ನನ್ನ ಸೋಲಿಗೆ ಬಿಜೆಪಿಯವರೇ ಕಾರಣ: ಮಾತಿನ ಕ್ಷಿಪಣಿ ಎಸೆದ ಎಂ.ಟಿ.ಬಿ ನಾಗರಾಜ್!
ಬೆಂಗಳೂರು, ಫೆ 1: ಸಚಿವ ಸಂಪುಟ ವಿಸ್ತರಣೆಯಲ್ಲಿ ತಮ್ಮ ಹೆಸರು ಸೇರ್ಪಡೆಗೊಳ್ಳುವುದು ಬಹುತೇಕ ಡೌಟ್ ಎನ್ನುವ ನಿರ್ಧಾರಕ್ಕೆ ಬಂದಿರುವ ಹೊಸಕೋಟೆಯ ಮಾಜಿ ಶಾಸಕ, ಎಂ.ಟಿ.ಬಿ ನಾಗರಾಜ್, ಬಿಜೆಪಿ ವಿರುದ್ದವೇ ತಿರುಗಿಬಿದ್ದಿದ್ದಾರೆ.
"ಹದಿನೇಳು ಶಾಸಕರು ರಾಜೀನಾಮೆ ನೀಡಿದ್ದರಿಂದ ಯಡಿಯೂರಪ್ಪನವರ ಸರಕಾರ ಅಧಿಕಾರಕ್ಕೆ ಬಂತು ಎನ್ನುವುದನ್ನು ಬಿಜೆಪಿಯವರು ಮೊದಲು ಅರಿತು ಮಾತನಾಡಲಿ" ಎಂದು ಎಂಟಿಬಿ ಕಿಡಿಕಾರಿದ್ದಾರೆ.
ಯಡಿಯೂರಪ್ಪ ಮನಸ್ಸಿನಲ್ಲಿ ನಾವಿದ್ದೇವೆ: ಎಂಟಿಬಿ ನಾಗರಾಜ್
"ನನ್ನದು ಸೋಲಲ್ಲ, ಗೆಲುವು. ನನ್ನ ಸೋಲಿಗೆ ಬಿಜೆಪಿಯವರೇ ಕಾರಣ. ಬಿಜೆಪಿ ಮುಖಂಡರಾದ ಬಚ್ಚೇಗೌಡ, ಶರತ್ ಬಚ್ಚೇಗೌಡ, ಅವರ ಬೆಂಬಲಿಗರು ಮತ್ತು ಬಿಜೆಪಿ ಕಾರ್ಯಕರ್ತರು ನನ್ನ ವಿರುದ್ದ ಕೆಲಸ ಮಾಡಿದ್ದಕ್ಕೆ ನನಗೆ ಉಪಚುನಾವಣೆಯಲ್ಲಿ ಸೋಲಾಯಿತು" ಎಂದು ಎಂ.ಟಿ.ಬಿ ನಾಗರಾಜ್, ಬಿಜೆಪಿ ವಿರುದ್ದ ಕಿಡಿಕಾರಿದ್ದಾರೆ.
"ಬಚ್ಚೇಗೌಡರ ವಿರುದ್ದ ಕ್ರಮ ತೆಗೆದುಕೊಳ್ಳಿ ಎಂದು ಯಡಿಯೂರಪ್ಪನವರಿಗೆ ಒತ್ತಾಯ ಮಾಡುತ್ತಲೇ ಇದ್ದೇನೆ. ನೋಡೋಣ, ಯಾವಾಗ ಅವರ ವಿರುದ್ದ ಆಕ್ಷನ್ ತೆಗೆದುಕೊಳ್ಳುತ್ತಾರೆಂದು. ನಾನಂತೂ ಬಿಜೆಪಿಯವರ ಹಂಗಿನಲ್ಲಿಲ್ಲ" ಎಂದು ಎಂಟಿಬಿ ಹೇಳಿದ್ದಾರೆ.
"ನನ್ನದು ಏನಿದ್ದರೂ ನೇರಾನೇರ ವ್ಯಕ್ತಿತ್ವ, ಯಾರಿಗೂ ಕ್ಯಾರ್ ಮಾಡುವುದಿಲ್ಲ. ಯಡಿಯೂರಪ್ಪನವರ ಮೇಲೆ ನಂಬಿಕೆಯಿದೆ. ಸಚಿವ ಸ್ಥಾನ ನೀಡದಿದ್ದರೆ, ಮುಂದೆ ಏನು ಮಾಡಬೇಕು ಅನ್ನುವುದನ್ನು ನಿರ್ಧರಿಸುತ್ತೇನೆ" ಎಂದು ಎಂ.ಟಿ.ಬಿ ನಾಗರಾಜ್ ಮತ್ತೆ ಸ್ಪಷ್ಟ ಪಡಿಸಿದ್ದಾರೆ.
"ಏನು ಮಾಡಬೇಕು ಎಂದು ಯಡಿಯೂರಪ್ಪ ತೀರ್ಮಾನ ಮಾಡಿಕೊಂಡಿದ್ದಾರೆ, ಅವರ ಮನಸ್ಸಿನಲ್ಲಿ ನಾವು ಇದ್ದೇವೆ ಅಂತಾ ಭಾವಿಸಿದ್ದೇವೆ" ಎಂದು ಒಂದು ದಿನದ ಹಿಂದೆ ಎಂ.ಟಿ.ಬಿ ನಾಗರಾಜ್ ಹೇಳಿದ್ದರು.