ದೇವೇಗೌಡ ಸೋಲಿನ ಬಗ್ಗೆ ಸಿದ್ದರಾಮಯ್ಯ ಹೇಳಿದ್ದೇನು?
ಬೆಂಗಳೂರು, ಜೂನ್ 05: ದೇವೇಗೌಡ ಅವರ ಸೋಲಿಗೆ ಸಿದ್ದರಾಮಯ್ಯ ಅವರೇ ಕಾರಣ ಎಂದು ಎಚ್.ವಿಶ್ವನಾಥ್ ಅವರು ಇತ್ತೀಚೆಗಷ್ಟೆ ಹೇಳಿದ್ದು, ರಾಜ್ಯದಾದ್ಯಂತ ಸದ್ದು ಮಾಡುತ್ತಿದೆ. ಇದಕ್ಕೆ ಸಿದ್ದರಾಮಯ್ಯ ಅವರು ಪ್ರತಿಕ್ರಿಯೆ ನೀಡಿದ್ದಾರೆ.
ದೇವೇಗೌಡ ಅವರ ಸೋಲಿಗೆ ನಾನು ಕಾರಣ ಅಲ್ಲ, ಸ್ಪರ್ಧಿಸಿದ್ದವರು ಅವರು, ಪ್ರಚಾರ ಮಾಡಿದವರು ಅವರ ಪಕ್ಷದವರು ಹಾಗಿದ್ದ ಮೇಲೆ ದೇವೇಗೌಡ ಅವರ ಸೋಲಿಗೆ ನಾನು ಹೇಗೆ ಹೊಣೆ ಆಗುತ್ತೇನೆ ಎಂದು ಸಿದ್ದರಾಮಯ್ಯ ಅವರು ಕೇಳಿದರು.
ವಿಶ್ವನಾಥ್ ರಿಂದಲೇ ಮೈಸೂರು ಮೈತ್ರಿ ಅಭ್ಯರ್ಥಿಯ ಸೋಲು: ತನ್ವೀರ್ ಸೇಠ್
ರಂಜಾನ್ ಹಬ್ಬದಲ್ಲಿ ಭಾಗವಹಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ದೇವೇಗೌಡ ಅವರ ಸೋಲಿಗೆ ನಾನು ಕಾರಣ ಎಂದು ಹೇಳುವುದಾದರೆ ಮೈಸೂರಿನಲ್ಲಿ ನಮ್ಮ ಅಭ್ಯರ್ಥಿ ವಿಜಯ ಶಂಕರ್ ಸೋಲಲು ಯಾರು ಕಾರಣ ಎಂದು ಪ್ರಶ್ನೆ ಮಾಡಿದರು.
ತಾಕತ್ತಿದ್ದರೆ ಪರಮೇಶ್ವರ್ ಅವರನ್ನು ಸಿಎಂ ಮಾಡಿ: ಯಡಿಯೂರಪ್ಪ ಸವಾಲು
'ತಮಗೆ ತಾವೇ ಪ್ರಶ್ನೆ ಕೇಳಿಕೊಳ್ಳಬೇಕು'
ಚುನಾವಣೆ ಮುಗಿದು ಹೋಗಿದೆ ಸೋತಿದ್ದು ಆಗಿದೆ, ಈಗ ಸೋತವರು ತಾವು ಏಕೆ ಸೋತೆವೆಂದು ಅವರನ್ನು ಅವರೇ ಪ್ರಶ್ನೆ ಮಾಡಿಕೊಳ್ಳಬೇಕೆ ವಿನಃ ಮತ್ತೊಬ್ಬರನ್ನು ಹೊಣೆಗಾರರನ್ನಾಗಿ ಮಾಡಲಾರದು ಎಂದು ಸಿದ್ದರಾಮಯ್ಯ ಹೇಳಿದರು.
ರೋಷನ್ ಬೇಗ್ ಬಗ್ಗೆ ಮಾತನಾಡಲು ನಿರಾಕರಣೆ
ರೋಷನ್ ಬೇಗ್ ಹೇಳಿಕೆ ಬಗ್ಗೆ ಮಾತನಾಡಲು ನಿರಾಕರಿಸಿದ ಸಿದ್ದರಾಮಯ್ಯ ಅವರು, ವಿಶ್ವನಾಥ್ ನಮ್ಮ ಪಕ್ಷದವರೇ ಅಲ್ಲ ಅವರ ಬಗ್ಗೆ ನಾನೇಕೆ ಮಾತನಾಡಲಿ ಎಂದರು.
ದೇವೇಗೌಡ ಅವರನ್ನು ಸೋಲಿಸಲಾಯಿತೆ?
ತುಮಕೂರಿನಿಂದ ಕಾಂಗ್ರೆಸ್ ಬೆಂಬಲದೊಂದಿಗೆ ಜೆಡಿಎಸ್ ಪಕ್ಷದಿಂದ ಸ್ಪರ್ಧಿಸಿದ್ದ ಜೆಡಿಎಸ್ ರಾಷ್ಟ್ರಾಧ್ಯಕ್ಷ ದೇವೇಗೌಡ ಅವರು ಬಿಜೆಪಿ ಅಭ್ಯರ್ಥಿ ಬಸವರಾಜು ಅವರ ಎದುರು 12 ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಸೋಲನ್ನು ಅನುಭವಿಸಿದರು.
ವಿಶ್ವನಾಥ್ ನೀಡಿದ್ದ ಹೇಳಿಕೆ
ಇತ್ತೀಚೆಗಷ್ಟೆ ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ ವಿಶ್ವನಾಥ್ ಅವರು, ದೇವೇಗೌಡ ಅವರನ್ನು ತುಮಕೂರಿನಿಂದ ಸ್ಪರ್ಧೆ ಮಾಡುವಂತೆ ಮಾಡಿ, ಉದ್ದೇಶಪೂರ್ವಕವಾಗಿ ಸೋಲಿಸಲಾಗಿದೆ ಎಂದಿದ್ದರು. ದೇವೇಗೌಡ ಸೋಲಲು ಸಿದ್ದರಾಮಯ್ಯ ಕಾರಣ ಎಂದು ಅವರು ಹೇಳಿದ್ದರು.