ನಾನು ಬಸವಣ್ಣನವರ ಅನುಯಾಯಿ - ಅಭಿನಂದನಾ ಸಮಾವೇಶದಲ್ಲಿ ಸಿಎಂ
ಬೆಂಗಳೂರು, ಜೂನ್ 14: "ನನ್ನನ್ನು ಆ ಜಾತಿ ವಿರೋಧಿ ಈ ಜಾತಿ ವಿರೋಧಿ ಎನ್ನುತ್ತಾರೆ. ಆದರೆ ನಾನು ಬಸವಣ್ಣನವರ ಅನುಯಾಯಿ. ನಾನು ಯಾವುದೇ ಜಾತಿಯ ವಿರೋಧಿಯಲ್ಲ," ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಅರಮನೆ ಮೈದಾನದ ಕೃಷ್ಣ ವಿಹಾರ್ ಆವರಣದಲ್ಲಿ 'ಅಖಿಲ ಭಾರತ ವೀರಶೈವ ಮಹಾಸಭಾ' ಆಯೋಜಿಸಿದ್ದ ಮುಖ್ಯಮಂತ್ರಿಗಳಿಗೆ 'ಅಭಿನಂದನೆ ಸಮಾರಂಭ' ಉದ್ದೇಶಿಸಿ ಸಿದ್ದರಾಮಯ್ಯ ಈ ಮಾತುಗಳನ್ನು ಹೇಳಿದ್ದಾರೆ.
ಸಮಾರಂಭದಲ್ಲಿ ಮಾತನಾಡಿದ ಸಿದ್ದರಾಮಯ್ಯ, "ನನ್ನನ್ನು ಆ ಜಾತಿ ವಿರೋಧಿ ಈ ಜಾತಿ ವಿರೋಧಿ ಎನ್ನುತ್ತಾರೆ. ಕೆಲ ರಾಜಕೀಯ ವಿರೋಧಿಗಳು ಈ ರೀತಿ ಬಿಂಬಿಸುತ್ತಾರೆ. ನಾನು ಹುಟ್ಟಿನಿಂದ ಯಾವುದೋ ಜಾತಿಯಲ್ಲಿ ಹುಟ್ಟಿರಬಹುದು. ನಾನು ಅರ್ಜಿ ಹಾಕಿಕೊಂಡು ಹುಟ್ಟಿಲ್ಲ. ನಾನು ಯಾವುದೇ ಜಾತಿಯ ವಿರೋಧಿಯೂ ಅಲ್ಲ. ಜಾತಿ, ಶ್ರೇಣಿಕೃತ ಸಮಾಜ ನಾಶವಾಗಬೇಕು," ಎಂದು ಮುಖ್ಯಮಂತ್ರಿ ಹೇಳಿದರು.
ಮೂಢನಂಬಿಕೆಯನ್ನು ಮತ್ತೆ ಪ್ರಸ್ತಾಪಿಸಿದ ಸಿದ್ದರಾಮಯ್ಯ, "ಮೂಢನಂಬಿಕೆಗಳು ಹೋಗಬೇಕು. ಚಾಮರಾಜನಗರಕ್ಕೆ ಹೋದರೆ ಸಿಎಂ ಕುರ್ವಿ ಹೋಗುತ್ತದೆ ಅಂದರು. ಆದರೆ ನಾನು ಮುಖ್ಯಮಂತ್ರಿಯಾಗಿ 11 ಬಾರಿ ಹೋಗಿ ಬಂದೆ. ಆದರೆ ಇನ್ನೂ ಮುಖ್ಯಮಂತ್ರಿಯಾಗಿದ್ದೇನೆ," ಎಂದು ಹೇಳಿದರು.
ಹಲವು ಲಿಂಗಾಯುತ ಮಠಗಳ ಮಠಾಧೀಶರು, ಜನಪ್ರತಿನಿಧಿಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ.