ಟಿವಿ ಚಾನಲ್ಲಿನಲ್ಲಿ ಮತ್ತೆ ಕನಲಿ ಕೆಂಡವಾದ 'ಹುಚ್ಚ' ವೆಂಕಟ್
ಬೆಂಗಳೂರು, ನವೆಂಬರ್ 17 : ಮಾಧ್ಯಮಗಳಲ್ಲಿ, ಸೋಷಿಯಲ್ ಮೀಡಿಯಾಗಳಲ್ಲಿ, ಸಭೆ ಸಮಾರಂಭಗಳಲ್ಲಿ, ಬಸ್ಸುಗಳಲ್ಲಿ, ರೈಲುಗಳಲ್ಲಿ 'ಹುಚ್ಚ' ವೆಂಕಟ್ ಅವರೇ ರಾರಾಜಿಸುತ್ತಿದ್ದಾರೆ. ಎಲ್ಲೆಂದರಲ್ಲಿ ಬರೀ ಅವರದೇ ಮಾತು. ಮೀಡಿಯಾಗಳಂತೂ ಅವರ 'ಹುಚ್ಚು'ತನವನ್ನೇ ಬಂಡವಾಳ ಮಾಡಿಕೊಂಡು ಟಿಆರ್ಪಿ ಹೆಚ್ಚಿಸಿಕೊಳ್ಳುತ್ತಿವೆ.
ನಿಜಕ್ಕೂ ಬುದ್ಧಿವಂತರಾಗಿರುವ 'ಹುಚ್ಚ' ವೆಂಕಟ್ ನಿಜಕ್ಕೂ ಹುಚ್ಚರಾ ಅಥವಾ ಅವರಲ್ಲಿರುವ ಹುಚ್ಚುತನವನ್ನು ಸಮಾಜ(ಮಾಧ್ಯಮ)ವೇ ಕೆರಳಿಸುತ್ತಿದೆಯಾ? ಉತ್ತರಿಸುವುದು ಕಷ್ಟ ಕಷ್ಟ. ಬಿಗ್ ಬಾಸ್ ಮನೆಯಿಂದ ಹೊರಬಂದ ನಂತರ ಟಿವಿಯಿಂದ ಟಿವಿಗೆ ಹಾರುತ್ತ, ಸಮಾಧಾನಚಿತ್ತದಿಂದಲೇ ಸಂದರ್ಶನ ನೀಡುತ್ತಿದ್ದ ವೆಂಕಟ್ ಅವರು ಮತ್ತೆ ಕೆರಳಿ ಕೆಂಡವಾಗುವಂಥ ಘಟನೆ ನಡೆದಿದೆ.
ಖಾಸಗಿ ಸುದ್ದಿ ವಾಹಿನಿಯೊಂದರಲ್ಲಿ ತಮ್ಮ ಕನಸು, ಸಿನೆಮಾ, ಮಹಿಳೆಯರ ಬಗ್ಗೆ ತಮಗಿರುವ ಗೌರವ, ಬಿಗ್ ಬಾಸು, ಕನ್ನಡದ ಬಗ್ಗೆ ತಮಗಿರುವ ಅಭಿಮಾನ ಕುರಿತು ಅನಿಸಿಕೆ ಹಂಚಿಕೊಳ್ಳುತ್ತಿದ್ದ ಹಂತದಲ್ಲಿ, ನಿರ್ದೇಶಕ ರಿಷಿ ಅವರನ್ನು ಕಾಣುತ್ತಲೇ ಹುಚ್ಚ ವೆಂಕಟ್ ಕನಲಿ ಕೆಂಡವಾಗಿದ್ದಾರೆ. [ಹುಚ್ಚ ವೆಂಕಟ್ ಕುರಿತ ಸುದ್ದಿಗಳು]
ಇದಕ್ಕೆ ಕಾರಣ, 'ಕೊಟ್ಲಲ್ಲಪ್ಪೋ ಕೈ' ಕುಖ್ಯಾತಿಯ ನಿರ್ದೇಶಕ ರಿಷಿ ಅವರು, "ವೆಂಕಟ್ ಅವರ 'ಎಕ್ಕಡ, ಕೊಂದ್ಬಿಡ್ತೀನಿ, ಸಾಯಿಸಿಬಿಡ್ತೀನಿ' ಎಂಬಂತಹ ಮಾತುಗಳಿಂದ ಮಕ್ಕಳು ದಿಕ್ಕು ತಪ್ಪುತ್ತಿದ್ದಾರೆ. ಅವರ ವಿರುದ್ಧ ಪೊಲೀಸರಿಗೆ ದೂರು ನೀಡುತ್ತೇನೆ" ಎಂಬ ಆರೋಪಿಸಿದ್ದಲ್ಲದೆ, ಅವರ ಜೊತೆ ಚರ್ಚೆಗೆ ಸ್ಡುಡಿಯೋಗೆ ಆಗಮಿಸಿದ್ದು ಈ ಅವಘಡಕ್ಕೆ ಕಾರಣವಾಗಿದೆ.
ರಿಷಿ ಅವರನ್ನು ಸ್ಟುಡಿಯೋದಲ್ಲಿ ಕಾಣುತ್ತಲೇ, ತಮ್ಮ ಎಂದಿನ ರೌದ್ರಾವತಾರವನ್ನು ತಾಳಿದ ವೆಂಕಟ್, ನಾನ್ಯಾರು ಗೊತ್ತೇನೋ ಎಂದು ಅಬ್ಬರಿಸುತ್ತ ರಿಷಿ ಮೇಲೆ ಆಕ್ರಮಣ ಮಾಡಲು ಹೋದರು. "ನಾನು ನಿಮ್ಮ ಅಭಿಮಾನಿ" ಅಂತ ರಿಷಿ ಹೇಳಿದರೂ, "ಎಂಥ ಅಭಿಮಾನಿ ನೀನು? ನನ್ನ ಪ್ರಿನ್ಸಿಪಲ್ ಫಾಲೋ ಮಾಡ್ತೀಯಾ?" ಎಂದು ರೇಗಾಡುತ್ತಲೇ ಹೋದರು. [ಹುಚ್ಚ ವೆಂಕಟ್ ಬಗ್ಗೆ ನಮ್ಮ ಓದುಗರು ಏನಂತಾರೆ?]
ನಿಮಗೆ ನನ್ನ ಬಗ್ಗೆ ಗೌರವವಿದ್ದರೆ ರಿಷಿಯನ್ನು ಸ್ಟುಡಿಯೋದಿಂದ ಹೊರಗೆ ಕಳಿಸಿ ಎಂದು ಒದರಾಡಿದರು. ವೆಂಕಟ್ ಅವರ ಬೆಂಬಲಿಗರು ತಡೆದಿದ್ದರಿಂದ ಆಗಬಹುದಾಗಿದ್ದ ಅನಾಹುತ ತಪ್ಪಿದೆ. ಆದರೆ, ಒಂದು ಸಂದರ್ಶನ ನಡೆಯುತ್ತಿದ್ದಾಗ, ರಿಷಿ ಅವರನ್ನು ಸ್ಟುಡಿಯೋದಲ್ಲಿ ರಿಷಿ ಅವರನ್ನು ಬಿಟ್ಟಿದ್ದು ಸರೀನಾ? ಎಂಬಂತಹ ಮಾತುಗಳು ಸೋಷಿಯಲ್ ಮೀಡಿಯಾದಲ್ಲಿ ಶುರುವಾಗಿವೆ.
ಇದಕ್ಕೂ ಮೊದಲು, ಎಕ್ಕಡ, ಕೊಂದುಬಿಡ್ತೀನಿ ಎಂಬಂತಹ ಮಾತುಗಳನ್ನು ಇನ್ನು ಮುಂದೆ ಆಡಲ್ಲ, ಐ ಆಮ್ ಸಾರಿ ಎಂಬ ಮಾತುಗಳನ್ನೂ ಅವರ ಹೇಳಿದರು. ಆದರೂ, ಸಂದರ್ಶನದುದ್ದಕ್ಕೂ ಅವರನ್ನು ಮತ್ತೆ ಕೆರಳಿಸುವಂಥ ಮಾತುಗಳು ಕೇಳಿಬರುತ್ತಿದ್ದವು. ಈ ಸಂದರ್ಶನಗಳ ಬದಲು ಅವರನ್ನು ಅವರಷ್ಟಕ್ಕೆ ಬಿಟ್ಟರೆ 'ಹುಚ್ಚ' ವೆಂಕಟ್ ವೆಂಕಟ್ ಆಗಿರುತ್ತಾರೆ.