ರಾಜಧಾನಿಯಲ್ಲಿ ಎರಡು ಪ್ರತ್ಯೇಕ ಡ್ರಗ್ ಜಾಲ ಬಯಲಿಗೆ ಎಳೆದ ಪೊಲೀಸರು
ಬೆಂಗಳೂರು, ಏಪ್ರಿಲ್ 12: ಸ್ಯಾಂಡಲ್ವುಡ್ ಡ್ರಗ್ ಡೀಲ್ ಪ್ರಕರಣ ಬೆಳಕಿಗೆ ಬಂದ ನಂತರ ರಾಜಧಾನಿಯಲ್ಲಿ ಡ್ರಗ್ ವಹಿವಾಟು ಕಡಿಮೆಯಾಗಿಲ್ಲ, ಬದಲಿಗೆ ಜಾಸ್ತಿಯಾಗುತ್ತಿದೆ. ಬೆಂಗಳೂರು ಪೊಲೀಸರು ಎಷ್ಟೇ ಸಾಹಸ ಮಾಡಿದರೂ ಮಾದಕ ಜಾಲ ಅನಾವರಣಗೊಳ್ಳುತ್ತಲೇ ಇದೆ. ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಬೆಂಗಳೂರು ಪೊಲೀಸರು ಸುಮಾರು 1.20 ಕೋಟಿ ರೂ. ಮೌಲ್ಯದ ಡ್ರಗ್ ವಶಪಡಿಸಿಕೊಂಡಿದ್ದಾರೆ.
ಖಾಸಗಿ ಸ್ಲೀಪರ್ ಕೋಚ್ ಬಸ್ನ ಜಾಡು ಹಿಡಿದು ಕೇರಳದಿಂದ ಬೆಂಗಳೂರಿಗೆ ತರುತ್ತಿದ್ದ ಡ್ರಗ್ ಜಾಲವನ್ನು ಎಚ್ಎಸ್ಆರ್ ಲೇಔಟ್ ಪೊಲೀಸರು ಪತ್ತೆ ಮಾಡಿದ್ದಾರೆ. ಇತ್ತ ಸೋಪ್ಬಾಕ್ಸ್ಗಳಲ್ಲಿ ಮಾದಕ ವಸ್ತು ಇಟ್ಟು ಮಾರಾಟ ಮಾಡುತ್ತಿದ್ದ ಜಾಲವನ್ನು ಕಾಡುಗೊಂಡನಹಳ್ಳಿ ಪೊಲೀಸರು ಬಯಲಿಗೆ ಎಳೆದಿದ್ದಾರೆ.
ಕಾಡುಗೊಂಡನಹಳ್ಳಿ ಪೊಲೀಸರ ಪ್ರಕರಣ: ಬಾಂಗ್ಲಾ ಗಡಿಯಿಂದ ಮಿಕ್ಸರ್ ಗ್ರೈಂಡರ್ನಲ್ಲಿಟ್ಟು ಬೆಂಗಳೂರಿಗೆ ಮಾದಕ ವಸ್ತುಗಳನ್ನು ಸಾಗಣೆ ಮಾಡಿ ಕಾಲೇಜು ವಿದ್ಯಾರ್ಥಿಗಳಿಗೆ ಮಾರಾಟ ಮಾಡುತ್ತಿದ್ದ ಮೂವರು ಡ್ರಗ್ ಪೆಡ್ಲರ್ಗಳನ್ನು ಕಾಡುಗೊಂಡನಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ 60 ಲಕ್ಷ ರೂ. ಮೌಲ್ಯದ ಎಕ್ಸ್ ಟೆನ್ಸಿ ಪಿಲ್ಸ್ ಹಾಗೂ ಹೆರಾಯಿನ್ ವಶಪಡಿಸಿಕೊಂಡಿದ್ದಾರೆ.
ಮೊಹಮದ್ ಸಜ್ಜಾದ್ ಖಾನ್, ಮೊಹದ್ ಅಜಾಜ್. ಸೀತಲ್ ಕುಮಾರ್ ಸಿಂಗ್ ಬಂಧಿತ ಆರೋಪಿಗಳು. ಸೋಪ್ ಡಬ್ಬಿಗಳಲ್ಲಿ ಡ್ರಗ್ ಇಟ್ಟು ಸಾಗಣೆ ಮಾಡುತ್ತಿದ್ದ ಸಂಗತಿ ವಿಚಾರಣೆ ವೇಳೆ ಬೆಳಕಿಗೆ ಬಂದಿದೆ. ಸಜ್ಜಾದ ಖಾನ್ ಶಿವಾಜಿನಗರದಲ್ಲಿ ಚಿಕನ್ ಅಂಗಡಿಯಲ್ಲಿ ದಿನಗೂಲಿ ಕೆಲಸ ಮಾಡುತ್ತಿದ್ದ. ಸೀತಲ್ ಕುಮಾರ್ ಸಿಂಗ್ ಸಿಎಂಆರ್ ಕಾಲೇಜಿನ ವಿದ್ಯಾರ್ಥಿಯಾಗಿದ್ದು, ಇವರೆಲ್ಲರೂ ವಿದ್ಯಾರ್ಥಿಗಳಿಗೆ ಡ್ರಗ್ ಮಾರಾಟ ಮಾಡಿ ದುಬಾರಿ ಹಣ ಗಳಿಸುತ್ತಿದ್ದರು. ಬೆಂಗಳೂರಿನ ಪ್ರತಿಷ್ಠಿತ ಕಾಲೇಜು ವಿದ್ಯಾರ್ಥಿಗಳಿಗೆ ಮಾರಾಟ ಮಾಡುತ್ತಿದ್ದ ಸಂಗತಿ ವಿಚಾರಣೆ ವೇಳೆ ಬೆಳಕಿಗೆ ಬಂದಿದೆ.
ಸ್ಯಾಂಡಲ್ ವುಡ್ ಡ್ರಗ್ ಡೀಲ್ ಪ್ರಕರಣದ ಬಳಿಕ ಪೂರ್ವ ವಿಭಾಗದ ಪೊಲೀಸರು ನಿರ್ಮಾಪಕ ಶಂಕರೇಗೌಡ ಡ್ರಗ್ ಡೀಲ್ ಪ್ರಕರಣ ಬಯಲಿಗೆ ಎಳೆದಿದ್ದರು. ಆನಂತರ ಬಿಗ್ ಬಾಸ್ ಸ್ಪರ್ಧಿ, ತೆಲುಗು ಸಿನಿಮಾ ನಟರನ್ನು ಗೋವಿಂದಪುರ ಪೊಲೀಸರು ವಿಚಾರಣೆಗೆ ಒಳಪಡಿಸಿದ್ದರು. ಇದೀಗ ಮತ್ತೊಂದು ಡ್ರಗ್ ಡೀಲ್ ಪ್ರಕರಣವನ್ನು ಪೂರ್ವ ವಿಭಾಗದ ಪೊಲೀಸರು ಪತ್ತೆ ಮಾಡಿದ್ದಾರೆ. ಡಿಸಿಪಿ ಶರಣಪ್ಪ ಅವರು ಕೆ.ಜಿ.ಹಳ್ಳಿ ಪೊಲೀಸರ ಡ್ರಗ್ ಡೀಲ್ ಪತ್ತೆ ಪ್ರಕರಣ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
Recommended Video
ಎಚ್ಎಸ್ಆರ್ ಬಡಾವಣೆ ಪೊಲೀಸರ ಕಾರ್ಯಾಚರಣೆ: ಮತ್ತೊಂದು ಪ್ರಕರಣದಲ್ಲಿ ಎಚ್ಎಸ್ಆರ್ ಬಡಾವಣೆ ಪೊಲೀಸರು ನಾಲ್ವರು ಡ್ರಗ್ ಪೆಡ್ಲರ್ ಗಳನ್ನು ಬಂಧಿಸಿ 60 ಲಕ್ಷ ರೂ. ಮೌಲ್ಯದ ಮಾದಕ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಡಿಸಿಪಿ ಶ್ರೀನಾಥ್ ಮಹದೇವ ಜೋಶಿ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿದ ಎಚ್ಎಸ್ಆರ್ ಬಡಾವಣೆ ಪೊಲೀಸರು ದೊಡ್ಡ ಮಾದಕ ಜಾಲವನ್ನು ಪತ್ತೆ ಮಾಡಿದ್ದಾರೆ. ಮೊಮಮದ್ ಮುಸ್ತಾಕ್, ಸಮೀರ್ ಪಿ. ಮೊಹಮದ್ ಅಪ್ರೀದ್, ಮೊಹಮದ್ ಅಷೀಕ್ ಬಂಧಿತ ಆರೋಪಿಗಳು. ಕೇರಳ ಮೂಲದ ಮುಸ್ತಾಕ್ 15 ಲಕ್ಷ ರೂ. ಮೌಲ್ಯದ 48 ಕೆ.ಜಿ. ಗಾಂಜಾ, ಹಾಗೂ 45 ಲಕ್ಷ ರೂ. ಮೌಲ್ಯದ ಹ್ಯಾಷ್ ಆಯಿಲ್ ವಶಪಡಿಸಿಕೊಂಡಿದ್ದಾರೆ. ಗಾಂಜಾ ಸಾಗಣೆ ಮಾಡುತ್ತಿದ್ದ ಬೊಲೇರೋ ವಾಹನ, ಹ್ಯಾಷ್ ಆಯಿಲ್ ಸಾಗಣೆ ಮಾಡುತ್ತಿದ್ದ ಖಾಸಗಿ ಬಸ್ನ್ನು ವಶಪಡಿಸಿಕೊಂಡಿದ್ದಾರೆ. ಖಚಿತ ಮಾಹಿತಿ ಆಧರಿಸಿ ಈ ಕಾರ್ಯಾಚಣೆ ನಡೆಸಲಾಗಿದೆ.