'ಆನಂದ್ ಸಿಂಗ್, ನಾಗೇಂದ್ರ ವಿಚಾರಣೆಗೆ ಗೈರಾದರೆ ಬಂಧಿಸಿ ಕರೆ ತನ್ನಿ'
ಬೆಂಗಳೂರು, ಮಾರ್ಚ್ 15: ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗದ ಹಿನ್ನಲೆಯಲ್ಲಿ ಶಾಸಕರಾದ ಆನಂದ್ ಸಿಂಗ್ ಹಾಗೂ ಬಿ ನಾಗೇಂದ್ರ ಅವರ ವಿರುದ್ಧ ಜಾಮೀನು ರಹಿತ ವಾರೆಂಟ್ ಜಾರಿಗೊಳಿಸಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಇಂದು ಆದೇಶ ನೀಡಿದೆ. ಮಾರ್ಚ್ 18ರಂದು ಗೈರು ಹಾಜರಾಗಿರುವ ಆರೋಪಿಗಳನ್ನು ಬಂಧಿಸಿ ಕರೆತರುವಂತೆ ಪೊಲೀಸರಿಗೆ ಕೋರ್ಟ್ ಸೂಚಿಸಿದೆ.
ಬೇಲೇಕೇರಿ ಪ್ರಕರಣ : ಜನಾರ್ದನ ರೆಡ್ಡಿ ಆರೋಪಿ ನಂ.1
ಬಳ್ಳಾರಿ ಜಿಲ್ಲೆಯಲ್ಲಿ ನಡೆದ ಅಕ್ರಮ ಗಣಿಗಾರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಿರುವ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ಕೋರ್ಟ್, ಆರೋಪಿಗಳಾದ ಆನಂದ್ ಸಿಂಗ್ ಹಾಗೂ ಬಿ ನಾಗೇಂದ್ರ ಅವರಿಗೆ ಜಾಮೀನು ರಹಿತ ವಾರೆಂಟ್ ಜಾರಿ ಮಾಡಿದೆ.
ಆನಂದ್ ಸಿಂಗ್ ಹಾಗೂ ಬಿ ನಾಗೇಂದ್ರ ವಿರುದ್ಧ ಸಿಬಿಐ ಮತ್ತು ವಿಶೇಷ ತನಿಖಾ ತಂಡಗಳು ಚಾರ್ಜ್ ಶೀಟ್ ಸಲ್ಲಿಕೆ ಮಾಡಿವೆ. ಜನಪ್ರತಿನಿಧಿಗಳ ವಿಶೇಷ ಕೋರ್ಟ್ ನಲ್ಲಿ ನಡೆದ ವಿಚಾರಣೆಗೆ ವೇಳೆ ಇಬ್ಬರು ಗೈರಾಗಿದ್ದಾರೆ. ಸತತವಾಗಿ ಗೈರು ಹಾಜರಾದ ಹಿನ್ನೆಲೆಯಲ್ಲಿ ಆನಂದ್ ಸಿಂಗ್ ಮತ್ತು ಬಿ. ನಾಗೇಂದ್ರ ಅವರಿಗೆ ದಾಖಲೆಗಳನ್ನು ಸಲ್ಲಿಸಲು ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ನೀಡಲಾಗಿತ್ತು. ಆದರೆ, ಸಮನ್ಸ್ ನೀಡಿದರೂ ಆರೋಪಿಗಳು ವಿಚಾರಣೆಗೆ ಹಾಜರಾಗಿರಲಿಲ್ಲ. ಉಳಿದ ಆರೋಪಿಗಳಾದ ಜನಾರ್ದನ ರೆಡ್ಡಿ, ಆಲಿಖಾನ್ ಮತ್ತು ಸುರೇಶ್ ಬಾಬು ಜನಪ್ರತಿನಿಧಿಗಳ ಕೋರ್ಟ್ಗೆ ಹಾಜರಾಗಿದ್ದರು.
ಬೇಲೆಕೇರಿ ಅದಿರು ನಾಪತ್ತೆ ಪ್ರಕರಣದಲ್ಲಿ ಮಾಜಿ ಸಚಿವ ಜನಾರ್ದನ ರೆಡ್ಡಿ ಮುಖ್ಯ ಆರೋಪಿಯಾಗಿದ್ದಾರೆ. ಸಿಬಿಐ ಸಲ್ಲಿಸಿದ ಚಾರ್ಜ್ ಶೀಟ್ ಪ್ರಕಾರ ಹಾಲಿ ಶಾಸಕ ಸುರೇಶ್ ಬಾಬು, ಆನಂದ್ ಸಿಂಗ್, ಬಿ.ನಾಗೇಂದ್ರ ಅವರು ಆರೋಪಿಗಳು. ಕಾರವಾರದ ಮಾಜಿ ಶಾಸಕ ಸತೀಶ್ ಸೈಲ್ ಸಹ ಆರೋಪಿಯಾಗಿದ್ದಾರೆ.