ಒಕ್ಕಲಿಗರ ಸಂಘದ ಚುನಾವಣೆ ನಡೆಸಲು ಐಎಎಸ್ ಅಧಿಕಾರಿ ನೇಮಕ
ಬೆಂಗಳೂರು, ಮಾರ್ಚ್ 07: ಅಂತೂ ರಾಜ್ಯ ಒಕ್ಕಲಿಗರ ಸಂಘದ ಚುನಾವಣೆಗೆ ಹಿಡಿದ್ದ ಗ್ರಹಣ ಬಿಟ್ಟಂತಾಗಿದೆ. ವಿವಿಪುರಂನಲ್ಲಿರುವ ರಾಜ್ಯ ಒಕ್ಕಲಿಗರ ಸಂಘದ ಚುನಾವಣೆ ಪ್ರಕ್ರಿಯೆ ನಡೆಸಲು ಐಎಎಸ್ ಅಧಿಕಾರಿಯನ್ನು ನೇಮಿಸಲಾಗಿದ್ದು, ಚುಣಾವಣೆ ಪ್ರಕ್ರಿಯೆ ಶುರುವಾಗಲಿದೆ.
ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯ ಆಯುಕ್ತ ರವೀಂದ್ರ ಪಿ.ಎನ್. ಅವರನ್ನು ನೇಮಿಸಿ ಸಹಕಾರ ಇಲಾಖೆ ಆದೇಶಿಸಿದೆ. ಮೂರು ವರ್ಷದಿಂದ ಆಡಳಿತಾಧಿಕಾರಿ ಆಡಳಿತಕ್ಕೆ ಒಳಪಟ್ಟಿದ್ದ ಒಕ್ಕಲಿಗರ ಸಂಘದ ಆಡಳಿತ ಮಂಡಳಿಗೆ ಅಧಿಕಾರ ಹಸ್ತಾಂತರಿಸುವ ಬಗ್ಗೆ ಸಂಘದ ಆಡಳಿತಾಧಿಕಾರಿ ಸರ್ಕಾರಕ್ಕೆ ಪತ್ರ ಬರೆದಿದ್ದರು. ಒಕ್ಕಲಿಗರ ಸಂಘದ ಆಡಳಿತ ಮಂಡಳಿಗೆ ಅಧಿಕಾರ ಹಸ್ತಾಂತರಿಸಬೇಕು. ಹೀಗಾಗಿ ನಿಗದಿತ ಅವಧಿಯಲ್ಲಿ ಚುನಾವಣೆ ನಡೆಸಬೇಕು. ಹೀಗಾಗಿ ಹಿರಿಯ ಅಧಿಕಾರಿಯನ್ನು ನೇಮಿಸುವಂತೆ ಆಡಳಿತಾಧಿಕಾರಿ ಸರ್ಕಾರಕ್ಕೆ ಮನವಿ ಮಾಡಿದ್ದರು.
ಈ ಕುರಿತು ಸಹಕಾರ ಇಲಾಖೆ ನೀಡಿದ ಸಹಕಾರ ಸಂಘಗಳ ನಿಬಂಧಕರು ಕೂಡ ಅಧಿಕಾರಿ ನೇಮಕಕ್ಕೆ ಶಿಫಾರಸು ಮಾಡಿದ್ದರು. ಈ ಹಿನ್ನೆಲೆಯಲ್ಲಿ ಯುವ ಜನ ಸೇವಾ ಇಲಾಖೆ ಆಯುಕ್ತ ಪಿ.ಎನ್. ರವೀಂದ್ರ ಅವರನ್ನು ಚುನಾವಣಾ ಅಧಿಕಾರಿಯನ್ನಾಗಿ ನೇಮಿಸಿ ಸರ್ಕಾರ ಆದೇಶಿಸಿದೆ. ರಾಜ್ಯ ಒಕ್ಕಲಿಗರ ಸಂಘಕ್ಕೆ ಆಡಳಿತ ಮಂಡಳಿ ನೇಮಕ ಮಾಡುವ ಸಂಬಂಧ ಶೀಘ್ರದಲ್ಲಿಯೇ ಚುನಾವಣೆ ನಡೆಯಲಿದೆ.