ವಿದೇಶದಿಂದ ಹಣಕಾಸು ನೆರವು ಪಡೆಯಲು ಸಿಮ್ ಕಿಟ್ ಕಾಲ್ ದುರ್ಬಳಕೆ
ಬೆಂಗಳೂರು, ಜೂ. 13 : ಅಂತಾರಾಷ್ಟ್ರೀಯ ಕರೆಗಳನ್ನು ಸ್ಥಳೀಯ ಕರೆಗಳನ್ನು ಪರಿವರ್ತಿಸಿ ದೂರ ಸಂಪರ್ಕ ಇಲಾಖೆಗೆ ನಷ್ಟ ಉಂಟು ಮಾಡಿದ ಜತೆಗೆ ಇಡೀ ದೇಶದ ಭದ್ರತೆಗೆ ದಕ್ಕೆ ಉಂಟು ಮಾಡಿದ್ದ ಸಿಮ್ ಕಿಟ್ ಅಕ್ರಮದ ಜಾಲ ಕಂಡು ಪೊಲೀಸರೇ ಬೆಚ್ಚಿ ಬಿದ್ದಿದ್ದಾರೆ. ಸಿಮ್ ಕಿಟ್ ಅಕ್ರಮದಲ್ಲಿ ಇಬ್ಬರು ಸಿಕ್ಕಿಬಿದ್ದ ಬೆನ್ನಲ್ಲೇ ಸಿಸಿಬಿ ಎಟಿಎಸ್ ಘಟಕದ ಪೊಲೀಸರು ಐವರು ಆರೋಪಿಗಳನ್ನು ಬಂಧಿಸಿದ್ದಾರೆ. ಮೂರು ಸಾವಿರ ಸಿಮ್ ಕಾರ್ಡ್, 109 sim box ಡಿವೈಸ್ ವಶಪಡಿಸಿಕೊಂಡಿದ್ದಾರೆ.
"ಅಂತಾರಾಷ್ಟ್ರೀಯ ಕರೆಗಳನ್ನು ಸ್ಥಳೀಯ ಕರೆಗಳನ್ನಾಗಿ ಪರಿವರ್ತನೆ ಮಾಡಿ ದೂರ ಸಂರ್ಪ ಇಲಾಖೆಗೆ ನಷ್ಟವುಂಟು ಮಾಡುತ್ತಿದ್ದ ಐವರು ಆರೋಪಿಗಳನ್ನು ಸಿಸಿಬಿ ಎಟಿಎಸ್ ಘಟಕ ಬಂಧಿಸಿದೆ. ಬಂಧಿತರು ನಗರದ ಹಲವಡೆ ಸಿಮ್ ಬಾಕ್ಸ್ ಇಟ್ಟುಕೊಂಡು ಅಕ್ರಮ ವಹಿವಾಟು ನಡೆಸುತ್ತಿದ್ದು, ಈ ಸಂಬಂಧ ಐವರು ಆರೋಪಿಗಳನ್ನು ಬಂಧಿಸಲಾಗಿದೆ. ಬಂಧಿತರಿಂದ ಮೂರು ಸಾವಿರ ಸಿಮ್ ಕಾರ್ಡ್ ಹಾಗೂ 109 ಸಿಮ್ ಬಾಕ್ಸ್ ವಶಪಡಿಸಿಕೊಳ್ಳಲಾಗಿದೆ"ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ ಪಂತ್ ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸಿಮ್ ಕಿಟ್ ಅಕ್ರಮ
ಕೇರಳದ ಮಲ್ಲಪ್ಪುರಂ ನಿವಾಸಿ ಮಹಮದ್ ಬಷೀರ್, ಅನೀಸ್ ಅತ್ತಿಮನ್ನಿಲ್, ತಮಿಳುನಾಡು ಮೂಲದ ಸಂತನ್ ಕುಮಾರ್, ಸುರೇಶ್ ತಂಗವೇಲು, ಗಣೇಶ್ ಬಂಧಿತ ಆರೋಪಿಗಳು. ಇವರಿಂದ 23 ಲ್ಯಾಪ್ಟಾಪ್, ಹತ್ತು ಪೆನ್ ಡ್ರೈವ್, 14 ಯುಪಿಎಸ್, ಹದಿನೇಳು ರೂಟರ್ಸ್ ಗಳನ್ನು ಸಿಸಿಬಿ ಎಟಿಎಸ್ ಘಟಕದ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಬಂಧಿತರು ದೂರ ಸಂಪರ್ಕ ಇಲಾಖೆಗೆ ಕೋಟ್ಯಂತರ ರೂಪಾಯಿ ನಷ್ಟ ವುಂಟು ಮಾಡಿದ್ದಾರೆ. ಮಿಗಿಲಾಗಿ ದೇಶದ ಭದ್ರತಾ ವ್ಯವಸ್ಥೆಗೆ ಆಪತ್ತು ತಂದಿದ್ದ ಸಿಮ್ ಕಿಟ್ ಜಾಲವನ್ನು ಪತ್ತೆ ಮಾಡುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಬಿಟಿಎಂ ಬಡಾವಣೆ, ಸುದ್ದುಗುಂಟೆ ಪಾಳ್ಯ, ಮಡಿವಾಳ ಸೇರಿದಂತೆ ನಗರದ 9 ಕಡೆ ಕಾರ್ಯಾಚರಣೆ ನಡೆದಿದೆ.
ದೇಶದ ಭದ್ರತೆಗೆ ಗಂಡಾಂತರ ತಂದಿಟ್ಟಿದ್ದ ಸಿಮ್ ಕಿಟ್ ಕ್ರಿಮಿನಲ್ ಎಟಿಸಿ ಬಲೆಗೆ
ಸೇಲ್ಸ್ ಮೆನ್ ಯಡವಟ್ಟು
ಬಂಧಿತ ಆರೋಪಿಗಳ ಪೈಕಿ ಸಂತನ್ ಕುಮಾರ್ ಮೊಬೈಲ್ ಸರ್ವೀಸ್ ಕಂಪನಿಯೊಂದರ ಸೇಲ್ಸ್ ಮ್ಯಾನ್ ಆಗಿದ್ದ. ಈತ ತಮಿಳುನಾಡಿನ ತೂತಕುಡಿಯಲ್ಲಿನ ಸುರೇಶ್ ತಂಗವೇಲು ಮತ್ತು ಜೈ ಗಣೇಶ್ ಎಂಬುವರಿಂದ ಸಿಮ್ಗಳನ್ನು ಪಡೆದು ಕೊರಿಯರ್ ಮೂಲಕ ಬಷೀರ್ ಮತ್ತು ಗ್ಯಾಂಗ್ಗೆ ರವಾನೆ ಮಾಡುತ್ತಿದ್ದ. ಬೆಂಗಳೂರಿನಲ್ಲಿ ಅನಧಿಕೃತವಾಗಿ ತೆರೆದಿದ್ದ 9 ಟೆಲಿಪೋನ್ ಎಕ್ಸ್ ಚೇಂಜ್ ಕಚೇರಿಗಳಲ್ಲಿ ಬಳಸಲಾಗಿತ್ತು. ಕೆಲವರು ತಮ್ಮ ಸಂಬಂಧಿಕರ ಜತೆ ಮಾತನಾಡಲು ಈ ಸೌಲಭ್ಯ ಬಳಿಸಿದ್ದರೆ, ಇನ್ನು ಕೆಲವರು ಭಾರತದ ಮಿಲಿಟರಿ ವ್ಯವಸ್ಥೆ ಬಗ್ಗೆ ಗೂಢಚರ್ಯೆ ನಡೆಸಲು ಸಿಮ್ ಬಾಕ್ಸ್ ಬಳಿಸಿರುವುದು ಪ್ರಾಥಮಿಕ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಈ ಕುರಿತು ಸಿಸಿಬಿ ಎಟಿಎಸ್ ಘಟಕದ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಮಿಲಿಟರಿಯಿಂದ ಮಾಹಿತಿ
ಮಿಲಿಟರಿ ಅಧಿಕಾರಿಗಳು ನೀಡಿದ ಮಾಹಿತಿ ಮೇರೆಗೆ ಸಿಸಿಬಿ ಎಟಿಎಸ್ ಘಟಕದ ಅಧಿಕಾರಿಗಳು ದಾಳಿ ನಡೆಸಿ ಕೇರಳ ಮೂಲದ ಇಬ್ಬರು ಆರೋಪಿಗಳನ್ನು ಬಂಧಿಸಿದ್ದರು. ಬಂಧಿತರು ನೀಡಿದ್ದ ಮಾಹಿತಿ ಮೇರೆಗೆ ಹಲವು ಸಿಮ್ ಬಾಕ್ಸ್ ಗಳನ್ನು ವಶಪಡಿಸಿಕೊಂಡಿದ್ದರು. ವಿಚಾರಣೆ ವೇಳೆ ಕೆಲವು ಸ್ಫೋಟಕ ಮಾಹಿತಿ ಹೊರ ಬಿದ್ದಿದೆ. ಇದರ ಮಾಹಿತಿ ಆಧಾರದ ಮೇಲೆ ಐವರು ಆರೋಪಿಗಳನ್ನು ಬಂಧಿಸಲಾಗಿದೆ. ಬಂಧಿತರಿಂದ ಮೂರು ಸಾವಿರ ಸಿಮ್ ವಶಪಡಿಸಿಕೊಂಡಿದ್ದು, ಪೊಲೀಸರನ್ನೇ ಬೆಚ್ಚಿ ಬೀಳಿಸಿದೆ.
Recommended Video
ಭಯೋತ್ಪಾದನೆಗೆ ದುರ್ಬಳಕೆ
ಅಂತಾರಾಷ್ಟ್ರೀಯ ಕರೆಗಳನ್ನು ಸ್ಥಳೀಯ ಕರೆಗಳನ್ನಾಗಿ ಪರಿವರ್ತಿಸುವ ಈ ಜಾಲದಿಂದ ಕೇವಲ ದೂರ ಸಂಪರ್ಕ ಇಲಾಖೆಗೆ ನಷ್ಟ ಮಾತ್ರ ಆಗಿಲ್ಲ. ಇದೇ ಸಂಪಕ್ ಬಳಿಸಿಕೊಂಡು ದೇಶದ ಭದ್ರತಾ ವ್ಯವಸ್ಥೆ ಬಗ್ಗೆ ಉಗ್ರರು ಗೂಢಚರ್ಯೆ ನಡೆಸಿರುವ ಅನುಮಾನ ವ್ಯಕ್ತವಾಗಿದೆ. ನಿವೃತ್ತ ಮಿಲಟರಿ ಅಧಿಕಾರಿ ಹೆಸರಿನಲ್ಲಿ ಮಿಲಟರಿ ಕಚೇರಿಗೆ ಕರೆ ಮಾಡಿ ಕೆಲವು ಮಾಹಿತಿ ಕೇಳಿದ್ದಾರೆ. ಈ ಬಗ್ಗೆ ಸಂಶಯಗೊಂಡು ಮಿಲಟರಿ ಅಧಿಕಾರಿಗಳು ಪ್ರಶ್ನಿಸಿದಾಗ ತಾನು ನಿವೃತ್ತ ಮಿಲಟರಿ ಅಧಿಕಾರಿ ಎಂದು ಹೇಳಿದ್ದಾರೆ. ಕರೆಯ ಜಾಲ ಪತ್ತೆ ಮಾಡಿದಾಗ ಬೆಂಗಳೂರಿನಲ್ಲಿನ ಅಂತಾರಾಷ್ಟ್ರೀಯ ಕರೆಗಳ ಜಾಲ ಬೆಳಕಿಗೆ ಬಂದಿದೆ. ಮಿಲಟರಿ ಅಧಿಕಾರಿಗಳು ನೀಡಿದ ಮಾಹಿತಿಯಿದಲೇ ಈ ಅಕ್ರಮ ಹೊರಗೆ ಬಂತು ಎಂದು ಹೆಸರು ಹೇಳಲು ಇಚ್ಛಿಸದ ಪೊಲೀಸ್ ಅಧಿಕಾರಿ 'ಒನ್ ಇಂಡಿಯಾ ಕನ್ನಡ'ಕ್ಕೆ ತಿಳಿಸಿದ್ದಾರೆ. ಈ ಕರೆಗಳ ಸೌಲಭ್ಯ ಪಡೆದು ಕೆಲವು ಸಂಘ ಸಂಸ್ಥೆಗಳು ಅಂತಾರಾಷ್ಟ್ರೀಯವಾಗಿ ಹಣಕಾಸಿನ ನೆರವು ಪಡೆದಿವೆ. ಈ ಕುರಿತು ಕೇಂದ್ರ ಗುಪ್ತಚರ ಇಲಾಖೆ ಕೂಡ ತನಿಖೆ ನಡೆಸುತ್ತಿದೆ ಎಂದು ಅವರು ಹೇಳಿದರು.