ನಾನು ಅತೃಪ್ತ ನಾಯಕನೂ ಅಲ್ಲ, ಬಂಡಾಯ ನಾಯಕನೂ ಅಲ್ಲ: ರೇಣುಕಾಚಾರ್ಯ
ಬೆಂಗಳೂರು, ಆಗಸ್ಟ್ 21: ನಾನು ಅತೃಪ್ತ ನಾಯಕನೂ ಅಲ್ಲ, ಬಂಡಾಯ ನಾಯಕನೂ ಅಲ್ಲ ಎಂದು ಎಂಪಿ ರೇಣುಕಾಚಾರ್ಯ ಸ್ಪಷ್ಟಪಡಿಸಿದ್ದಾರೆ.
ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿನ್ನೆ ಪ್ರಮಾಣ ವಚನ ಸ್ವೀಕರಿಸಿದ 17ಸಚಿವರಿಗೆ ಶುಭ ಹಾರೈಸುತ್ತೇನೆ. ಬಿಜೆಪಿಯಲ್ಲಿ ಬಂಡಾಯವಿಲ್ಲ.ಅತೃಪ್ತಿ ಇಲ್ಲ.ಅದರಲ್ಲೂ ನನ್ನ ಬಗ್ಗೆ ತಪ್ಪು ವರದಿಗಳು ಪ್ರಸಾರವಾಗುತ್ತಿವೆ.ನಾನು ಅತೃಪ್ತನೂ ಅಲ್ಲ,ಬಂಡಾಯ ನಾಯಕನೂ ಅಲ್ಲ ಎಂದರು.
ಕೈ ತಪ್ಪಿದ ಸಚಿವ ಸ್ಥಾನ ರೇಣುಕಾಚಾರ್ಯ ಹೇಳಿದ್ದು ಹೀಗೆ?
ಯಡಿಯೂರಪ್ಪ ಅವರ ಜತೆ ನಾವು 106 ಶಾಸಕರಿದ್ದಾರೆ. ಅವರು ಮೂರು ವರ್ಷ 10ತಿಂಗಳು ಅಧಿಕಾರಾವಧಿ ಪೂರೈಸಬೇಕು.ಯಡಿಯೂರಪ್ಪ ಸಿಎಂ ಆಗಬೇಕು ಎಂದು ನಾವೆಲ್ಲ ದೇವರಲ್ಲಿ ಬೇಡಿಕೊಂಡಿದ್ದೇವೆ..
ನನಗೆ ನನ್ನದೇ ಆದ ವರ್ಚಸ್ಸು,ಗೌರವ ಹೊಂದಿರುವ ವ್ಯಕ್ತಿ ನಾನು.2008ರಲ್ಲಿ ನಡೆದ ಕಹಿ ಘಟನೆಯನ್ನು ಆತ್ಮಾವಲೋಕನ ಮಾಡಿಕೊಂಡಿದ್ದೇವೆ.ಅದು ಯಾವುದೇ ಕಾರಣಕ್ಕೂ ಮರುಕಳಿಸಲ್ಲ.ಪದೇಪದೇ ಅದನ್ನೇ ಜ್ಞಾಪಿಸಬೇಡಿ.ನಾನು ಪಕ್ಷದ ನಿಷ್ಟಾವಂತ ಕಾರ್ಯಕರ್ತ ಎಂದು ಹೇಳಿದರು.
ನನ್ನ ಗುರಿ ಮಂತ್ರಿ ಸ್ಥಾನ ಅಲ್ಲ, ಮಂತ್ರಿ ಸ್ಥಾನಕ್ಕೆ ನಾನು ಲಾಭಿ ಮಾಡಲ್ಲ.ನಾನು ಪ್ರಬುದ್ಧ ರಾಜಕಾರಣಿಯಾಗಿ ಬೆಳೆಯಬೇಕು.ನಾನು ಈಗಲೂ ರಾಜಕೀಯದಲ್ಲಿ ಅಂಬೆಗಾಲಿಡುತ್ತಿದ್ದೇನೆ.
ಸ್ವಾಭಿಮಾನಕ್ಕೆ ಧಕ್ಕೆಯಾದರೆ ರಾಜೀನಾಮೆ ನೀಡುವೆ: ರೇಣುಕಾಚಾರ್ಯ
ಮಂತ್ರಿ ಸ್ಥಾನ ಸಿಗದೇ ಇದ್ದದ್ದಕ್ಕೆ ಬೇಸರಗೊಂಡಿದ್ದ ನಮ್ಮ ಕಾರ್ಯಕರ್ತರನ್ನು ಸಮಾಧಾನ ಪಡಿಸಿದ್ದೇನೆ.ಹತ್ತು ಹದಿನೈದು ದಿನಗಳ ಹಿಂದೆಯೇ ಹೊನ್ನಾಳಿಯಲ್ಲಿ ನಾನು ಸಚಿವ ಸ್ಥಾನದ ಆಕಾಂಕ್ಷಿಯಲ್ಲ ಎಂದು ಹೇಳಿದ್ದೆ.
ನನಗೆ ಭಂಡಧೈರ್ಯ.ಹೇಳಬೇಕಾದುದನ್ನು ಎದುರಿಗೆ ನೇರವಾಗಿ ಝಾಡಿಸಿ ಬಿಡುತ್ತೇನೆ.ನಾನು ರಾಮನಿಗೆ ಆಂಜನೇಯ ಇದ್ದಂತೆ ಯಡಿಯೂರಪ್ಪನವರಿಗೆ ನಾನು ಭಂಟ. ಅಂತಹವರ ವಿರುದ್ಧ ನಾನು ಬಂಡಾಯ ಸಾರಲು ಸಾಧ್ಯವೇ ಇಲ್ಲ.
ಇಂದು ಸಂಜೆ ನಾವು ಕೆಲವು ಶಾಸಕರು ಯಡಿಯೂರಪ್ಪನವರನ್ನು ಭೇಟಿ ಮಾಡುತ್ತಿದ್ದೇವೆ. ಮಂಗಳವಾರ ಬಾಲಚಂದ್ರ ಜಾರಕಿಹೊಳಿ ಭೇಟಿ ಮಾಡಿದ್ದರು.ಇಂದು(ಆಗಸ್ಟ್ 21) ಇನ್ನು ಕೆಲವು ಶಾಸಕರು ತಮ್ಮ ಕ್ಷೇತ್ರದ ಅಭಿವೃದ್ದಿಯ ಕಾರಣಕ್ಕಾಗಿ ಸಿಎಂ ಅವರನ್ನು ಭೇಟಿ ಮಾಡುತ್ತಿದ್ದೇವೆ ಎಂದು ತಿಳಿಸಿದರು.