IMA ಜ್ಯುವೆಲ್ಲರಿ ಮನ್ಸೂರ್ ಯುಎಇಗೆ ಓಡಿಹೋದನೆ? ಹೂಡಿಕೆದಾರರ ನೆರವಿಗೆ ಕಾಂಗ್ರೆಸ್ ನಾಯಕರು
ಬೆಂಗಳೂರು, ಜೂನ್ 11: ಬೆಂಗಳೂರು ಮೂಲದ ಐಎಂಎ ಜ್ಯುವೆಲ್ಲರಿ ವಂಚನೆ ಪ್ರಕರಣದ ಆಳ- ಅಗಲ ದೊಡ್ಡದಾಗುತ್ತಲೇ ಇದೆ. ಕರ್ನಾಟಕ ಮಾತ್ರವಲ್ಲದೆ ತಮಿಳುನಾಡು, ಕೇರಳ, ಆಂಧ್ರಪ್ರದೇಶಕ್ಕೂ ಈ ಪ್ರಕರಣ ವ್ಯಾಪಿಸಿದ್ದು, ಬೆಂಗಳೂರಿನಲ್ಲಂತೂ ಮೋಸ ಹೋದವರು ದೂರು ದಾಖಲಿಸುವ ಸಲುವಾಗಿಯೇ ಪ್ರತ್ಯೇಕ ವಿಭಾಗವನ್ನು ತೆರೆದಿದ್ದಾರೆ.
ಜ್ಯುವೆಲ್ಲರಿ ಮಾಲೀಕ ಮೊಹ್ಮದ್ ಮನ್ಸೂರ್ ಖಾನ್ ಯುಎಇಗೆ ಪಲಾಯನ ಮಾಡಿದ್ದಾನೆ ಎಂಬ ಗುಮಾನಿ ಕೇಳಿಬರುತ್ತಿದೆ. ಈ ಮಧ್ಯೆ ಸಚಿವ ಜಮೀರ್ ಅಹ್ಮದ್ ಖಾನ್, ಶಾಸಕ ಎನ್.ಎ.ಹ್ಯಾರಿಸ್ ಹಾಗೂ ವಿಧಾನಪರಿಷತ್ ಸದಸ್ಯ ರಿಜ್ವಾನ್ ಅರ್ಷದ್ ಒಟ್ಟಿಗೆ ತೆರಳಿ, ಗೃಹ ಸಚಿವ ಎಂ.ಬಿ.ಪಾಟೀಲ ಅವರನ್ನು ಮಂಗಳವಾರ ಸದಾಶಿವನಗರದ ಅವರ ನಿವಾಸದಲ್ಲಿ ಭೇಟಿ ಆಗಿದ್ದಾರೆ.
ರೋಷನ್ ಬೇಗ್ ಬಾಯಿ ಮುಚ್ಚಿಸಲು ಬಯಲಿಗೆ ಬಿತ್ತಾ IMA ಜ್ಯುವೆಲ್ಲರಿ ಹಗರಣ?
ಐಎಂಎ ಜ್ಯುವೆಲ್ಲರಿಯಲ್ಲಿ ಹಣ ಹೂಡಿದವರ ಪೈಕಿ ಮುಸ್ಲಿಂ ಸಮುದಾಯದವರೇ ಹೆಚ್ಚಿನ ಸಂಖ್ಯೆಯಲ್ಲಿ ಇರುವುದರಿಂದ ಹೂಡಿಕೆದಾರರ ಹಣವನ್ನು ವಾಪಸ್ ಮಾಡುವುದಕ್ಕೆ ಅಗತ್ಯ ಕ್ರಮ ತೆಗೆದುಕೊಳ್ಳಬೇಕು ಎಂದು ಇದೇ ವೇಳೆ ಮನವಿ ಮಾಡಿದ್ದಾರೆ ಎನ್ನುತ್ತವೆ ಮೂಲಗಳು. ಇನ್ನು ಮಾಜಿ ಸಚಿವ ಹಾಗೂ ಶಿವಾಜಿನಗರದ ಹಾಲಿ ಶಾಸಕ ರೋಷನ್ ಬೇಗ್ ವಿರುದ್ಧ ಕೂಡ ಆಕ್ರೋಶ ವ್ಯಕ್ತಪಡಿಸಿದ್ದು, ದೂರು ನೀಡಲಾಗಿದೆ.
IMA ಜ್ಯುವೆಲ್ಲರಿ ಮಾಲೀಕ ಮನ್ಸೂರ್ ಖಾನ್ ನಾಪತ್ತೆ; 400 ಕೋಟಿ ಕಥೆ ಏನಂತೆ?
ಪೊಲೀಸರಿಂದ ಮಾಹಿತಿಯನ್ನು ಪಡೆಯುತ್ತಿರುವ ಎಂ.ಬಿ.ಪಾಟೀಲ, ಈ ಪ್ರಕರಣವನ್ನು ಸಿಐಡಿಗೆ ಒಪ್ಪಿಸುವ ಅಥವಾ ವಿಚಾರಣೆಗಾಗಿ ವಿಶೇಷ ತನಿಖಾ ತಂಡ (ಎಸ್ ಐಟಿ) ರಚಿಸುವ ಸಾಧ್ಯತೆ ಇದೆ. ಈ ಪ್ರಕರಣದ ವ್ಯಾಪ್ತಿ ಒಂದಕ್ಕೂ ಹೆಚ್ಚು ರಾಜ್ಯಗಳಿಗೆ ವ್ಯಾಪಿಸಿರುವುದರಿಂದ ಈ ಕ್ರಮ ಅನಿವಾರ್ಯ ಆಗಲಿದೆ.
ನಾನೂರು ಕೋಟಿ ನೀಡಲು ಶಾಸಕರ ನಿರಾಕರಣೆ
ಮೊಹ್ಮದ್ ಮನ್ಸೂರ್ ಖಾನ್ ಆಡಿಯೋವೊಂದನ್ನು ಮಾಡಿಟ್ಟಿದ್ದಾನೆ. ಅದರಲ್ಲಿ ಹೇಳಿರುವ ಪ್ರಕಾರ: ನೀವು ಈ ಆಡಿಯೋ ಕೇಳುವ ಹೊತ್ತಿಗೆ ನಾನು ಈ ಜಗತ್ತಿನಲ್ಲಿ ಇರುವುದಿಲ್ಲ. ಬಹಳ ಕಷ್ಟದಿಂದ ನಾನು ಈ ಕಂಪೆನಿ ಮಾಡಿದೆ. ಆದರೆ ಕೇಂದ್ರ ಹಾಗೂ ರಾಜ್ಯ ಸರಕಾರದಿಂದ ನನ್ನ ಬದುಕು ತೊಂದರೆಗೆ ಸಿಲುಕಿತು. ನಾನು ಕೊಟ್ಟಿದ್ದ ನಾನೂರು ಕೋಟಿ ರುಪಾಯಿಯನ್ನು ವಾಪಸ್ ಕೊಡುವುದಕ್ಕೆ ಶಿವಾಜಿನಗರ ಸ್ಥಳೀಯ ಶಾಸಕ ನಿರಾಕರಿಸಿದರು.
ಐನೂರು ಕೋಟಿ ಆಸ್ತಿ ಇದೆ
ಅವರು ನನ್ನ ಮನೆ ಹಾಗೂ ಕಚೇರಿಗೆ ರೌಡಿಗಳನ್ನು ಕಳುಹಿಸಲು ಆರಂಭಿಸಿದರು. ಆದ್ದರಿಂದ ನನ್ನ ಕುಟುಂಬವನ್ನು ಹಳ್ಳಿಯೊಂದರಲ್ಲಿ ಬಚ್ಚಿಟ್ಟೆ. ಆದರೆ ನಾನು ದಕ್ಷಿಣ ಬೆಂಗಳೂರಲ್ಲಿ ಇದ್ದೀನಿ. ನನ್ನ ಹತ್ತಿರ ಐನೂರು ಕೋಟಿ ಆಸ್ತಿ ಇದೆ. ಮೂವತ್ತಾ ಮೂರು ಸಾವಿರ ಕ್ಯಾರೆಟ್ ವಜ್ರ ಇದೆ. ಜತೆಗೆ ಚಿನ್ನವೂ ಇದೆ.
ಹೂಡಿಕೆದಾರರಲ್ಲಿ ಹಲವರು ವಂಚಕರಿದ್ದಾರೆ
ಇವೆಲ್ಲವನ್ನೂ ಮಾರಿ, ಹೂಡಿಕೆದಾರರಿಗೆ ಹಣ ಹಿಂತಿರುಗಿಸಿ. ಆದರೆ ಹೂಡಿಕೆದಾರರಲ್ಲಿ ಹಲವರು ವಂಚಕರಿದ್ದಾರೆ. ಆದ್ದರಿಂದ ಪರೀಕ್ಷೆ ಮಾಡಿ, ಹಣ ನೀಡಿ. ಬಿಡಿಎ ಕುಮಾರ್ ಹತ್ತಿರ ಐದು ಕೋಟಿ ಹಾಗೂ ಸ್ಥಳೀಯ ಶಾಸಕರ ಹತ್ತಿರ ನನ್ನ ಹಣ ಇದೆ. ಅದನ್ನು ಅವರಿಂದ ಪಡೆಯಬೇಕು ಎಂದು ಮನ್ಸೂರ್ ಖಾನ್ ಹೇಳಿದ್ದಾನೆ.
ಜೂನ್ ಎಂಟಕ್ಕೆ ಯುಎಇಗೆ ಮನ್ಸೂರ್ ಪಲಾಯನ?
ಇನ್ನು ಮಾಧ್ಯಮಗಳ ವರದಿ ಪ್ರಕಾರ, ಜೂನ್ ಎಂಟನೇ ತಾರೀಕು ಮಾನ್ಸೂರ್ ಖಾನ್ ಯುನೈಟೆಡ್ ಅರಬ್ ಎಮಿರೇಟ್ಸ್ ಗೆ ಪಲಾಯನ ಮಾಡಿದ್ದಾನೆ. ಆತನ ನಾಪತ್ತೆ ಸುದ್ದಿ ಕಾಳ್ಗಿಚ್ಚಿನಂತೆ ಹಬ್ಬುತ್ತಿದ್ದಂತೆ ಕೆಲವೇ ಗಂಟೆಯಲ್ಲಿ ಮೂರು ಸಾವಿರಕ್ಕೂ ಹೆಚ್ಚು ದೂರುಗಳು ಕಮರ್ಷಿಯಲ್ ಸ್ಟ್ರೀಟ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿವೆ. ಮನ್ಸೂರ್ ವಿರುದ್ಧ ಎಫ್ ಐಆರ್ ಕೂಡ ಮಾಡಿದ್ದು, ಆತನ ಪತ್ತೆಗೆ ವಿಶೇಷ ತಂಡ ರಚಿಸಲಾಗಿದೆ.