"ನಾನಂತೂ ಸಚಿವ ಸ್ಥಾನ ಕೇಳಿಲ್ಲ, ಖಾತೆ ಬಗ್ಗೆ ಮಾತೇ ಇಲ್ಲ"
ಬೆಂಗಳೂರು, ಡಿಸೆಂಬರ್.12: ಉಪ ಚುನಾವಣೆಯಲ್ಲಿ ದಿಗ್ವಿಜಯ ಸಾಧಿಸಿದ ಬಿಜೆಪಿಯಲ್ಲಿ ಈಗ ಸಂಪುಟ ವಿಸ್ತರಣೆ, ಸಚಿವ ಸ್ಥಾನ ಹಂಚಿಕೆ ಬಗ್ಗೆಯೇ ಚರ್ಚೆ. ಯಾರಿಗೆ ಯಾವ ಸ್ಥಾನ ನೀಡಬೇಕು. ಯಾವ ಸಚಿವರಿಗೆ ಯಾವ ಖಾತೆ ನೀಡಬೇಕು. ಇದೇ ವಿಚಾರ ಚರ್ಚೆ ಆಗುತ್ತಿದೆ.
ಇದರ ಮಧ್ಯೆ ಮಾತನಾಡಿರುವ ಯಶವಂತಪುರ ವಿಧಾನಸಭಾ ಕ್ಷೇತ್ರದ ಶಾಸಕ ಎಸ್.ಟಿ.ಸೋಮಶೇಖರ್, ಸಂಪುಟ ವಿಸ್ತರಣೆ ಬಗ್ಗೆ ತೀರ್ಮಾನ ಕೈಗೊಳ್ಳುವುದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರಿಗೆ ಬಿಟ್ಟ ವಿಚಾರ ಎಂದು ಹೇಳಿದ್ದಾರೆ.
ಯಡಿಯೂರಪ್ಪ ಸಂಪುಟ ವಿಸ್ತರಣೆ, ಯಾರಿಗೆ ಯಾವ ಖಾತೆ ಸಿಗಲಿದೆ?
ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಇಷ್ಟೊತ್ತಿಗಾಗಲೇ ರಾಜ್ಯದಲ್ಲಿ ಸಚಿವ ಸಂಪುಟ ವಿಸ್ತರಣೆ ಆಗಬೇಕಿತ್ತು. ಆದರೆ, ಮುಖ್ಯಮಂತ್ರಿ ಬಿಎಸ್ ವೈ ಅದೇನು ತೀರ್ಮಾನ ಮಾಡಿದ್ದಾರೋ ಏನೋ ನನಗಂತೂ ಗೊತ್ತಿಲ್ಲ. ಯಾವಾಗ ಸಂಪುಟ ವಿಸ್ತರಣೆ ಮಾಡುತ್ತಾರೆ ಎಂಬ ಬಗ್ಗೆಯೂ ಮಾಹಿತಿಯಿಲ್ಲ ಎಂದು ಎಸ್.ಟಿ.ಸೋಮಶೇಖರ್ ಹೇಳಿದ್ದಾರೆ.
ಸಚಿವಗಿರಿಗೆ ಡಿಮ್ಯಾಂಡ್ ಇಲ್ಲ
ವಿಧಾನಸೌಧದಲ್ಲಿ ಮಾತನಾಡಿರುವ ಶಾಸಕ ಎಸ್.ಟಿ.ಸೋಮಶೇಖರ್, ತಾವು ಯಾವುದೇ ಸಚಿವ ಸ್ಥಾನಕ್ಕಾಗಿ ಬೇಡಿಕೆ ಇಟ್ಟಿಲ್ಲ ಎಂದು ಹೇಳಿದರು. ರಾಜ್ಯದಲ್ಲಿ ಯಾವಾಗ ಸಚಿವ ಸಂಪುಟ ವಿಸ್ತರಣೆ ಮಾಡಬೇಕು ಎಂಬುದರ ಬಗ್ಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತೀರ್ಮಾನ ಕೈಗೊಳ್ಳಲಿದ್ದಾರೆ.
ಖಾತೆಯ ಬಗ್ಗೆ ಈಗ್ಯಾಕೆ ಮಾತು ಎಂದ ಶಾಸಕರು
ನಾನಂತೂ ಸಚಿವ ಸ್ಥಾನ ನೀಡುವಂತೆ ಯಾವುದೇ ರೀತಿಯ ಬೇಡಿಕೆಗಳನ್ನು ಇಟ್ಟಿಲ್ಲ. ಜೊತೆಗೆ ಇಂಥದ್ದೇ ಖಾತೆಯನ್ನು ನೀಡಬೇಕು ಎಂದೂ ಡಿಮ್ಯಾಂಡ್ ಮಾಡಿಲ್ಲ. ಹೀಗಾಗಿ ಹೆಚ್ಚಾಗಿ ತಲೆ ಕೆಡಿಸಿಕೊಳ್ಳುವ ಅಗತ್ಯವಿಲ್ಲ ಎಂದು ಶಾಸಕ ಎಸ್.ಟಿ.ಸೋಮಶೇಖರ್ ಹೇಳಿದ್ದಾರೆ.
ಮುಖ್ಯಮಂತ್ರಿ ತೀರ್ಮಾನವೇನೋ ನನಗೆ ತಿಳಿದಿಲ್ಲ
ಬಿಜೆಪಿ ಸರ್ಕಾರದಲ್ಲಿ ಇಷ್ಟೊತ್ತಿಗಾಗಲೇ ಸಂಪುಟ ವಿಸ್ತರಣೆ ಆಗಬೇಕಿತ್ತು. ಆದರೆ, ಸಂಪುಟ ವಿಸ್ತರಣೆ ಯಾವಾಗ ಎಂಬುದರ ಬಗ್ಗೆ ಮುಖ್ಯಮಂತ್ರಿ ಯಡಿಯೂರಪ್ಪ ನಿರ್ಧರಿಸಲಿದ್ದಾರೆ. ಸದ್ಯಕ್ಕೆ ಅವರು ಏನು ತೀರ್ಮಾನ ಕೈಗೊಂಡಿದ್ದಾರೆ ಎಂದು ನಮಗಂತೂ ಮಾಹಿತಿಯಿಲ್ಲ ಎಂದು ಹೇಳಿದರು.
ಶಾಸಕರಾಗಿ ಪ್ರಮಾಣವಚನ ಸ್ವೀಕರಿಸುವ ಬಗ್ಗೆ ಚರ್ಚೆ
ಡಿಸೆಂಬರ್.13ರ ಶುಕ್ರವಾರ ಮಧ್ಯಾಹ್ನ12.30ಕ್ಕೆ ನಾವು ಶಾಸಕರಾಗಿ ಪ್ರಮಾಣವಚನ ತೆಗೆದುಕೊಳ್ಳಬೇಕು ಎಂದು ಎಸ್.ಟಿ.ಸೋಮಶೇಖರ್ ಹೇಳಿದರು. ಈ ಕುರಿತು ಚರ್ಚೆ ನಡೆಸಲು ಸ್ಪೀಕರ್ ಭೇಟಿ ಮಾಡಲು ಬಂದಿದ್ದೇವೆ. ಶುಕ್ರವಾರದ ಪ್ರಮಾಣವಚನ ಸ್ವೀಕಾರದ ಬಗ್ಗೆ ಸ್ಪೀಕರ್ ಏನು ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂದು ನೋಡೋಣ ಎಂದು ಹೇಳಿದ್ದಾರೆ.