ಕುಮಾರಸ್ವಾಮಿಗೆ ಬಿಜೆಪಿ ಸೇರುವ ಆಸೆ ಇದ್ದರೆ ನಾನೇ ಕರೆತರುತ್ತೇನೆ: ಬಿಸಿ ಪಾಟೀಲ್
ಬೆಂಗಳೂರು, ಫೆಬ್ರವರಿ 7: 'ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಬಿಜೆಪಿಗೆ ಸೇರುವ ಆಸೆ ಇದ್ದರೆ ಹೇಳಿಕೊಳ್ಳಲಿ. ನಾನೇ ಅವರೊಂದಿಗೆ ಮಾತನಾಡಿ ಬಿಜೆಪಿಗೆ ಕರೆತರುತ್ತೇನೆ' ಎಂದು ಸಚಿವ ಬಿ.ಸಿ. ಪಾಟೀಲ್ ಹೇಳಿದರು.
ವಿಕಾಸಸೌಧದಲ್ಲಿ ಶುಕ್ರವಾರ ಮಾತನಾಡಿದ ಅವರು, ಯಡಿಯೂರಪ್ಪ ಸರ್ಕಾರದ ಸಂಪುಟ ವಿಸ್ತರಣೆಯನ್ನು ಟೀಕಿಸಿದ್ದ ಕುಮಾರಸ್ವಾಮಿ ಅವರಿಗೆ ತಿರುಗೇಟು ನೀಡಿದರು. ಬಿಜೆಪಿ ಶಾಸಕರ ಬಗ್ಗೆ ಕುಮಾರಸ್ವಾಮಿ ಅವರಿಗೇಕೆ ಚಿಂತೆ? ಮೊದಲು ಅವರು ತಮ್ಮ ಪಕ್ಷದ ಶಾಸಕರನ್ನು ಉಳಿಸಿಕೊಳ್ಳಲಿ ಎಂದು ವ್ಯಂಗ್ಯವಾಡಿದರು.
ಬಿಜೆಪಿ ಕಚೇರಿ ಸಿಬ್ಬಂದಿ ಸಚಿವ ಗೋಪಾಲಯ್ಯರಿಗೆ ಹೇಳಿದ್ದು...
ಗುರುವಾರ ರಾಜಭವನದಲ್ಲಿ ನಡೆದ ಸಮಾರಂಭದಲ್ಲಿ, ಉಪ ಚುನಾವಣೆಯಲ್ಲಿ ಗೆದ್ದ ಹತ್ತು ಶಾಸಕರು ಸಚಿವರಾಗಿ ಪ್ರಮಾನವಚನ ಸ್ವೀಕರಿಸಿದ್ದರು. ಇದನ್ನು ಕುಮಾರಸ್ವಾಮಿ ಲೇವಡಿ ಮಾಡಿದ್ದರು. ಬೇರೆ ಪಕ್ಷಗಳಿಂದ ಬಂದು ಉಪ ಚುನಾವಣೆಯಲ್ಲಿ ಗೆದ್ದ ಹತ್ತು ಜನರು ಸಚಿವರಾಗಿ ಮಜಾ ಮಾಡುತ್ತಿದ್ದಾರೆ. ಇನ್ನು ಬಿಜೆಪಿಯ 105 ಶಾಸಕರು ಕಡುಬು ತಿನ್ನುತ್ತಾರಾ? ಎಂದು ಪ್ರಶ್ನಿಸಿದ್ದರು.
ನಾನೇ ಬಿಜೆಪಿಗೆ ಕರೆತರುತ್ತೇನೆ
ಕುಮಾರಸ್ವಾಮಿ ಹೇಳಿಕೆಗೆ ತೀಕ್ಷ್ಣ ಪ್ರತಿಕ್ರಿಯೆ ನೀಡಿರುವ ಬಿ.ಸಿ. ಪಾಟೀಲ್, ಕುಮಾರಸ್ವಾಮಿ ಅವರಿಗೆ ಬಿಜೆಪಿ ಶಾಸಕರ ಬಗ್ಗೆ ಏಕೆ ಚಿಂತೆ? ಮೊದಲು ಅವರು ತಮ್ಮ ಜೆಡಿಎಸ್ ಪಕ್ಷದ ಶಾಸಕರನ್ನು ಉಳಿಸಿಕೊಳ್ಳಲಿ. ಕುಮಾರಸ್ವಾಮಿ ಅವರಿಗೆ ಬಿಜೆಪಿ ಸೇರುವ ಆಸೆ ಇದ್ದರೆ ಹೇಳಿ. ನಾನೇ ಅವರೊಂದಿಗೆ ಮಾತನಾಡಿ ಬಿಜೆಪಿಗೆ ಕರೆತರುತ್ತೇನೆ ಎಂದು ತಿರುಗೇಟು ನೀಡಿದರು.
ಆಕಸ್ಮಿಕ ಮುಖ್ಯಮಂತ್ರಿ ಕುಮಾರಸ್ವಾಮಿ
ಎಚ್.ಡಿ. ಕುಮಾರಸ್ವಾಮಿ ಆಕಸ್ಮಿಕವಾಗಿ ಮುಖ್ಯಮಂತ್ರಿಯಾದವರು. ಹತ್ತು ವರ್ಷಕ್ಕೊಮ್ಮೆ ಅವರಿಗೆ ಲಾಟರಿ ಹೊಡೆಯುತ್ತದೆ. ಅವರು ಆಕಸ್ಮಿಕವಾಗಿ ಮುಖ್ಯಮಂತ್ರಿ ಆಗಿದ್ದನ್ನು ನೆನಪಿಟ್ಟುಕೊಳ್ಳಬೇಕು. ಅವರು ತಮ್ಮ ಘನತೆಗೆ ತಕ್ಕಂತೆ ಮಾತನಾಡಲಿ ಎಂದು ಹೇಳಿದರು.
ಮಿ. ಕಟೀಲ್, ನಿಮ್ಮ ಊರಿನ 8 ಶಾಸಕರಲ್ಲಿ ಒಬ್ಬರಿಗೂ ಸಚಿವ ಸ್ಥಾನ ಕೊಡಿಸಲಾಗಲಿಲ್ಲವೇ?
ಸಿದ್ದರಾಮಯ್ಯರದು ನಕಲಿ ಪದವಿ ಇರಬೇಕು
ಸಿದ್ದರಾಮಯ್ಯ ಯಾವ ರೀತಿ ವಕೀಲರಾದರೋ ಗೊತ್ತಿಲ್ಲ. ಅವರದು ನಕಲಿ ಸರ್ಟಿಫಿಕೇಟ್ ಇರಬೇಕು ಎಂದು ಬಿ.ಸಿ. ಪಾಟೀಲ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೂ ಟಾಂಗ್ ನೀಡಿದರು.
ಸುಪ್ರೀಂಕೋರ್ಟ್ ನಮ್ಮ ಪರ ತೀರ್ಪು ನೀಡಿದೆ. ಜನತಾ ನ್ಯಾಯಾಲಯವೂ ನಮ್ಮ ಪರವಾಗಿಯೇ ತೀರ್ಪು ಕೊಟ್ಟಿದೆ. ಆದರೆ ಸಿದ್ದರಾಮಯ್ಯ ಕೋರ್ಟ್ ತೀರ್ಪಿಗೂ ಬೆಲೆ ಕೊಡುವುದಿಲ್ಲ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿಯೂ ನಂಬಿಕೆ ಇಲ್ಲ ಎಂದಾದರೆ ಅವರೆಂತಹ ಕಾನೂನು ಪದವೀಧರರು? ಅವರು ಯಾವ ರೀತಿ ವಕೀಲರಾದರೋ ಗೊತ್ತಿಲ್ಲ. ಸಿದ್ದರಾಮಯ್ಯ ಬಳಿ ನಕಲಿ ವಕೀಲ ಸರ್ಟಿಫಿಕೇಟ್ ಇರಬಹುದು. ಜನರು ನಮ್ಮನ್ನು ಮತ್ತೆ ಗೆಲ್ಲಿಸಿದ್ದಾರೆ/ ಅದಕ್ಕೂ ಸಿದ್ದರಾಮಯ್ಯ ಅಪಸ್ವರ ಎತ್ತಿದ್ದಾರೆ ಎಂದು ಕಿಡಿಕಾರಿದರು.
ಅವರೂ ಸಚಿವರಾಗಬೇಕು
ಮುಖ್ಯಮಂತ್ರಿಗಳ ಬಳಿ ಉಳಿದಿರುವ ಖಾತೆಗಳನ್ನೇ ನಮಗೆ ನೀಡಿ ಎಂದು ಕೇಳಿದ್ದೇವೆಯೇ ಹೊರತು, ಯಾರಿಂದಲೋ ಖಾತೆ ಕಿತ್ತು ನಮಗೆ ಕೊಡಿ ಎಂದು ಕೇಳಿಲ್ಲ. ನಾವು ಎಲ್ಲ 17 ಮಂದಿಯೂ ಒಗ್ಗಟ್ಟಾಗಿದ್ದೇವೆ. ಎಂಟಿಬಿ ನಾಗರಾಜ್ ಮತ್ತು ಎಚ್ ವಿಶ್ವನಾಥ್ ಕೂಡ ನಮ್ಮೊಂದಿಗೆ ಸಚಿವ ಸಂಪುಟಕ್ಕೆ ಸೇರಬೇಕಿತ್ತು. ಆದರೆ ಅದಕ್ಕೆ ಕಾನೂನು ತೊಡಕು ಇದೆ. ಜೂನ್ನಲ್ಲಿ ಅವರನ್ನು ವಿಧಾನಪರಿಷತ್ ಸದಸ್ಯರನ್ನಾಗಿ ಮಾಡಿ ಸಚಿವ ಸ್ಥಾನ ನೀಡುವುದಾಗಿ ಯಡಿಯೂರಪ್ಪ ಹೇಳಿದ್ದಾರೆ. ಮಹೇಶ್ ಕುಮಟಳ್ಳಿ ಸೇರಿದಂತೆ ಎಲ್ಲರಿಗೂ ಯಡಿಯೂರಪ್ಪ ಕೊಟ್ಟ ಮಾತನ್ನು ಉಳಿಸಿಕೊಳ್ಳುತ್ತಾರೆ ಎಂಬ ವಿಶ್ವಾಸ ಇದೆ ಎಂದರು.