ದೇವಸ್ಥಾನದಲ್ಲಿ ನನ್ನ ಚಪ್ಪಲಿ ಕದ್ದ ಧೂರ್ತನಾರು?
ಅದ್ಯಾಕೋ ಹೋದ ಶನಿವಾರ ವಿಪರೀತ ಬೋರ್ ಆಗುತ್ತಿತ್ತು, ನಡಿ ಅತ್ಲಾಗೆ ಗುಡಿಭಂಡಾರ ಸುತ್ತಾಕೊಂಡು ಬರೋಣ ಎಂದು ಮನೆಪಕ್ಕದ ದೇವಸ್ಥಾನಕ್ಕೆ ಹೋಗಿದ್ದೆ.
ದೇವಸ್ಥಾನಕ್ಕೆ ಹೋದಾಗಲೆಲ್ಲಾ ನನ್ನ ಈ ಹಿಂದಿನ ಅನುಭವ ಇದ್ದದ್ದರಿಂದ ಚಪ್ಪಲಿ ಬಗ್ಗೆ ಯಾವತ್ತೂ ಸ್ವಲ್ಪ ಹೆಚ್ಚಿನ ಕಾಳಜಿ. ಒಂದು ಕಾಲಿನ ಚಪ್ಪಲನ್ನು ಒಂದು ಕಡೆ ಮತ್ತೊಂದು ಕಾಲಿನ ಚಪ್ಪಲನ್ನು ಇನ್ನೊಂದೆಡೆ ಇಡೋ ಅಭ್ಯಾಸವನ್ನು ಕಟ್ಟುನಿಟ್ಟಾಗಿ ರೂಢಿ ಮಾಡಿಕೊಂಡಿದ್ದೆ.
ಚಪ್ಪಲಿಯನ್ನು ಚಪ್ಪಲಿ ಬಿಡಬೇಕಾದ ಸ್ಥಳದಲ್ಲೇ ಬಿಡತಕ್ಕದ್ದು ಎಂದು ದೇವಸ್ಥಾನದಲ್ಲಿ ಬೋರ್ಡು ತಗಲಾಕಿದ್ರೂ. ಬೇರೆ ಕಡೆ ಬಿಡಲು ಚಪ್ಪಲಿ ಸ್ಟ್ಯಾಂಡ್ ನವನಿಗೆ ದುಡ್ಡು ಕೊಡಬೇಕು ಎನ್ನುವ ಜಿಪುಣತನ ನನ್ನಲ್ಲಿ ಇಲ್ಲದಿದ್ದರೂ ಅದೊಂದು ಅಭ್ಯಾಸವಾಗಿ ಬಿಟ್ಟಿತ್ತು.
ಕಾಲು ತೊಳೆದುಕೊಂಡು ದೇವ್ರಿಗೆ ಒಂದು ಸುತ್ತಾಕಿ, ಕಾಪಾಡಪ್ಪಾ ತಂದೆ ಎಂದು ದೇವರಿಗೆ ಡೈವ್ ಹೊಡೆದು ಹೊರಗೆ ಬಂದು ನೋಡುತ್ತೇನೆ, ಹತ್ತು ದಿನದ ಕೆಳಗೆ ಖರೀದಿಸಿದ್ದ ಒಂದೂವರೆ ಸಾವಿರ ರೂಪಾಯಿಯ ಚಪ್ಪಲಿ ಗಾಯಬ್.
ಸುಮ್ಮನೆ ಮನೆಯಲ್ಲಿ ಕೂತಿದ್ದರೆ ಆಗಿರೋದು, ಮನೆ ಹೊರಗೆ ಕಾಲಿಟ್ಟಿದ್ದಕ್ಕೆ ಸುಮ್ಮನೆ ಜೇಬಿಗೆ ಕತ್ತರಿ ಬಿತ್ತಲ್ಲಪ್ಪಾ ಏಳುಕುಂಡಲವಾಡಾ ಎಂದು ಎಲ್ಲೆಲ್ಲಿ ಹುಡುಕಿದರೂ, ಉಹ್ಹೂಂ.. ಚಪ್ಪಲಿ ಕಣ್ಣಿಗೆ ಬೀಳಲೊಲ್ಲದು.
ಮನಸ್ಸಿಲ್ಲದ ಮನಸ್ಸಿನಲ್ಲಿ ಚಪ್ಪಲಿ ಇಲ್ಲಿ ಇಟ್ಟಿದ್ದೆ, ನೀವೇನಾದ್ರೂ ನೋಡಿದ್ರಾ ಎಂದು ಚಪ್ಪಲಿ ಸ್ಟ್ಯಾಂಡ್ ನವನ ಬಳಿ ಕೇಳಿದೆ. ಸ್ಟ್ಯಾಂಡ್ ನಲ್ಲಿ ಇಟ್ಟಿಲ್ಲ ತಾನೇ, ಮತ್ತೆ ನಮ್ಮನ್ಯಾಕ್ರೀ ಕೇಳ್ತೀರಾ ಎಂದು ಸ್ಟ್ಯಾಂಡ್ ನವನು ವಜ್ರಮುನಿ ಲುಕ್ ಕೊಟ್ಟು ಸುಮ್ಮನಾದ.
ಸರೀ ಬಿಡಪ್ಪಾ ತಂದೇ. ಎಂದು ಅವನ ಮೇಲೆ ಸಂಶಯ ಪತಾಕೆ ಮನಸ್ಸಿನಲ್ಲೇ ಹಾರಿಸಿಕೊಂಡು ಮನೆಗೆ ಹೋಗಲು ಅಣಿಯಾದೆ.
ಆದರೆ, ಇದೇ ಮೊದಲಬಾರಿಗೆ ಈ ರೀತಿಯಾಗಿದ್ದರೆ ಹೋಗ್ಲಿ ಬಿಡು ಎಂದು ಸುಮ್ಮನಾಗಿರ ಬಹುದಾಗಿತ್ತು. ದೇವಸ್ಥಾನಕ್ಕೆ ಹೋದಾಗಲೆಲ್ಲಾ ಅವಾಗಾವಾಗ ಚಪ್ಪಲಿ ಮಾಯವಾಗುತ್ತಲ್ಲಾ why ಎಂದು ಮನಸ್ಸು ಗಿರಿಗಿಟ್ಲೆ ಹೊಡೆಯಲಾರಂಭಿಸಿತು.
ಚಪ್ಪಲಿ ಹಿಂದಿನ ರಹಸ್ಯದ ಕಿಸ್ಸಾ ಏನಿರಬಹುದು? ದೇವರಿಗೆ ನನ್ನ ಮೇಲೇ ಏನಾದರೂ ಸಿಟ್ಟಿರಬಹುದೇ ಅಥವಾ ನನ್ನ ಗ್ರಹಗತಿ ಸರಿಯಿಲ್ವೇ, ಅದೂ ಅಲ್ಲದಿದ್ದರೆ ಹೋದ ಜನ್ಮದಲ್ಲಿ ಚಮ್ಮಾರರಿಗೆ ನನ್ನಿಂದ ಏನಾದ್ರೂ ಆಗ ಬಾರದು ಆಗಿದೆಯಾ ಎನ್ನುವ ಹತ್ತು ಹಲವು ಪ್ರಶ್ನೆಗಳು ತಲೆ ಕುಟ್ಟಲಾರಂಭಿಸಿತು.
@OneindiaKannada
City
Market
hattira
iro
Apsara
mathu
Parimala
Theatre
compound
horabagada
footpath
ondu
suthu
nodi...sikru
sigabahudu!
:))
—
Shankar
(@ceeyes)
June
1,
2015
ಚಪ್ಪಲಿ ಪದೇ ಪದೇ ಕಳೆದು ಹೋಗುತ್ತಿರುವುದಕ್ಕೆ ತನಿಖೆಗೆ ಒತ್ತಾಯಿಸುವುದಕ್ಕಂತೂ ಆಗುವುದಿಲ್ಲ? ಹಾಗಂತಾ ದೇವಸ್ಥಾನಕ್ಕೆ ಹೋಗದಿರಲೂ ಆಗದು. ಇದಕ್ಕೆಲ್ಲಾ ಒಂದು ಪರಿಹಾರ ಅನ್ನೋದೇ ಇಲ್ವಾ ಎಂದು ಯೋಚಿಸುತ್ತಾ ದೇವಸ್ಥಾನದಿಂದ ಹೊರಬಂದೆ.
ಪದೇ ಪದೇ ಚಪ್ಪಲಿ ಕಳೆದು ಹೋಗುಲು ಅದರ ಹಿಂದಿನ ಕಾಣದ ಕೈಗಳು ಯಾರು, ಇದರ ಹಿಂದೆ ಏನಾದರೂ ದೊಡ್ಡ ಮಾಫಿಯಾ ಇದೆಯಾ ಎಂದು ನಾರಾಯಾಣ ಸ್ವಾಮಿ ಸ್ಟೈಲಿನಲ್ಲಿ ಯೋಚನೆ ಮಾಡುತ್ತಾ... ಮನೆಕಡೆಗೆ ವಿಷಾದದಿಂದ ನಡೆದೆ... ಪ್ರಶ್ನೆ..ಪ್ರಶ್ನೆಯಾಗಿಯೇ ಉಳಿದೋಯಿತು.
ಕಳ್ಳತನವಾಗಬಹುದು ಎಂದು ಬಗಲಿನ ಹೆಗಲುಚೀಲದಲ್ಲಿ ಚಪ್ಪಲು ಇಟ್ಟುಕೊಂಡು ದೇವಸ್ಥಾನದೊಳಗೆ ಹೋಗುವವರೂ ಇರ್ತಾರಪ್ಪಾ.. ಸಂಡೇ ಬಜಾರಿನಲ್ಲಿ ಹೋಗಿ ನೋಡು ಸಿಕ್ಕರೂ ಸಿಗಬಹುದು ಎಂದು ಸ್ನೇಹಿತ ಸಲಹೆ ಕೊಟ್ಟಿದ್ದಾನೆ. ನಿಮಗೇನಾದರೂ ಇಂಥಾ ಅನುಭವ ಆಗಿದೆಯಾ?