ಮರುಮತಾಂತರಕ್ಕೆ ಕರೆದರೆ ಸ್ಪಂದಿಸುತ್ತೇನೆ : ಪೇಜಾವರ
ಉಡುಪಿ, ಡಿ. 27: ಜಿಲ್ಲೆಯಲ್ಲಿ 110 ಕ್ರೈಸ್ತ ಕುಟುಂಬಗಳನ್ನು ಮರು ಮತಾಂತರ ಮಾಡುವುದಾಗಿ ಸಂಘಪರಿವಾರ ನೀಡಿರುವ ಹೇಳಿಕೆಯನ್ನು ಪೇಜಾವರದ ವಿಶ್ವೇಶ್ವರತೀರ್ಥ ಸ್ವಾಮೀಜಿ ಬೆಂಬಲಿಸಿದ್ದಾರೆ. ಮರುಮತಾಂತರ ಕಾರ್ಯಕ್ರಮವನ್ನು ನಾನು ಆಯೋಜಿಸಿಲ್ಲ. ಆದರೆ, ನನಗೆ ಕರೆ ಬಂದಲ್ಲಿ ಸ್ಪಂದಿಸುವುದಾಗಿ ಅವರು ತಿಳಿಸಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಶ್ರೀಗಳು, ಹಿಂದೂಗಳನ್ನು ಇತರ ಧರ್ಮದವರು ಮತಾಂತರ ಮಾಡಿದಾಗ ಯಾರೂ ಮಾತನಾಡುವುದಿಲ್ಲ. ಆದರೆ, ಅವರು ಮಾತೃಧರ್ಮಕ್ಕೆ ಮರಳಿದಾಗ ಗದ್ದಲವಾಗುತ್ತದೆ. ಈ ತಾರತಮ್ಯ ಏಕೆ ಎಂದು ಪ್ರಶ್ನಿಸಿದ್ದಾರೆ. [ಸಂಘಪರಿವಾರದಿಂದ ಉಡುಪಿಯಲ್ಲಿ ಘರ್ ವಾಪಸಿ]
ಆಮಿಷ ಒಡ್ಡಿ, ಒತ್ತಡ ಹಾಕಿ ಮತಾಂತರ ಮಾಡುವುದು ತಪ್ಪು. ಆದ್ದರಿಂದ ಅಕ್ರಮ ಮತಾಂತರ ಕುರಿತು ತೀರ್ಮಾನಿಸಲು ಜಿಲ್ಲಾಮಟ್ಟದ ಸಮಿತಿ ರಚಿಸಬೇಕು. ಇದರಲ್ಲಿ ಎಲ್ಲ ಧರ್ಮ ಹಾಗೂ ಸರ್ಕಾರದ ಪ್ರತಿನಿಧಿಗಳು ಇರಬೇಕು. ಮತಾಂತರ ನಡೆಯುವ ಸ್ಥಳಕ್ಕೆ ತೆರಳಿ ವಾಸ್ತವ ಪರಿಶೀಲಿಸಬೇಕು ಎಂದು ಆಗ್ರಹಿಸಿದರು.
ಮರು ಮತಾಂತರ ಇಚ್ಛಿಸುವ ಕ್ರೈಸ್ತ ಕುಟುಂಬಗಳನ್ನು ಹುಡುಕಿ ಅವರ ಜೊತೆ ಪೇಜಾವರ ಶ್ರೀಗಳನ್ನು ಭೇಟಿ ಮಾಡಿಸುವುದಾಗಿ ಹಿಂದೂ ಸಂಘಟನೆಗಳು ಈಗಾಗಲೇ ಹೇಳಿಕೆ ನೀಡಿರುವ ಹಿನ್ನೆಲೆಯಲ್ಲಿ ಶ್ರೀಗಳ ಹೇಳಿಕೆ ಮಹತ್ವ ಪಡೆದಿದೆ. [ಮರು ಮತಾಂತರ ಕಲ್ಪನೆಗೂ ಕರ್ನಾಟಕಕ್ಕೂ ಲಿಂಕ್ ಇದೆ]