ಹುಷಾರ್; ಬೆಂಗಳೂರಿನಲ್ಲಿ ಮತ್ತೆ ಲಾಕ್ಡೌನ್ ಎಚ್ಚರಿಕೆ ಕೊಟ್ಟ ಬಿಬಿಎಂಪಿ ಆಯುಕ್ತ
ಬೆಂಗಳೂರು, ಫೆಬ್ರವರಿ 23: ದೇಶದಲ್ಲಿ ವಾರದಿಂದೀಚೆಗೆ ಕೊರೊನಾ ಪ್ರಕರಣಗಳಲ್ಲಿ ಏಕಾಏಕಿ ಏರಿಕೆಯಾಗಿದೆ. ಕಳೆದ ವಾರಕ್ಕೆ ಹೋಲಿಸಿದರೆ 31% ಕೊರೊನಾ ಪ್ರಕರಣಗಳು ಹೆಚ್ಚಾಗಿವೆ. ಮಹಾರಾಷ್ಟ್ರ ಹಾಗೂ ಕೇರಳದಲ್ಲಿ ಅಧಿಕ ಕೊರೊನಾ ಪ್ರಕರಣಗಳು ದಾಖಲಾಗುತ್ತಿದ್ದು, ಈ ರಾಜ್ಯಗಳಿಗೆ ಹೊಂದುಕೊಂಡಿರುವ ಗಡಿಗಳಲ್ಲಿ ಕಟ್ಟೆಚ್ಚರ ವಹಿಸಲು ಸರ್ಕಾರ ಸೂಚಿಸಿದೆ.
ಜೊತೆಗೆ ಕರ್ನಾಟಕ ರಾಜಧಾನಿ ಬೆಂಗಳೂರಿನಲ್ಲಿಯೂ ಬಿಬಿಎಂಪಿ ವ್ಯಾಪ್ತಿಯಲ್ಲಿ ಕೊರೊನಾ ಹೊಸ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಹೀಗಾಗಿ ನಗರದ ಕೆಲವೊಂದು ವಾರ್ಡ್ಗಳಲ್ಲಿ ಸೋಂಕಿತರ ಪ್ರಮಾಣ ಹೆಚ್ಚಾಗುತ್ತಿರುವುದರಿಂದ, ಐದರಿಂದ ಹೆಚ್ಚು ಸೋಂಕಿತರು ಇದ್ದರೆ, ಅಂತಹ ಪ್ರದೇಶವನ್ನು ಹಿಂದಿನಂತೆ ಕಂಟೇನ್ಮೆಂಟ್ ಝೋನ್ ಮಾಡಲು ಬಿಬಿಎಂಪಿ ನಿರ್ಧರಿಸಿದೆ. ಪರಿಸ್ಥಿತಿ ಕೈಮೀರಿದರೆ ಮತ್ತೆ ಲಾಕ್ಡೌನ್ ಪ್ರಮೇಯವೂ ಬರಬಹುದು ಎಂದು ಬಿಬಿಎಂಪಿ ಆಯುಕ್ತರು ಎಚ್ಚರಿಕೆ ನೀಡಿದ್ದಾರೆ.
ಕೊರೊನಾ ಚಾಪ್ಟರ್ -2: ಸ್ವಲ್ಪ ಎಚ್ಚರ ತಪ್ಪಿದರೂ ಈ 10 ವಾರ್ಡ್ ಕಂಟೇನ್ಮೆಂಟ್ ಝೋನ್ ವ್ಯಾಪ್ತಿಗೆ?
ಬೆಂಗಳೂರಿನಲ್ಲಿ ದಿಢೀರನೆ ಪ್ರಕರಣಗಳಲ್ಲಿ ಏರಿಕೆ ಕಂಡುಬಂದಿರುವುದು ಮತ್ತೆ ಆತಂಕಕ್ಕೆ ಕಾರಣವಾಗಿದೆ. ಈ ಎಲ್ಲಾ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಬಿಬಿಎಂಪಿ ಆಯುಕ್ತ ಎನ್ ಮಂಜುನಾಥ್ ಪ್ರಸಾದ್ ಜನರಿಗೆ ಎಚ್ಚರಿಕೆ ನೀಡಿದ್ದಾರೆ. ಮುಂದೆ ಓದಿ...
"ಪರಿಸ್ಥಿತಿ ಕೈಮೀರಿದರೆ ಬೇರೆ ದಾರಿಯಿಲ್ಲ"
ಕೊರೊನಾ ಸೋಂಕು ಹೆಚ್ಚುತ್ತಿರುವ ಈ ಸಂದರ್ಭದಲ್ಲಿ ಜನರು ಎಚ್ಚರಿಕೆಯಿಂದಿರದೇ ಇದ್ದರೆ ಕರ್ನಾಟಕ ಸರ್ಕಾರ ಮತ್ತೆ ಲಾಕ್ಡೌನ್ ಜಾರಿ ಮಾಡುವತ್ತ ಚಿಂತನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿರುವ ಆಯುಕ್ತರು, "ಮಾಸ್ಕ್ ಅನ್ನು ಕಡ್ಡಾಯವಾಗಿ ಧರಿಸಲೇಬೇಕು. ಸಾಮಾಜಿಕ ಅಂತರ ಪಾಲಿಸುವುದನ್ನು ಮರೆಯಬೇಡಿ. ಈ ಎರಡು ಮೂಲ ನಿಯಮಗಳನ್ನು ಕಡೆಗಣಿಸಿದರೆ ಅಪಾಯ ಕಟ್ಟಿಟ್ಟ ಬುತ್ತಿ. ಈ ಎರಡು ಅಂಶಗಳನ್ನು ನಿರ್ಲಕ್ಷ್ಯ ಮಾಡಿದಿರಿ ಎಂದಾದರೆ ಬೆಂಗಳೂರಿನಲ್ಲಿ ಲಾಕ್ ಡೌನ್ ವಿಧಿಸುವುದು ಕಡ್ಡಾಯವಾಗಬಹುದು ಎಂದು ಹೇಳಿದ್ದಾರೆ.
ಮತ್ತೆ ಕಂಟೇನ್ಮೆಂಟ್ ಘೋಷಣೆಗೆ ಚಿಂತನೆ
ಕರ್ನಾಟಕದಲ್ಲಿ ಕೊರೊನಾ ಪ್ರಕರಣಗಳಲ್ಲಿ ಅಷ್ಟು ಏರಿಕೆಯಿಲ್ಲದಿದ್ದರೂ ನೆರೆಯ ಕೇರಳ, ಮಹಾರಾಷ್ಟ್ರ, ಆಂಧ್ರ ಪ್ರದೇಶ, ತೆಲಂಗಾಣದಲ್ಲಿ ಪ್ರಕರಣಗಳು ಹೆಚ್ಚುತ್ತಿವೆ. ಹೀಗಾಗಿ ಕರ್ನಾಟಕದಲ್ಲಿಯೂ ಎಚ್ಚರಿಕೆಯಿಂದಿರುವುದು ಅವಶ್ಯಕವಾಗಿದೆ. ಜೊತೆಗೆ ಬೆಂಗಳೂರಿನಲ್ಲಿ ಈಚೆಗೆ ಕೊರೊನಾ ಪ್ರಕರಣಗಳು ಏರಿಕೆಯಾಗಿದೆ. ಸದ್ಯಕ್ಕೆ ಬೊಮ್ಮನಹಳ್ಳಿ ವಲಯದಲ್ಲಿ ಸೋಂಕಿತರ ಪ್ರಮಾಣ ಹೆಚ್ಚಿದ್ದು, ಇದಾದ ನಂತರ ಬೆಂಗಳೂರು ದಕ್ಷಿಣ, ಮಹದೇವಪುರ ಮತ್ತು ಬೆಂಗಳೂರು ಪೂರ್ವ ಭಾಗದಲ್ಲೀ ಸೋಂಕಿತರ ಸಂಖ್ಯೆ ಹೆಚ್ಚಿದೆ. ಪರಿಸ್ಥಿತಿ ಹತೋಟಿಗೆ ಬರದೇ ಇದ್ದಲ್ಲಿ, ಹತ್ತು ವಾರ್ಡಿನ ಕೆಲವು ಪ್ರದೇಶಗಳನ್ನು ಕಂಟೇನ್ಮೆಂಟ್ ಝೋನ್ ಮಾಡುವ ಸಾಧ್ಯತೆಯಿದೆ.
ಬೆಂಗಳೂರಿನ ಅಪಾರ್ಟ್ಮೆಂಟ್ ವಾಸಿಗಳಲ್ಲಿ ಕೊರೊನಾ ಆತಂಕ
ಫೆಬ್ರವರಿ 13ರಂದು ಕಾವಲ್ ಬೈರಸಂದ್ರದ ಮಂಜುಶ್ರೀ ನರ್ಸಿಂಗ್ ಕಾಲೇಜಿನಲ್ಲಿ 42 ವಿದ್ಯಾರ್ಥಿಗಳಲ್ಲಿ ಕೊರೊನಾ ಪತ್ತೆಯಾಗಿದ್ದು, ಅವರೆಲ್ಲರೂ ಕೇರಳದವರಾಗಿದ್ದರು. ಫೆಬ್ರವರಿ 15ರಂದು ಬೊಮ್ಮನಹಳ್ಳಿಯ ಅಪಾರ್ಟ್ಮೆಂಟ್ ಕಾಂಪ್ಲೆಕ್ಸ್ನ 104 ನಿವಾಸಿಗಳಲ್ಲಿ ಕೊರೊನಾ ದೃಢಪಟ್ಟಿದ್ದು, ಅದರಲ್ಲಿ 96 ಮಂದಿ 60 ವಯಸ್ಸಿನ ಮೇಲ್ಪಟ್ಟವರಾಗಿದ್ದರು. ಫೆಬ್ರವರಿ 23ರಂದು ಮತ್ತೊಂದು ಅಪಾರ್ಟ್ಮೆಂಟ್ನಲ್ಲಿ ಹತ್ತು ಪ್ರಕರಣಗಳು ಕಂಡುಬಂದಿವೆ. ಮಹದೇವಪುರ ವಲಯದ ಎಸ್ಜೆಆರ್ ವಾಟರ್ಮಾರ್ಕ್ ಅಪಾರ್ಟ್ಮೆಂಟ್ನಲ್ಲಿ ಪತ್ತೆಯಾಗಿವೆ.
Recommended Video
ಕರ್ನಾಟಕ ಸರ್ಕಾರದ ಹೆಜ್ಜೆ
ಕೊರೊನಾ ಹೆಚ್ಚಳವಾದ ಹಿನ್ನೆಲೆಯಲ್ಲಿ ಎಚ್ಚೆತ್ತಿರುವ ಕರ್ನಾಟಕ ಸರ್ಕಾರ, ಮಹಾರಾಷ್ಟ್ರ ಹಾಗೂ ಕೇರಳದಿಂದ ಬರುವವವರು ಕಡ್ಡಾಯ ನೆಗೆಟಿವ್ ವರದಿ ತರಬೇಕೆನ್ನುವ ಆದೇಶವನ್ನು ಹೊರಡಿಸಿದೆ. ಕರ್ನಾಟಕ-ಕೇರಳದ ಗಡಿ ಚೆಕ್ ಪೋಸ್ಟ್ ನಲ್ಲಿ ಸ್ಕ್ರೀನಿಂಗ್ ಸೆಂಟರ್ ತೆರೆದಿದೆ. 72 ಗಂಟೆ ಮೀರಿದ ಆರ್ ಟಿ-ಪಿಸಿಆರ್ ನೆಗೆಟಿವ್ ವರದಿ ಇಲ್ಲದಿದ್ದರೆ, ರಾಜ್ಯಕ್ಕೆ ಪ್ರವೇಶವಿಲ್ಲ ಎಂದು ಆರೋಗ್ಯ ಇಲಾಖೆ ಸೂಚನೆ ಹೊರಡಿಸಿದೆ.