ರೂಪಾ ಮೌದ್ಗೀಲ್ ಸ್ಥಾನಕ್ಕೆ ಎಚ್ ಎಸ್ ರೇವಣ್ಣ ನೇಮಕ
ಬೆಂಗಳೂರು, ಜುಲೈ 18: ಪರಪ್ಪನ ಅಗ್ರಹಾರದ ಜೈಲಿನಲ್ಲಿ ನಡೆದಿದೆ ಎನ್ನಲಾದ ಅಕ್ರಮ ಹಾಗೂ ಅವ್ಯವಹಾರದ ಬಗ್ಗೆ ರೂಪಾ ಮೌದ್ಗೀಲ್ ವರದಿ ಸಲ್ಲಿಸಿದ್ದು, ಆ ನಂತರ ಮಾಧ್ಯಮಗಳ ಎದುರು ಹೇಳಿಕೆ ನೀಡಿದ್ದಾರೆ ಎಂಬ ಕಾರಣಕ್ಕೆ ಅವರನ್ನು ಸಂಚಾರ ವಿಭಾಗಕ್ಕೆ ಎತ್ತಂಗಡಿ ಮಾಡಿರುವುದು ನಿಮಗೆಲ್ಲ ಗೊತ್ತೇ ಇದೆ.
ಪರಪ್ಪನ ಅಗ್ರಹಾರದಲ್ಲಿ ಚಿನ್ನಮ್ಮನಿಗೆ 'ರಾಜಾತಿಥ್ಯ' ಫೋಟೋಗಳಲ್ಲಿ ಬಹಿರಂಗ
ಡಿಐಜಿ ಡಿ.ರೂಪಾ ಅವರನ್ನು ವರ್ಗಾವಣೆ ಮಾಡಿದ್ದ ಸರಕಾರ ಅವರ ಸ್ಥಾನಕ್ಕೆ ಇದೀಗ ಎಚ್.ಎಸ್.ರೇವಣ್ಣ ಅವರನ್ನು ನೇಮಕ ಮಾಡಿದೆ. ಹೆಚ್ಚುವರಿಯಾಗಿ ಚೀಫ್ ಸೂಪರಿಂಟೆಂಡೆಂಟ್ ಆಗಿ ಕೂಡ ಎಚ್.ಎಸ್. ರೇವಣ್ಣ ಅವರನ್ನು ನೇಮಕ ಮಾಡಿ ಸರಕಾರ ಅಧಿಕೃತ ಆದೇಶ ಹೊರಡಿಸಿದೆ.
ಇನ್ನು ಎಡಿಜಿಪಿ ಆಗಿ ಮೇಘರಿಕ್ ಅವರು ಮಂಗಳವಾರ ಹೆಚ್ಚುವರಿಯಾಗಿ ಅಧಿಕಾರವನ್ನು ವಹಿಸಿಕೊಂಡಿದ್ದಾರೆ. ಎಚ್ ಎನ್ ಸತ್ಯನಾರಾಯಣ ರಾವ್ ಅವರನ್ನು ವರ್ಗಾವಣೆ ಮಾಡಲಾಗಿದ್ದು, ಆ ಸ್ಥಾನಕ್ಕೆ ಮೇಘರಿಕ್ ಅವರ ನೇಮಕ ಮಾಡಿದೆ.
ವಿಕೆ ಶಶಿಕಲಾಗೆ ಪರಪ್ಪನ ಅಗ್ರಹಾರದಲ್ಲಿ ಸಕಲ ಸವಲತ್ತು ಒದಗಿಸಲಾಗಿತ್ತು. ಅದಕ್ಕಾಗಿ ಎರಡು ಕೋಟಿ ರುಪಾಯಿ ಲಂಚ ಪಡೆಯಲಾಗಿತ್ತು ಎಂದು ಡಿಐಜಿ ರೂಪಾ ಆರೋಪಿಸಿ, ವರದಿಯೊಂದನ್ನು ಸಲ್ಲಿಸಿದ್ದರು. ಆ ನಂತರ ಮಾಧ್ಯಮಗಳಿಗೆ ಈ ವರದಿ ಸಿಕ್ಕು, ಆ ಬಗ್ಗೆ ಪತ್ರಿಕಾಗೋಷ್ಠಿ ಮಾಡಿ, ರೂಪಾ ಹಾಗೂ ಸತ್ಯನಾರಾಯಣ ರಾವ್ ಇಬ್ಬರೂ ಮಾತನಾಡಿದ್ದರು.