ಚಂದ್ರನಲ್ಲಿ ಮನೆ ಕಟ್ಟಲು ಬೆಂಗಳೂರಿನ ವಿಜ್ಞಾನಿಗಳಿಂದ ವಿಶೇಷ ಇಟ್ಟಿಗೆ ತಯಾರಿಕೆ
ಬೆಂಗಳೂರು, ಆಗಸ್ಟ್ 15: 'ಚಂದ್ರನ ಮೇಲೊಂದು ಕಾವ್ಯವ ಕಟ್ಟಲು ಏಕಾಂತದಲ್ಲಿದ್ದೆ...'- ಸಿನಿಮಾ ಹಾಡಿನ ಸಾಹಿತ್ಯ ನಿಮಗೆ ನೆನಪಿರಬಹುದು. ಚಂದ್ರನ ಮೇಲೆ ಲೆಕ್ಕವಿಲ್ಲದಷ್ಟು ಕವಿತೆಗಳನ್ನು ಕಟ್ಟಲಾಗಿದೆ. ಆದರೆ ಈ ವೈಜ್ಞಾನಿಕ ಯುಗದಲ್ಲಿ ಭೂಮಿಯ ಮೇಲೆ ಕಟ್ಟಡಗಳನ್ನು ಕಟ್ಟಿ ಜಾಗವಿಲ್ಲದೆ ಮನುಷ್ಯ ಆಕಾಶದತ್ತ ನೋಡುತ್ತಿದ್ದಾನೆ. ಅಂದರೆ, ಭೂಮಿಯ ಸುತ್ತಲಿನ ಗ್ರಹಗಳಲ್ಲಿಯೂ ಮನೆ ಮಾಡುವ ತವಕದಲ್ಲಿದ್ದಾನೆ. ಇನ್ನು ಕೆಲವೇ ದಶಕಗಳಲ್ಲಿ ಈ 'ವೈಜ್ಞಾನಿಕ ಕನಸು' ನನಸಾದರೂ ಅಚ್ಚರಿಯಿಲ್ಲ. ಮನೆಕಟ್ಟಲು ಮೊದಲು ಇಟ್ಟಿಗೆ ಬಿಡಬೇಕಲ್ಲವೇ? ಇಸ್ರೋದ ವಿಜ್ಞಾನಿಗಳು ಅದಕ್ಕೂ ಸಿದ್ಧತೆ ನಡೆಸಿದ್ದಾರೆ.
ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್ಸಿ) ಮತ್ತು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೋ) ವಿಜ್ಞಾನಿಗಳ ತಂಡವೊಂದು ಚಂದ್ರನ ಮೇಲೆ ಕಟ್ಟಡ ನಿರ್ಮಿಸಲು ಅಗತ್ಯವಾದ ಇಟ್ಟಿಗೆ ಸ್ವರೂಪದ ಆಕೃತಿಗಳನ್ನು ತಯಾರಿಸುವ ಒಂದು ಪರಿಪೂರ್ಣ ಪ್ರಕ್ರಿಯೆಯನ್ನು ಪ್ರಾರಂಭಿಸಿದ್ದಾರೆ.
ನವ ಭಾರತದ ನಿರ್ಮಾರ್ತೃಗಳು: ಬಾಹ್ಯಾಕಾಶ ಕ್ಷೇತ್ರದಲ್ಲಿ ಸಾಧನೆ ಮಾಡಿದ ಇಸ್ರೋ
ಈ ಇಟ್ಟಿಗೆ ಚಂದ್ರನ ಮಣ್ಣು, ಬ್ಯಾಕ್ಟೀರಿಯಾ ಮತ್ತು ಗೋರಿ ಕಾಯಿಯನ್ನು ಮಣ್ಣಿನೊಂದಿಗೆ ಬೆರೆಸಿ ಎಷ್ಟು ತೂಕವನ್ನಾದರೂ ಸಹಿಸುವ ಸಾಮರ್ಥ್ಯವಿರುವ ಗಟ್ಟಿಯಾದ ಇಟ್ಟಿಗೆಗಳನ್ನು ತಯಾರಿಸಲಾಗುತ್ತಿದೆ ಎಂದು ಬೆಂಗಳೂರಿನಲ್ಲಿರುವ ಐಐಎಸ್ಸಿ ತಿಳಿಸಿದೆ. ಮುಂದೆ ಓದಿ.
ಜೀವ ವಿಜ್ಞಾನ-ಮೆಕ್ಯಾನಿಕಲ್ ಎಂಜಿನಿಯರಿಂಗ್
'ಈ ಪ್ರಯೋಗ ನಿಜಕ್ಕೂ ರೋಮಾಂಚನಕಾರಿ. ಏಕೆಂದರೆ ಇದು ಎರಡು ವಿಭಿನ್ನ ಕ್ಷೇತ್ರಗಳಾದ ಜೀವ ವಿಜ್ಞಾನ ಮತ್ತು ಮೆಕ್ಯಾನಿಕಲ್ ಎಂಜಿನಿಯರಿಂಗ್ಗಳನ್ನು ಒಂದೆಡೆಗೆ ತಂದಿದೆ' ಎಂದು ಐಐಎಸ್ಸಿಯ ಮೆಕ್ಯಾನಿಕಲ್ ಎಂಜಿನಿಯರಿಂಗ್ ವಿಭಾಗದ ಸಹಾಯಕ ಪ್ರೊಫೆಸರ್ ಅಲೋಕ್ ಕುಮಾರ್ ತಿಳಿಸಿದ್ದಾರೆ. ಸೆರಾಮಿಕ್ ಇಂಟರ್ನ್ಯಾಷನಲ್ ಮತ್ತು ಪ್ಲೊಸ್ ಒನ್ ನಿಯತಕಾಲಿಕೆಗಳಲ್ಲಿ ಈ ಬಗ್ಗೆ ಎರಡು ಅಧ್ಯಯನ ವರದಿಗಳು ಪ್ರಕಟವಾಗಿದ್ದು, ಅದರಲ್ಲಿ ಒಂದು ಲೇಖನವನ್ನು ಅಲೋಕ್ ಕುಮಾರ್ ಬರೆದಿದ್ದಾರೆ.
ಒಂದು ಪೌಂಡ್ಗೆ 7.5 ಲಕ್ಷ ರೂಪಾಯಿ ವೆಚ್ಚ
ಭೂಮಿಯ ಮೇಲಿನ ಸಂಪನ್ಮೂಲಗಳು ಮನುಕುಲಕ್ಕೆ ಸಾಲುತ್ತಿಲ್ಲ. ಹೀಗಾಗಿ ಚಂದ್ರ ಮತ್ತು ಇತರೆ ಗ್ರಹಗಳಲ್ಲಿ ನೆಲೆಯೂರುವ ಪ್ರಯತ್ನಗಳನ್ನು ಮಾಡಲಾಗುತ್ತಿದೆ. ಹೀಲಿಯಂ 3, ಟೈಟೇನಿಯಂ ಮುಂತಾದ ಅಮೂಲ್ಯ ಖನಿಜಗಳು ಅನ್ಯಗ್ರಹಗಳಲ್ಲಿ ಹೇರಳವಾಗಿವೆ. ಅವುಗಳನ್ನು ಭೂಮಿಗೆ ತರುವುದು ವಿಜ್ಞಾನ ಕ್ಷೇತ್ರದ ಪ್ರಮುಖ ಗುರಿಗಳಲ್ಲಿ ಒಂದು. ಅದಕ್ಕೆ ಅಲ್ಲಿ ಮನುಷ್ಯನ ವಾಸಕ್ಕೆ ಬೇಕಾದ ಸೌಲಭ್ಯಗಳನ್ನು ಕಲ್ಪಿಸುವುದು ಅಗತ್ಯವಾಗಿದೆ. ಒಂದು ಪೌಂಡ್ನಷ್ಟು ಸಾಮಗ್ರಿಯನ್ನು ಬಾಹ್ಯಾಕಾಶಕ್ಕೆ ರವಾನಿಸಲು ಸುಮಾರು 7.5 ಲಕ್ಷ ರೂಪಾಯಿಯಷ್ಟು ವೆಚ್ಚ ತಗುಲುತ್ತದೆ.
ಚಂದ್ರಯಾನ-2 ಯೋಜನೆ ರೋವರ್ ಇನ್ನೂ ಜೀವಂತ: ಚೆನ್ನೈ ಟೆಕ್ಕಿ
ಮನುಷ್ಯನ ಯೂರಿನ್ನ ಯೂರಿಯಾ ಬಳಕೆ
ಚಂದ್ರನ ಮೇಲೆ ವಾಸ ಯೋಗ್ಯ ಮನೆಗಳನ್ನು ನಿರ್ಮಿಸಲು ಮನುಷ್ಯನ ಯೂರಿನ್ನಲ್ಲಿರುವ ಯೂರಿಯಾ ಮತ್ತು ಚಂದ್ರನ ಮಣ್ಣನ್ನು ಬಳಸಲಾಗುತ್ತದೆ. ಚಂದ್ರನ ಮೇಲಿನ ಮಣ್ಣನ್ನು ಕಚ್ಚಾ ಪದಾರ್ಥವನ್ನಾಗಿ ಬಳಸಲಾಗುತ್ತದೆ. ಗೋರಿಕಾಯಿಯಿಂದ ತಯಾರಿಸಿದ ಗೋಂದನ್ನು ಸಿಮೆಂಟಿಗೆ ಪರ್ಯಾಯವಾಗಿ ಬಳಸಲಾಗುತ್ತದೆ. ಚಂದ್ರನ ಮೇಲೆ ಮಾತ್ರವಲ್ಲ, ಭೂಮಿಯ ಮೇಲೆಯೂ ಕಡಿಮೆ ವೆಚ್ಚದಲ್ಲಿ ಇಂತಹ ಗಟ್ಟಿಮುಟ್ಟಾದ ಇಟ್ಟಿಗೆಗಳನ್ನು ತಯಾರಿಸಬಹುದು ಎಂದು ಐಐಎಸ್ಸಿ ತಿಳಿಸಿದೆ.
ಕಾರ್ಬೊನೇಟ್ ಹರಳುಗಳು
ಕೆಲವು ಸೂಕ್ಷ್ಮಜೀವಿಗಳು ಚಯಾಪಚಯ ಕ್ರಿಯೆ ಸಂದರ್ಭದಲ್ಲಿ ಖನಿಜಗಳನ್ನು ತಯಾರಿಸಬಲ್ಲವು. ಇವುಗಳಲ್ಲಿ ಸ್ಪೋರೊಸರ್ಕಿನಿಯಾ ಪಾಸ್ಟೆಯುರಿ ಎಂಬ ಬ್ಯಾಕ್ಟೀರಿಯಾ ಯುರಿಯೋಲಿಟಿಕ್ ಸೈಕಲ್ ಎಂಬ ಚಯಾಪಚಯ ಕ್ರಿಯೆಯ ಮೂಲಕ ಕ್ಯಾಲ್ಸಿಯಂ ಕಾರ್ಬೋನೇಟ್ ಹರಳುಗಳನ್ನು ತಯಾರಿಸುತ್ತವೆ. ಯೂರಿಯಾ ಮತ್ತು ಕ್ಯಾಲ್ಸಿಯಂ ಬಳಸಿ ಉಪ ಉತ್ಪನ್ನಗಳಾಗಿ ಈ ಹರಳುಗಳನ್ನು ತಯಾರಿಸಬಹುದು.
ಸೂಕ್ಷ್ಮ ಜೀವಿಗಳು ಇಂತಹ ಖನಿಜ ತಯಾರಿಕಾ ಪ್ರಕ್ರಿಯೆಯಲ್ಲಿ ಬಹಳ ಹಿಂದಿನಿಂದಲೂ ತೊಡಗಿಕೊಂಡಿದ್ದವು. ನಮ್ಮ ಆಧುನಿಕ ವಿಜ್ಞಾನ ಅದರ ಉಪಯೋಗವನ್ನು ಕಂಡುಕೊಂಡಿದೆ ಎಂದು ಅಲೋಕ್ ಕುಮಾರ್ ವಿವರಿಸಿದ್ದಾರೆ.
ಮಂಗಳ ಗ್ರಹದ ಮೇಲೆ ನೀರಿನ ಕುರುಹು: ಇಎಸ್ಎ ಮಾಹಿತಿ
ಗೋರಿ ಕಾಯಿಯ ಅಂಟು
ಈ ಸಾಧ್ಯತೆಯನ್ನು ಬಳಸಿಕೊಳ್ಳಲು ಐಐಎಸ್ಸಿಯ ತಂಡವು ಇಸ್ರೋದ ವಿಜ್ಞಾನಿಗಳಾದ ಅರ್ಜುನ್ ದೇ ಮತ್ತು ಐ ವೇಣುಗೋಪಾಲ್ ಅವರೊಂದಿಗೆ ಸೇರಿ ಪ್ರಯೋಗ ನಡೆಸಿದೆ. ಚಂದ್ರನ ಮಣ್ಣಿನ ಗುಣಗಳನ್ನು ಹೊಂದಿರುವ ಮಣ್ಣು ತಯಾರಿಸಿ ಅದಕ್ಕೆ ಮೊದಲು ಬ್ಯಾಕ್ಟೀರಿಯಾಗಳನ್ನು ಬೆರೆಸಿದರು. ಬಳಿಕ ಅದಕ್ಕೆ ಅಗತ್ಯವಾದ ಯೂರಿಯಾ ಮತ್ತು ಕ್ಯಾಲ್ಸಿಯಂಗಳನ್ನು ಸೇರಿಸಿದರು. ನಂತರ ಸ್ಥಳೀಯವಾಗಿ ತಯಾರಿಸಲಾದ ಗೋರಿ ಕಾಯಿ ಅಂಟನ್ನು ಮಿಶ್ರ ಮಾಡಿದರು. ಗೋರಿ ಕಾಯಿ ಗೋಂದು ಈ ಉತ್ಪನ್ನದ ಬಲವನ್ನು ಹೆಚ್ಚಿಸಲು ನೆರವಾಗುತ್ತದೆ.