ಯೋಜನಾ ಆಯೋಗಕ್ಕೆ ಇಬ್ರಾಹಿಂ, ದಿಲ್ಲಿಗೆ ನಾಡಗೌಡ
ಬೆಂಗಳೂರು, ಜೂನ್ 14: ಹಿರಿಯ ಕಾಂಗ್ರೆಸ್ಸಿಗ ಸಿಎಂ ಇಬ್ರಾಹಿಂ ಅವರನ್ನು ರಾಜ್ಯ ಯೋಜನಾ ಆಯೋಗದ ಉಪಾಧ್ಯಕ್ಷರನ್ನಾಗಿ ನೇಮಿಸಿ. ರಾಜ್ಯ ಸರಕಾರ ಆದೇಶ ಹೊರಡಿಸಿದೆ. ಹಾಗೆಯೇ, ರಾಜ್ಯ ಸರಕಾರದ ದೆಹಲಿ ವಿಶೇಷ ಪ್ರತಿನಿಧಿಯಾಗಿ ಕಾಂಗ್ರೆಸ್ ಶಾಸಕ ಸಿಎಸ್ ನಾಡಗೌಡ ಅವರನ್ನು ನೇಮಿಸಲಾಗಿದೆ. ಎರಡೂ ಸ್ಥಾನಗಳು ಸಂಪುಟ ದರ್ಜೆಯ ಸ್ಥಾನಮಾನ ಹೊಂದಿರುತ್ತವೆ.
ಮಾಜಿ ಕೇಂದ್ರ ಸಚಿವ, ಸಿಎಂ ಸಿದ್ದರಾಮಯ್ಯನವರ ಆಪ್ತ ಸಿಎಂ ಇಬ್ರಾಹಿಂ ಅವರು ರಾಜ್ಯ ಯೋಜನಾ ಆಯೋಗದ ಉಪಾಧ್ಯಕ್ಷರನ್ನಾಗಿ ಆಯ್ಕೆ ಮಾಡಿ ರಾಜ್ಯ ಸರಕಾರ ಶನಿವಾರ ಆದೇಶ ಹೊರಡಿಸಿದೆ. ಮುಖ್ಯಮಂತ್ರಿ (ಸಿದ್ದರಾಮಯ್ಯ) ಆಯೋಗದ ಪದನಿಮಿತ್ತ ಅಧ್ಯಕ್ಷರಾಗಿರುತ್ತಾರೆ. ಬಿಜಾಪುರ ಜಿಲ್ಲೆಯ ಮುದ್ದೇಬಿಹಾಳ ಕ್ಷೇತ್ರದ ಶಾಸಕ ನಾಡಗೌಡ ಅಪ್ಪಾಜಿ ಅವರನ್ನು ಕರ್ನಾಟಕ ಸರಕಾರದ ದೆಹಲಿಯ ಸ್ಥಾನಿಕ ವಿಶೇಷ ಪ್ರತಿನಿಧಿಯನ್ನಾಗಿ ನೇಮಿಸಲಾಗಿದೆ.
1989ರಿಂದ ರಾಜ್ಯ ವಿಧಾಸನಭೆಗೆ ಅವರು 4 ಬಾರಿ ಆಯ್ಕೆಯಾಗಿದ್ದಾರೆ. 1999 ರಿಂದ 2004 ರವರೆಗೆ ಅವರು ವಿಧಾನಸಭೆಯಲ್ಲಿ ಸರಕಾರದ ಚೀಪ್ ವಿಪ್ ಆಗಿದ್ದರು. ಅವರು 1990 ರಿಂದ 1992ರವರೆಗೆ ಕಾರ್ಮಿಕ ಸಚಿವರಾಗಿಯೂ ಸೇವೆ ಸಲ್ಲಿಸಿದ್ದಾರೆ.