ಎಂಟಿಬಿ ಸೋಲಿಗೆ ನಾನೇ ಕಾರಣ, ನನ್ನ ತಂದೆಯಲ್ಲ: ಶರತ್ ಬಚ್ಚೇಗೌಡ
ಬೆಂಗಳೂರು, ಡಿಸೆಂಬರ್ 19: ಹೊಸಕೋಟೆ ವಿಧಾನಸಭಾ ಉಪ ಚುನಾವಣೆಯಲ್ಲಿ ಎಂಟಿಬಿ ನಾಗರಾಜ್ ಅವರ ಸೋಲಿಗೆ ನಾನೇ ಕಾರಣ ಹೊರತು, ನನ್ನ ತಂದೆ ಬಿ.ಎನ್,ಬಚ್ಚೇಗೌಡ ಕಾರಣರಲ್ಲ. ಹೀಗಾಗಿ ಅವರ ಮೇಲೆ ಪಕ್ಷದ ಶಿಸ್ತು ಕ್ರಮ ಒಳಪಡಲ್ಲ ಎಂದು ಹೊಸಕೋಟೆ ಶಾಸಕ ಶರತ್ ಬಚ್ಚೇಗೌಡ ಹೇಳಿದ್ದಾರೆ.
ಉಪ ಚುನಾವಣೆಯಲ್ಲಿ ಬಿಜೆಪಿ ಪಕ್ಷದ ಶಿಸ್ತು, ಸೂಚನೆಗಳನ್ನು ಉಲ್ಲಂಘಿಸಿರುವ ಆರೋಪ ಚಿಕ್ಕಬಳ್ಳಾಪುರ ಸಂಸದ ಬಿ.ಎನ್.ಬಚ್ಚೇಗೌಡರ ಮೇಲೆ ಇದೆ. ಈಗ ಅವರ ವಿರುದ್ದ ಶಿಸ್ತು ಕ್ರಮಕ್ಕೆ ಸಂಬಂಧಿಸಿದಂತೆ ಬಿಜೆಪಿ ಉಚ್ಚಾಟಿತಗೊಂಡಿರುವ ಶರತ್ ಬಚ್ಚೇಗೌಡ ಅವರು ಹೊಸ ವಾದ ಮುಂದಿಟ್ಟಿದ್ದಾರೆ.
ಕಾಂಗ್ರೆಸ್ ನಾಯಕರ ಬಗ್ಗೆ ಎಂಟಿಬಿ ನಾಗರಾಜ್ ಸ್ಫೋಟಕ ಹೇಳಿಕೆ!
ಹೊಸಕೋಟೆ ಮತ್ತು ಚಿಕ್ಕಬಳ್ಳಾಪುರ ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರ ಮಾಡಲು ಪಕ್ಷ ಸೂಚಿಸಿತ್ತು. ಅದಲ್ಲದೇ ಚಿಕ್ಕಬಳ್ಳಾಪುರ ಕ್ಷೇತ್ರದ ಉಸ್ತುವಾರಿಯನ್ನೂ ವಹಿಸಲಾಗಿತ್ತು. ಆದರೆ ಬಚ್ಚೇಗೌಡ ಅವರು ಎರಡೂ ಕ್ಷೇತ್ರಗಳಲ್ಲಿ ಒಂದು ದಿನವೂ ಪ್ರಚಾರದಲ್ಲಿ ಭಾಗವಹಿಸಲಿಲ್ಲ.
ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಶರತ್ ಗೆಲುವು
ಬಿಜೆಪಿ ಪಕ್ಷದ ಅಭ್ಯರ್ಥಿಗಳ ಪರವಾಗಿ ಒಂದು ಹೇಳಿಕೆಯನ್ನೂ ಕೊಡಲಿಲ್ಲ. ಇಡೀ ಉಪ ಚುನಾವಣೆ ಪ್ರಕ್ರಿಯೆ ಮುಗಿಯುವವರೆಗೆ ಎರಡೂ ಕ್ಷೇತ್ರಗಳಿಂದ ಅಂತರ ಕಾಯ್ದುಕೊಂಡಿದ್ದರು. ಹೊಸಕೋಟೆವಿರಲಿ, ಚಿಕ್ಕಬಳ್ಳಾಪುರ ಕ್ಷೇತ್ರಕ್ಕೂ ಹೋಗದಿರುವುದು ಪಕ್ಷದ ನಾಯಕರ ಸಿಟ್ಟಿಗೆ ಕಾರಣವಾಗಿದೆ.
ಹೊಸಕೋಟೆ ಕ್ಷೇತ್ರದಲ್ಲಿ ಸಂಸದ ಬಿ.ಎನ್.ಬಚ್ಚೇಗೌಡ ಅವರ ಪುತ್ರರಾಗಿರುವ ಶರತ್ ಬಚ್ಚೇಗೌಡ ಅವರು ಬಿಜೆಪಿ ಅಭ್ಯರ್ಥಿ ಎಂಟಿಬಿ ನಾಗರಾಜ್ ವಿರುದ್ದ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆದ್ದಿದ್ದರು.
ನನ್ನ ಸೋಲಿಗೆ ಕಾರಣ ಬಚ್ಚೇಗೌಡ: ಎಂಟಿಬಿ
ಬಿ,ಎನ್.ಬಚ್ಚೇಗೌಡ ಅವರು ತಮ್ಮ ಪುತ್ರನಿಗೆ ಬಿಜೆಪಿ ಪಕ್ಷದ ಟಿಕೆಟ್ ನಿರಾಕರಿಸಿದ ಹಿನ್ನೆಲೆಯಲ್ಲಿ ಅಸಮಾಧಾನಗೊಂಡಿದ್ದರು ಮತ್ತು ಪಕ್ಷದ ಅಭ್ಯರ್ಥಿ ಪರವಾಗಿ ಪ್ರಚಾರಕ್ಕೂ ಹೋಗಿರಲಿಲ್ಲ. ಎಂಟಿಬಿ ನಾಗರಾಜ್ ಅವರನ್ನು ಪಕ್ಷಕ್ಕೆ ಸೇರ್ಪಡೆಗೊಳಿಸಿಕೊಂಡಿದ್ದು ಬಚ್ಚೇಗೌಡರಿಗೆ ಇಷ್ಟವಿರಲಿಲ್ಲ.
ಗೇಮ್ ಆಡ್ತಿರೋದು ನಾವಲ್ಲ, ಎಂಟಿಬಿ ಮತ್ತವರ ಮಗ: ಶರತ್ ಬಚ್ಚೇಗೌಡ
ಉಪ ಚುನಾವಣೆಯಲ್ಲಿ ಸೋಲಿನ ನಂತರ ಎಂಟಿಬಿ ನಾಗರಾಜ್ ಅವರು, ಬಚ್ಚೇಗೌಡರೇ ನನ್ನ ಸೋಲಿಗೆ ನೇರ ಕಾರಣ ಎಂದು ಸಿಎಂ ಬಿ.ಎಸ್.ಯಡಿಯೂರಪ್ಪ ಅವರಿಗೆ ದೂರು ಕೊಟ್ಟಿದ್ದರು. ಆದರೂ ಬಚ್ಚೇಗೌಡರ ವಿರುದ್ದ ಕ್ರಮ ಕೈಗೊಳ್ಳಲು ಬಿಜೆಪಿ ನಾಯಕರು ಮುಂದಾಗಿಲ್ಲ.
ಸ್ವಾಭಿಮಾನಕ್ಕೆ ಮತದಾರರ ಮಣೆ ಹಾಕಿದ್ದಾರೆ
ಶರತ್ ಬಚ್ಚೇಗೌಡ ಅವರು ತಂದೆಯ ವಿರುದ್ದ ಶಿಸ್ತು ಕ್ರಮ ಕೈಗೊಳ್ಳಬಾರದು ಎಂದು ಹೇಳಿದ್ದಾರೆ. ಎಂಟಿಬಿ ನಾಗರಾಜ್ ಸೋಲಿಗೆ ನಮ್ಮ ತಂದೆ ಕಾರಣವಲ್ಲ, ಯಾಕೆಂದರೆ ಅವರು ನನ್ನ ಪರವಾಗಿಯೂ ಅವರು ಪ್ರಚಾರ ಮಾಡಿಲ್ಲ, ಎಂಟಿಬಿ ವಿರುದ್ದವಾಗಿಯೂ ಮಾತನಾಡಿಲ್ಲ ಎಂದಿದ್ದಾರೆ.
ಹೊಸಕೋಟೆ ಕ್ಷೇತ್ರದ ಮತದಾರರು ಸ್ವಾಭಿಮಾನಕ್ಕೆ ಮನ್ನಣೆ ನೀಡಿ ನನಗೆ ಮತ ಹಾಕಿದ್ದಾರೆ. ಹೀಗಾಗಿ ನಾನು ಗೆಲುವು ಸಾಧಿಸಿದ್ದೇನೆ. ಆದ್ದರಿಂದ ಎಂಟಿಬಿ ಸೋಲಿಗೆ ನಾನೇ ಕಾರಣ ಹೊರತು ನಮ್ಮ ತಂದೆಯಲ್ಲ ಎಂದು ಸ್ಪಷ್ಟನೆ ಕೊಟ್ಟಿದ್ದಾರೆ.
ಇನ್ನೂ ಬಚ್ಚೇಗೌಡರ ವಿರುದ್ದ ಕ್ರಮಕೈಗೊಳ್ಳದ ಬಿಜೆಪಿ
ಹೊಸಕೋಟೆಯಲ್ಲಿ ನಮ್ಮ ತಂದೆ ಬಿಜೆಪಿ ಪರ ಕೆಲಸ ಮಾಡದಿದ್ದಕ್ಕೆ ಎಂಟಿಬಿ ನಾಗರಾಜ್ ಸೋತಿದ್ದಾರೆ ಅನ್ನುವುದಾದರೆ ಚಿಕ್ಕಬಳ್ಳಾಪುರದಲ್ಲೂ ಬಿಜೆಪಿ ಅಭ್ಯರ್ಥಿ ಸೋಲಬೇಕಿತ್ತು. ಅಲ್ಲಿ ಗೆದ್ದಿಲ್ಲವೇ? ಎಂದು ಪ್ರಶ್ನಿಸಿದ್ದಾರೆ.
ಚಿಕ್ಕಬಳ್ಳಾಪುರದಲ್ಲಿ ಸುಧಾಕರ್ ಅವರು ಸ್ವಂತ ವರ್ಚಸ್ಸಿನಿಂದ ಗೆದ್ದಿದ್ದರೆ, ಎಂಟಿಬಿಗೂ ಅಷ್ಟೇ ವರ್ಚಸ್ಸು ಇತ್ತು, ಗೆಲ್ಲಬಹುದಿತ್ತಲ್ಲವೇ? ಎಂದಿದ್ದಾರೆ. ಈ ಮಾತನ್ನು ಬಿಜೆಪಿ ಕೆಲ ನಾಯಕರು ಒಪ್ಪಿಕೊಂಡಿದ್ದಾರೆ. ಆದರೆ ಇನ್ನೂ ಬಚ್ಚೇಗೌಡರ ವಿರುದ್ದ ಕ್ರಮ ಕೈಗೊಳ್ಳದಿರುವುದು ಎಂಟಿಬಿ ನಾಗರಾಜ್ ಅವರ ಕೋಪಕ್ಕೆ ಕಾರಣವಾಗಿದೆ ಎಂದು ಹೇಳಬಹುದು.