ಸುಳ್ಳು ಸುದ್ದಿ ಹಬ್ಬಿಸಿ ಟಿಕೆಟ್ ತಪ್ಪಿಸಿದ್ರು : ನಾರಾಯಣಸ್ವಾಮಿ ಆರೋಪ
ದೇವನಹಳ್ಳಿ ಏಪ್ರಿಲ್ 22 : ಅಭಿಮಾನಿಗಳಿಗೆ, ಹಿತೈಶಿಗಳಿಗೆ ಎಂದಿಗೂ ದ್ರೋಹ ಮಾಡುವುದಿಲ್ಲ. ಅವರಿಗಾಗಿ ಹಗಲಿರುಳು ಶ್ರಮಿಸಲು ಸಿದ್ಧ ಎಂದು ಜೆಡಿಎಸ್ ಟಿಕೆಟ್ ವಂಚಿತ ಅಭ್ಯರ್ಥಿ ನಿಸರ್ಗ ನಾರಾಯಣಸ್ವಾಮಿ ತಿಳಿಸಿದರು.
ಗೋಲ್ಡ್ ಪಿಂಚ್ ಖಾಸಗಿ ರೆಸಾರ್ಟ್ನಲ್ಲಿ ಕರೆಯಲಾಗಿದ್ದ ನಿಸರ್ಗ ನಾರಾಯಣಸ್ವಾಮಿ ಬಣದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ ನಾನು ಬೇರೆ ತಾಲೂಕಿನವನು. ನನಗೆ ಟಿಕೆಟ್ ದೊರೆತರೆ ತಾಲೂಕಿನ ಕಾರ್ಯಕರ್ತರನ್ನು ಹಾಗೂ ಪಕ್ಷವನ್ನು ಹಾಳು ಮಾಡುತ್ತೇನೆಂದು ಸುಳ್ಳು ಸುದ್ದಿ ಹಬ್ಬಿಸಿ, ಜೆಡಿಎಸ್ ನಲ್ಲಿ ಬಿ ಫಾರಂ ದೊರಕದಂತೆ ಮಾಡಿದ್ದಾರೆ ಎಂದು ದೂರಿದರು.
ಸಮಾಜ ಸೇವಕನಾಗಿ ಮೂರುವರೆ ವರ್ಷಗಳಿಂದ ದೇವನಹಳ್ಳಿ ತಾಲೂಕಿನಲ್ಲಿ ಹಲವಾರು ಜನಪರ ಕಾರ್ಯಗಳಲ್ಲಿ ತೊಡಗಿಸಿಕೊಂಡು ಬಂದಿದ್ದೇನೆ. ಅಭಿಮಾನಿಗಳ ಹಾಗೂ ಮುಖಂಡರುಗಳ ಒತ್ತಾಯದ ಮೇರೆಗೆ ಜೆಡಿಎಸ್ ಸೇರ್ಪಡೆಯಾದೆ. ದೇವನಹಳ್ಳಿ ಮೀಸಲು ಕ್ಷೇತ್ರವಾಗಿದ್ದು, ಅಭಿವೃದ್ಧಿ ಮರೀಚಿಕೆಯಾಗಿದೆ. ಈ ತಾಲೂಕನ್ನು ಅಭಿವೃದ್ಧಿಯತ್ತ ಕೊಂಡೊಯ್ಯಲು ನನ್ನ ಸಮಾಜ ಸೇವೆಯ ಸಹಾಯದೊಂದಿಗೆ ಸರ್ಕಾರದಿಂದ ಸಿಗುವ ಅನುದಾನ ಬಳಸಿಕೊಂಡರೆ ಮಾದರಿ ತಾಲೂಕನ್ನಾಗಿ ಪರಿವರ್ತನೆ ಮಾಡಬಹುದು ಎಂದು ಸಲಹೆ ನೀಡಿದರು.
ಸ್ವತಂತ್ರ ಅಭ್ಯರ್ಥಿಯಾಗಿ ಪ್ರಸ್ತುತ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸುತ್ತೇನೆ. ಮತದಾರರು, ಅಭಿಮಾನಿಗಳು, ಮುಖಂಡರುಗಳು ನನಗೆ ಆಶೀರ್ವಾದ ಮಾಡಿದರೆ ತಾಲೂಕನ್ನು ಅಭಿವೃದ್ಧಿಯತ್ತ ಕೊಂಡೊಯ್ಯತ್ತೇನೆ. ನನಗೆ ದ್ವೇಷದ ರಾಜಕೀಯ ಗೊತ್ತಿಲ್ಲ. ಎಲ್ಲರೊಂದಿಗೂ ಬೆರೆತು ಸೇವೆ ಸಲ್ಲಿಸುವುದಾಗಿ ಆಶ್ವಾಸನೆ ನೀಡಿದರು.
ಶ್ರೀರಾಮಪ್ಪ ಮಾತನಾಡಿ, ನಿಸರ್ಗ ನಾರಾಯಣಸ್ವಾಮಿ ಅವರು ಸಮಾಜಸೇವಕರಾಗಿ ಗುರುತಿಸಿಕೊಂಡವರು. ಜೆಡಿಎಸ್ ನಿಂದ ಟಿಕೆಟ್ ನೀಡದೆ ವಂಚಿಸಲಾಗಿದೆ. ದೇವನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಸುಮಾರು 25 ಸಾವಿರಕ್ಕೂ ಹೆಚ್ಚು ಬಲಗೈ ಸಮುದಾಯವಿದ್ದು, ಈ ಸಮಾಜಕ್ಕೆ ಜೆಡಿಎಸ್ ನಿಂದ ಇದುವರೆಗೆ ಯಾವುದೇ ಸ್ಥಾನಮಾನ ದೊರೆತಿಲ್ಲ. ಎಲ್ಲರನ್ನು ಒಗ್ಗಟ್ಟಾಗಿ ಮುನ್ನಡೆಸುವ ಇವರಿಗೆ ಟಿಕೆಟ್ ನೀಡದೆ ದ್ರೋಹಮಾಡಲಾಗಿದೆ. ಆದ್ದರಿಂದ ನಮ್ಮ ಸೇವೆಗೆ ನಿರತರಾಗಿರುವ ಇವರನ್ನು ಸ್ವತಂತ್ರ ಅಭ್ಯರ್ಥಿಯಾಗಿ ನಿಲ್ಲಿಸಿ ಗೆಲ್ಲಿಸಬೇಕೆಂದು ಕೋರಿದರು.