ಗಾಯಕ ಯೇಸುದಾಸ್ ಬಿಚ್ಚಿಟ್ಟ ದೇವರ ಅನುಗ್ರಹ ಪಡೆಯುವ ರಹಸ್ಯ
ಏಪ್ರಿಲ್ 9ರಂದು ರಾಮಸೇವಾ ಮಂಡಳಿಯ ಸಂಗೀತ ಕಾರ್ಯಕ್ರಮಕ್ಕೆ ಬಂದಿದ್ದ ಗಾಯಕ ಯೇಸುದಾಸ್ ಅವರು ದೇವರ ಅನುಗ್ರಹ ಪಡೆಯುವ ರಹಸ್ಯವನ್ನು ಬಿಚ್ಚಿಟ್ಟರು. ಅವರು ಏನು ಹೇಳಿದರು ಅನ್ನೋದು ತಿಳಿಯುವುದಕ್ಕೆ ಈ ವರದಿ ಓದಿ
ಬೆಂಗಳೂರು, ಏಪ್ರಿಲ್ 11: ಎಪ್ಪತ್ತರ ಹರೆಯದ ಯೇಸುದಾಸ್ ಹತ್ತಿ ಬಿಳುಪಿನ ತಲೆಕೂದಲು, ಗಡ್ಡದಲ್ಲಿ ಋಷಿಗಳಂತೆ ಕಾಣುತ್ತಿದ್ದರು. ತಮ್ಮ ಸಂಗೀತವನ್ನು ಆ ದೇವರು ನೀಡಿದ ವರ ಎಂದರು. ದೇವರ ಬಗ್ಗೆ ಫಿಫ್ಟಿ-ಫಿಫ್ಟಿ ಇರಲೇಬಾರದು. ಶರಣಾಗತಿಯಾದವರಿಗೆ ಅವನ ಅನುಗ್ರಹ ಆಗುತ್ತದೆ. ಅದು ಶೇ 100ರಷ್ಟು ದೇವರಲ್ಲಿ ಭಕ್ತಿ ಇದ್ದಾಗ ಮಾತ್ರ ಎಂಬ ಅವರ ಮಾತಿಗೆ ಭಾರೀ ಚಪ್ಪಾಳೆ ಕೇಳಿಬಂತು.
ಭಾನುವಾರ ರಾಮಸೇವಾ ಮಂಡಳಿಯ ಸಂಗೀತ ಕಾರ್ಯಕ್ರಮದಲ್ಲಿ ಯೇಸುದಾಸ್ ಅವರ ಸಂಗೀತದಷ್ಟೇ ಮಾತು ಸಹ ಮೋಡಿ ಮಾಡಿತು. ತಮ್ಮ ತಂದೆಯ ಮಾತನ್ನು ಇದೇ ವೇಳೆ ಸ್ಮರಿಸಿದ ಅವರು, "ನೀನು ಓದದಿದ್ದರೂ ಪರವಾಗಿಲ್ಲ. ಒಳ್ಳೆ ಸಂಗೀತಗಾರನಾಗು ಅಂತ ನನ್ನ ತಂದೆಯವರು ಹೇಳದಿದ್ದರೆ ಇಂದು ಇಂಥ ಸಂಗೀತ ಅನುಗ್ರಹ ನನಗೆ ಆಗ್ತಿತ್ತಾ? ಯಾವ ತಂದೆ ಹೀಗೆ ಹೇಳ್ತಾರೆ? ಅಂಥ ತಂದೆಯೇ ನನಗೆ ಸಿಗಲಿ ಎಂಬುದು ಕೂಡ ಆ ಭಗವಂತನ ಅನುಗ್ರಹವೇ" ಎಂದರು ಯೇಸುದಾಸ್.[ಶ್ರೀರಾಮ ಸೇವಾ ಮಂಡಳಿ ಸಂಗೀತೋತ್ಸವ ಏಪ್ರಿಲ್ 5ರಿಂದ]
ರಾಗಗಳ ವೈಶಿಷ್ಟ್ಯದ ಬಗ್ಗೆ ಕೂಡ ತುಂಬ ಸೊಗಸಾದ ವಿವರಣೆ ನೀಡಿದರು ಯೇಸುದಾಸ್. ಇನ್ನು ಅವರ ಸಂಗೀತದ ಬಗ್ಗೆ ವಿಶೇಷವಾಗಿ ಹೇಳುವ ಅಗತ್ಯ ಖಂಡಿತಾ ಇಲ್ಲ. ಆದರೂ ಒಂದು ಮಾತು. ಸಾವಿರಾರು ಜನರಿದ್ದ ಆ ಸ್ಥಳದಲ್ಲಿ ಶಿಸ್ತು ಸಾಧ್ಯವೆ ಅನ್ನೋ ಪ್ರಶ್ನೆ ಮೂಡುವಂಥ ವಾತಾವರಣ ಮೊದಲಿಗೆ ಇತ್ತು. ಆದರೆ ಸಂಗೀತ ಕಾರ್ಯಕ್ರಮ ಆರಂಭವಾಗುತ್ತಿದ್ದಂತೆಯೇ ಮಾತು-ಮೊಬೈಲ್-ಹರಟೆ ಎಲ್ಲ ಬಂದ್.
-ಅದು ಸಂಗೀತ ಹಾಗೂ ಯೇಸುದಾಸ್ ಮಿಳಿತವಾದರೆ ಅಗಬಹುದಾದ ಜಾದೂ ಇರಬೇಕು. ಮೊನ್ನೆಯ ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ಎಸ್ಸೆಂ ಕೃಷ್ಣ ಹಾಗೂ ಅವರ ಪತ್ನಿ ಪ್ರೇಮಾ ಅವರು ಕೂಡ ಹಾಜರಿದ್ದರು. ಸಾವಿರಾರು ಜನರು ಕೂರಲು ಅವಕಾಶವಿದ್ದ ಸ್ಥಳದಲ್ಲೂ ಅದೆಷ್ಟೂ ಮಂದಿ ನಿಂತೇ ಸಂಗೀತ ಕೇಳಿದರು.[ರಾಮನವಮಿ ಕಛೇರಿ ಪಾನಕ ಕೋಸಂಬರಿಗಿಂತ ಸೂಪರ್!]
ತಮ್ಮ ಬದುಕಿನ ಪಾಠಗಳನ್ನೂ ಇಷ್ಟಿಷ್ಟಾಗಿ ಹಂಚಿಕೊಂಡ ಯೇಸುದಾಸ್, ಸರಸಿಜನಾಭ ಎಂಬ ಹಾಡಿನೊಂದಿಗೆ ಕಛೇರಿ ಆರಂಭಿಸಿದರು. ಮೊದಲಿಗೆ ಮೈಕ್ ಕಿರಿ-ಕಿರಿ ಮಾಡಿದಾಗ, ನಾವು ತಲುಪುವುದೇ ಮೈಕ್ ಮೂಲಕ. ಅದೇ ಹೀಗೆ ಕೈ ಕೊಟ್ಟರೆ ಹೇಗೆ ಅಂತ ತಮಾಷೆಯ ಧಾಟಿಯಲ್ಲಿ ಕೇಳುಗರ ಕಡೆ ನೋಡಿ ನಗೆ ಚೆಲ್ಲಿದರು.[ಯೇಸುದಾಸ್ ರಿಂದ ಕೊಲ್ಲೂರಿನಲ್ಲಿ ಚಂಡಿಕಾ ಹೋಮ, ಜನ್ಮ ದಿನಾಚರಣೆ]
ಅಂದಹಾಗೆ, ಪ್ರತಿ ವರ್ಷ ನಡೆಯುವ ಬೆಂಗಳೂರಿನ ರಾಮ ಸೇವಾ ಮಂಡಳಿಯ ಸಂಗೀತ ಕೈಂಕರ್ಯಕ್ಕೆ ದೇಶದಾದ್ಯಂತ ಹೆಸರಿದೆ. ಸಂಗೀತ ಕ್ಷೇತ್ರದ ಅತಿರಥ-ಮಹಾರಥರು ಇಲ್ಲಿ ತಮ್ಮ ಸೇವೆ ಸಲ್ಲಿಸುತ್ತಾರೆ. ಜತೆಗೆ ಹೊಸ ಸಂಗೀತಗಾರರಿಗೆ ವೇದಿಕೆ ಕೂಡ ಒದಗಿಸಲಾಗುತ್ತಿದೆ.
ಈ ವರ್ಷದ ರಾಮನವಮಿ ಉತ್ಸವ ಏಪ್ರಿಲ್ 5ರಿಂದಲೇ ಶುರುವಾಗಿದೆ. ಮೊದಲ ದಿನ ಬಾಂಬೆ ಜಯಶ್ರೀ ಅವರ ಸಂಗೀತ ಸುಧೆಯಿತ್ತು. ಆದರೆ ಪ್ರತಿ ವರ್ಷದಂತೆ ಯೇಸುದಾಸ್ ಅವರ ಸಂಗೀತ ಕಾರ್ಯಕ್ರಮ ಭಾನುವಾರ ಏಪ್ರಿಲ್ 9ರಂದು ಇತ್ತು. ಟಾಕು-ಠೀಕಾಗಿ 6.45ಕ್ಕೆ ಕಾರ್ಯಕ್ರಮ ಶುರುವಾಯಿತು.