ಬೆಂಗಳೂರಿನ ಇಂದಿರಾ ಕ್ಯಾಂಟೀನ್ಗಳಲ್ಲಿ ಇಡ್ಲಿ ಸಿಗುತ್ತಿಲ್ಲ!
ಬೆಂಗಳೂರು, ಅಕ್ಟೋಬರ್ 16 : ಬೆಂಗಳೂರು ನಗರದಲ್ಲಿರುವ ಇಂದಿರಾ ಕ್ಯಾಂಟೀನ್ ಮತ್ತೆ ಸುದ್ದಿಯಲ್ಲಿದೆ. ಬಿಬಿಎಂಪಿ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಕ್ಯಾಂಟೀನ್ನಲ್ಲಿ ಇಡ್ಲಿ, ಸಾಂಬಾರ್ ಸಿಗುತ್ತಿಲ್ಲ. ಪೊಂಗಲ್, ರೈಸ್ ಬಾತ್ ಮಾತ್ರ ಸಿಗುತ್ತಿದೆ.
ಇಂದಿರಾ ಕ್ಯಾಂಟೀನ್ಗಳ ನಿರ್ವಹಣೆ, ಆಹಾರ ಸರಬರಾಜಿಗೆ ಬಿಬಿಎಂಪಿ ಹೊಸ ಟೆಂಡರ್ ಕರೆದಿತ್ತು. ಟೆಂಡರ್ ಅಂತಿಮಗೊಂಡು ಎಲ್ಲಾ ಪ್ರಕ್ರಿಯೆ ಪೂರ್ಣಗೊಂಡಿದೆ. ಆದರೆ, ಕಿಚನ್ ಹಸ್ತಾಂತರವಾಗದ ಕಾರಣ ಇಡ್ಲಿಗೆ ಕತ್ತರಿ ಬಿದ್ದಿದೆ.
ಇಂದಿರಾ ಕ್ಯಾಂಟೀನ್ನಲ್ಲಿ ಉಚಿತ ಊಟ ನೀಡಿ ಎಎಪಿ ಒತ್ತಾಯ
ಆಹಾರ ತಯಾರು ಮಾಡುವ ಅಡುಗೆ ಮನೆಗಳು ಹಳೆಯ ಟೆಂಡರ್ದಾರರ ಕೈಯಲ್ಲಿಯೇ ಉಳಿದಿವೆ. ಇದರಿಂದಾಗಿ ಹೊಸ ಟೆಂಡರ್ ಪಡೆದವರು ಇಂದಿರಾ ಕ್ಯಾಂಟೀನ್ಗಳಿಗೆ ಇಡ್ಲಿ ಪೂರೈಕೆ ಮಾಡಲು ಸಾಧ್ಯವಾಗುತ್ತಿಲ್ಲ.
ಪಶ್ಚಿಮ ಬೆಂಗಳೂರಿನಲ್ಲಿ 44 ಇಂದಿರಾ ಕ್ಯಾಂಟೀನ್, 4 ಮೊಬೈಲ್ ಕ್ಯಾಂಟೀನ್ಗಳಿಗೆ ಉಪಹಾರ, ಊಟ ಮತ್ತು ರಾತ್ರಿಯ ಊಟ ಸರಬರಾಜು ಮಾಡುವ ಟೆಂಡರ್ ಅದಮ್ಯ ಚೇತನದ ಮುಖ್ಯಸ್ಥೆ ತೇಜಸ್ವಿನಿ ಅನಂತ್ ಕುಮಾರ್ ಪಡೆದಿದ್ದಾರೆ.
ಲಾಕ್ ಡೌನ್: ಬಡವರಿಗೆ ಇಂದಿರಾ ಕ್ಯಾಂಟೀನ್ ನಲ್ಲಿ ಉಚಿತ ಊಟದ ವ್ಯವಸ್ಥೆ
ಆದರೆ, ಕಿಚನ್ ಹಸ್ತಾಂತರವಾಗದ ಕಾರಣ ಇಡ್ಲಿ ಪೂರೈಕೆ ಮಾಡುವಂತಿಲ್ಲ. ಹಲಸೂರು, ಎಸ್ಕೆ ಗಾರ್ಡನ್, ಕಾಚರಕನಹಳ್ಳಿ, ಮನೋರಾಯನಪಾಳ್ಯ ಸೇರಿದಂತೆ ಇತರ ಪ್ರದೇಶಗಳಿಗೆ ಆಹಾರ ವಿತರಣೆ ಮಾಡುವ ಮೊಬೈಲ್ ಕ್ಯಾಂಟೀನ್ ವಾಹನಗಳನ್ನು ಸಹ ಬಿಬಿಎಂಪಿ ಇನ್ನೂ ಹಸ್ತಾಂತರ ಮಾಡಿಲ್ಲ.
ಲಾಕ್ ಡೌನ್ ಎಫೆಕ್ಟ್: ಇಂದಿರಾ ಕ್ಯಾಂಟೀನ್ ಬಂದ್
"ಆದಮ್ಯ ಚೇತನದ ಕಿಚನ್ನಲ್ಲಿ ಇಡ್ಲಿ ಮಾಡುವ ಯೂನಿಟ್ ಸ್ಥಾಪನೆ ಮಾಡಲು ಸಾಧ್ಯವಿಲ್ಲ. ಇದರ ವೆಚ್ಚ ಸುಮಾರು 40 ಲಕ್ಷ ಆಗುತ್ತದೆ. ಬಿಬಿಎಂಪಿ ಕಿಚನ್ ಹಸ್ತಾಂತರ ಮಾಡಲಿದೆ ಎಂದು ನಾವು ಕಾಯುತ್ತಿದ್ದೇವೆ" ಎಂದು ತೇಜಸ್ವಿನಿ ಅನಂತ್ ಕುಮಾರ್ ಹೇಳಿದ್ದಾರೆ.
ಇಂದಿರಾ ಕ್ಯಾಂಟೀನ್ನಲ್ಲಿ ಬೆಳಗಿನ ಉಪಹಾರಕ್ಕೆ ಇಡ್ಲಿ, ಸಾಂಬಾರ್, ಚಟ್ನಿ ಸಿಗುತ್ತಿಲ್ಲ. ಆದ್ದರಿಂದ, ಕ್ಯಾಂಟೀನ್ಗೆ ಬಂದ ಜನರಿಗೆ ಪೊಂಗಲ್, ರೈಸ್ ಬಾತ್ ಪೂರೈಕೆ ಮಾಡಲಾಗುತ್ತಿದೆ. ಅಡುಗೆ ಮನೆ ಹಸ್ತಾಂತರವಾದರೆ ಕ್ಯಾಂಟೀನ್ ಮೆನುವಿನಲ್ಲಿ ಇಡ್ಲಿ ಮತ್ತೆ ಸೇರಲಿದೆ.
ಮಾಧ್ಯಮಗಳ ಜೊತೆ ಮಾತನಾಡಿದ ಬಿಬಿಎಂಪಿ ಆಯುಕ್ತ ಮಂಜುನಾಥ ಪ್ರಸಾದ್, "ನಾನು ಈ ಕುರಿತು ಅಧಿಕಾರಿಗಳ ಜೊತೆ ಮಾತುಕತೆ ನಡೆಸುತ್ತೇನೆ. ಶೀಘ್ರವೇ ಸಮಸ್ಯೆ ಬಗೆಹರಿಸಲು ಪ್ರಯತ್ನ ನಡೆಸುತ್ತೇನೆ" ಎಂದು ಹೇಳಿದ್ದಾರೆ.
Recommended Video
5 ರೂ. ಗೆ ಉಪಹಾರ, 10 ರೂ.ಗೆ ಊಟ ನೀಡುವ ಮಹತ್ವದ ಉದ್ದೇಶದಿಂದ ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರವಿದ್ದಾಗ ಇಂದಿರಾ ಕ್ಯಾಂಟೀನ್ ಯೋಜನೆ ಜಾರಿಗೊಳಿಸಲಾಯಿತು. ಬೆಂಗಳೂರು ನಗರದಲ್ಲಿ ಬಿಬಿಎಂಪಿ ಕ್ಯಾಂಟೀನ್ ನಿರ್ವಹಣೆ ನೋಡಿಕೊಳ್ಳುತ್ತದೆ.