ಸಚಿವ ಸ್ಥಾನ ಕೈತಪ್ಪಿದಕ್ಕೆ ಹೈಕಮಾಂಡ್ ಅಲ್ಲ, ಸಿಎಂ ಕಾರಣ: ಲಿಂಬಾವಳಿ
Recommended Video
ಬೆಂಗಳೂರು, ಫೆಬ್ರವರಿ 06: ಇಂದು ರಾಜಭವನದಲ್ಲಿ ನಡೆದ ನೂತನ ಸಚಿವರ ಪ್ರಮಾಣ ವಚನ ಕಾರ್ಯಕ್ರಮಕ್ಕೆ ಆಗಮಿಸಿದ್ದ ಅರವಿಂದ ಲಿಂಬಾವಳಿ ನೋವಿನಿಂದಲೇ ಮಾಧ್ಯಮಗಳೊಟ್ಟಿಗೆ ಮಾತನಾಡಿ, ಸಿಎಂ ಯಡಿಯೂರಪ್ಪ ವಿರುದ್ಧ ಅಸಮಾಧಾನ ಹೊರಹಾಕಿದರು.
ಡಿಸಿಎಂ ಸ್ಥಾನದ ಆಕಾಂಕ್ಷಿ ಎಂದೇ ಬಿಂಬಿತವಾಗಿದ್ದ ಅರವಿಂದ ಲಿಂಬಾವಳಿ ಅವರಿಗೆ ಕನಿಷ್ಠ ಮಂತ್ರಿಗಿರಿ ಸಹ ದೊರೆತಿಲ್ಲ. ಇದರಿಂದ ಬೇಸರಗೊಂಡಿರುವ ಅವರು, ನೇರವಾಗಿ ಸಿಎಂ ವಿರುದ್ಧವೇ ಅಸಮಾಧಾನ ಹೊರಹಾಕಿದ್ದಾರೆ.
Live Updates : 10 ಶಾಸಕರನ್ನು ಸಂಪುಟಕ್ಕೆ ಸೇರಿಸಿಕೊಂಡ ಯಡಿಯೂರಪ್ಪ
ಇಂದು ಪ್ರಮಾಣ ವಚನ ಕಾರ್ಯಕ್ರಮಕ್ಕೆ ಮುನ್ನಾ ಮಾಧ್ಯಮದವರೊಡನೆ ಮಾತನಾಡಿದ ಅರವಿಂದ ಲಿಂಬಾವಳಿ ಅವರಿಗೆ, 'ಹೈಕಮಾಂಡ್ ನಿಮ್ಮನ್ನು ಮಂತ್ರಿ ಸ್ಥಾನಕ್ಕೆ ಏಕೆ ಪರಿಗಣಿಸಲಿಲ್ಲ?' ಎಂಬ ಪ್ರಶ್ನೆ ಎದುರಾಯಿತು.
ಪಟ್ಟಿ ತಯಾರಿಸಿರುವು ಹೈಕಮಾಂಡ್ ಅಲ್ಲ ಸಿಎಂ: ಲಿಂಬಾವಳಿ
ಇದಕ್ಕೆ ಪೆಚ್ಚುಮೋರೆಯಲ್ಲೇ ಉತ್ತರಿಸಿದ ಅರವಿಂದ ಲಿಂಬಾವಳಿ, 'ಸಚಿವ ಸ್ಥಾನ ಪಟ್ಟಿ ತಯಾರಿಸಿರುವುದು ಹೈಕಮಾಂಡ್ ಅಲ್ಲ ಮುಖ್ಯಮಂತ್ರಿಗಳು' ಎಂದರು. ಆ ಮೂಲಕ ಬಹಿರಂಗವಾಗಿಯೇ ತಮ್ಮ ಅಸಮಾಧಾನ ಹೊರಹಾಕಿದ್ದಾರೆ.
ಸಚಿವ ಸ್ಥಾನ ಕೊಡುವುದು ಸಿಎಂ ಪರಮಾಧಿಕಾರ: ಲಿಂಬಾವಳಿ
'ಸಚಿವ ಸ್ಥಾನ ನೀಡುವುದು ಮುಖ್ಯಮಂತ್ರಿಗಳ ಪರಮಾಧಿಕಾರ, ಅವರೇ ಸಚಿವ ಸ್ಥಾನ ಯಾರಿಗೆ ಕೊಡಬೇಕು ಎಂದು ನಿರ್ಧರಿಸಿದ್ದಾರೆ' ಎಂದರು. ಆ ಮೂಲಕ ತಮಗೆ ಸಚಿವ ಸ್ಥಾನ ಕೈತಪ್ಪಲು ಯಡಿಯೂರಪ್ಪ ಅವರೇ ಕಾರಣ ಹೊರತು ಬಿಜೆಪಿ ಹೈಕಮಾಂಡ್ ಅಲ್ಲ ಎಂಬ ಅಭಿಪ್ರಾಯ ದಾಟಿಸಿದರು.
ಹೈಕಮಾಂಡ್ ಅಂಕಿತವನ್ನಷ್ಟೇ ಹಾಕಿದೆ
ನೂತನ ಸಚಿವರ ಪಟ್ಟಿಯನ್ನು ಹೈಕಮಾಂಡ್ ಬುಧವಾರ ಸಂಜೆ ಕಳುಹಿಸಲಿದೆ ಎಂದು ಈ ಮುನ್ನಾ ಯಡಿಯೂರಪ್ಪ ಮಾಧ್ಯಮಗಳಿಗೆ ತಿಳಿಸಿದ್ದರು. ಆ ಮೂಲಕ ಸಚಿವರ ಆಯ್ಕೆ ಹೈಕಮಾಂಡ್ ಮಾಡುತ್ತಿದೆ ಎಂಬ ಮಾಹಿತಿ ಹರಿಬಿಟ್ಟಿದ್ದರು. ಆದರೆ ಈಗ ಅರವಿಂದ ಲಿಂಬಾವಳಿ ಹೇಳುತ್ತಿರುವಂತೆ ಸಿಎಂ ಅವರೇ ಸಚಿವರ ಪಟ್ಟಿ ತಯಾರಿಸಿದ್ದಾರೆ. ಅದಕ್ಕೆ ಹೈಕಮಾಂಡ್ ಅಂಕಿತವಷ್ಟೆ ಹಾಕಿದೆ.
ಲಿಂಬಾವಳಿ ಅವರದ್ದು ಎನ್ನಲಾಗಿದ್ದ ಅಶ್ಲೀಲ ವೀಡಿಯೋ ಹರಿದಾಡಿತ್ತು
ಮಾಜಿ ಸಚಿವ ಅರವಿಂದ ಲಿಂಬಾವಳಿ ಅವರಿಗೆ ಮೊದಲ ಬಾರಿಯೇ ಸಚಿವ ಸ್ಥಾನ ದೊರೆಯಬೇಕಿತ್ತು. ಸಂಪುಟ ವಿಸ್ತರಣೆಯ ಕೆಲವೇ ದಿನ ಹಿಂದೆ ಅವರದ್ದು ಎನ್ನಲಾದ ಅಶ್ಲೀಲ ವಿಡಿಯೋ ಹರಿಬಿಡಲಾಯಿತು. ಈ ಬಗ್ಗೆ ಸದನದಲ್ಲಿ ಸಹ ಅವರು ನೋವು ತೋಡಿಕೊಂಡಿದ್ದರು. ಈ ವಿಡಿಯೋ ವೈರಲ್ ಆಗುವ ಹಿಂದೆ ಬಿಜೆಪಿಯವರದ್ದೇ ಕೈವಾಡ ಇದೆ ಎನ್ನಲಾಗುತ್ತಿದೆ.