ಐಎಂಎ ಜ್ಯುವೆಲ್ಲರಿಯ ಮನ್ಸೂರ್ ಅಲಿ ಖಾನ್ ವಿಡಿಯೋ ದುಬೈನಿಂದ ರಿಲೀಸ್
Recommended Video
ಬೆಂಗಳೂರು ಮೂಲದ ಐಎಂಎ ಜ್ಯುವೆಲ್ಲರಿಯ ಬಹುಕೋಟಿ ವಂಚನೆ ಪ್ರಕರಣದ ಮನ್ಸೂರ್ ಅಲಿ ಖಾನ್ ದುಬೈನ ರಾಸ್ ಅಲ್ ಖೈಮಾದಿಂದ ವಿಡಿಯೋವೊಂದನ್ನು ಭಾನುವಾರ ಬಿಡುಗಡೆ ಮಾಡಿದ್ದು, ತನ್ನ ಈಗಿನ ಸ್ಥಿತಿಗೆ ಹಾಗೂ ಐಎಂಎ ಗ್ರೂಪ್ ನಾಶ ಮಾಡುವುದಕ್ಕೆ ಸಫಲರಾಗಿದ್ದಾರೆ ಎಂದು ಕೆಲವು ರಾಜಕಾರಣಿಗಳು ಹಾಗೂ ಉದ್ಯಮಿಗಳ ಹೆಸರು ಹೇಳಿದ್ದಾನೆ.
ಹದಿನೈದು ನಿಮಿಷಕ್ಕೂ ಹೆಚ್ಚು ಸಮಯದ ವಿಡಿಯೋದಲ್ಲಿ ಮಾತನಾಡಿರುವ ಖಾನ್, ಮಾಜಿ ರಾಜ್ಯಸಭಾ ಸದಸ್ಯ ರೆಹಮಾನ್ ಖಾನ್, ಎಂಎಲ್ ಸಿ ಶರವಣ ಹಾಗೂ ಅವರ ಜ್ಯುವೆಲ್ಲರಿ ಅಸೋಸಿಯೇಷನ್, ಮಹಮದ್ ಉಬೇದುಲ್ಲಾ ಷರೀಫ್, ಟಾಡಾ ಕಾಯ್ದೆ ಅಡಿ ಜೈಲಿನಲ್ಲಿ ಇರುವ ಉಗ್ರಗಾಮಿ ಮುಖ್ತಾರ್ ಅಬ್ಬಾಸ್, ರಿಯಲ್ ಎಸ್ಟೇಟ್ ಉದ್ಯಮಿ ಫೈರೋಜ್ ಅಬ್ದುಲ್ಲಾ, ಪ್ರೆಸ್ಟೀಜ್ ಗ್ರೂಪ್ ನ ಇರ್ಫಾನ್ ಇವರೆಲ್ಲರಿಂದಾಗಿ ಐಎಂಎ ನಾಶವಾಯಿತು ಎಂದಿದ್ದಾನೆ.
2,000 ಕೋಟಿ ವಂಚನೆ ಜಾಲಕ್ಕೆ ಸಿಲುಕಿಸಿದ ಮೊಹ್ಮದ್ ಮನ್ಸೂರ್ ಖಾನ್ ಯಾರು?
ಜೂನ್ ಹದಿನಾಲ್ಕರಂದು ಬೆಂಗಳೂರಿಗೆ ವಾಪಸ್ ಬರುವವನಿದ್ದೆ. ಆದರೆ ನನ್ನ ಪಾಸ್ ಪೋರ್ಟ್, ಟಿಕೆಟ್ ಅನ್ನು ತಡೆಯಲಾಯಿತು. ಬೆಂಗಳೂರಿನ ಅಲೋಕ್ ಕುಮಾರ್ ಅವರನ್ನು ಮನವಿ ಮಾಡಿಕೊಳ್ಳುತ್ತೇನೆ. ನಾನು ಬೆಂಗಳೂರಿಗೆ ಬರುತ್ತೇನೆ. ಕಾನೂನು ತನ್ನ ಕ್ರಮ ತೆಗೆದುಕೊಳ್ಳುತ್ತದೆ. ಇಪ್ಪತ್ತೊಂದು ಸಾವಿರ ಕುಟುಂಬಕ್ಕೆ ನೀವೇ ನ್ಯಾಯ ಒದಗಿಸಬೇಕು ಎಂದಿದ್ದಾನೆ.
ಭಾರತಕ್ಕೆ ಬಂದರೆ ಹೊಡೆದು ಕೊಲ್ಲಬಹುದು
ಕೆಲವು ರಾಜಕಾರಣಿಗಳು ನನ್ನನ್ನು ಹಾಗೂ ನನ್ನ ಕುಟುಂಬವನ್ನು ಕೊಲ್ಲುವವರಿದ್ದರು. ಇನ್ನು ಈಗ ನಾನು ಭಾರತಕ್ಕೆ ಬಂದರೆ ಅರೆಸ್ಟ್ ಮಾಡಿ, ಹೊಡೆದು ಕೊಲ್ಲಬಹುದು. ಜಾಮೀನು ಪಡೆದುಕೊಂಡರೆ ಹೂಡಿಕೆದಾರರು ಸಿಟ್ಟಿನಿಂದ ರಸ್ತೆಯಲ್ಲಿ ಹೊಡೆದು ಹಾಕುತ್ತಾರೆ. ಒಟ್ಟಾರೆ ನನ್ನ ಜೀವಕ್ಕೆ ಅಪಾಯವಿದೆ ಎಂದು ಹೇಳಿದ್ದಾನೆ.
ಸಿಬಿಐನಿಂದ ತನಿಖೆ ಆಗಲಿ
ಸಿಬಿಐನಿಂದ ಈ ಬಗ್ಗೆ ತನಿಖೆ ಮಾಡಲಿ ಎಂದು ಮನವಿ ಮಾಡಿಕೊಳ್ಳುತ್ತೇನೆ. ನಾನು ವಂಚಕನಲ್ಲ. ನನ್ನ ಸಮುದಾಯದ ಕೆಲವರನ್ನು ನಂಬಿದ ಕಾರಣಕ್ಕೆ ನಾನು ಹಾಳಾದೆ. ಇದರ ಜತೆಗೆ ನನ್ನಿಂದ ಹಣ ಪಡೆದವರ ಪಟ್ಟಿಯೊಂದನ್ನು ಸಿದ್ಧ ಮಾಡುತ್ತಿದ್ದೇನೆ. ನನ್ನ ಸಂಪರ್ಕ ಸಂಖ್ಯೆಯಲ್ಲಿ ಲಭ್ಯ ಇದ್ದೇನೆ ಎಂದು ಆತ ತಿಳಿಸಿದ್ದಾನೆ.
ಐಎಎಸ್ ಅಧಿಕಾರಿಯೊಬ್ಬರಿಗೆ ಹತ್ತು ಕೋಟಿ ರುಪಾಯಿ
ನನ್ನಿಂದ ಐಎ ಎಸ್ ಅಧಿಕಾರಿಯೊಬ್ಬರು ಹತ್ತು ಕೋಟಿ ರುಪಾಯಿ ನೀಡಿದ್ದೇನೆ ಎಂದು ಮನ್ಸೂರ್ ಖಾನ್ ಆರೋಪ ಮಾಡಿದ್ದು, ಆ ಅಧಿಕಾರಿ ಯಾರು ಎಂದು ಹೆಸರನ್ನು ಹೇಳಿಲ್ಲ. ಸರಕಾರದಿಂದ ನಿರಾಕ್ಷೇಪಣಾ ಪತ್ರ ನೀಡಿದ್ದರೆ ಎನ್ ಬಿಎಫ್ ಸಿಯಿಂದ ನನಗೆ ಹಣ ಸಿಗುತ್ತಿತ್ತು. ಆದರೆ ನನಗೆ ಎನ್ ಒಸಿ ಸಿಗಲಿಲ್ಲ ಎಂದು ಆತ ಹೇಳಿದ್ದಾನೆ.
ಮನ್ಸೂರ್ ಖಾನ್ ಪರಿಚಯ ಕೂಡ ಇಲ್ಲ: ಶರವಣ
ಈ ಮಧ್ಯೆ ಮಾಧ್ಯಮವೊಂದರ ಜತೆ ಮಾತನಾಡಿದ ವಿಧಾನಪರಿಷತ್ ಸದಸ್ಯ ಹಾಗೂ ಕರ್ನಾಟಕ ಜ್ಯುವೆಲ್ಲರಿ ಮಾಲೀಕರ ಒಕ್ಕೂಟದ ಅಧ್ಯಕ್ಷ ಟಿ.ಎ.ಶರವಣ, ನನಗೆ ಆತನ ಪರಿಚಯ ಕೂಡ ಇಲ್ಲ. ಈ ಹಿಂದೆ ಐಎಂಎ ಜ್ಯುವೆಲ್ಲರಿಯಿಂದ ವೇಸ್ಟೇಜ್, ಮೇಕಿಂಗ್ ಶುಲ್ಕ ಇಲ್ಲದೆ ಆಭರಣ ಮಾರುತ್ತಿದ್ದಾರೆ ಎಂದು ಕೆಲವರು ನನ್ನ ಹತ್ತಿರ ದೂರು ಹೇಳಿದ್ದರು. ಆದರೆ ಅಂಥ ಮಾರಾಟಕ್ಕೆ ಕಾನೂನಿನಲ್ಲಿ ಏನೂ ಮಾಡಲು ಸಾಧ್ಯವಿಲ್ಲ ಎಂದು ತಿಳಿದಾಗ ಸುಮ್ಮನಾದೆವು ಎಂದಿದ್ದಾರೆ.
ನನ್ನ ಬಳಿ 1350 ಕೋಟಿ ರುಪಾಯಿ ಇದೆ
ಮೊಬೈಲ್ ಸಂಖ್ಯೆ 9902129090ಗೆ ಎಸ್ಸೆಮ್ಮೆಸ್ ಮಾಡಿ. ಅದೇ ಸಂಖ್ಯೆಯಲ್ಲಿ ನಾನು ಲಭ್ಯನಿದ್ದೇನೆ. ಈಗ ಆರೋಪ ಮಾಡಿರುವಂತೆ 4 ಸಾವಿರ ಕೋಟಿ ರುಪಾಯಿಯಷ್ಟು ನಾನು ವಂಚನೆ ಮಾಡಿಲ್ಲ. ನನ್ನ ಬಳಿ 1350 ಕೋಟಿ ರುಪಾಯಿ ಇದೆ. ಈಗಲೂ ನಾನು ಯಾರಿಗೂ ಮೋಸ ಮಾಡುವುದಿಲ್ಲ ಎಂದು ಮನ್ಸೂರ್ ಖಾನ್ ಹೇಳಿದ್ದಾನೆ.