ಆಸ್ಪತ್ರೆಯಲ್ಲಿ ಸಿಎಂ ಯಡಿಯೂರಪ್ಪ ದಿನಚರಿ ಹೇಗಿತ್ತು ಗೊತ್ತಾ?
ಬೆಂಗಳೂರು, ಆ. 03: ಕೊರೊನಾ ವೈರಸ್ ಸೋಂಕು ದೃಢಪಟ್ಟಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಆಸ್ಪತ್ರೆಯಲ್ಲಿದ್ದಾರೆ. ಸದಾ ಚಟುವಟಿಕೆಗಳಿಂದ ಕೂಡಿರುವ, ಜನರೊಂದಿಗೆ ಬೆರೆಯುವ ವ್ಯಕ್ತಿ ಸಿಎಂ ಯಡಿಯೂರಪ್ಪ ಅವರು. ಇದೀಗ ಬಹುಶಃ ಅವರ ಜೀವನದಲ್ಲಿಯೇ ಮೊದಲ ಬಾರಿ ಐಸೋಲೇಶನ್ಗೆ ಒಳಗಾಗಿದ್ದಾರೆ. ರಾಜಕೀಯ ವ್ಯಕ್ತಿಗಳಿಗೆ ಜನ ಸಂಪರ್ಕವೇ ಶಕ್ತಿ. ಅದನ್ನು ಅವರೂ ಒಪ್ಪಿಕೊಳ್ಳುತ್ತಾರೆ ಕೂಡ. ಅನಿವಾರ್ಯವಾಗಿ ಸಿಎಂ ಯಡಿಯೂರಪ್ಪ ಅವರು ಆಸ್ಪತ್ರೆಯಲ್ಲಿ ಇರಲೇ ಬೇಕಾಗಿದೆ.
Recommended Video
ಸೋಂಕು ದೃಢಪಟ್ಟ ಬಳಿಕ ನಿನ್ನೆ ರಾತ್ರಿಯಿಂದಲೇ ಸಿಎಂ ಮಣಿಪಾಲ್ ಆಸ್ಪತ್ರೆಯಲ್ಲಿ ಕಳೆದಿದ್ದಾರೆ. ಹಾಗಾದರೆ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಇಂದಿನ ದಿನಚರಿ ಹೇಗಿತ್ತು? ಅವರು ಇವತ್ತು ಏನೇನು ಮಾಡಿದರು? ಈ ಎಲ್ಲದರ ಮಾಹಿತಿ ಇಲ್ಲಿದೆ.
ಸಿಎಂ ಆರೋಗ್ಯ ವರದಿ
ನಿನ್ನೆ ರಾತ್ರಿ ಸುಮಾರು 8.30ರ ಸುಮಾರಿಗೆ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ತಮಗೆ ಕೋವಿಡ್ ಸೋಂಕಿರುವುದು ಗೊತ್ತಾಗಿದೆ. ನಂತರ ರಾತ್ರಿ 11 ಗಂಟೆಗೆ ಸಿಎಂ ಅವರು ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ದಾಖಲಾಗುತ್ತಿದ್ದಂತೆಯೆ ಅವರಿಗೆ ಸಾಮಾನ್ಯ ಚೆಕ್ಅಪ್ ಮಾಡಲಾಗಿದೆ. ಯಡಿಯೂರಪ್ಪ ಅವರಿಗೆ ಯಾವುದೇ ರೋಗ ಲಕ್ಷಣಗಳು ಇಲ್ಲ. ಆದರೂ ತಜ್ಞವೈದ್ಯರ ಸಲಹೆಯಂತೆ ಮುಂಜಾಗ್ರತಾ ಕ್ರಮವಾಗಿ ಸಿಎಂ ಯಡಿಯೂರಪ್ಪ ಅವರು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಮುಖ್ಯಮಂತ್ರಿ ಯಡಿಯೂರಪ್ಪರಿಗೆ ಕೊರೊನಾವೈರಸ್ ಸೋಂಕು ದೃಢ
ನಿನ್ನೆ ಮಧ್ಯರಾತ್ರಿಯೇ ಮುಖ್ಯಮಂತ್ರಿಗಳ ಮೊದಲ ಆರೋಗ್ಯ ವರದಿಯನ್ನು ಬಿಡುಗಡೆ ಮಾಡಿದ್ದ ಮಣಿಪಾಲ್ ಆಸ್ಪತ್ರೆ ವೈದ್ಯರು, ಮುಖ್ಯಮಂತ್ರಿ ಯಡಿಯೂರಪ್ಪ ಅವರು ಯಾವುದೇ ರೋಗಲಕ್ಷಣಗಳನ್ನು ಹೊಂದಿಲ್ಲ. ಆದರೂ ತಜ್ಞ ವೈದ್ಯರ ತಂಡ ಅವರ ಆರೋಗ್ಯದ ನಿಗಾವಣೆ ಮಾಡುತ್ತಿದೆ ಎಂದು ಮಾಹಿತಿ ಕೊಟ್ಟಿದ್ದರು.
ಬೆಳಗಿನ ಉಪಹಾರ
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಎಷ್ಟೇ ಒತ್ತಡವಿದ್ದರೂ ಬೆಳಗಿನ ಹಾಗೂ ಸಂಜೆಯ ವಾಕಿಂಗ್ ತಪ್ಪಿಸುವುದಿಲ್ಲ. ಆದರೆ ಆಸ್ಪತ್ರೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದುದರಿಂದ ಇವತ್ತು ಬೆಳಗ್ಗೆ ವಾಕಿಂಗ್ ಮಾಡಲಿಲ್ಲ ಎನ್ನಲಾಗಿದೆ. ಜೊತೆಗೆ ಮನೆಯಿಂದಲೇ ತರಿಸಿದ್ದ ಉಪ್ಪಿಟ್ಟು, ಕಾಫಿ ಹಾಗೂ ಕಷಾಯವನ್ನು ಸೇವನೆ ಮಾಡಿದ್ದಾರೆ. ಜೊತೆಗೆ ಬಿಸಿನೀರು ಸೇವಿಸಿದ್ದಾರೆ.
ಆಸ್ಪತ್ರೆಯಲ್ಲಿದ್ದರೂ ಸಿಎಂ ಯಡಿಯೂರಪ್ಪ ಅವರು ಲವಲವಿಕೆಯಿಂದ ಇದ್ದಾರೆ. ಬೆಳಗ್ಗೆ ಪೇಪರ್ ಓದಿದ ಬಳಿಕ, ಅಧಿಕಾರಿಗಳೊಂದಿಗೆ ಮಾತನಾಡಿದ್ದಾರೆ. ಸರ್ಕಾರಿ ಕೆಲಸಗಳಿಗೆ ತೊಂದರೆ ಆಗಬಾರದು ಎಂದು ಅಧಿಕಾರಿಗಳಿಗೆ ಸಿಎಂ ಕಟ್ಟುನಿಟ್ಟಿನ ಸೂಚನೆ ಕೊಟ್ಟಿದ್ದಾರೆ. ಬಳಿಕ ನಾಡಿನ ಜನರಿಗೆ ವಿಡಿಯೋ ಮೂಲಕ ಸಂದೇಶ ಕೊಟ್ಟಿದ್ದಾರೆ.
ಓದುವ ಹವ್ಯಾಸ
ಸಿಎಂ ಯಡಿಯೂರಪ್ಪ ಅವರಿಗೆ ಓದುವ ಹವ್ಯಾಸವಿದೆ. ಬಿಡುವಿದ್ದಾಗ ಓದುತ್ತಾರಂತೆ. ಹೀಗಾಗಿ ಆಸ್ಪತ್ರೆಗೆ ಒಂದಷ್ಟು ಪುಸ್ತಕಗಳನ್ನು ಜೊತೆಗೆ ತರಿಸಿಕೊಂಡಿದ್ದಾರೆ. ಕಳೆದ ಅಂತಾರಾಷ್ಟ್ರೀಯ ಪುಸ್ತಕ ದಿನವೂ ತಮ್ಮ ಪುಸ್ತಕ ಓದುವ ಹವ್ಯಾಸದ ಬಗ್ಗೆ ಹೇಳಿದ್ದರು. ಆಸ್ಪತ್ರೆಯಲ್ಲಿ ಇನ್ನೂ ಕೆಲವು ದಿನಗಳ ಕಾಲ ಆಸ್ಪತ್ರೆಯಲ್ಲಿಯೇ ಇರಬೇಕಾದ ಅನಿವಾರ್ಯತೆ ಇರುವುದರಿಂದ ಪುಸ್ತಕಗಳ ಮೊರೆ ಹೋಗಿದ್ದಾರೆ. ಇವತ್ತೂ ಕೂಡ ಸಿಎಂ ಪುಸ್ತಕ ಓದಿದ್ದಾರೆ.
ಬಿಎಸ್ವೈಗೆ ಕೊರೊನಾ ಸೋಂಕು; ವಿಧಾನಸೌಧ ಕಚೇರಿ ಸೀಲ್ ಡೌನ್ ಇಲ್ಲ
ಗಣ್ಯರೊಂದಿಗೆ ಮಾತು
ಇನ್ನು ಅಧಿಕಾರಿಗಳಿಗೆ ಸೂಚನೆ, ನಾಡಿನ ಜನರಿಗೆ ವಿಡಿಯೋ ಸಂದೇಶ ಕೊಡುವ ಜೊತೆಗೆ ಸಿಎಂ ಯಡಿಯೂರಪ್ಪ ಅವರು ಗಣ್ಯರೊಂದಿಗೆ ದೂರವಾಣಿಯಲ್ಲಿ ಮಾತನಾಡಿದ್ದಾರೆ. ಯಡಿಯೂರಪ್ಪ ಅವರಿಗೆ ಕೊರೊನಾ ವೈರಸ್ ಸೋಂಕು ದೃಢಪಟ್ಟಿರುವುದನ್ನು ಕೇಳಿದ ಮಾಜಿ ಪ್ರಧಾನಿ ದೇವೇಗೌಡ ಅವರು ಯಡಿಯೂರಪ್ಪರಿಗೆ ಕರೆ ಮಾಡಿ ಬೇಗ ಗುಣಮುಖರಾಗುವಂತೆ ಹಾರೈಸಿದ್ದಾರೆ.
ಜೊತೆಗೆ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್, ವಿರೋಧ ಪಕ್ಷ ನಾಯಕ ಸಿದ್ದರಾಮಯ್ಯ, ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರು ಯಡಿಯೂರಪ್ಪ ಅವರಿಗೆ ದೂರವಾಣಿ ಕರೆ ಮಾಡಿ ಆರೋಗ್ಯ ವಿಚಾರಿಸಿದ್ದಾರೆ. ಅವರೊಂದಿಗೆ ಲವಲವಿಕೆಯಿಂದಲೇ ಮಾತನಾಡಿದ್ದಾರೆ.
ಮಧ್ಯಾಹ್ನದ ಊಟ
ಮುಖ್ಯಮಂತ್ರಿ ಯಡಿಯೂರಪ್ಪ ಅವರು ಮನೆಯಿಂದ ಬಂದಿದ್ದ ಊಟವನ್ನೇ ಮಧ್ಯಾಹ್ನ ಮಾಡಿದ್ದಾರೆ. ಮನೆಯಿಂದಲೇ ರಾಗಿ ಮುದ್ದೆ, ಅನ್ನ ಸಾಂಬಾರ್ ಹಾಗೂ ಎರಡು ಬಗೆಯ ಪಲ್ಯವನ್ನು ಸೇವಿಸಿದ್ದಾರೆ.
ಸಿಎಂ ಬಿ.ಎಸ್. ಯಡಿಯೂರಪ್ಪರಿಗೆ BU ನಂಬರ್ ಕೊಟ್ಟ ಬಿಬಿಎಂಪಿ
ಆಸ್ಪತ್ರೆಯಲ್ಲಿಯೇ ಊಟದ ವ್ಯವಸ್ಥೆ ಮಾಡುವುದಾಗಿ ಮಣಿಪಾಲ್ ಆಸ್ಪತ್ರೆ ವೈದ್ಯರು ಹೇಳಿದ್ದರಂತೆ. ಆದರೆ ಸಿಎಂ ಯಡಿಯೂರಪ್ಪ ಅವರು ಮನೆಯ ಊಟವನ್ನು ಮಾಡುವುದಾಗಿ ತಿಳಿಸಿದ್ದಾರೆ. ಹೀಗಾಗಿ ರಾತ್ರಿಯೂ ಮನೆಯ ಊಟವನ್ನೇ ಸಿಎಂ ಯಡಿಯುರಪ್ಪ ಸೇವಿಸಿದ್ದಾರೆ.
ಪುತ್ರಿಯ ಆರೈಕೆ
ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಆರೈಕೆ ಮಾಡುತ್ತಿದ್ದ ಪುತ್ರಿ ಪದ್ಮಾವತಿ ಅವರಿಗೂ ಸೋಂಕು ದೃಢಪಟ್ಟಿದೆ. ಹೀಗಾಗಿ ಅವರೂ ಕೂಡ ಮಣಿಪಾಲ್ ಆಸ್ಪತ್ರೆಯಲ್ಲಿಯೆ ಸಿಎಂ ಜೊತೆಗೆ ಇದ್ದಾರೆ. ಒಂದೇ ವಾರ್ಡ್ನಲ್ಲಿ ಸಿಎಂ ಹಾಗೂ ಅವರ ಪುತ್ರಿ ಪದ್ಮಾವತಿ ಅವರು ಚಿಕಿತ್ಸೆಗೆ ಒಳಗಾಗಿದ್ದಾರೆ. ಪುತ್ರಿ ಪದ್ಮಾವತಿ ಅವರಿಗೂ ಸೋಂಕಿನ ಲಕ್ಷಣಗಳು ಇಲ್ಲ. ಹೀಗಾಗಿ ಅವರೇ ತಮ್ಮ ತಂದೆಯನ್ನು ಆಸ್ಪತ್ರೆಯಲ್ಲಿ ಆರೈಕೆ ಮಾಡುತ್ತಿದ್ದಾರೆ ಎಂಬ ಮಾಹಿತಿಯಿದೆ.