ಅಲಯನ್ಸ್ ವಿವಿ ಹಣ ದುರುಪಯೋಗ: ಮಾಜಿ ವಿಸಿ ಮಧುಕರ್ ಇಡಿ ವಿಚಾರಣೆ
ಬೆಂಗಳೂರು, ಡಿಸೆಂಬರ್ 02: ಹಣ ಅಕ್ರಮ ವರ್ಗಾವಣೆ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಅಲಯನ್ಸ್ ವಿಶ್ವ ವಿದ್ಯಾಲಯದ ಮಾಜಿ ವೈಸ್ ಚಾನ್ಸಲರ್ ಮಧುಕರ್ ಅಂಗೂರ್ ಬುಧವಾರ ಶಾಂತಿನಗರದಲ್ಲಿರುವ ಜಾರಿ ನಿರ್ದೇಶನಾಲಯದಲ್ಲಿ ವಿಚಾರಣೆಗೆ ಹಾಜರಾಗಿದ್ದಾರೆ. ಇಬ್ಬರು ಅಧಿಕಾರಿಗಳ ತಂಡ ಅಂಗೂರ್ ಅವರನ್ನು ನೂರು ಕೋಟಿ ರೂಪಾಯಿ ಹಣ ದುರುಪಯೋಗಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದೆ.
ಡಿಸೆಂಬರ್ 2 ರಂದು ವಿಚಾರಣೆಗೆ ಹಾಜರಾಗಲು ಸೂಚಿಸಿ ಇಡಿ ಅಧಿಕಾರಿಗಳು ನೋಟಿಸ್ ನೀಡಿದ್ದರು. ಈ ಹಿನ್ನೆಲೆಯಲ್ಲಿ ಮಧುಕರ್ ಅಂಗೂರ್ ವಿಚಾರಣೆಗೆ ಹಾಜರಾಗಿದ್ದಾರೆ. ಅಲಯನ್ಸ್ ಮಾಜಿ ಕುಲಪತಿ ಮಧುಕರ್ ಅಂಗೂರ್ ಅವರು ನೂರು ಕೋಟಿ ರೂಪಾಯಿ ಸಾರ್ವಜನಿಕರ ಹಣವನ್ನು ದುರುಪಯೋಗ ಪಡಿಸಿಕೊಂಡ ಆರೋಪವಿದೆ. ಹಣವನ್ನು ಹಣ ವರ್ಗಾವಣೆ ಕಾಯ್ದೆ ಉಲ್ಲಂಘಿಸಿ ಹೊರ ದೇಶಕ್ಕೆ ವರ್ಗಾವಣೆ ಮಾಡಿದ್ದಾರೆ ಎಂಬ ಆರೋಪವಿದೆ.
ಅಕ್ರಮ ಹಣ ವರ್ಗಾವಣೆ; ಮಧುಕರ್ ಅಂಗೂರ್ಗೆ ಇಡಿ ನೋಟಿಸ್
ಮಧುಕರ್ ಕುಲಪತಿಯಾಗಿದ್ದ 2010 ರಿಂದ 2017 ರ ಅವಧಿಯಲ್ಲಿ ವಿಶ್ವ ವಿದ್ಯಾಲಯದ ನೂರು ಕೋಟಿ ರೂಪಾಯಿ ಹಣವನ್ನು ವಿದೇಶಗಳಿಗೆ ಅಕ್ರಮವಾಗಿ ವರ್ಗಾಯಿಸಿದ್ದಾರೆ. ತಮ್ಮ ಸಹವರ್ತಿ ಗಳ ಬ್ಯಾಂಕ್ ಖಾತೆಗೆ ವರ್ಗಾಹಿಸಿರುವ ಆರೋಪವಿದೆ. ಈ ಕುರಿತು ಪ್ರಾಥಮಿಕ ವಿಚಾರಣೆ ನಡೆಸಿದ್ದ ಇಡಿ ಅಧಿಕಾರಿಗಳು ಇಸಿಆರ್ ದಾಖಲಿಸಿ ತನಿಖೆ ನಡೆಸಿದ್ದರು. ಅಕ್ಟೋಬರ್ 9 ರಂದು ಮಧುಕರ್ ಅವರನ್ನು ವಿಚಾರಣೆ ನಡೆಸಿದ್ದರು.
ಇದೀಗ ಮತ್ತೊಮ್ಮೆ ಅವರನ್ನು ವಿಚಾರಣೆಗೆ ಕರೆದು ಇಡಿ ಅಧಿಕಾರಿಗಳು ಶಾಕ್ ನೀಡಿದ್ದರು. ಇಡಿ ಸೂಚನೆ ಮೇರೆಗೆ ಇಂದು ವಿಚಾರಣೆಗೆ ಮಧುಕರ್ ಹಂಗೂರ್ ಹಾಜರಾಗಿದ್ದಾರೆ. ಹತ್ತು ವರ್ಷಗಳ ಆದಾಯ ತೆರಿಗೆ ಸಲ್ಲಿಕೆ, ಬೇರೆ ಕಂಪನಿಗಳ ಮೇಲೆ ಹಣ ಹೂಡಿಕೆ ಕುರಿತ ವಿವರಗಳನ್ನು ಸಲ್ಲಿಸಲು ಇಡಿ ಅಧಿಕಾರಿಗಳು ಸೂಚಿಸಿದ್ದಾರೆ ಎನ್ನಲಾಗಿದೆ. ಮಧುಕರ್ ಹಂಗೂರ್ ವಿರುದ್ಧ ಈಗಾಗಲೇ ಹಲವು ಕ್ರಿಮಿನಲ್ ಪ್ರಕರಣ ದಾಖಲಾಗಿವೆ. ಜಾಮೀನು ಪಡೆದಿರುವ ಹಂಗೂರ್ ಅಲಯನ್ಸ್ ವಿವಿಯ ಸಾರ್ವಜನಿಕ ಹಣವನ್ನು ಇಂಜಾಜ್ ಗ್ರೂಫ್ ನಲ್ಲಿ ಹೂಡಿಕೆ ಮಾಡಿದ ಆರೋಪವಿದೆ. ಹಣವನ್ನು ಅಕ್ರಮವಾಗಿ ವರ್ಗಾವಣೆ ಮಾಡಿರುವ ಹಾಗೂ ಹೊರ ದೇಶದಲ್ಲಿ ಅಕ್ರಮ ವಿನಿಯಮ ಮಾಡಿಕೊಂಡಿರುವ ಆರೋಪ ಸಂಬಂಧ ವಿಚಾರಣೆ ನಡೆಸಲಿದ್ದಾರೆ.
ಮಧುಕರ್ ಸಹಚರರ ಬ್ಯಾಂಕ್ ಖಾತೆಗಳ ವಿವರ ಕೂಡ ಪಡೆದು ಇಡಿ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಧುಕರ್ ಹಂಗೂರ್ ಹಲವು ರಾಜಕೀಯ ವ್ಯಕ್ತಿಗಳ ಜತೆಗೂ ವ್ಯವಹಾರಿಕ ಸಂಬಂಧ ಹೊಂದಿದ್ದು, ಅವರಿಗೂ ಇಡಿ ಸಂಕಷ್ಟ ಎದುರಾಗುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ರೈತರಿಂದ ಗಿಫ್ಟ್ ಡೀಡ್ ಮೂಲಕ ಭೂಮಿ ಪಡೆದ ನೆಪದಲ್ಲಿ ಕೋಟ್ಯಂತರ ರೂಪಾಯಿ ವಹಿವಾಟು ನಡೆಸಿರುವ ಬಗ್ಗೆಯೂ ಇಡಿ ಅಧಿಕಾರಿಗಳು ದಾಖಲೆ ಕಲೆ ಹಾಕಿದ್ದಾರೆ. ಮಧುಕರ್ ಅಂಗೂರ್ ಇಡಿ ವಿಚಾರಣೆಯಲ್ಲಿ ಇನ್ನಷ್ಟು ಸತ್ಯ ಹೊರ ಬರಲಿದೆ.