ಭಿಕ್ಷುಕರಿಗೆ ಬೆಡ್ ಶೀಟ್ ಕೊಟ್ಟು ಮಾನವೀಯತೆ ತೋರಿದ ಪೊಲೀಸರು
ಬೆಂಗಳೂರು, ಜೂ. 17: ಕೆ.ಆರ್. ಮಾರ್ಕೆಟ್ ಮೇಲ್ಸೇತುವೆ. ಬಡವರು ಹಾಗೂ ಭಿಕ್ಷಕರಿಗೆ ಆಸರೆ ನೀಡುವ ಮನೆ. ಹೊಟ್ಟೆ ಪಾಡಿಗಾಗಿ ಬೀದಿ ಬದಿ ವ್ಯಾಪಾರ ಮಾಡಿ ಅನ್ನ ಗಿಟ್ಟಿಸಿಕೊಳ್ಳುವರು ಆಸರೆಗಾಗಿ ಕೆ.ಆರ್. ಮಾರ್ಕೆಟ್ ಮೇಲ್ಸೇತುವೆ ಅವಲಂಬಿಸಿದ್ದಾರೆ. ಆದರೆ, ಮಳೆ ಬಂದರೆ ನೆಂದು ಹೋಗುತ್ತಾರೆ. ಬಿಸಿಲಿಗೆ ಒಣಗುತ್ತಾರೆ. ಚಳಿಯಾದರೆ ಅಲ್ಲಿಯೇ ಬೆಂಕಿ ಹಾಕಿಕೊಂಡು ಜೀವನ ಸಾಗಿಸುತ್ತಾರೆ. ಭಿಕ್ಷುಕರ ಪಾಲಿಗೆ ಇದು ಕೊನೆ ಉಸಿರು ಎಳೆಯುವವರೆಗೂ ಆಶ್ರಯ ನೀಡುವ ಜಾಗ. ಇದು ಯಾರ ಕಣ್ಣಿಗೂ ಬೀಳುವುದೇ ಇಲ್ಲ. ಹೀಗೆ ಚಳಿ- ಮಳೆಯಲ್ಲಿ ದಿನದೂಡುವ ಬಡವರ ಕಷ್ಟಕ್ಕೆ ಕೆ.ಆರ್. ಮಾರ್ಕೆಟ್ ಪೊಲೀಸರು ಮಿಡಿದಿದ್ದಾರೆ. ಮೇಲ್ಸೇತುವೆ ಬಳಿ ಮಲಗುವ ಭಿಕ್ಷುಕರಿಗೆ ಮತ್ತು ಬಡವರಿಗೆ ಬೆಡ್ ಶೀಟ್ ನೀಡಿ ಮಾನವೀಯತೆ ಮರೆದಿದ್ದಾರೆ.
ಸೂರಿಗಾಗಿ ಮೇಲ್ಸೇತುವೆ:
ತಲೆ ಮೇಲೆ ಸೂರಿಲ್ಲದಿದ್ದರೂ ಮೇಲ್ಸೇತುವೆ ಕೆಳಗೆ ಮಲಗುವ ಜನರು ಬೆಳಗಿನ ಜಾವ ಚಳಿ ತಾಳಲಾರದೇ ಅಲ್ಲಿಯೇ ಬೆಂಕಿ ಹಾಕಿಕೊಂಡು ಮೈ ಬಿಸಿ ಮಾಡಿಕೊಳ್ಳುತ್ತಾರೆ. ಚಳಿಗೆ ನಡುಗುವ ಬಡವರು ನೆಮ್ಮದಿ ನಿದ್ದೆ ಮಾಡಲೆಂದು ಕೆ.ಆರ್. ಮಾರ್ಕೆಟ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಬಿ.ಜಿ. ಕುಮಾರಸ್ವಾಮಿ ಮತ್ತು ಸಿಬ್ಬಂದಿ ಬೆಡ್ ಶೀಟ್ ಗಳನ್ನು ಹಂಚಿ ಮಾನವೀಯತೆ ಮರೆದಿದ್ದಾರೆ. ಕೆ.ಆರ್. ಮಾರ್ಕೆಟ್ ನ ಮೇಲ್ಸೇತುವೆ ಕೆಳಗೆ ಮಲಗುವ ನೂರಕ್ಕೂ ಹೆಚ್ಚು ಬಡವರಿಗೆ ಬೆಡ್ ಶೀಟ್ ವಿತರಿಸಿದ್ದಾರೆ. ಪೊಲೀಸರ ಈ ಸೇವಾ ಕಾರ್ಯಕ್ಕೆ ಎಲ್ಲಡೆಯಿಂದಲೂ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಪೊಲೀಸರ ಈ ಮಾನವೀಯ ಸೇವೆಗೆ ಪಶ್ಚಿಮ ವಿಭಾಗದ ಡಿಸಿಪಿ ಸಂಜೀವ ಎಂ. ಪಾಟೀಲ್ ಕೂಡ ಕೈ ಜೋಡಿಸಿದ್ದಾರೆ.
ಪೊಲೀಸರನ್ನು ಕಂಡ್ರೆ ಓಡ್ತಿದ್ರು:
ಕೆ.ಆರ್. ಮಾರ್ಕೆಟ್ ಮೇಲ್ಸೇತುವೆ, ಮೆಟ್ರೋ ಸ್ಟೇಷನ್ ಸಮೀಪ ಭಿಕ್ಷಕರು ಮಲಗಿದ್ದರೆ ಈ ಹಿಂದೆ ಪೊಲೀಸರೇ ಹೆದರಿಸಿ ಓಡಿಸುತ್ತಿದ್ದರು. ಪುಟ್ ಪಾತ್ ಒತ್ತುವರಿ ತೆರವು ಗೊಳಿಸಲು ಬಿಬಿಎಂಪಿ ಅಧಿಕಾರಿಗಳು ಕೂಡ ಇಲ್ಲಿನ ಭಿಕ್ಷಕುರನ್ನು ತೆರವುಗೊಳಿಸುತ್ತಿದ್ದರು. ಹೀಗಾಗಿ ಈ ಹಿಂದೆ ಪೊಲೀಸರನ್ನು, ಬಿಬಿಎಂಪಿ ಅಧಿಕಾರಿಗಳನ್ನು ನೋಡಿದರೆ ಕೆ.ಆರ್. ಮಾರ್ಕೆಟ್ ಮೇಲ್ಸೇತುವೆ ಬಳಿ ತಂಗಿದ್ದ ಭಿಕ್ಷುಕರು ಓಡಿ ಹೋಗುತ್ತಿದ್ದರು. ಕೆಲ ವರ್ಷಗಳಿಂದಲೂ ಪೊಲೀಸರು ರಾತ್ರಿ ವೇಳೆ ಅಲ್ಲಿ ಮಲಗುವ ಭಿಕ್ಷಕರಿಗೆ ಯಾವುದೇ ತೊಂದರೆ ನೀಡುತ್ತಿಲ್ಲ. ಬದಲಿಗೆ ಅವರ ನಿದ್ದೆಗೆ ಭಂಗ ತರದೇ ಅವಕಾಶ ಮಾಡುವ ಜತೆಗೆ ಇದೀಗ ಬೆಡ್ ಶೀಟ್ ಗಳನ್ನು ವಿತರಿಸುವ ಮೂಲಕ ಕೆ.ಆರ್. ಮಾರ್ಕೆಟ್ ಪೊಲೀಸರು ತೋರಿರುವ ಮಾನವೀಯತೆ ಪೊಲೀಸ್ ವಲಯದಲ್ಲಿ ಚರ್ಚೆಗೆ ನಾಂದಿ ಹಾಡಿದೆ.
Recommended Video
ಕೆ ಆರ್. ಮಾರ್ಕೆಟ್ ವಿವರ: ಬೆಳಗಿನ ಜಾವ ಹೂವು- ತರಕಾರಿ ವಹಿವಾಟು. ಸೂರ್ಯ ಮೂಡುತ್ತಿದ್ದಂತೆ ಲೋಕಲ್ನಿಂದ ಗ್ಲೋಬಲ್ವರೆಗೂ ವಹಿವಾಟು ನಡೆಸುವ ಪ್ರದೇಶ. ಬೆಳಗ್ಗೆ ಕಾಲಿಡಲು ಜಾಗವಿಲ್ಲದಂತೆ ಜನ ತುಂಬಿರುವ ಕೆ.ಆರ್. ಮಾರ್ಕೆಟ್ ಮೇಲ್ಸೇತುವೆ ಕತ್ತಲಾದರೆ ಬಡವರ ಪಾಲಿಗೆ ಆಸರೆಯಾಗಿದೆ. ಬದುಕಿಗಾಗಿ ಬೀದಿ ಬದಿ ವ್ಯಾಪಾರ ಮಾಡುವರು ಕೂಡ ಮೇಲ್ಸೇತುವೆ ಕೆಳಗೆ ಮಲಗುತ್ತಾರೆ. ಇರುವ ಜೀವ ಉಳಿಸಿಕೊಳ್ಳಲು ಬಡಿದಾಡುವರ ಪಾಲಿಗೆ ಪೊಲೀಸರೇ ಇದೀಗ ಆಶ್ರಯ ನೀಡಿ ತಮ್ಮ ಹೃದಯ ಶ್ರೀಮಂತಿಕೆ ತೋರಿದ್ದಾರೆ.