ಮುಂಬೈ ಹೋಟೆಲ್ ವಿರುದ್ಧ ಕಾನೂನು ಕ್ರಮ: ಡಿಕೆ ಶಿವಕುಮಾರ್
ಮುಂಬೈ, ಜುಲೈ 11: ತಾವು ಮುಂಗಡ ಬುಕ್ಕಿಂಗ್ ಮಾಡಿದ್ದರೂ ಒಳಗೆ ಬಿಡದೆ ಬಳಿಕ ಬುಕ್ಕಿಂಗ್ ರದ್ದು ಮಾಡಿದ್ದ ಮುಂಬೈನ ರೆನೈಸಾನ್ಸ್ ಹೋಟೆಲ್ನ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳುವುದಾಗಿ ಸಚಿವ ಡಿಕೆ ಶಿವಕುಮಾರ್ ಹೇಳಿದರು.
ಮುಂಬೈನ ಹೋಟೆಲ್ನಲ್ಲಿದ್ದ ಅತೃಪ್ತ ಶಾಸಕರನ್ನು ಭೇಟಿ ಮಾಡಿ ಅವರ ಮನವೊಲಿಸಿ ಕರೆತರಲು ಜಿಟಿ ದೇವೇಗೌಡ, ಶಾಸಕರಾದ ಶಿವಲಿಂಗೇಗೌಡ ಮತ್ತು ಬಾಲಕೃಷ್ಣ ಅವರೊಂದಿಗೆ ತೆರಳಿದ್ದ ಡಿಕೆ ಶಿವಕುಮಾರ್ ಅವರು ತಮ್ಮ ಪ್ರಯತ್ನದಲ್ಲಿ ವಿಫಲರಾಗಿ ಬರಿಗೈಲಿ ಮರಳಿದ್ದರು.
ಶಾಸಕರನ್ನು ಹೇಗಾದರೂ ಮಾಡಿ ಕರೆದುಕೊಂಡೇ ಹೋಗುತ್ತೇನೆ. ಒಂದಲ್ಲ ನಾಲ್ಕು ದಿನವಾದರೂ ಪರವಾಗಿಲ್ಲ ಎಂದು ಡಿಕೆ ಶಿವಕುಮಾರ್ ಅವರು ಹೋಟೆಲ್ ಮುಂಭಾಗ ಕುಳಿತಿದ್ದರು. ಸ್ನಾನ ಮಾಡಲೂ ಆಗದೆ ರಸ್ತೆ ಬದಿಯಲ್ಲಿಯೇ ಆಹಾರ ಸೇವಿಸಿ ಕುಳಿತಿದ್ದ ಅವರನ್ನು ಮುಂಬೈ ಪೊಲೀಸರು ಮಧ್ಯಾಹ್ನ ವಶಕ್ಕೆ ಪಡೆದುಕೊಂಡು ವಿಶ್ರಾಂತಿ ಗೃಹಕ್ಕೆ ಕರೆದುಕೊಂಡು ಹೋಗಿದ್ದರು. ಬಳಿಕ ಅವರನ್ನು ಬಲವಂತವಾಗಿ ಬೆಂಗಳೂರಿಗೆ ಕಳುಹಿಸಿದ್ದರು.
ಡಿಕೆಶಿಯನ್ನು ಬಲವಂತವಾಗಿ ಬೆಂಗಳೂರಿಗೆ ಕಳಿಸಿದರೆ ಮುಂಬೈ ಪೊಲೀಸ್?
ಹೋಟೆಲ್ ಒಳಗೆ ಪ್ರವೇಶಿಸದಂತೆ ತಮ್ಮನ್ನು ತಡೆದ ಮುಂಬೈ ಪೊಲೀಸರು ಮತ್ತು ತಮ್ಮ ಮುಂಗಡ ಬುಕ್ಕಿಂಗ್ ಅನ್ನು ರದ್ದುಗೊಳಿಸಿದ ಹೋಟೆಲ್ ವಿರುದ್ಧ ಡಿಕೆ ಶಿವಕುಮಾರ್ ಗುರುವಾರ ಕಿಡಿಕಾರಿದರು.
ಬಲವಂತವಾಗಿ ಗಡಿಪಾರು
ಬಾಂಬೆಯಿಂದ ನಿನ್ನೆ ಮಧ್ಯರಾತ್ರಿ ಬಂದೆ. ಮಹಾರಾಷ್ಟ್ರ ಪೊಲೀಸರು ಬಲವಂತವಾಗಿ ಅಲ್ಲಿಂದ ಗಡಿಪಾರು ಮಾಡಿದರು. ಇದು ಪ್ರಜಾಪ್ರಭುತ್ವದ ವ್ಯವಸ್ಥೆಗೆ ಅನುಗುಣವಾಗಿ ಅಲ್ಲಿನ ಸರ್ಕಾರ ನಡೆದುಕೊಳ್ಳಬೇಕಾದ ರೀತಿಯಲ್ಲ ಎಂದು ಡಿಕೆ ಶಿವಕುಮಾರ್ ಕಿಡಿಕಾರಿದರು.
ಡಿಕೆಶಿಯನ್ನು ವಶಕ್ಕೆ ಪಡೆದ ಮುಂಬೈ ಪೊಲೀಸರ ವಿರುದ್ಧ ಎಚ್ಡಿಕೆ ಗರಂ
ಸಹಿ ಹಾಕಿದ್ದು ನಾಲ್ಕು ಶಾಸಕರು
ನಾವು ಅಲ್ಲಿಗೆ ಬರುವುದರ ಬಗ್ಗೆ ಮಹಾರಾಷ್ಟ್ರ ಸರ್ಕಾರಕ್ಕೂ ತಿಳಿಸಿಯೇ ಹೋಗಿದ್ದೇವೆ. ಯಾರೋ ನಾಲ್ಕು ಶಾಸಕರು ನನ್ನ ಮತ್ತು ಸಿಎಂ ಹೆಸರು ಹಾಕಿ, ಇವರನ್ನು ಭೇಟಿ ಮಾಡಲು ಬಯಸಿಲ್ಲ ಎಂದು ಹೇಳಿದ್ದಾಗಿ ಪೊಲೀಸರು ಪತ್ರ ತೋರಿಸಿದರು. ಆದರೆ, ಬೇರೆ ಶಾಸಕರು ಇದ್ದರಲ್ಲವೇ. ಅವರನ್ನು ಭೇಟಿ ಮಾಡಲು ಅವಕಾಶ ನೀಡಬೇಕಿತ್ತು ಎಂದರು.
ವ್ಯವಹಾರ ನೈತಿಕತೆ ಕಳೆದುಕೊಂಡಿದೆ
ಅಧಿಕೃತವಾಗಿ ಹೋಟೆಲ್ ರೂಂ ಕಾಯ್ದಿರಿಸಿ ಅದನ್ನು ದೃಢೀಕರಿಸುವ ಕಾರ್ಡ್ ಕೊಟ್ಟಿದ್ದರೂ ಪೊಲೀಸರು ನನ್ನನ್ನು ಒಳಗೆ ಬಿಡಬಾರದು ಎಂದು ಆದೇಶಿಸಿದ್ದರು. ಒಂದು ಗಂಟೆ ಬಳಿಕ ಹೋಟೆಲ್ ಸಿಬ್ಬಂದಿ ರಿಸರ್ವೇಷನ್ ಕ್ಯಾನ್ಸಲ್ ಮಾಡಿದ್ದೇವೆಂದು ಲೆಟರ್ ಕೊಟ್ಟರು. ಹೋಟೆಲ್ ಒಳಗೆ ಯಾರಿದ್ದರು ಎನ್ನುವುದು ಬೇರೆ ವಿಚಾರ. ಅಧಿಕೃತ ರಿಸರ್ವೇಷನ್ ಆದ ಬಳಿಕ ಅದನ್ನು ರದ್ದು ಮಾಡಿ ಸ್ನಾನ ಮಾಡಲೂ ಅವಕಾಶ ನೀಡದೆ ಹೋಟೆಲ್ ಒಳಗೆ ಬರಲೇ ಬಾರದು ಎಂದು ಪತ್ರ ಕೊಡುತ್ತಾರೆ ಎಂದರೆ ದೇಶವು ಬಿಸಿನೆಸ್ ಎಥಿಕ್ಸ್ ಮತ್ತು ಮಾನವೀಯತೆ ಕಳೆದುಕೊಂಡಿದೆ ಎಂದರ್ಥ ಎಂದು ಕೆ ಶಿವಕುಮಾರ್ ಅಸಮಾಧಾನ ವ್ಯಕ್ತಪಡಿಸಿದರು.
ಸಚಿವ ಡಿ.ಕೆ.ಶಿವಕುಮಾರ್ ವಶಕ್ಕೆ ಪಡೆದ ಮುಂಬೈ ಪೊಲೀಸರು
ಕಾನೂನು ಹೋರಾಟಕ್ಕೆ ಚಿಂತನೆ
ನನ್ನನ್ನು ಹೋಟೆಲ್ ಪ್ರವೇಶಿಸಲು ಮತ್ತು ಹೊರಗೆ ಕಾದು ಕೂರುವುದನ್ನು ತಡೆದು ತಪ್ಪಿಸಿದ್ದಾರೆ. ಅಲ್ಲಿಂದ ಹೊರಕ್ಕೆ ಕಳುಹಿಸಿದ್ದಾರೆ. ಈ ಬಗ್ಗೆ ಕಾನೂನು ತಜ್ಞರನ್ನು ಸಂಪರ್ಕಿಸುತ್ತೇನೆ. ಹೋಟೆಲ್ ವಿರುದ್ಧ ಕಾನೂನು ಬದ್ಧವಾಗಿ ಹೋರಾಟ ಮಾಡಲು ಚಿಂತನೆ ನಡೆಸಿದ್ದೇನೆ. ಕಾನೂನು ಅಭಿಪ್ರಾಯ ಪಡೆದು ಮುಂದಿನ ನಡೆ ತೀರ್ಮಾನಿಸುತ್ತೇನೆ ಎಂದು ತಿಳಿಸಿದರು.