ಥಾಪಕ ಮನ್ಸೂರ್ ಖಾನ್ಗೆ ನ್ಯಾಯಾಂಗ ಬಂಧನ ವಿಸ್ತರಣೆ ಆಗಿದೆ.
ಮನ್ಸೂರ್ ಖಾನ್ ನನ್ನು 13 ದಿನ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದ್ದು, ಆಗಸ್ಟ್ 30 ರವರೆಗೆ ನ್ಯಾಯಾಂಗ ಬಂಧನದಲ್ಲಿ ಇರಬೇಕಿದೆ. ಆ ನಂತರ ಮುಂದಿನ ವಿಚಾರಣೆ ನಡೆಸಲಾಗುವುದು.
ಐಎಂಎ ಹಗರಣದ ತನಿಖೆ ಎಸ್ಎಫ್ಒ ಹೆಗಲಿಗೆ?
ಐಎಂಎ ಸಂಸ್ಥೆಯು ಸಾರ್ವಜನಿಕರಿಗೆ ಸುಮಾರು 4000 ಕೋಟಿ ವಂಚನೆ ಮಾಡಿದೆ ಎಂಬ ಆರೋಪವಿದ್ದು, ಸರಿ ಸುಮಾರು 30,000 ಪ್ರಕರಣಗಳು ಮನ್ಸೂರ್ ಖಾನ್ ವಿರುದ್ಧ ದಾಖಲಾಗಿವೆ.
ಪ್ರಕರಣದ ತನಿಖೆಯನ್ನು ಎಸ್ಐಟಿ ಮತ್ತು ಕೇಂದ್ರದ ಇಡಿ ಸಂಸ್ಥೆಗಳು ನಡೆಸುತ್ತಿದ್ದು, ಪ್ರಸ್ತುತ ಎಸ್ಐಟಿಯ ವಶದಲ್ಲಿ ಮನ್ಸೂರ್ ಖಾನ್ ಇದ್ದಾರೆ. ಇಡಿಯು ಈಗಾಗಲೇ ವಿಚಾರಣೆಯನ್ನು ಮುಗಿಸಿದೆ.
ಮನ್ಸೂರ್ ಖಾನ್ಗೆ ಸೇರಿದ್ದ ಐಶಾರಾಮಿ ಅಪಾರ್ಟ್ಮೆಂಟ್ ಒಂದರಲ್ಲಿ ಭಾರಿ ಪ್ರಮಾಣದ ನಕಲಿ ಚಿನ್ನದ ಬಿಸ್ಕತ್ತುಗಳನ್ನು ಕೆಲವು ದಿನಗಳ ಹಿಂದಷ್ಟೆ ಎಸ್ಐಟಿಯು ವಶಪಡಿಸಿಕೊಂಡಿತ್ತು. ಅಷ್ಟೆ ಅಲ್ಲದೆ ಭಾರಿ ಪ್ರಮಾಣದ ಹಣ, ಆಸ್ತಿಗಳನ್ನು ಸಹ ಎಸ್ಐಟಿ ಜಪ್ತು ಮಾಡಿದೆ.
ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಐಎಎಸ್, ಐಪಿಎಸ್ ಅಧಿಕಾರಿಗಳನ್ನು ಈಗಾಗಲೇ ವಿಚಾರಣೆಗೆ ಒಳಪಡಿಸಲಾಗಿದ್ದು, ರೋಷನ್ ಬೇಗ್, ಜಮೀರ್ ಅಹ್ಮದ್ ಅವರಂತಹಾ ಪ್ರಭಾವಿ ರಾಜಕಾರಣಿಗಳನ್ನೂ ವಿಚಾರಣೆ ನಡೆಸಲಾಗುತ್ತಿದೆ.