ಆ.27 ರಂದು ಗಿಯರ್ ಬಗ್ಗೆ ಮಾಹಿತಿ ನೀಡಲಿರುವ ಅರಿಮೆ@ಮುನ್ನೋಟ
ಬೆಂಗಳೂರು, ಆಗಸ್ಟ್ 24: ನಾಡೊಂದು ಏಳಿಗೆ ಹೊಂದಬೇಕಾದರೆ ಆ ನಾಡಿನ ನುಡಿಯಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಎಲ್ಲರಿಗೂ ತಲುಪುವಂತೆ ಮಾಡುವುದು ತುಂಬಾ ಮುಖ್ಯ. ಈ ನಿಟ್ಟಿನಲ್ಲಿ 'ಮುನ್ನೊಟ' ಮಳಿಗೆಯು ಪುಟ್ಟ ಹೆಜ್ಜೆಗಳನ್ನು ಇಡುತ್ತಿದ್ದು, ತಿಂಗಳಿಗೊಂದು ವಿಜ್ಞಾನ ಮತ್ತು ತಂತ್ರಜ್ಞಾನದ ವಿಷಯವೊಂದರ ಸುತ್ತ ತಿಳಿಗನ್ನಡದಲ್ಲಿ ಅರಿಮೆ@ಮುನ್ನೋಟ ಹೆಸರಿನ ಮಾತುಕತೆಯನ್ನು ಏರ್ಪಡಿಸುತ್ತಿದೆ.
ಬೆಂಗಳೂರಿನಲ್ಲಿ ಅನಿವಾಸಿ ಭಾರತೀಯರ ಬೆಳ್ಳಿಹಬ್ಬ
ಆಗಸ್ಟ್ 27 ರಂದು ಭಾನುವಾರ, ಬೆಂಗಳೂರಿನ ಬಸವನಗುಡಿಯ ಡಿವಿಜಿ ರಸ್ತೆಯಲ್ಲಿರುವ ಮುನ್ನೋಟ ಪುಸ್ತಕ ಮಳಿಗೆಯಲ್ಲಿ ನಡೆಯಲಿದೆ.
ಇಲ್ಲಿಯವರೆಗೆ ಈ ಕಾರ್ಯಕ್ರಮದಲ್ಲಿ ಬೆಳಕು, ಅಣು, ವೃತ್ತ, ತಿಯರಿ ಆಫ್ ರಿಲೇಟಿವಿಟಿ, ಗುರುತ್ವ ಕುರಿತಾದ ಮಾತುಕತೆಗಳು ಮೂಡಿಬಂದಿವೆ. ಅಲ್ಲಿ ಶಾಲಾ ಮಕ್ಕಳು, ಶಿಕ್ಷಕರು, ಕನ್ನಡದಲ್ಲೇ ವಿಜ್ಞಾನ/ತಂತ್ರಜ್ಞಾನದ ತಿಳಿವು ಕಟ್ಟಬೇಕು, ಹಂಚಬೇಕು, ತಿಳಿಯಬೇಕು ಅನ್ನುವ ಹಂಬಲವುಳ್ಳವರು ಪಾಲ್ಗೊಳ್ಳುತ್ತ ಬಂದಿದ್ದಾರೆ.
ಈ ಬಾರಿಯ ಕಾರ್ಯಕ್ರಮ ತಂತ್ರಜ್ಞಾನ ವಿಷಯದಲ್ಲಿದ್ದು, ಯಂತ್ರವೊಂದರ ಚಲನೆಯ ಅತಿ ಮುಖ್ಯ ಸಾಧನವಾಗಿರುವ ಗಿಯರ್ ಬಗ್ಗೆ ಅಟೊಮೊಬೈಲ್ ಕ್ಷೇತ್ರದಲ್ಲಿ ಹಲವಾರು ವರ್ಷಗಳ ಅನುಭವ, ಪರಿಣಿತಿ ಹೊಂದಿರುವ ಕಾರ್ತಿಕ್ ಪ್ರಭಾಕರ್ ಅವರು ಮಾತನಾಡಲಿದ್ದಾರೆ.
ಬೈಕು, ಕಾರು ಓಡಿಸಿದವರಿಗೆ ಗೊತ್ತು ಗಿಯರ್ (gear) ಬದಲಾಯಿಸೋದು ಎಷ್ಟೊಂದು ತಲೆನೋವು ಅಂತಾ. ಗಿಯರ್, ಕ್ಲಚ್ ಹಿಡಿತದಲ್ಲಿಟ್ಟುಕೊಂಡು ಗಾಡಿ ಓಡಿಸುವುದಕ್ಕೆ ಕೈಚಳಕವೇ ಸರಿ. ಶುರುವಿನಲ್ಲಿ ಮೊದಲನೇ ಗಿಯರ್ ಹಾಕಿ ಗಾಡಿ ಓಡಿಸಿದರೆ, ಜೋರಾಗಿ ಹೋಗಬೇಕೆಂದಾಗ ನಾಲ್ಕು, ಐದನೇ ಗಿಯರ್ ಬಳಸಬೇಕಾಗುತ್ತದೆ. ಗಿಯರ್ ಗಾಡಿಗಳನ್ನು ಓಡಿಸುವವರಿಗೆ ಈ ವಿಷಯ ಗೊತ್ತಾದರೂ, ಈ ಬಗೆಯ ಗಿಯರ್ ವ್ಯವಸ್ಥೆ ಗಾಡಿಯಲ್ಲಿ ಏಕಿರಬೇಕು. ಮೊದಲನೇ ಗಿಯರ್ ಹಾಕಿದಾಗ ಏನಾಗುತ್ತದೆ, ನಾಲ್ಕನೇ ಗಿಯರ್ ಏನು ಮಾಡುತ್ತಾದೆ. ಗಿಯರ್ ಬದಲಿಸುವಾಗ ಕ್ಲಚ್ ಏಕೆ ಒತ್ತಬೇಕು. ನ್ಯೂಟ್ರಲ್ ಗಿಯರ್ ಅಂದರೇನು? ಹೀಗೆ ಹಲವಾರು ಒಳ ವಿಷಯಗಳು ಗೊತ್ತಿರಲಿಕ್ಕಿಲ್ಲ.
ಈ ಕುರಿತು ತಿಳಿವಳಿಕೆಯನ್ನು ಹಂಚಿಕೊಳ್ಳಲು ಮಾತುಕತೆ ಕಾರ್ಯಕ್ರಮ ಬಸವನಗುಡಿಯಲ್ಲಿರುವ ಕನ್ನಡ ನಾಡು ನುಡಿ ಪುಸ್ತಕಗಳಿಗೆ ಮೀಸಲಾದ 'ಮುನ್ನೋಟ' ಹೊತ್ತಿಗೆ ಅಂಗಡಿಯಲ್ಲಿ ನಡೆಯಲಿದೆ. ಈ ಕಾರ್ಯಕ್ರಮವನ್ನು ಅಟೊಮೊಬೈಲ್ ಕ್ಷೇತ್ರದಲ್ಲಿ ಹಲವು ವರುಷಗಳ ಅನುಭವ ಹೊಂದಿರುವ ಕಾರ್ತಿಕ್ ಪ್ರಭಾಕರ್ ಅವರು ನಡೆಸಿಕೊಡಲಿದ್ದಾರೆ. ಆಸಕ್ತರು ಪಾಲ್ಗೊಳ್ಳಲು ಕೋರಲಾಗಿದೆ.