50 ವರ್ಷ ಕುಡಿಯುವ ನೀರು ಸಿಗಬೇಕಾದರೆ ಮೂರು ದಿನದ ಟ್ರಾಫಿಕ್ ಸಹಿಸಿಕೊಳ್ಳಿ: ಡಿಕೆಶಿ ಮನವಿ
ಬೆಂಗಳೂರು, ಮಾ.01: 'ಬೆಂಗಳೂರು ನಗರಕ್ಕೆ ಮುಂದಿನ 50 ವರ್ಷ ಕುಡಿಯುವ ನೀರಿನ ಸಮಸ್ಯೆ ಬಗೆಹರಿಯಬೇಕಾದರೆ, ಮೂರು ದಿನದ ಟ್ರಾಫಿಕ್ ಸಮಸ್ಯೆ ಸಹಿಸಿಕೊಳ್ಳಿ' ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮನವಿ ಮಾಡಿದ್ದಾರೆ.
'ನಾನು ಬೆಂಗಳೂರು ಜನರ ಕ್ಷಮೆ ಕೇಳಲು ಬಯಸುತ್ತೇನೆ. ಮುಂದಿನ 3 ದಿನ ಟ್ರಾಫಿಕ್ ಸಮಸ್ಯೆ ಎದುರಾಗಲಿದೆ. ಈ ಹೋರಾಟದಿಂದ ಮುಂದಿನ 50 ವರ್ಷ ಕುಡಿಯುವ ನೀರಿನ ಸಮಸ್ಯೆ ಬಗೆಹರಿಯಲಿದೆ. ಹೀಗಾಗಿ ನೀವು ನಮಗೆ ಸಹಕಾರ ನೀಡಬೇಕು' ಎಂದು ಅವರು ಮಂಗಳವಾರ ನಡೆಸಿದ ಮಾಧ್ಯಮಗೋಷ್ಠಿಯಲ್ಲಿ ಮನವಿ ಮಾಡಿದ್ದಾರೆ.
ಬೆಂಗಳೂರಿಗರೇ 3ದಿನ ಮನೆಯಿಂದ ಹೊರಬರುವ ಮುನ್ನ ಯೋಚಿಸಿ
ನಮ್ಮ ಪಾದಯಾತ್ರೆ ಈಗ ಬೆಂಗಳೂರು ನಗರ ಪ್ರವೇಶಿಸಿದೆ. ಪೊಲೀಸ್ ಅಧಿಕಾರಿಗಳು, ಪಾಲಿಕೆ ಜಂಟಿ ಆಯುಕ್ತರು ಹಾಗೂ ಅಧಿಕಾರಿಗಳು ನಮ್ಮ ಬ್ಯಾನರ್ ಕಿತ್ತು ಹಾಕಿದ್ದಾರೆ. ನಮ್ಮ ಕೆಲ ನಾಯಕರು ಅದನ್ನು ತಡೆದಿದ್ದಾರೆ. ಬಿಜೆಪಿ ಕಾರ್ಯಕರ್ತರು ಯಡಿಯೂರಪ್ಪನವರ ಹುಟ್ಟುಹಬ್ಬ, ಅಶ್ವತ್ಥ್ ನಾರಾಯಣ, ಸೋಮಣ್ಣನವರ ಹುಟ್ಟುಹಬ್ಬ, ಬೊಮ್ಮನಹಳ್ಳಿಯಲ್ಲಿ ಸಿಎಂ ಕಾರ್ಯಕ್ರಮ ಆಯೋಜಿಸಿ ಬ್ಯಾನರ್ ಹಾಕಿದ್ದಾರೆ. ಇವರಿಗೆಲ್ಲ ಅನುಮತಿ ಕೊಟ್ಟವರು ಯಾರು? ಅವರಿಗೆ ಕಾನೂನು ಅನ್ವಯ ಆಗುವುದಿಲ್ಲವೇ? ಒಬ್ಬರಿಗೆ ಒಂದು, ಮತ್ತೊಬ್ಬರಿಗೊಂದು ಕಾನೂನು ಮಾಡಲು ಸಾಧ್ಯವಿಲ್ಲ. ಆದರೂ ನಮ್ಮ ವಿರುದ್ಧ ರಾಜಕೀಯ ದ್ವೇಷದಿಂದ ಈ ಹೋರಾಟ ಮಾಡಬಾರದು ಎಂದು ನಿರ್ಬಂಧ ಹಾಕಿ ಪ್ರಕರಣ ದಾಖಲಿಸಿದ್ದಾರೆ ಎಂದು ಹೇಳಿದರು.
ಬಿಜೆಪಿ ಕಾರ್ಯಕರ್ತರು ಯಡಿಯೂರಪ್ಪನವರ ಹುಟ್ಟುಹಬ್ಬ, ಅಶ್ವತ್ಥ್ ನಾರಾಯಣ, ಸೋಮಣ್ಣನವರ ಹುಟ್ಟುಹಬ್ಬ, ಬೊಮ್ಮನಹಳ್ಳಿಯಲ್ಲಿ ಸಿಎಂ ಕಾರ್ಯಕ್ರಮ ಆಯೋಜಿಸಿ ಬ್ಯಾನರ್ ಹಾಕಿದ್ದಾರೆ. ಇವರಿಗೆಲ್ಲ ಅನುಮತಿ ಕೊಟ್ಟವರು ಯಾರು? ಅವರಿಗೆ ಕಾನೂನು ಅನ್ವಯ ಆಗುವುದಿಲ್ಲವೇ? ಬಿಬಿಎಂಪಿ ಆಯುಕ್ತ ಗೌರವ್ ಗುಪ್ತಾ ಅವರು ಪಾಲಿಕೆ ಕಚೇರಿಗೆ ಬಿಜೆಪಿ ಕಚೇರಿ ಎಂದು ಬೋರ್ಡ್ ಹಾಕಿಕೊಳ್ಳಿ. ಆಗ ನಾವು ಬಿಜೆಪಿ ಕಚೇರಿ ಎಂದು ಸಂತೋಷ ಪಡುತ್ತೇವೆ ಎಂದು ಗೇಲಿ ಮಾಡಿದರು.
ಪಾದಯಾತ್ರೆಗೆ ಎಲ್ಲರ ಸಹಕಾರ ಇದೆ
ಪಾದಯಾತ್ರೆಗೆ ಅಪಾರ್ಟ್ಮೆಂಟ್ ಸಂಘ, ಕೈಗಾರಿಕೆ, ಕಾರ್ಖಾನೆ ಸಂಘಗಳು ಎಲ್ಲರೂ ಪಕ್ಷಭೇಧ ಮರೆತು ಆಗಮಿಸಿದ್ದಾರೆ. ಎಲ್ಲ ಸಹಕಾರ ಕೊಟ್ಟಿದ್ದಾರೆ. ಟೀಕೆ ಮಾಡುವವರ ಟೀಕೆಯನ್ನು ಸಕಾರಾತ್ಮಕವಾಗಿ ಸ್ವೀಕರಿಸುತ್ತಿದ್ದೇವೆ. ಮುಖ್ಯಮಂತ್ರಿಗಳು ಬಜೆಟ್ ಮಂಡನೆ ಮಾಡಲು ಸಹಕಾರ ನೀಡಬೇಕು ಎಂದು ಐದು ದಿನಗಳ ಪಾದಯಾತ್ರೆಯನ್ನು, 3 ದಿನಗಳಿಗೆ ಇಳಿಸಿದ್ದೇವೆ. ಮಾರ್ಚ್ 3ರಂದು ಬಸವನಗುಡಿ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಬಹಿರಂಗ ಸಭೆ ನಡೆಯಲಿದ್ದು ಇದರಲ್ಲಿ ಭಾಗವಹಿಸುವ ಎಲ್ಲ ಕಾರ್ಯಕರ್ತರು ಮೆಟ್ರೋ ಮೂಲಕ ಆಗಮಿಸಿ, ಮೆಟ್ರೋ ಮೂಲಕ ತೆರಳಬೇಕು ಎಂದು ಮನವಿ ಮಾಡುತ್ತೇನೆ ಎಂದು ಹೇಳಿದರು.
2ನೇ ದಿನದ ಮೇಕೆದಾಟು ಪಾದಯಾತ್ರೆ: ಹಲವು ಮಠಾಧೀಶರು ಭಾಗಿ; ಕೆಂಗೇರಿಯಲ್ಲಿ ವಾಸ್ತವ್ಯ
ಕಾರಜೋಳಗೆ ಹೋರಾಟ ಮಾಡಿ ಗೊತ್ತಿಲ್ಲ:
ಕಾಂಗ್ರೆಸ್ ಹೋರಾಟದಿಂದ ಸುಪ್ರೀಂಕೋರ್ಟ್ನಲ್ಲಿ ರಾಜ್ಯಕ್ಕೆ ಹಿನ್ನಡೆ ಯಾಗಲಿದೆ ಎಂಬ ಗೋವಿಂದ ಕಾರಜೋಳ ಹೇಳಿಕೆ ವಿಚಾರವಾಗಿ ಕೇಳಿದ ಪ್ರಶ್ನೆಗೆ, 'ಕುಡಿಯುವ ನೀರಿನ ಯೋಜನೆಗೆ ಯಾವುದೇ ಅಡ್ಡಿ ಇಲ್ಲ ಎಂದು ಮುಖ್ಯಮಂತ್ರಿಗಳೇ ಹೇಳಿದ್ದಾರೆ. ನಾವು ಜಲಸಂಪನ್ಮೂಲ ಸಚಿವರಾಗಿದ್ದು, ನಮಗೂ ಅಲ್ಪ ಸ್ವಲ್ಪ ಪರಿಜ್ಞಾನ ಇದೆ. ಗೋವಿಂದ ಕಾರಜೋಳ ಅವರು ತಮ್ಮ ಅಧಿಕಾರಿಗಳನ್ನು ಕರೆದುಕೊಂಡು ಮುಖ್ಯಮಂತ್ರಿಗಳ ಜತೆ ಚರ್ಚೆ ಮಾಡಲಿ. ಅವರಿಗೆ ಹೋರಾಟ ಮಾಡಿ ಗೊತ್ತಿಲ್ಲ. ಆಡ್ವಾಣಿ ಅವರು ರಥಯಾತ್ರೆ ಮಾಡಿದ್ದು ಬಿಟ್ಟರೆ ಅವರು ಬೇರೆ ಹೋರಾಟ ಮಾಡಿಲ್ಲ. ಆದರೆ ನಮಗೆ ಮಹಾತ್ಮಾ ಗಾಂಧೀಜಿ ಅವರು ಅಹಿಂಸಾ ಮಾರ್ಗದ ಹೋರಾಟ ಹೇಳಿಕೊಟ್ಟಿದ್ದು ಅದು ನಮ್ಮ ರಕ್ತದ ಕಣಗಳಲ್ಲೇ ಬಂದಿದೆ' ಎಂದು ತಿರುಗೇಟು ನೀಡಿದರು.
ಮೇಕೆದಾಟು ಪಾದಯಾತ್ರೆ; ಡಿಕೆಶಿ, ಸಿದ್ದರಾಮಯ್ಯ ಇತರ ನಾಯಕರ ವಿರುದ್ಧ ಎಫ್ಐಆರ್
ಪಾದಯಾತ್ರೆ ಮಾಡುತ್ತಿರುವ ನಾಯಕರ ವಿರುದ್ಧ ಪ್ರಕರಣ ದಾಖಲಿಸಿರುವುದಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಡಿ.ಕೆ. ಶಿವಕುಮಾರ್, 'ಬಿಜೆಪಿಯವರಿಗೆ ರಾಜಕಾರಣ ಮುಖ್ಯ. ನಮ್ಮ ಹೋರಾಟ ನಿಲ್ಲಿಸಲು ಈ ರೀತಿ ಮಾಡುತ್ತಿದ್ದಾರೆ. ಇಡೀ ರಾಜ್ಯದಲ್ಲಿ ಇಲ್ಲದ ಅಧಿಸೂಚನೆ ನಾವು ರಾಜಕೀಯ ಸಮಾವೇಶ ಮಾಡುವಂತಿಲ್ಲ ಎಂದು ಕೊಟ್ಟಿದ್ದಾರೆ. ಅವರು ಶಿವಮೊಗ್ಗದಲ್ಲಿ ಮೆರವಣಿಗೆ ಮಾಡಲಿಲ್ಲವೇ? ಬಜರಂಗದಳದವರು ಹಾಗೂ ಬಿಜೆಪಿಯವರು ಟೌನ್ ಹಾಲ್ ಬಳಿ ಯಾಕೆ ಸಮಾವೇಶ ಮಾಡಿದರು? ಇಂದು ಬೊಮ್ಮನಹಳ್ಳಿಯಲ್ಲಿ ಕ್ರೀಡಾಂಗಣ ಉದ್ಘಾಟನೆ ಮಾಡುತ್ತಿರುವುದೇಕೆ? ನಮಗೆ ಮಾತ್ರ ಈ ನಿರ್ಬಂಧ ಯಾಕೆ? ಈ ಕೇಸ್, ಜೈಲಿಗೆಲ್ಲ ನಾವು ಹೆದರುವುದಿಲ್ಲ. ರಾಜ್ಯದಲ್ಲಿ ಅವರು ಏನೆಲ್ಲಾ ಮಾಡಿದ್ದಾರೆ ಎಂದು ಕಾರ್ಯಕರ್ತರಿಂದ ಪಟ್ಟಿ ತರಿಸಿ ಅವರ ಮುಂದೆ ಇಡುತ್ತೇನೆ. ಈ ವಿಚಾರವಾಗಿಯೇ ಹೋರಾಟ ಮಾಡುತ್ತೇವೆ. ಪೊಲೀಸ್ ಅಧಿಕಾರಿಗಳು ಸಮವಸ್ತ್ರ ತೆಗೆದು ಬಿಜೆಪಿಯವರ ಬಟ್ಟೆ ತೊಟ್ಟುಕೊಳ್ಳಲಿ. ಪೊಲೀಸ್ ಅಧಿಕಾರಿಗಳು ಒಂದು ವಿಚಾರ ಗಮನದಲ್ಲಿಟ್ಟುಕೊಳ್ಳಲಿ, ಸೂರ್ಯ ಹುಟ್ಟುತ್ತಾನೆ ಮುಳುಗುತ್ತಾನೆ, ಇವರುಗಳು ಯಾರೂ ಶಾಶ್ವತವಾಗಿ ಇರುವುದಿಲ್ಲ. ನಮಗೆ ತೊಂದರೆ ನೀಡುತ್ತಿರುವ ಪೋಲೀಸರ ಪಟ್ಟಿ ನಮ್ಮ ಬಳಿ ಇದೆ. ಸಮಯ ಬಂದಾಗ ಉತ್ತರ ನೀಡುತ್ತೇನೆ. ನಮಗೆ ತೊಂದರೆ ನೀಡಬೇಕು ಅಂತಲೇ ಕೇಸ್ ದಾಖಲಿಸುತ್ತಿದ್ದಾರೆ. ಪಾದಯಾತ್ರೆಯಲ್ಲಿ ಕೇವಲ 40 ಜನ ಮಾತ್ರ ಭಾಗವಹಿಸಿದ್ದೇವೆಯೇ? ಭಾಗವಹಿಸಿರುವ ಎಲ್ಲ 10 ಸಾವಿರ ಜನರ ಪಟ್ಟಿ ನೀಡುತ್ತೇವೆ ಕೇಸ್ ದಾಖಲಿಸಲಿ' ಎಂದು ಎಚ್ಚರಿಸಿದರು.