ಪತ್ನಿಗೆ ಕೊರೊನಾವೈರಸ್, ಪ್ರೀತಿಸಿ ಮದುವೆಯಾದ ಪತಿರಾಯ ಜೂಟ್!
ಬೆಂಗಳೂರು, ಆಗಸ್ಟ್.10: ಕೊರೊನಾವೈರಸ್ ಎಂಬ ಹೆಸರು ಕೇಳಿದರೆ ಜನರು ಕನಸಿನಲ್ಲೂ ಬೆಚ್ಚಿ ಬೀಳುವಂತಾ ವಾತಾವರಣ ಸೃಷ್ಟಿಯಾಗುತ್ತಿದೆ. 24/7 ಭಯದಲ್ಲೇ ಬದುಕು ಸಾಗಿಸುವಂತಾ ಪರಿಸ್ಥಿತಿಯ ನಡುವೆ ಸಿಲಿಕಾನ್ ಸಿಟಿಯಲ್ಲಿ ಮನ ಕಲುಕುವಂತಾ ಘಟನೆಯೊಂದು ವರದಿಯಾಗಿದೆ.
ಅದು ಎರಡು ವರ್ಷಗಳ ಪ್ರೀತಿ. ಮನ ಮೆಚ್ಚಿದಾಕೆಯೇ ಮನೆಯ ಒಡತಿಯಾಗಿ, ನೆಚ್ಚಿನ ಪತ್ನಿಯಾಗಿ ಮನೆಗೆ ಬಂದಿದ್ದಳು. ಕಳೆದ ಒಂದು ವಾರಕ್ಕೂ ಮೊದಲು ಎಲ್ಲವೂ ಚೆನ್ನಾಗಿಯೇ ಇತ್ತು. ಎರಡು ವರ್ಷಗಳ ಕಾಲ ಪ್ರೀತಿಸಿ ಮದುವೆಯಾಗಿದ್ದ ಪತಿರಾಯ ಪತ್ನಿಗೆ ಕೊವಿಡ್-19 ಸೋಂಕು ತಗಲಿರುವುದು ಪತ್ತೆಯಾಗುತ್ತಿದ್ದಂತೆ ದಿಢೀರ್ ನಾಪತ್ತೆಯಾಗಿದ್ದಾನೆ.
ಕೊರೊನಾವೈರಸ್ ಅಂಟಿದವರೆಲ್ಲ ಸಾವಿನ ಮನೆ ಸೇರುತ್ತಾರೆಯೇ?
ಪತಿಯ ಆಸರೆಯಿಲ್ಲದೇ ಮಹಾಮಾರಿ ಕೊರೊನಾವೈರಸ್ ನಿಂದಾಗಿ ನರಳಿ ನರಳಿ ಪತ್ನಿಯು ಪ್ರಾಣ ಬಿಟ್ಟಿರುವ ಘಟನೆ ಬೆಂಗಳೂರು ಮಹಾಲಕ್ಷ್ಮೀ ಲೇಔಟ್ ನ ಶಂಕರಮಠ ವಾರ್ಡ್ ನಲ್ಲಿ ನಡೆದಿದೆ. ವಿಜಯಪುರ ಮೂಲದ ಗೌರಿ(27) ಮೃತ ಮಹಿಳೆ ಎಂದು ತಿಳಿದು ಬಂದಿದೆ.
ಅನಾರೋಗ್ಯಕ್ಕೆ ತುತ್ತಾಗಿದ್ದ ವಿಜಯಪುರ ಮೂಲದ ಗೌರಿ
ಕಳೆದ ನಾಲ್ಕೈದು ದಿನಗಳ ಹಿಂದೆಯಷ್ಟೇ ತೀವ್ರ ಅನಾರೋಗ್ಯಕ್ಕೆ ತುತ್ತಾಗಿದ್ದ ಗೌರಿ(27) ಅವರನ್ನು ಶುಕ್ರವಾರ ಬೆಂಗಳೂರಿನ ಆದಿಚುಂಚನಗಿರಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಶನಿವಾರ ವೈದ್ಯರು ನಡೆಸಿದ ಕೊವಿಡ್-19 ತಪಾಸಣೆಯಲ್ಲಿ ಸೋಂಕು ಅಂಟಿಕೊಂಡಿರುವುದು ದೃಢಪಟ್ಟಿತ್ತು. ಸೋಂಕು ಪತ್ತೆಯಾಗಿರುವ ಬಗ್ಗೆ ವರದಿ ಬರುತ್ತಿದ್ದಂತೆ ಗೌರಿ ಅವರ ಜೊತೆಗಿದ್ದ ಪತಿ ಮಂಜುನಾಥ್ ದಿಢೀರನೇ ಪರಾರಿಯಾಗಿದ್ದಾರೆ ಎನ್ನಲಾಗಿದೆ.
ಕೊವಿಡ್-19ಗೆ ಬೆದರಿ ಪತ್ನಿಯಿಂದ ಪತಿ ಪರಾರಿ
ಕೊರೊನಾವೈರಸ್ ಸೋಂಕು ಅಂಟಿಕೊಂಡಿರುವ ವಿಚಾರ ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದೆ. ಈ ವರದಿಯು ಬಹಿರಂಗವಾಗುತ್ತಿದ್ದಂತೆ ಗೌರಿಯನ್ನು ಮನೆಗೆ ತೆರಳುವಂತೆ ಸೂಚಿಸಿದ ಪತಿ ಮಂಜುನಾಥ್, ಆಸ್ಪತ್ರೆಯಿಂದ ಪರಾರಿಯಾಗಿದ್ದಾನೆ. ಮೊದಲೇ ಕೊರೊನಾವೈರಸ್ ಸೋಂಕಿನ ಭೀತಿ, ಇದರ ಜೊತೆಗೆ ಪತಿಯ ಆರೈಕೆಯೂ ಇಲ್ಲದೇ ನಾಲ್ಕು ದಿನಗಳಲ್ಲೇ ಮಹಾಮಾರಿಗೆ 27 ವರ್ಷದ ಗೌರಿ ಪ್ರಾಣ ಬಿಟ್ಟಿದ್ದಾರೆ. ಮನೆ ಮಾಲೀಕ ಮನೆಗೆ ತೆರಳಿದ ಸಂದರ್ಭದಲ್ಲಿ ಮಲಗಿದ ಸ್ಥಿತಿಯಲ್ಲಿ ಗೌರಿ ಕೊನೆಯುಸಿರೆಳೆದಿರುವುದು ಗೊತ್ತಾಗಿದೆ.
ಪ್ರೀತಿಸಿ ಕಟ್ಟಿಕೊಂಡವನು ಪತ್ನಿಯ ಅಂತ್ಯಕ್ರಿಯೆಗೂ ಇಲ್ಲ
ಕೊರೊನಾವೈರಸ್ ಸೋಂಕು ಅಂಟಿಕೊಂಡಿರುವ ಬಗ್ಗೆ ವೈದ್ಯರು ನೀಡಿರುವ ವರದಿಯಿಂದ ಮಂಜುನಾಥ್ ತಿಳಿದುಕೊಂಡಿದ್ದರು. ಅಂದಿನಿಂದ ಮನೆಯ ಆಸುಪಾಸಿನಲ್ಲೂ ಸುಳಿಯದ ಆಸಾಮಿಗೆ ನೆರೆಹೊರೆಯ ಜನರು ದೂರವಾಣಿ ಕರೆ ಮಾಡಿದರೂ ಪತ್ನಿಯ ಅಂತ್ಯಕ್ರಿಯೆ ನಡೆಸುವುದಕ್ಕೂ ಮಂಜುನಾಥ್ ಬರದೇ ಫೋನ್ ಸ್ವಿಚ್ ಆಫ್ ಮಾಡಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಸ್ಥಳೀಯರೇ ಮೃತ ಗೌರಿ ಅವರ ಅಂತ್ಯ ಸಂಸ್ಕಾರವನ್ನು ನೆರವೇರಿಸಿದ್ದಾರೆ.
2 ವರ್ಷಗಳ ಹಿಂದೆ ಗೌರಿ-ಮಂಜುನಾಥ್ ಪ್ರೇಮ ವಿವಾಹ
ವಿಜಯಪುರ ಮೂಲದ ಮಂಜುನಾಥ್ ಮತ್ತು ಗೌರಿ ಎರಡು ವರ್ಷಗಳ ಹಿಂದೆ ಪ್ರೀತಿಸಿ ವಿವಾಹವಾಗಿದ್ದರು. ಮಂಜುನಾಥ್ ಕಾರು ಚಾಲಕನಾಗಿ ಕೆಲಸ ಮಾಡುತ್ತಿದ್ದರೆ, ಗೌರಿ ಶಾಪಿಂಗ್ ಮಾಲ್ ವೊಂದರಲ್ಲಿ ಸೇಲ್ಸ್ ಗರ್ಲ್ ಆಗಿ ಕೆಲಸವನ್ನು ಮಾಡಿಕೊಂಡಿದ್ದರು ಎಂದು ತಿಳಿದು ಬಂದಿದೆ. ಇನ್ನು, ಪತ್ನಿ ಅಂತ್ಯಕ್ರಿಯೆಗೆ ಬಾರದ ಮಂಜುನಾಥ್ ವಿರುದ್ಧ ಮನೆ ಮಾಲೀಕರು ಮಹಾಲಕ್ಷ್ಮಿ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದೆ.