ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಡಿಕೆಶಿ ಆಯ್ಕೆ: ಅಚ್ಚರಿ ಆಯ್ತಂತೆ ಈ ನಾಯಕನಿಗೆ
ಕೆಪಿಸಿಸಿ ನೂತನ ಅಧ್ಯಕ್ಷರಾಗಿ ಮಾಜಿ ಸಚಿವ ಡಿಕೆ ಶಿವಕುಮಾರ್ ಆಯ್ಕೆಯಾಗಿದ್ದಾರೆ. ಕಾಂಗ್ರಸ್ ಪಕ್ಷದ ಚುಕ್ಕಾಣಿ ಹಿಡಿಯುತ್ತಿದ್ದ ಹಿರಿಯ ನಾಯಕರ ಆಶೀರ್ವಾದ ಪಡೆದ ಡಿಕೆಶಿ 'ನಾನು ಈಗಲೂ ಪಕ್ಷದ ಕಾರ್ಯಕರ್ತ, ಕಾರ್ಯಕರ್ತರ ಧ್ವನಿಯಾಗಿ ಈ ರಾಜ್ಯ ಸೇವೆ ಮಾಡಬೇಕು ಎಂಬ ಆಸೆ' ಎಂದು ಸಂತಸ ವ್ಯಕ್ತಪಡಿಸಿದ್ದರು.
ಆದರೆ, ಡಿಕೆ ಶಿವಕುಮಾರ್ ಅವರನ್ನು ಕೆಪಿಸಿಸಿ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿರುವುದು ಅನೇಕರಿಗೆ ಬೇಸರ ತರಿಸಿದೆ. ಡಿಕೆಶಿ ಆಯ್ಕೆಗೆ ತಮ್ಮ ಪಕ್ಷದಲ್ಲೇ ವಿರೋಧ ಇದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆಎಸ್ ಈಶ್ವರಪ್ಪ ಅಭಿಪ್ರಾಯ ಪಟ್ಟಿದ್ದಾರೆ.
ಕೆಪಿಸಿಸಿ ಅಧ್ಯಕ್ಷರಾಗಿ ಡಿ. ಕೆ. ಶಿವಕುಮಾರ್ ನೇಮಕ
ಇಂದು ವಿಧಾನಸೌಧದಲ್ಲಿ ಈ ಬಗ್ಗೆ ಮಾತನಾಡಿದ ಈಶ್ವರಪ್ಪ 'ಡಿಕೆ ಶಿವಕುಮಾರ್ ಈ ಹಿಂದೆ ಅಧಿಕಾರದಲ್ಲಿದ್ದಾಗ ಏನೆಲ್ಲಾ ಆಗಿದೆ ಎಂಬುದು ತಿಳಿದಿದೆ. ಅವರ ಪಕ್ಷದ ನಾಯಕ ನಡುವೆ ಅಧ್ಯಕ್ಷರಾಗಿವುದು ಮತ್ತೊಮ್ಮೆ ಪಕ್ಷದಲ್ಲಿ ಗುಂಪುಗಾರಿಕೆ ಹೊರಬಲಿದೆ' ಎಂದು ಭವಿಷ್ಯ ನುಡಿದಿದ್ದಾರೆ.
'ಡಿಕೆ ಶಿವಕುಮಾರ್ ಪಕ್ಷದಲ್ಲಿ ಹಿಡಿತ ಸಾಧಿಸಲು ಹವಣಿಸುತ್ತಿದ್ದಾರೆ, ಸಿದ್ದರಾಮಯ್ಯ ಮತ್ತು ಇತರೆ ಗುಂಪುಗಳು ಪಕ್ಷದಲ್ಲಿ ಮುಂದುವರಿಯಲು ಬಿಡುವುದಿಲ್ಲ. ಇದರಿಂದ ಕಾಂಗ್ರೆಸ್ ವಿಭಜನೆಯಾಗುತ್ತೆ. ಇದರಲ್ಲಿ ಯಾವುದೇ ಅನುಮಾನವಿಲ್ಲ' ಎಂದಿದ್ದಾರೆ.
ಕೆಪಿಸಿಸಿಯ ನೂತನ ಸಾರಥಿಗೆ ಅಭಿನಂದನೆಗಳ ಮಹಾಪೂರ
ಕಾಂಗ್ರೆಸ್ನಲ್ಲಿ ಎಲ್ಲವೂ ಸರಿಯಾಗಿದೆ ಎಂದು ಹೇಳಲು ಸಾಧ್ಯವಿಲ್ಲ. ಡಿಕೆ ಶಿವಕುಮಾರ್ ಆಯ್ಕೆ ವಿರೋಧಿಸುವ ನಾಯಕರು ಕಾಂಗ್ರೆಸ್ನಲ್ಲಿದ್ದಾರೆ. ಸ್ವತಃ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೂ ಡಿಕೆಶಿ ಆಯ್ಕೆ ತೃಪ್ತಿ ತಂದಿಲ್ಲ ಎನ್ನುವ ಮಾತಿದೆ. ಸದ್ಯಕ್ಕೆ ಕೆಪಿಸಿಸಿ ಸ್ಥಾನ ಕೊಟ್ಟಾಗಿದೆ. ಆದರೆ ಮುಂದಿನ ದಿನದಲ್ಲಿ ಏನೆಲ್ಲಾ ಬೆಳವಣಿಗೆ ಆಗಬಹುದು ಎಂದು ಕಾದುನೋಡಬೇಕಿದೆ.