ನಾನೇ ಕ್ವಾರಂಟೈನ್ ಆಗೋದು ಸರಿನಾ: ಕೇಂದ್ರ ಸಚಿವ ಸದಾನಂದಗೌಡ ಪ್ರಶ್ನೆ!
ಬೆಂಗಳೂರು, ಮೇ 26: ಕೊರೊನಾ ವೈರಸ್ ಅಟ್ಟಹಾಸದ ಹಿನ್ನೆಲೆಯಲ್ಲಿ ಜಾರಿಗೆ ತಂದಿರುವ ಲಾಕ್ಡೌನ್ ಮಾರ್ಗಸೂಚಿಗಳನ್ನು ಬರಿ ಜನಸಾಮಾನ್ಯರು ಮಾತ್ರ ಪಾಲಿಸಬೇಕಾ? ಎಂಬ ಚರ್ಚೆ ರಾಜ್ಯದಲ್ಲಿ ಶುರುವಾಗಿದೆ. ಇದಕ್ಕೆ ಕಾರಣವಾಗಿರುವುದು ಕೇಂದ್ರ ರಸಗೊಬ್ಬರ ಸಚಿವ ಡಿ.ವಿ. ಸದಾನಂದಗೌಡ ಅವರ ಪ್ರಯಾಣ. ಕೊರೊನಾ ಪೀಡಿತ ರಾಜ್ಯಗಳಿಂದ ಬಂದವರು ಖಡ್ಡಾಯವಾಗಿ ಸರ್ಕಾರಿ ಕ್ವಾರಂಟೈನ್ಗೆ ಒಳಗಾಗಬೇಕೇಂದು ರಾಜ್ಯ ಸರ್ಕಾರದ ಮಾರ್ಗಸೂಚಿಯಿದೆ.
ದೆಹಲಿಯಿಂದ ಬೆಂಗಳೂರಿಗೆ ಆಗಮಿಸಿರುವ ಕೇಂದ್ರ ರಸಗೊಬ್ಬರ ಸಚಿವ ಸದಾನಂದಗೌಡ ಅವರು ಯಾವುದೇ ಕ್ವಾರಂಟೈನ್ಗೆ ಒಳಗಾಗದೇ ವಿಧಾನಸೌಧದಲ್ಲಿ ಸಭೆ ನಡೆಸಿದ್ದಾರೆ. ಸಚಿವರು ಕ್ವಾರಂಟೈನ್ಗೆ ಒಳಗಾಗದೇ ಇರುವುದು ವಿವಾದಕ್ಕೆ ಎಡೆ ಮಾಡಿಕೊಡುತ್ತಿದ್ದಂತೆಯೆ ಆರೋಗ್ಯ ಇಲಾಖೆಯಿಂದ ಹೊಸ ಮಾರ್ಗಸೂಚಿ ಪ್ರಕಟವಾಗಿರುವುದು ಮತ್ತಷ್ಟು ಚರ್ಚೆಗೆ ಗ್ರಾಸವಾಗಿದೆ.
ಪ್ರಶ್ನಿಸಿದ ಜನತೆ!
ಕೇಂದ್ರ ಸಚಿವರಾಗಿ ಜವಾಬ್ದಾರಿಯುತ ಸ್ಥಾನದಲ್ಲಿದ್ದರೂ ತಾವೇ ಮಾಡಿರುವ ಮಾರ್ಗಸೂಚಿ ಪಾಲಿಸದೇ ಇರುವುದನ್ನು ಸಾರ್ವಜನಿಕರು ಪ್ರಶ್ನೆ ಮಾಡಿದ್ದಾರೆ. ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ ಅವರು ಸುಮಾರು ಎರಡೂವರೆ ತಿಂಗಳುಗಳ ಬಳಿಕ ದೆಹಲಿಯಿಂದ ಬೆಂಗಳೂರಿಗೆ ಪ್ರಯಾಣಿಸಿದ್ದಾರೆ. ದೇಶಿಯ ವಿಮಾನಯಾನ ಆರಂಭವಾದ ನಂತರ ಸಾಮಾನ್ಯ ಪ್ರಯಾಣಿಕರು ಬಂದಿದ್ದ ವಿಮಾನದಲ್ಲಿ ಸದಾನಂದಗೌಡರು ಬರುವ ಮೂಲಕ ಸರಳತೆ ಮೆರೆದಿದ್ದಾರೆ. ಆದರೆ ಸರಳತೆಗಿಂದ ಜವಾಬ್ದಾರಿ ಮೆರೆಯುವ ಸಂದರ್ಭ ಎಂದು ಸಾರ್ವಜನಿಕರು ಪ್ರಶ್ನೆ ಮಾಡಿದ್ದಾರೆ.
ದೆಹಲಿ, ತಮಿಳುನಾಡು, ಮಹಾರಾಷ್ಟ್ರ ಸೇರಿದಂತೆ ವಿವಿಧ ರಾಜ್ಯಗಳಿಂದ ಕರ್ನಾಟಕ್ಕೆ ಬರುವವರು ಕನಿಷ್ಠ 7 ದಿನಗಳ ಸರ್ಕಾರಿ ಕ್ವಾರಂಟೈನ್ಗೆ ಒಳಗಾಗಬೇಕು ಎಂಬ ನಿಯಮವಿದೆ.
ನಾನೇ ಕ್ವಾರಂಟೈನ್ ಆಗೋದಾ?
ನಾನು ಔಷಧ ಇಲಾಖೆಯ ಮುಖ್ಯಸ್ಥ. ನಾನು ಓಡಾಟ ಮಾಡಲೇಬೇಕು. ನಮ್ಮ ಇಲಾಖೆಯಲ್ಲಿ ಏನಾದರೂ ಹೆಚ್ಚು ಕಡಿಮೆ ಆದರೆ ಪ್ರಧಾನಿ ಮೋದಿ ಅವರು ನಮ್ಮನ್ನು ಸುಮ್ಮನೆ ಬಿಡುವುದಿಲ್ಲ. ಔಷಧ ಇಲಾಖೆಯ ಮುಖ್ಯಸ್ಥನಾಗಿ ನಾನೇ ಕ್ವಾರಂಟೈನ್ಗೆ ಒಳಗಾಗೋದು ಅಂದರೆ ಸರಿನಾ? ಪ್ರಯಾಣದ ಸಂದರ್ಭದಲ್ಲಿ ಎಚ್ಚರಿಕೆ ತೆಗೆದುಕೊಂಡಿದ್ದೇನೆ. ಮೂರುದಿನಕ್ಕೊಮ್ಮೆ ಕೋವಿಡ್ ಪರೀಕ್ಷೆ ಮಾಡಿಸುತ್ತಿದ್ದೇನೆ ಎಂದು ಕೇಂದ್ರ ಸಚಿವ ಸದಾನಂದಗೌಡ ಅವರು ಸ್ಪಷ್ಟನೆ ಕೊಟ್ಟಿದ್ದಾರೆ.
ಚರ್ಚೆಗೆ ಗ್ರಾಸವಾದ ಸುತ್ತೋಲೆ
ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ ಅವರು ಕ್ವಾರಂಟೈನ್ಗೆ ಒಳಗಾಗದೇ ಇದ್ದದ್ದು ವಿವಾದಕ್ಕೆ ಎಡೆ ಮಾಡಿಕೊತ್ತಿದ್ದಂತೆಯೆ, ಕರ್ನಾಟಕ ರಾಜ್ಯ ಆರೋಗ್ಯ ಇಲಾಖೆಯ ಅಧಿಕೃತ ವಾಟ್ಸಪ್ ಗ್ರೂಪ್ನಲ್ಲಿ ಸುತ್ತೋಲೆಯೊಂದು ಪ್ರಕಟವಾಯಿತು. ಅದು ಕುತೂಹಲಕ್ಕೆ ಕಾರಣವಾಗಿದೆ. ಮೇ 23, 2020ರಂದು ಮಾಡಲಾಗಿರುವ ಆದೇಶವನ್ನು ಇಂದು (ಮೇ 25, 2020) ಆರೋಗ್ಯ ಇಲಾಖೆ ಮಾಧ್ಯಮಗಳಿಗೆ ಬಿಡುಗಡೆ ಮಾಡಿದೆ.
ಸುತ್ತೋಲೆಯಲ್ಲಿ ತಿಳಿಸಿರುವಂತೆ, ICMR ನಿಂದ ಕೋವಿಡ್ ಪರೀಕ್ಷೆ ಮಾಡಿಸಿಕೊಂಡು ಕೇಂದ್ರ, ರಾಜ್ಯ ಸಚಿವರು, ಅಧಿಕಾರಿಗಳು ಪ್ರಯಾಣ ಮಾಡಬಹುದು. ಅವರು ಯಾವುದೇ ಕ್ವಾರಂಟೈನ್ಗೆ ಒಳಗಾಗುವ ಅಗತ್ಯವಿಲ್ಲ ಎಂದು ಮಾರ್ಗಸೂಚಿಯಲ್ಲಿ ಹೇಳಲಾಗಿದೆ.
ಹೊರಗಿನವರಿಂದಲೇ ಕಂಟಕ!
ಕಳೆದ ಒಂದು ವಾರದಿಂದ ಹೊರ ರಾಜ್ಯಗಳಿಂದ ಬಂದವರಲ್ಲಿಯೆ ಕೋವಿಡ್ ಸೋಂಕು ಪತ್ತೆಯಾಗುತ್ತಿದೆ. ಮೇ 23 ರಂದು ರಾಜ್ಯದಲ್ಲಿ ಪತ್ತೆಯಾಗಿದ್ದ 216 ಸೋಂಕಿತರಲ್ಲಿ 197 ಜನರು, ಮೇ 24 ರಂದು ಪತ್ತೆಯಾಗಿರುವ 130 ಸೋಂಕಿತರಲ್ಲಿ 119 ಜನರು ಹಾಗೂ ಇಂದು(ಮೇ 25, 2020) ಪತ್ತೆಯಾಗಿರುವ 93 ಸೋಂಕಿತರಲ್ಲಿ 80 ಜನರು ಹೊರರಾಜ್ಯ, ದೇಶಗಳಿಂದ ಬಂದವರು ಆಗಿದ್ದಾರೆ.
ಹೀಗಾಗಿ ಹೊರ ರಾಜ್ಯಗಳಿಂದ ಬಂದವರು ಖಡ್ಡಾಯವಾಗಿ ಕ್ವಾರಂಟೈನ್ಗೆ ಒಳಗಾಗ ಬೇಕು ಎಂಬುದು ಜನರ ಒತ್ತಾಯ. ಯಾಕಂದರೆ ಕೊರೊನಾ ವೈರಸ್ಗೆ ಮಂತ್ರಿಗಳು ಹಾಗೂ ಜನಸಾಮನ್ಯರು ಬೇರೆ ಬೇರೆ ಎಂದು ಗೊತ್ತಾಗುವುದಿಲ್ಲ!