ಕೃಷ್ಣಾ-ಕಾವೇರಿ ಪೂಜೆ ಖರ್ಚು- ವೆಚ್ಚದ ಬಗ್ಗೆ ಎಂಬಿ ಪಾಟೀಲ್ ಸ್ಪಷ್ಟನೆ
ಬೆಂಗಳೂರು, ಜೂನ್ 2: ಇದು ಸ್ವಂತ ಹಣದಲ್ಲಿ ನಡೆಸುವ ಪೂಜೆ. ಇಲಾಖೆಯ ಹಣದಿಂದಲ್ಲ ಎಂದು ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್ ಉತ್ತರಿಸಿದ್ದಾರೆ.
ಜಲಸಂಪನ್ಮೂಲ ಇಲಾಖೆಯಿಂದ ಇಪ್ಪತ್ತು ಲಕ್ಷ ರುಪಾಯಿ ಖರ್ಚು ಮಾಡಿ, ಮಳೆಗಾಗಿ ಪ್ರಾರ್ಥಿಸಿ ಪೂಜೆ ಮಾಡಲಾಗುತ್ತಿದೆ ಎಂಬ ಸುದ್ದಿ ಭಾರೀ ಚರ್ಚೆಯಾಗುತ್ತಿದೆ. ಈ ಬಗ್ಗೆ ಒನ್ ಇಂಡಿಯಾ ಕನ್ನಡಕ್ಕೆ ಸಚಿವರು ನೀಡಿದ ಸ್ಪಷ್ಟನೆ ಇದು.
ಕೃಷ್ಣಾ ಹಾಗೂ ಕಾವೇರಿ ನದಿಗಳ ಮೂಲ ಸ್ಥಾನದಲ್ಲಿ ಕಾವೇರಿ ನೀರಾವರಿ ನಿಗಮದಿಂದ ಶುಕ್ರವಾರ ಹಾಗೂ ಭಾನುವಾರಪೂಜೆ ಆಯೋಜಿಸಲಾಗುತ್ತಿದೆ.
ಅದರ ವೆಚ್ಚ ಇಪ್ಪತ್ತು ಲಕ್ಷ ರುಪಾಯಿ ಎಂಬುದರ ಬಗ್ಗೆ ವಿರೋಧ ಅಭಿಪ್ರಾಯಗಳು ವ್ಯಕ್ತವಾಗುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಧೋರಣೆಗೂ ಎಂ.ಬಿ.ಪಾಟೀಲರ ಆಲೋಚನೆಗೂ ಉತ್ತರ ಧ್ರುವ-ದಕ್ಷಿಣ ಧ್ರುವದಷ್ಟು ಅಂತರ ಇದೆ ಎಂಬುದು ಚರ್ಚೆಯ ವಿಷಯ.[ಸರ್ಕಾರ ಆದೇಶಕ್ಕೂ ಮೊದಲೇ ಗೂಟದ ಕಾರು ತ್ಯಜಿಸಿದ್ದವರು ಇವರು!]
ನಾನೊಬ್ಬ ಎಂಜಿನಿಯರ್ ಓದಿಕೊಂಡ ವ್ಯಕ್ತಿ. ಇಂಥ ಪೂಜೆಯ ಹಿಂದೆ ನಮ್ಮ ಕಾಳಜಿ ಇದೆ. ಮೈಸೂರು ಮಹಾರಾಜರು ಮಳೆಗಾಗಿ ಪ್ರಾರ್ಥಿಸಿ ಪೂಜೆ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು. ನಾವೇನೂ ಹೋಮ-ಹವನ ಅಂತೇನೂ ಮಾಡ್ತಿಲ್ಲ.
ರೈತಾಪಿ ವರ್ಗದವರಿಗೆ-ಸಾಮಾನ್ಯ ಜನರಿಗೆ ನೀರಿನ ಕೊರತೆ ಕಾಡದಿರಲಿ ಎಂದು ಮಾಡುತ್ತಿರುವ ವರುಣನ ಪ್ರಾರ್ಥನೆ ಇದು. ಎಲ್ಲರೂ ಹೃದಯಪೂರ್ವಕವಾಗಿ ವರುಣನ ಪ್ರಾರ್ಥನೆ ಮಾಡಿ ಎಂದು ಫೇಸ್ ಬುಕ್ ನಲ್ಲಿ ಸಚಿವರು ಬರೆದುಕೊಂಡಿದ್ದಾರೆ.
ಇನ್ನು ಪೂಜೆಯ ವಿಚಾರವಾಗಿ ಎದ್ದಿರುವ ವಿವಾದದ ಬಗ್ಗೆ ಪತ್ರಿಕಾ ಹೇಳಿಕೆಯನ್ನು ಸಹ ಸಚಿವ ಪಾಟೀಲ್ ಬಿಡುಗಡೆ ಮಾಡಿದ್ದಾರೆ. ಅದರ ಪ್ರಮುಖ ಅಂಶಗಳು ಇಲ್ಲಿವೆ.
* ಕುಡಿಯುವ ನೀರನ್ನು ಒದಗಿಸುವ ರೈತರ ಪಾಲಿಗೆ ದೇವತೆ ಸಮಾನವಾದ ಕೃಷ್ಣಾ ಹಾಗೂ ಕಾವೇರಿಗೆ ತಾಯಿ ಸ್ಥಾನ ಇದೆ.
* ಈ ಎರಡು ನದಿಗೆ ಪೂಜೆ ಮಾಡುವುದು ನಮ್ಮ ಸಂಸ್ಕೃತಿ, ಪರಂಪರೆ ಹಾಗೂ ಧರ್ಮದ ಭಾಗ
* ಈ ಹಿಂದೆ ಕಾವೇರಿ ನಿಗಮ ಮಂಡಳಿಯಲ್ಲಿ ನಡೆದ ಸಭೆಯಲ್ಲಿ ಈ ಉದ್ದೇಶಕ್ಕಾಗಿ ತಲಾ ಹತ್ತು ಲಕ್ಷ ರುಪಾಯಿ ಮೀಸಲಿಡಲು ತೀರ್ಮಾನಿಸಲಾಗಿತ್ತು.
* ಆದರೆ ಕೆಲ ಮಾಧ್ಯಮಗಳಲ್ಲಿ ಈ ಹಣ ಅನಗತ್ಯ ಖರ್ಚು ಎಂದು ಬಿಂಬಿಸಲಾಗುತ್ತಿದೆ.
* ಆದ್ದರಿಂದ ಈ ಖರ್ಚನ್ನು ನಾನು, ನನ್ನ ಸ್ನೇಹಿತರೇ ಭರಿಸಲು ತೀರ್ಮಾನಿಸಿದ್ದೇವೆ.
* ಶುಕ್ರವಾರ ಕೃಷ್ಣಾ ನದಿ ಉಗಮ ಸ್ಥಾನ ಮಹಾಬಲೇಶ್ವರದಲ್ಲಿ, ನಾಲ್ಕನೇ ತಾರೀಕು ಕಾವೇರಿ ಉಗಮ ಸ್ಥಾನ ಭಾಗಮಂಡಲದಲ್ಲಿ ಪೂಜೆ ನಡೆಸಲಿದ್ದೇವೆ.
* ಪೂಜೆ ಸಂದರ್ಭದಲ್ಲಿ ಆದಿಚುಂಚನಗಿರಿ ಮಠದ ನಿರ್ಮಲಾನಂದ ಸ್ವಾಮೀಜಿ ಭಾಗವಹಿಸಲಿದ್ದಾರೆ. ಜತೆಗೆ ಆ ಭಾಗದ ಜನಪ್ರತಿನಿಧಿಗಳು ಇರುತ್ತಾರೆ.