ನಾನು ಈ ಸ್ಥಾನಕ್ಕೆ ಬಂದಿದ್ದರೆ ಅದಕ್ಕೆ ಕಾರಣ ಆರ್ಎಸ್ಎಸ್: ಮುಖ್ಯಮಂತ್ರಿ ಯಡಿಯೂರಪ್ಪ
ಬೆಂಗಳೂರು, ಮಾ. 05: ಕಲಾಪದಲ್ಲಿ ಒಂದು ರಾಷ್ಟ್ರ-ಒಂದು ಚುನಾವಣೆ ಚರ್ಚೆಗೆ ಕಾಂಗ್ರೆಸ್ ನೋ ಎಂದಿದೆ. ಇದೇ ಸಂದರ್ಭದಲ್ಲಿ ನಿನ್ನೆ ಇಡೀ ದಿನ ವಿಧಾನಸಭೆಯಲ್ಲಿ ಕಾಂಗ್ರೆಸ್ ಸದಸ್ಯರು ಧರಣಿ ನಡೆಸಿ ಯಾವುದೇ ಚರ್ಚೆಗೆ ಆಸ್ಪದ ಕೊಟ್ಟಿಲ್ಲ. ಒಂದೇ ಚುನಾವಣೆ ಎಂಬುದು ಆರ್ಎಸ್ಎಸ್ ಅಜೆಂಡಾ. ಹೀಗಾಗಿ ಅದನ್ನು ಸದನದಲ್ಲಿ ಚರ್ಚೆ ಮಾಡಲು ಆಗುವುದಿಲ್ಲ ಎಂಬುದು ಕಾಂಗ್ರೆಸ್ ವಾದ. ಕಾಂಗ್ರೆಸ್ ವಾದಕ್ಕೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ತಿರುಗೇಟು ಕೊಟ್ಟಿದ್ದಾರೆ.
ವಿಧಾನಸೌಧದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ಕೊಟ್ಟಿರುವ ಸಿಎಂ ಯಡಿಯೂರಪ್ಪ ಅವರು, ಪ್ರತಿಪಕ್ಷದ ನಾಯಕರು ಆರ್ಎಸ್ಎಸ್ ಎಂದು ಬೊಬ್ಬೆ ಹೊಡೆಯುತ್ತಿದ್ದಾರೆ. ಇಂದು ನಾನು ಈ ಸ್ಥಾನಕ್ಕೆ ಬಂದಿದ್ದರೆ ಆರ್ಎಸ್ಎಸ್ ಅದಕ್ಕೆ ಕಾರಣ. ನಮ್ಮ ಪ್ರಧಾನಿ ಕೂಡ ಆರ್ಎಸ್ಎಸ್ ಕಾರ್ಯಕರ್ತರಾಗಿದ್ದವರು ಹೀಗಾಗಿ ಅಂತಹ ಹೇಳಿಕೆಗಳನ್ನು ಕೊಡಬೇಡಿ ಎಂದು ಯಡಿಯೂರಪ್ಪ ಅವರು ಹೇಳಿದ್ದಾರೆ.
ಮೊದಲು ಸುಗಮ ಕಲಾಪಕ್ಕೆ ಸಹಕಾರ ಕೊಡಿ, ಭದ್ರಾವತಿಯಲ್ಲಿ ಏನು ನಡೆದಿದೆ ಚರ್ಚೆ ಮಾಡೋಣ. ಚರ್ಚೆಯಲ್ಲಿ ಭಾಗವಹಿಸದೇ, ಸದನದಲ್ಲಿ ಸ್ಪೀಕರ್ ಅವರನ್ನೂ ಮಾತನಾಡಲು ಬಿಟ್ಟಿಲ್ಲ. ಮಾಧ್ಯಮಗಳೂ ಕೂಡ ಪ್ರತಿಪಕ್ಷಗಳ ನಡೆಯನ್ನು ಒಪ್ಪಿಲ ಎಂದಿದ್ದಾರೆ. ವಿರೋಧ ಪಕ್ಷದವರು ಎಷ್ಟು ಬಾರಿ ಆರ್ಎಸ್ಎಸ್ ಎಂದು ಹೇಳುತ್ತಾರೋ ಅಷ್ಟು ಆರ್ಎಸ್ಎಸ್ ಅಷ್ಟು ಬಲಿಷ್ಟವಾಗುತ್ತಲೇ ಹೋಗುತ್ತದೆ.
ಟೀಕೆ ಟಿಪ್ಪಣಿ ಮಾಡಲಿ, ಆದರೆ ಅದನ್ನು ಚರ್ಚೆ ಮೂಲಕ ಮಾಡಲಿ. ಪ್ರಧಾನಿ ಮೋದಿ ಅವರನ್ನು ಇಡೀ ದೇಶವೇ ಮಚ್ಚುತ್ತಿದೆ. ಇವರು ಗಡ್ಡ ಬಿಟ್ಟಿದ್ದಾರೆ ಹಾಗೆ, ಹೀಗೆ ಅಂತ ಮಾತನಾಡುತ್ತಾರೆ. ನೀವು ವಿಪಕ್ಷ ನಾಯಕರಿದ್ದೀರಿ, ನೀವು ಹೇಳುವ ಮಾತು ಇಡೀ ಕಾಂಗ್ರೆಸ್ ಪಕ್ಷ ಹೇಳಿದಂತೆ. ಸಿದ್ಧರಾಮಯ್ಯ ಕೇಳುತ್ತಿದ್ದೇನೆ, ವಿರೋಧ ಪಕ್ಷದ ನಾಯಕರಾಗಿ ಹಗುರವಾಗಿ ಮಾತಾಡಬೇಡಿ. ವಿಪಕ್ಷ ನಾಯಕನಾಗಿ ಉತ್ತಮವಾಗಿ ನಡೆಯಿರಿ. ಸದನದಲ್ಲಿ ನೀವು ಸಂಗಮೇಶ್ ಪ್ರಕರಣವನ್ನು ಸಮರ್ಥಿಸಿಕೊಳ್ಳುತ್ತೀರಾ? ಎಂದು ಸಿದ್ದರಾಮಯ್ಯ ಅವರನ್ನು ಸಿಎಂ ಪ್ರಶ್ನೆ ಮಾಡಿದ್ದಾರೆ.
Recommended Video
ಒಂದು ರಾಷ್ಟ್ರ-ಒಂದು ಚುನಾವಣೆ ವಿಷಯದ ಮೇಲೆ ಮಾತನಾಡಲು ಕಾಂಗ್ರೆಸ್ ಪಕ್ಷದ 19 ಜನರ ಹೆಸರನ್ನು ವಿಪಕ್ಷ ನಾಯಕರು ಕೊಟ್ಟಿದ್ದಾರೆ. ಕಲಾಪ ಸಹಲಾ ಸಮಿತಿ ಸಭೆಯಲ್ಲಿ ಚರ್ಚೆ ಮಾಡೋಣ ಎಂದವರು ಈಗ ಧರಣಿ ಮಾಡುತ್ತಿದ್ದಾರೆ ಎಂದು ಸಿಎಂ ಯಡಿಯೂರಪ್ಪ ಅವರು ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.