ಕೊರೊನಾ ವೈರಸ್ ಪರೀಕ್ಷೆ ಮಾಡಿಸಿಕೊಂಡ ಸಚಿವ ಮಾಧುಸ್ವಾಮಿ!
ಬೆಂಗಳೂರು, ಏ. 20: ಕೊರೊನಾ ವೈರಸ್ ಸೃಷ್ಟಿಸಿರುವ ಆತಂಕವೆ ಹಾಗಿವೆ. ವೈರಸ್ ಯಾರಿಗೆ? ಎಲ್ಲಿ? ಹೇಗೆ ತಗಲಿಕೊಳ್ಳುತ್ತದೆ ಎಂಬುದು ನಿಗೂಢ. ಸೋಂಕಿನ ಯಾವುದೇ ಲಕ್ಷಣಗಳು ಕಾಣಿಸಿಕೊಳ್ಳದೆ ಇರುವುವವರಿಂದ ಆರೋಗ್ಯವಂತರಿಗೆ ಕೋವಿಡ್ 19 ಹರಡಿರುವ ಉದಾಹರಣೆಗಳಿವೆ. ಹೀಗಾಗಿ ಯಾರಾದರೂ ಸ್ವಲ್ಪ ಕೆಮ್ಮಿದ್ರೂ ಸಾಕು ಹತ್ತಿರದಲ್ಲಿ ಇದ್ದವರು ಅವರನ್ನು ಸಂಶಯದಿಂದಲೇ ನೋಡುತ್ತಾರೆ. ಇಂತಹ ಘಟನೆ ಇವತ್ತು ವಿಧಾನಸೌಧದಲ್ಲಿಯೂ ನಡೆದಿದೆ. ಸಚಿವರು ಸ್ವಲ್ಪ ಕೆಮ್ಮಿದ್ದು ಇದಕ್ಕೆ ಕಾರಣ.
ಇವತ್ತು ವಿಧಾನಸೌಧದಲ್ಲಿ ನಡೆದ ಸಂಪುಟ ಸಭೆಯ ಬಳಿಕ ಕಾನೂನು ಸಚಿವ ಮಾಧುಸ್ವಾಮಿ ಅವರು ಸುದ್ದಿಗೋಷ್ಠಿ ನಡೆಸಿದ್ರು. ಸುದ್ದಿಗೋಷ್ಠಿ ಮಧ್ಯೆ ಮಾಧುಸ್ವಾಮಿ ಅವರು ಮಾತನಾಡುತ್ತಿರುವಾಗ ಸ್ವಲ್ಪ ಕೆಮ್ಮಿದ್ರು. ಆಗ ತಾವೇ ಮುಂದಾಗಿ ತಾವು ಕೆಮ್ಮಿದ್ದಕ್ಕೆ ಸ್ಪಷ್ಟನೆಯನ್ನೂ ಅವರು ಕೊಟ್ಟಿದ್ದಾರೆ.
ನಾನು ಕೆಮ್ಮುತ್ತಿದ್ದೇನೆ. ಈಗಾಗಲೇ ಕೊರೊನಾ ವೈರಸ್ ಪರೀಕ್ಷೆಯನ್ನು ಮಾಡಿಸಿಕೊಂಡಿದ್ದೇನೆ. ನಿಮಗೆ ಯಾವುದೇ ಆತಂಕ ಬೇಡ. ಪರೀಕ್ಷೆಯಲ್ಲಿ ಕೊರೊನಾ ವೈರಸ್ ನೆಗೆಟಿವ್ ಬಂದಿದೆ. ನೀವು ಯಾರೂ ಹೆದರುವ ಅಗತ್ಯ ಇಲ್ಲ ಎಂದು ಮಾಧ್ಯಮ ಪ್ರತಿನಿಧಿಗಳಿಗೆ ಅವರು ತಮಾಷೆ ಮಾಡಿದ್ದಾರೆ.