ಸೋಲಿನ ನೈತಿಕ ಹೊಣೆ ಹೊರುತ್ತೇನೆ, ರಾಜೀನಾಮೆ ಇಲ್ಲ: ದಿನೇಶ್ ಗುಂಡೂರಾವ್
ಬೆಂಗಳೂರು, ಮೇ 25: ಲೋಕಸಭೆ ಚುನಾವಣೆಯಲ್ಲಿ ರಾಜ್ಯ ಕಾಂಗ್ರೆಸ್ ಕಳಪೆ ಪ್ರದರ್ಶನ ಕಂಡಿರುವುದರಿಂದ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರು ರಾಜೀನಾಮೆ ಕೊಡುತ್ತಾರೆ ಎನ್ನಲಾಗಿತ್ತು, ಆದರೆ ಇದನ್ನು ಅವರು ತಳ್ಳಿ ಹಾಕಿದ್ದಾರೆ.
ಇಂದು ಸುದ್ದಿಗೋಷ್ಠಿ ನಡೆಸಿದ ದಿನೇಶ್ ಗುಂಡೂರಾವ್ ಅವರು, ಲೋಕಸಭೆ ಚುನಾವಣೆಯಲ್ಲಿ ರಾಜ್ಯ ಕಾಂಗ್ರೆಸ್ ಕಳಪೆ ಪ್ರದರ್ಶನಕ್ಕೆ ಕೆಪಿಸಿಸಿ ಅಧ್ಯಕ್ಷನಾಗಿ ನೈತಿಕ ಜವಾಬ್ದಾರಿಯನ್ನು ಹೊರುತ್ತೇನೆ ಎಂದರು.
ರಾಜೀನಾಮೆ ಕೊಡುವ ವಿಷಯವನ್ನು ಅಲ್ಲಗಳೆದ ದಿನೇಶ್ ಗುಂಡೂರಾವ್, ರಾಜ್ಯದಲ್ಲಿ ಚುನಾವಣೆ ಸಂಬಂಧ ಘಟಿಸಿದ ಎಲ್ಲವನ್ನೂ ರಾಷ್ಟ್ರಾಧ್ಯಕ್ಷರಿಗೆ ತಿಳಿಸಿಕೊಡಲಾಗುವುದು ಆ ನಂತರ ಅವರು ತೆಗೆದುಕೊಳ್ಳುವ ನಿರ್ಣಯಕ್ಕೆ ನಾನು ಬದ್ಧನಾಗಿರುತ್ತೇನೆ ಎಂದು ದಿನೇಶ್ ಗುಂಡೂರಾವ್ ಹೇಳಿದರು.
ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ ರಾಹುಲ್ ಗಾಂಧಿ, ತಿರಸ್ಕರಿಸಿದ CWC
ರಾಜ್ಯದಲ್ಲಿ ಕಾಂಗ್ರೆಸ್ ಸೋಲಿಗೆ ಕಾರಣವಾದ ಅಂಶಗಳು, ಎಲ್ಲಿ ನಮ್ಮ ತಂತ್ರ ವಿಫಲವಾಯಿತು, ನಾಯಕರುಗಳ ಶ್ರಮ ಎಲ್ಲದರ ಪೂರ್ಣ ವರದಿಯನ್ನು ರಾಹುಲ್ ಗಾಂಧಿ ಅವರಿಗೆ ತಲುಪಿಸಲಾಗುವುದು ಎಂದು ದಿನೇಶ್ ಗುಂಡೂರಾವ್ ಹೇಳಿದರು..
'ಚುನಾವಣೆಗಳು ಒಂದಕ್ಕಿಂತ ಒಂದು ಭಿನ್ನ'
ಎಲ್ಲ ಚುನಾವಣೆಗಳೂ ಒಂದಕ್ಕಿಂತ ಒಂದೊಂದು ಭಿನ್ನವಾಗಿರುತ್ತವೆ. ಲೋಕಸಭೆ ಚುನಾವಣೆಯಲ್ಲಿ ಮತದಾರ ಬೇರೆ ಕಾರಣಕ್ಕೆ ಮತ ಹಾಕುತ್ತಾರೆ, ವಿಧಾನಸಭೆ ಚುನಾವಣೆಯಲ್ಲಿ ಬೇರೆ ಕಾರಣಕ್ಕೆ ಮತ ಹಾಕುತ್ತಾರೆ. ಈ ಬಾರಿ ಮತದಾರ ಮೊದಿಗೆ ಮತ್ತೊಂದು ಅವಕಾಶ ಕೊಡಲು ಮತ ಹಾಕಿದ್ದಾರೆ ಎಂದರು.
ತಿರುಗುಬಾಣವಾದ ನೆಗೆಟಿವ್ ಅಭಿಯಾನ, ಕಾಂಗ್ರೆಸ್ಸಿನಲ್ಲಿ ಕೆಂಡ ನಿಗಿನಿಗಿ
'ಮೈತ್ರಿಯಿಂದಲೇ ಸೋಲಾಯಿತೆನ್ನುವುದು ಸುಳ್ಳು'
ಮೈತ್ರಿಯಿಂದಲೇ ಸೋಲಾಯಿತೆಂಬ ಮಾತು ಕೇಳಿಬರುತ್ತಿದೆ ಎಂಬ ಮಾತಿಗೆ ಉತ್ತರಿಸಿದ ದಿನೇಶ್ ಗುಂಡೂರಾವ್, ಸೋತಿದ್ದಕ್ಕೆ ಹಲವು ಕಾರಣಗಳಿವೆ, ಮೈತ್ರಿ ಒಂದೇ ಕಾರಣವಲ್ಲ, ಎಲ್ಲವನ್ನೂ ವಿಶ್ಲೇಷಣೆ ಮಾಡುತ್ತೇವೆ. ಕೇರಳದಲ್ಲಿ ಕಾಂಗ್ರೆಸ್ ಮೈತ್ರಿ ಮಾಡಿಕೊಂಡಿತ್ತು ಅಲ್ಲಿ ಗೆದ್ದೆವು, ತಮಿಳುನಾಡಿನಲ್ಲಿ ಮೈತ್ರಿ ಮಾಡಿಕೊಂಡಿದ್ದೆವು ಗೆದ್ದೆವು, ಮಧ್ಯ ಪ್ರದೇಶದಲ್ಲಿ ಮೈತ್ರಿ ಅಷ್ಟೇನೂ ಚೆನ್ನಾಗಿ ಪ್ರದರ್ಶಿಸಿಲ್ಲ ಎಂದು ಹೇಳಿದರು.
'ಮೈತ್ರಿ ಸರ್ಕಾರದ ಬೆನ್ನೆಲುಬಾಗಿದ್ದಾರೆ'
ಮೈತ್ರಿ ಸರ್ಕಾರ ಉರುತ್ತದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ದಿನೇಶ್ ಗುಂಡೂರಾವ್, ಸಿದ್ದರಾಮಯ್ಯ ಅವರು ಮೈತ್ರಿ ಸರ್ಕಾರದ ಬೆನ್ನೆಲುಬಾಗಿ ಇರಲಿದ್ದಾರೆ. ಸರ್ಕಾರ ಯಾವುದೇ ಕಾರಣಕ್ಕೂ ಉರುಳುವುದಿಲ್ಲ, ಈ ಚುನಾವಣೆ ಸೋಲು ನಮ್ಮನ್ನು ಇನ್ನಷ್ಟು ಒಗ್ಗಟ್ಟುಗೊಳ್ಳುವಂತೆ ಮಾಡಿದೆ ಎಂದರು.
ರಮೇಶ್ ಜಾರಕಿಹೊಳಿ ಒಂದು ವರ್ಷದಿಂದ ಹೇಳುತ್ತಲೇ ಇದ್ದಾರೆ
ಕೆಲವು ಕಾಂಗ್ರೆಸ್ ಶಾಸಕರು ಮೈತ್ರಿ ಬಗ್ಗೆ ಅಪಸ್ವರ ಎತ್ತಿರುವ ಬಗ್ಗೆ ಮಾತನಾಡಿದ ಅವರು, ಅದು ಅವರ ವೈಯಕ್ತಿಕ ಅಭಿಪ್ರಾಯ ಎಂದರು. ರಮೇಶ್ ಜಾರಕಿಹೊಳಿ ಒಂದು ವರ್ಷದಿಂದಲೂ ಎಲ್ಲ ಪಕ್ಷದವರೊಂದಿಗೂ ಸಂಪರ್ಕದಲ್ಲಿದ್ದಾರೆ ಆದರೆ ಅವರಿಂದ ಏನೂ ಮಾಡಲಾಗಿಲ್ಲ ಎಂದು ಹೇಳಿದರು.