ದೆಹಲಿ ಸೋಲು: ತಮ್ಮದೇ ಪಕ್ಷದ ಮುಖಂಡರ ವಿರುದ್ದ ಕಿಡಿಕಾರಿದ ಕಾಂಗ್ರೆಸ್ ಶಾಸಕ ಹ್ಯಾರಿಸ್
ಬೆಂಗಳೂರು, ಫೆ 15: ದೆಹಲಿ ಅಸೆಂಬ್ಲಿ ಚುನಾವಣೆಯಲ್ಲಿ ಪಕ್ಷಕ್ಕಾದ ಅವಮಾನಕಾರಿ ಸೋಲಿನ ಆತ್ಮಾವಲೋಕನ ಮಾಡಿಕೊಳ್ಳಬೇಕು ಎನ್ನುವ ಕಾಂಗ್ರೆಸ್ ಮುಖಂಡರೆ ಕೂಗು ಹೆಚ್ಚಾಗುತ್ತಿದೆ. ಶರ್ಮಿಷ್ಠೆ ಮುಖರ್ಜಿ, ವೀರಪ್ಪ ಮೊಯ್ಲಿ ನಂತರ ಈಗ ಬೆಂಗಳೂರು ಶಾಂತಿನಗರ ಕ್ಷೇತ್ರದ ಶಾಸಕರ ಸರದಿ.
ದೆಹಲಿ ಸೋಲಿನಿಂದ ಕಾಂಗ್ರೆಸ್ ಎಚ್ಚೆತ್ತುಕೊಳ್ಳದಿರುವುದು ಆಘಾತಕಾರಿ ಎಂದು ಶಾಸಕ ಎನ್.ಎ.ಹ್ಯಾರಿಸ್ ಬೇಸರ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಸಾಮಾಜಿಕ ತಾಣದಲ್ಲಿ ಹ್ಯಾರಿಸ್ ಬರೆದುಕೊಂಡಿದ್ದು ಹೀಗೆ. "ನಾನೊಬ್ಬ ಕಟ್ಟಾ ಕಾಂಗ್ರೆಸ್ಸಿಗ ಆದರೆ ಕಾಂಗ್ರೆಸ್ ಪಕ್ಷ ಹಲವಾರು ಸೋಲುಗಳ ನಡುವೆಯೂ ಎಚ್ಚೆತ್ತುಕೊಳ್ಳದೇ ಇರುವುದು ನಿಜಕ್ಕೂ ಆತಂಕಕಾರಿ".
ನನ್ನ ಮೇಲೆ ಸಿಡಿದಿದ್ದು ಪಟಾಕಿಯಲ್ಲ; ಶಾಸಕ ಹ್ಯಾರಿಸ್
"ಪಕ್ಷದಲ್ಲಿ ಪದಾಧಿಕಾರಿಗಳು ಇರುವುದು ಯಾವ ಕೆಲಸಕ್ಕಾಗಿ ಪಕ್ಷವನ್ನು ಕಟ್ಟುವುದಕ್ಕಾಗಿಯೋ? ಅಥವಾ ತಮ್ಮ ಸ್ವಹಿತಾಸಕ್ತಿಗಳಿಗಾಗಿ ಪಕ್ಷವನ್ನು ಬಲಿ ಕೊಡುವುದಕ್ಕಾಗಿಯೋ? " ಎಂದು ಶಾಸಕ ಹ್ಯಾರಿಸ್ ಪ್ರಶ್ನಿಸಿದ್ದಾರೆ.
"ದೆಹಲಿಯಂತಹ ಫಲಿತಾಂಶ ಹಲವಾರು ಬಾರಿ ಬಂದಿದೆ. ಆದರೂ, ಈ ಬಗ್ಗೆ ಪಕ್ಷ ಯೋಚನೆ ಮಾಡದೇ ಇರುವುದು ತನ್ನ ತಪ್ಪುಗಳನ್ನು ತಿದ್ದಿಕೊಳ್ಳದೆ ಇರುವುದು ಯೋಚಿಸಬೇಕಾದ ವಿಚಾರ. ದೇಶಕ್ಕೆ ಕಾಂಗ್ರೆಸ್ ಪಕ್ಷದ ಅನಿವಾರ್ಯತೆ ಇದೆ, ಆದರೆ ಕಾಂಗ್ರೆಸ್ ಪಕ್ಷ ಈ ಬಗ್ಗೆ ಚಿಂತಿಸುತ್ತಿಲ್ಲ" ಎಂದು ಹ್ಯಾರಿಸ್ ಬೇಸರ ವ್ಯಕ್ತಪಡಿಸಿದ್ದಾರೆ.
"ಸೋಲುಗಳು ಪಾಠವಾಗಬೇಕು ಅಭ್ಯಾಸವಾಗಬಾರದು. ದೆಹಲಿಯ ಫಲಿತಾಂಶ ಪಕ್ಷದ ಹಿರಿಯ ನಾಯಕರಿಗೆ ಸಂದೇಶವಾಗಬೇಕು ಎಂಬುದು ನನ್ನ ಆಗ್ರಹ " ಎಂದು ಹ್ಯಾರಿಸ್ ಬರೆದುಕೊಂಡಿದ್ದಾರೆ.
ದೆಹಲಿ ಫಲಿತಾಂಶದ ನಂತರ, ಬಿಜೆಪಿ ಸೋಲಿನ ಬಗ್ಗೆ ಹಿರಿಯ ಕಾಂಗ್ರೆಸ್ ಮುಖಂಡ ಪಿ.ಚಿದಂಬರಂ ಹೇಳಿಕೆ ನೀಡಿದ್ದರು. ಇದಕ್ಕೆ, ಪಕ್ಷದಲ್ಲಿನ ಕೆಲವು ಮುಖಂಡರು, ಮೊದಲು ನಮ್ಮ ಸೋಲನ್ನು ನೋಡಿಕೊಳ್ಳೋಣ ಎಂದು ತಿರುಗೇಟು ನೀಡಿದ್ದರು.