ಸಚಿವ ಸ್ಥಾನ ತ್ಯಾಗ ಮಾಡುತ್ತಾರಂತೆ ಜಮೀರ್ ಅಹ್ಮದ್
ಬೆಂಗಳೂರು, ಮೇ 21: ಕರ್ನಾಟಕ ಸರ್ಕಾರದಲ್ಲಿ ಆಹಾರ ಮತ್ತು ನಾಗರೀಕ ಸಚಿವರಾಗಿರುವ ಜಮೀರ್ ಅಹ್ಮದ್ ಅವರು ತಮ್ಮ ಸಚಿವ ಸ್ಥಾನವನ್ನು ತ್ಯಾಗ ಮಾಡುತ್ತಾರಂತೆ!
ಹೌದು, ಹೀಗೆಂದು ಅವರೇ ಇಂದು ಹೇಳಿದ್ದಾರೆ. ಇನ್ನೊಂದು ವರ್ಷವಾದ ಮೇಲೆ ತಮ್ಮ ಸಚಿವ ಸ್ಥಾನವನ್ನು ಶಾಸಕ ಮತ್ತು ಗೆಳೆಯರಾದ ಎನ್.ಎ.ಹ್ಯಾರಿಸ್ ಅವರಿಗೆ ನೀಡುತ್ತಾರಂತೆ ಜಮೀರ್ ಅಹ್ಮದ್.
ಲೋಕಸಭಾ ಚುನಾವಣೆ 2019 | ವಿಶೇಷ ಪುಟ | ಗ್ಯಾಲರಿ
ಶಾಂತಿನಗರದಿಂದ ಎರಡು ಬಾರಿ ಶಾಸಕರಾಗಿ ಆಯ್ಕೆ ಆಗಿರುವ ಎನ್.ಎ.ಹ್ಯಾರಿಸ್ ಅವರು ಈ ಬಾರಿಯೇ ಸಚಿವ ಸ್ಥಾನ ಆಕಾಂಕ್ಷಿ ಆಗಿದ್ದರು, ಆದರೆ ಅವರಿಗೆ ನಿಗಮ ಮಂಡಳಿ ಸ್ಥಾನ ನೀಡಿ ಸುಮ್ಮನಿರಿಸಲಾಯಿತು.
ಜಮೀರ್ ಅಹ್ಮದ್ ಅವರಿಗೆ ಸಚಿವ ಸ್ಥಾನ ಸಿಕ್ಕಾಗ ಕಾಂಗ್ರೆಸ್ನ ಕೆಲವು ಹಿರಿಯ ಮುಸ್ಲಿಂ ನಾಯಕರು ಅಸಮಾಧಾನ ವ್ಯಕ್ತಪಡಿಸಿದ್ದರು, ರೋಶನ್ ಬೇಗ್ ಅದರಲ್ಲಿ ಪ್ರಮುಖರು, ಆದರೆ ಈಗ ಜಮೀರ್ ಅವರೇ ತಾವು ಸಚಿವ ಸ್ಥಾನವನ್ನು ಮುಂದಿನ ಬಾರಿ ಬಿಟ್ಟುಕೊಡುವುದಾಗಿ ಹೇಳಿದ್ದಾರೆ.
ಜಮೀರ್ ಮಾತ್ರವಲ್ಲದೆ ಪ್ರಸ್ತುತ ಸಚಿವರಾಗಿರುವ ಬಹುತೇಕರು ತಮ್ಮ ಸ್ಥಾನವನ್ನು ವರ್ಷದ ನಂತರ ಬಿಟ್ಟುಕೊಡಬೇಕಾಗಿ ಬರಬಹುದು.
ಈಗಾಗಲೇ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬಂದು ಒಂದು ವರ್ಷವಾಗಿದೆ. ಮುಂದಿನ ವರ್ಷವೆಂದರೆ ಎರಡು ಅಥವಾ ಎರಡೂವರೆ ವರ್ಷಕ್ಕೆ ಸಂಪುಟ ವಿಸ್ತರಣೆ ನಡೆದು ಪ್ರಸ್ತುತ ಸಚಿವರು ತಮ್ಮ ಅಧಿಕಾರ ಕಳೆದುಕೊಂಡು ಹೊಸಬರಿಗೆ ಅಥವಾ ಅವಕಾಶ ವಂಚಿತರಿಗೆ ಅವಕಾಶ ನೀಡಲಾಗುವ ಸಾಧ್ಯತೆ ಹೆಚ್ಚಿದೆ.