ಹವ್ಯಕ ಸಮುದಾಯದ ಮೇಲಿನ ಅಭಿಮಾನದಿಂದ ಇಲ್ಲಿಗೆ ಬಂದಿದ್ದೇನೆ: ಪೇಜಾವರ ಶ್ರೀ
ಹವ್ಯಕರು ಇಂದು ಬೆಂಗಳೂರು ಅರಮನೆ ಮೈದಾನವನ್ನು ಬೆಳಗುತ್ತಿದ್ದಾರೆ
ಬೆಂಗಳೂರು, ಡಿ 29: ಹವ್ಯಕ ಸಮುದಾಯದ ಮೇಲಿನ ಅಭಿಮಾನದಿಂದ ಇಲ್ಲಿಗೆ ಬಂದಿದ್ದೇನೆ. ಎಲ್ಲೆಲ್ಲಿ ಬಿಕ್ಕಟ್ಟಿದೆಯೋ ಅಲ್ಲೆಲ್ಲ ಒಗ್ಗಟ್ಟಾಗಬೇಕು. ಇದು ನಮ್ಮ ಆಶಯ. ಹವ್ಯಕ - ಶಿವಳ್ಳಿ - ಕೋಟ ಎಂದು ಭಿನ್ನಾಭಿಪ್ರಾಯ ಸಲ್ಲ, ಎಲ್ಲರೂ ಒಗ್ಗಟ್ಟಾಗಬೇಕು ಎಂದು ಉಡುಪಿ ಪೇಜಾವರ ಮಠದ ವಿಶ್ವೇಶ್ವತೀರ್ಥ ಶ್ರೀಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಶನಿವಾರ (ಡಿ 29) ಎರಡನೇ ವಿಶ್ವ ಹವ್ಯಕ ಸಮ್ಮೇಳನದಲ್ಲಿ ಆಶೀರ್ವಚನ ನೀಡುತ್ತಾ ಪೇಜಾವರ ಶ್ರೀಗಳು, ಎಲ್ಲರೂ ಒಗ್ಗಟ್ಟಾಗಬೇಕು ಎನ್ನುವ ವಿಚಾರದಲ್ಲಿ, ಹವ್ಯಕ ಸಮಾಜದ ಸಂಘಟನೆಯನ್ನು ಸ್ವಾಗತಿಸುತ್ತೇನೆ. ಜಾತಿ ಉಪಜಾತಿಯ ಜೊತೆಗೆ ಸಮಗ್ರ ಹಿಂದೂ ಸಮಾಜದ ಬಗ್ಗೆ ಚಿಂತಿಸುವ ಪ್ರವೃತ್ತಿಯನ್ನು ನಾವು ಬೆಳೆಸಿಕೊಳ್ಳಬೇಕು. (ದ್ವಿತೀಯ ವಿಶ್ವ ಹವ್ಯಕ ಸಮ್ಮೇಳನಕ್ಕೆ ವೈಭವದ ಚಾಲನೆ)
ಹವ್ಯಕ ಸಮಾಜಕ್ಕೆ ಸೂರ್ಯ - ಚಂದ್ರರಂತೆ ಎರಡು ಗುರುಪೀಠಗಳಿವೆ. ರಾಮಚಂದ್ರಾಪುರ ಮಠದ ಶ್ರೀಗಳ ಜೊತೆಗೆ ಅವರ ಸಂನ್ಯಾಸ ಸ್ವೀಕಾರದ ಕ್ಷಣದಿಂದಲೂ ಅವರ ಜೊತೆ ನಾವಿದ್ದೇವೆ. ಅವರ ಜೊತೆ ಉತ್ತಮ ಬಾಂಧವ್ಯವನ್ನು ನಾವು ಹೊಂದಿದ್ದೇವೆ. ಬಾಲ್ಯದಿಂದಲೂ ಹವ್ಯಕ ಸಮಾಜದ ಜೊತೆ ಅವಿನಾಭಾವ ಸಂಬಂಧ ಇದೆ ಎಂದು ಶ್ರೀಗಳು ಈ ಸಂದರ್ಭದಲ್ಲಿ ಹೇಳಿದರು.
ಸಮ್ಮೇಳನದ ಕಾರ್ಯಕ್ರಮದಲ್ಲಿ ಸಾನ್ನಿಧ್ಯವಹಿಸಿ ಸಮಾಜವನ್ನು ಉದ್ದೇಶಿಸಿ ಮಾತನಾಡಿದ ರಾಮಚಂದ್ರಾಪುರ ಮಠದ ರಾಘವೇಶ್ವರ ಶ್ರೀಗಳು, ಒಬ್ಬೊಬ್ಬ ಹವ್ಯಕನೂ ಒಂದೊಂದು ದೀಪ ಇದ್ದಂತೆ, ಹವ್ಯಕತ್ವ ಎಂದರೆ ಬೆಳಕು. ಬಾಹುಬಲ, ಹಣಗಳು ಹವ್ಯಕತ್ವವಲ್ಲ, ಅರವಿನ ದೀಪದಂತಿರುವ ಹವ್ಯಕರು ಇಂದು ಅರಮನೆ ಮೈದಾನವನ್ನು ಬೆಳಗುತ್ತಿದ್ದಾರೆ. ಒಟ್ಟು ಹವ್ಯಕರು ಸಂಘಟಿತರಾಗಿ ಸಮಾವೇಶ ನಡೆದಿರುವುದು ಸಮಾಜಕ್ಕಷ್ಟೇ ಅಲ್ಲ, ದೇಶಕ್ಕೆ ಶೋಭೆ ಎಂದು ಅಭಿಪ್ರಾಯಪಟ್ಟರು. (ನಕ್ಕು ನಲಿಸುವ ಹವ್ಯಕ ಫ್ಯಾಷನ್ ಶೋ)
ಸಂಘಟನೆ ಉದ್ಧಾರದ ಹಾದಿಯಾದರೆ, ವಿಘಟನೆ ವಿನಾಶದ ಹಾದಿ. ಸಂಘಟನೆ ಹವ್ಯಕ ಮಹಾಸಭೆಯ ಉಸಿರಾಗಿರುವುದರಿಂದ ನಾವು ಹವ್ಯಕ ಮಹಾಸಭೆಯನ್ನು ಸಮರ್ಥಿಸಬೇಕು. ನಾವು ಸಂಘಟನೆಯ ಜೊತೆಗೋ? ವಿಘಟನೆಯ ಜೊತೆಗೋ? ಎಂದು ಪ್ರಶ್ನಿಸಿಕೊಳ್ಳಬೇಕು ಎಂದು ರಾಘವೇಶ್ವರಭಾರತೀ ಶ್ರೀಗಳು ಹೇಳಿದರು.
ಸಂಸ್ಕೃತ ವಿದ್ಯಾಲಯದಲ್ಲಿ ಹೆಚ್ಚಿನ ವಿದ್ಯಾರ್ಥಿಗಳು ಹವ್ಯಕರು
ನಮ್ಮ ಉಡುಪಿಯ ಸಂಸ್ಕೃತ ವಿದ್ಯಾಲಯದಲ್ಲಿ ಹೆಚ್ಚಿನ ವಿದ್ಯಾರ್ಥಿಗಳು ಹವ್ಯಕರೇ ಆಗಿರುತ್ತಾರೆ. ಹವ್ಯಕ ಸಮುದಾಯ ಬ್ರಾಹ್ಮಣ ಸಮುದಾಯದಲ್ಲೂ ಪ್ರತಿಭಾವಂತ ಸಮಾಜ. ಉನ್ನತ ಸಾಧನೆ ಮಾಡಿದ ಕೀರ್ತಿ ಈ ಸಮಾಜದ್ದು. ಯಕ್ಷಗಾನ, ಮಾಧ್ಯಮಗಳಲ್ಲಿ ಹವ್ಯಕ ಕೊಡುಗೆ ಅನುಪಮವಾದದ್ದು - ಪೇಜಾವರ ಶ್ರೀಗಳು.
ಅಖಿಲ ಹವ್ಯಕ ಮಹಾಸಭೆ
ರಾಮಚಂದ್ರಾಪುರ ಮಠ ಅಖಿಲ ಹವ್ಯಕ ಮಹಾಸಭೆಯ ಜೊತೆಗೆ ಸದಾ ಇದೆ. ಸಂಘಟನೆಗೆ ಬೆಂಬಲವಾಗಿ ಇರುತ್ತೇವೆ, ಆದರೆ ಪ್ರತಿಯಾಗಿ ಯಾವ ಫಲಪೇಕ್ಷೆಯೂ ಇಲ್ಲ ಹಾಗೂ ಷರತ್ತು ಇಲ್ಲ. ಪ್ರೀತಿ ಇರುವಲ್ಲಿ ಷರತ್ತು ಉದ್ಭವಿಸುವುದಿಲ್ಲ. ಮಹಾಸಭೆಯ ಸಂಘಟನೆಯಲ್ಲಿ ನಮಗೆ ಪ್ರೀತಿ ಇದೆ. ನಾವು ಸಂಘಟನೆಗೆ ಎಂದೂ ತೊಡಕಾಗುವುದಿಲ್ಲ, ಶಕ್ತಿಯಾಗಿ ಇರುತ್ತೇವೆ. ನಮಗೆ ಸ್ಥಾನಮಾನದ ಅಪೇಕ್ಷೆ ಇಲ್ಲ, ಗುರುವೇ ಸಣ್ಣವರಾದರೆ ಸಮಾಜ ದೊಡ್ಡದಾಗುವುದು ಹೇಗೆ? ಗುರುಗಳು ಎಂದೂ ಉದಾರವಾಗಿರಬೇಕು - ರಾಘವೇಶ್ವರ ಶ್ರೀಗಳು.
ಶ್ರೀಧರ್ ರಾವ್ ಮುಖ್ಯ ಅತಿಥಿ
ಧನಕನಕಗಳನ್ನು ತಿನ್ನಲು ಸಾಧ್ಯವಿಲ್ಲ. ಕೃಷಿಯಲ್ಲಿ ತೊಡಗಿಕೊಂಡ ಸಮಾಜ ಹವ್ಯಕ ಸಮಾಜ. ಪರೋಪಕಾರಾರ್ಥಂ ಇದಂ ಶರೀರಂ ಎಂಬಂತೆ ಸದಾ ಪರೋಪಕಾರದಲ್ಲಿ ಹಾಗೂ ಇತರ ವರ್ಗಗಳ ಬೆಳವಣಿಗೆ ಪೂರಕವಾಗಿರುವ ಹಿರಿಮೆ ಹವ್ಯಕರದ್ದು ಎಂದು ಅಭಿಪ್ರಾಯಪಟ್ಟರು - ನ್ಯಾಯಮೂರ್ತಿ ಶ್ರೀಧರ್ ರಾವ್.
ಉದ್ಯಮಿ ವಿಜಯ್ ಸಂಕೇಶ್ವರ
ಇಂದು ಪ್ರತಿಭಾ ಪಲಾಯನ ಹೆಚ್ಚಾಗುತ್ತಿದೆ, ವಿದೇಶದಲ್ಲಿ ನೆಲೆಸಿರುವ ಹವ್ಯಕರು ಈ ಕುರಿತು ಚಿಂತನೆ ನಡೆಸಬೇಕಿದ್ದು, ನಮ್ಮ ಸಂಸ್ಕೃತಿ ಸಂಪ್ರದಾಯಗಳನ್ನು ಉಳಿಸಿಬೆಳೆಸುವಲ್ಲಿ ಕಾರ್ಯಪ್ರವೃತ್ತರಾಗಬೇಕಿದೆ. ರಾಘವೇಶ್ವರ ಶ್ರೀಗಳ ಕಾರ್ಯಯೋಜನೆಗಳ ಕುರಿತು ಮೆಚ್ಚುಗೆ ವ್ಯಕ್ತಪಡಿಸಿ ಮಾತನಾಡಿ, ಗೋವು ಭಾರತದ ಸಂಪತ್ತು, ಅಂತಹ ಹಲವಾರು ಅಪರೂಪದ ಗೋತಳಿಗಳನ್ನು ಉಳಿಸುವ ಕಾಯಕದಲ್ಲಿ ಪೂಜ್ಯ ರಾಘವೇಶ್ವರ ಭಾರತೀ ಶ್ರೀಗಳು ನಿರತರಾಗಿದ್ದಾರೆ. ಹಾಗೆಯೇ ನಾವೂ ನಮ್ಮ ಭಾರತೀಯರ ಸಂಪತ್ತಾದ ನಮ್ಮ ಸಂಸ್ಕೃತಿಯನ್ನು ಸಂರಕ್ಷಿಸಿಕೊಳ್ಳಬೇಕಿದೆ - ಉದ್ಯಮಿ ವಿಜಯ್ ಸಂಕೇಶ್ವರ.
ಗಣ್ಯಾತಿ ಗಣ್ಯರು ಕಾರ್ಯಕ್ರಮಕ್ಕೆ ಸಾಕ್ಷಿ
ಮುಖಂಡರಾದ ಕೆ ಎಸ್ ಈಶ್ವರಪ್ಪ, ಸುರೇಶ್ ಕುಮಾರ್, ದಿನಕರ ಶೆಟ್ಟಿ, ಕರ್ನಾಟಕ ಬ್ಯಾಂಕ್ ನ ಸಿಇಓ ಮಹಾಬಲೇಶ್ವರ ಎಂ ಎಸ್, ಶ್ರೀ ಕುಮಾರ್ , ಡಾ. ವೀಣಾ ಬನ್ನಂಜೆ, ಕೊಂಕೋಡಿ ಪದ್ಮನಾಭ ಭಟ್, ಸತೀಶ್ಚಂದ್ ಎಸ್ ಆರ್, ವಿದ್ವಾನ್ ಉಮಾಕಾಂತ ಭಟ್, ವಿ. ಬಿ ಅರ್ತಿಕಜೆ ಸೇರಿಂದತೆ ಅನೇಕ ಗಣ್ಯಾತಿ ಗಣ್ಯರು ಕಾರ್ಯಕ್ರಮಕ್ಕೆ ಸಾಕ್ಷಿಯಾದರು. ಗೌರವಾಧ್ಯಕ್ಷರಾದ ಭೀಮೇಶ್ವರ ಜೋಷಿ ಅತಿಥಿಗಳಿಗೆ ಗೌರವ ಸಮರ್ಪಿಸಿದರು, ಅಧ್ಯಕ್ಷರಾದ ಡಾ ಗಿರಿಧರ್ ಕಜೆ ಸ್ವಾಗತಿಸಿದರು.
ಹವ್ಯಕ ಕೃಷಿರತ್ನ ಪ್ರಶಸ್ತಿ
ಕಾರ್ಯಕ್ರಮ ಆರಂಭಕ್ಕೂ ಮುನ್ನ ಸಾಮೂಹಿಕ ಭಗವದ್ ಗೀತಾ ಪಠಣ ನಡೆಯಿತು, ಹವ್ಯಕ ಕಿರುತೆರೆ - ಹಿರಿತೆರೆ ಕಲಾವಿದರ ಕೂಡುವಿಕೆಯೊಂದಿಗೆ ನಡೆದ "ಅಭಿನಯ ರಂಗ" ಜನಮನಸೆಳೆಯಿತು. ಸಂಜೆ ಖ್ಯಾತ ಕಲಾವಿದರ ಕೂಡುವಿಕೆಯೊಂದಿಗೆ ತೆಂಕು ಹಾಗೂ ಬಡಗು ಶೈಲಿಗಳ "ಯಕ್ಷ ನೃತ್ಯ ವೈಭವ" ಯಕ್ಷಗಾನ ಪ್ರಿಯರನ್ನು ರಂಜಿಸಿತು. ಬೆಂಗಳೂರಿಗರು ಹವ್ಯಕ ಪಾಕೋತ್ಸವ ಹಾಗೂ ಆಲೆಮನೆಗಳನ್ನು ಆಸ್ವಾದಿಸಿದರು. ಹೆಗಡೆ ಸುಬ್ಬರಾವ್, ಗಜಾನನ ಹೆಗಡೆ, ಎಂ ಜಿ ಶ್ರೀಪಾದ್ ರಾವ್,ರಾಮಚಂದ್ರ ಗಣೇಶ್ ಹೆಗಡೆ, ಶ್ರೀಮತಿ ಮಧುಮತಿ ಸೇರಿದಂತೆ 75 ಕೃಷಿಕರಿಗೆ "ಹವ್ಯಕ ಕೃಷಿರತ್ನ" ಪ್ರಶಸ್ತಿ ನೀಡಿ ಗೌರವಿಸಲಾಯಿತು.