ಸಂತೋಷ್ ಲಾಡ್ ಬಗ್ಗೆ ಮೌನ ಮುರಿದ ರಾಜ್ಯಪಾಲರು
ಬೆಂಗಳೂರಿನಲ್ಲಿ ಸೋಮವಾರ ಮಾಧ್ಯಮಗಳೊಂದಿಗೆ ಮಾತನಾಡಿದ ರಾಜ್ಯಪಾಲ ಎಚ್.ಆರ್.ಭಾರದ್ವಾಜ್, ಸಂತೋಷ್ ಲಾಡ್ ವಿರುದ್ಧ ನನಗೆ ದೂರುಗಳು ಬಂದಿವೆ. ಅವೆಲ್ಲವುಗಳನ್ನೂ ಮುಖ್ಯಮಂತ್ರಿಗೆ ರವಾನಿಸಿದ್ದೇನೆ. ಆದರೆ, ಸಂಪುಟದಿಂದ ಕೈಬಿಡುವುದು ಮುಖ್ಯಮಂತ್ರಿಗಳಿಗೆ ಬಿಟ್ಟ ವಿಚಾರ ಎಂದರು.
ಸಂತೋಷ್ ಲಾಡ್ ವಿರುದ್ಧ ಕೇಳಿ ಬರುತ್ತಿರುವ ಆರೋಪಗಳು ಸದ್ಯ ರಾಜಕೀಯ ಸ್ವರೂಪ ಪಡೆದುಕೊಂಡಿವೆ. ನಾನು ಈ ಕುರಿತು ಪ್ರತಿಕ್ರಿಯೆ ನೀಡಿದರೆ, ರಾಜಕೀಯ ಮಾಡಿದಂತಾಗುತ್ತದೆ. ಆದ್ದರಿಂದ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಹೇಳಿದರು.
ಸಂತೋಷ್ ಲಾಡ್ ವಿರುದ್ಧ ನನಗೆ ಬಂದ ದೂರುಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ರವಾನಿಸಿದ್ದೇನೆ. ಸಚಿವ ಸಂಪುಟದಿಂದ ಲಾಡ್ ಅವರನ್ನು ಕೈಬಿಡುವ ಬಗ್ಗೆ ಮುಖ್ಯಮಂತ್ರಿಗಳು ಅಂತಿಮ ನಿರ್ಧಾರ ತೆಗೆದುಕೊಳ್ಳಬೇಕು ಎಂದರು.
ಹಿಂದೆಯೂ ಬಂದಿತ್ತು : ಹಿಂದೆ ಬಿಜೆಪಿ ಸರ್ಕಾರ ರಾಜ್ಯದಲ್ಲಿ ಆಡಳಿತ ನಡೆಸುವಾಗ ಜನಾರ್ಧನ ರೆಡ್ಡಿ ವಿರುದ್ಧವೂ ದೂರು ಬಂದಿದ್ದವು. ಆ ವಿಚಾರವಾಗಿ ಕ್ರಮ ಕೈಗೊಳ್ಳುವಂತೆ ಅಂದಿನ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಸೂಚಿಸಿದ್ದೆ. ಆದರೆ ಯಡಿಯೂರಪ್ಪ ಯಾವ ಕ್ರಮಗಳನ್ನು ಕೈಗೊಳ್ಳಲಿಲ್ಲ. ಮುಂದೆ ಸ್ವತಃ ಸುಪ್ರಿಂಕೋರ್ಟ್ ಆ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಿತು ಎಂದು ರಾಜ್ಯಪಾಲರು ಹೇಳಿದರು.
ಸಿಎಂ ಕ್ಲೀನ್ ಚಿಟ್ : ಸಚಿವ ಸಂತೋಷ್ ಲಾಡ್ ಅವರು ಅಕ್ರಮ ಗಣಿಗಾರಿಕೆಯಲ್ಲಿ ಪಾಲ್ಗೊಂಡಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಮತ್ತೊಮ್ಮೆ ಕ್ಲೀನ್ ಚಿಟ್ ನೀಡಿದ್ದಾರೆ. ಸೋಮವಾರ ಮೈಸೂರು ಹೆಲಿಪ್ಯಾಡ್ ನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸರ್ಕಾರ ಅಕ್ರಮ ಗಣಿಗಾರಿಕೆಗೆ ಅವಕಾಶ ನೀಡುವುದಿಲ್ಲ ಎಂದರು.
ಸುಪ್ರೀಂ ಕೋರ್ಟ್ 52 ಗಣಿ ಕಂಪನಿಗಳನ್ನು ಸಿ ಕೆಟಗರಿಗೆ ಸೇರಿಸಿದೆ. ವಿ.ಎಸ್.ಲಾಡ್, ವಿ.ಎಸ್.ಲಾಡ್ ಅಂಡ್ ಸನ್ಸ್ ಎರಡು ಕಂಪನಿಗಳು ಈ ಪಟ್ಟಿಯಲ್ಲಿವೆ. ವಿ.ಎಸ್.ಲಾಡ್ ಅಂಡ್ ಸನ್ಸ್ ಕಂಪನಿಯಲ್ಲಿ ಸಚಿವ ಸಂತೋಷ್ ಲಾಡ್ ಪಾಲುದಾರರು. ಆದರೆ, ಈ ಕಂಪನಿ ಅಕ್ರಮ ಗಣಿಗಾರಿಕೆ ಮಾಡಿದೆ ಎಂದು ಸಿಇಸಿ ಅಥವಾ ಲೋಕಾಯುಕ್ತ ವರದಿಯಲ್ಲಿ ಉಲ್ಲೇಖಿಸಿಲ್ಲ ಎಂದು ತಿಳಿಸಿದರು.
ಸಂತೋಷ್ ಲಾಡ್ ರಾಜೀನಾಮೆಗೆ ಸಾಮಾಜಿಕ ಕಾರ್ಯಕರ್ತ ಎಸ್.ಆರ್.ಹಿರೇಮಠ್, ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ, ಪ್ರತಿಪಕ್ಷ ಬಿಜೆಪಿ ಒತ್ತಾಯ ಮಾಡುತ್ತಿವೆ. ಆದರೆ, ಸಿಎಂ ಸಿದ್ದರಾಮಯ್ಯ ಮಾತ್ರ ಲಾಡ್ ಅವರನ್ನು ಸಮರ್ಥನೆ ಮಾಡಿಕೊಳ್ಳುತ್ತಿದ್ದಾರೆ.