ಏಪ್ರಿಲ್ 20ರ ನಂತರವೂ ಐಟಿ-ಬಿಟಿಗೆ WFH ಆಯ್ಕೆಯೇ ಬೆಸ್ಟ್: ಡಿಸಿಎಂ ಅಶ್ವಥ್
ಬೆಂಗಳೂರು, ಏಪ್ರಿಲ್ 16: ಕೊರೊನಾವೈರಸ್ ದಾಳಿ ಸಿಲುಕಿ ಹಾಟ್ ಸ್ಪಾಟ್ ಎನಿಸಿಕೊಂಡಿರುವ ಕ್ಷೇತ್ರಗಳ ಪೈಕಿ ಬೆಂಗಳೂರು ನಗರ ಜಿಲ್ಲೆಯೂ ಸೇರಿದೆ. ಬೆಂಗಳೂರಿನ ಪೂರ್ವ, ದಕ್ಷಿಣ ಜಿಲ್ಲೆಗಳ ಹಲವು ವಾರ್ಡ್ ಗಳು ರೆಡ್ ಅಲರ್ಟ್ ಜಾರಿಯಲ್ಲಿದೆ. ಕೊರೊನಾ ಲಾಕ್ಡೌನ್ ಆರಂಭವಾದಾಗಿನಿಂದ ಐಟಿ ಉದ್ಯಮವು ಡಲ್ ಆಗಿದೆ ಆದರೆ ಸ್ಥಗಿತಗೊಂಡಿಲ್ಲ. ಈ ನಿಟ್ಟಿನಲ್ಲಿ ಬೆಂಗಳೂರಿನ ಐಟಿ ಉದ್ಯಮ ಹೇಗೆ ಕಾರ್ಯನಿರ್ವಹಿಸುತ್ತಿದೆ ಎಂಬುದರ ಬಗ್ಗೆ ರಾಷ್ಟ್ರೀಯ ಸುದ್ದಿವಾಹಿನಿಯೊಂದರ ಜೊತೆ ಮಾತನಾಡುತ್ತಾ ಮಾಹಿತಿ ಮತ್ತು ತಂತ್ರಜ್ಞಾನ ಸಚಿವ ಡಾ. ಅಶ್ವಥ ನಾರಾಯಣ ಅವರು ವಿವರಿಸಿದ್ದಾರೆ.
ಕೊರೊನಾ ಹೊಡೆತಕ್ಕೆ ಐಟಿ, ಐಟಿಯೇತರ ಉದ್ಯಮದ ಆರ್ಥಿಕ ಸ್ಥಿತಿ ಹದಗೆಟ್ಟಿದ್ದರೂಕೆಲವು ಕಂಪನಿಗಳು ಸರ್ಕಾರದ ಯೋಜನೆಗಳಿಗೆ ತಾಂತ್ರಿಕ ನೆರವು ಒದಗಿಸಿ, ಸಮತೋಲನ ಕಾಯ್ದುಕೊಂಡಿವೆ. ಬಹುತೇಕ ಐಟಿ ಕಂಪನಿಗಳು ವರ್ಕ್ ಫ್ರಂ ಹೋಂ ಆಯ್ಕೆ ಮಾಡಿಕೊಂಡಿದ್ದು, ಅತ್ಯಂತ ಯಶಸ್ವಿಯಾಗಿದೆ. ಬೆಂಗಳೂರು ಐಟಿ ಕ್ಷೇತ್ರ ಈ ಕೊರೊನಾ ಕಷ್ಟಕಾಲದಲ್ಲೂ ಸಮರ್ಥವಾಗಿ ಕಾರ್ಯ ನಿರ್ವಹಿಸುತ್ತಿದೆ.
ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಆರ್ಥಿಕ ಪ್ಯಾಕೇಜ್ ಘೋಷಿಸಿ, ಬ್ಯಾಂಕ್ ಇಎಂಐ ಮುಂದೂಡಿಕೆಯಾದ ನಂತರ ಸಾಲ ಮಾಡಿಯಾದ್ರು ತುಪ್ಪ ತಿನ್ನು ಎಂಬ ಮಾತನ್ನು ವೇದವಾಕ್ಯದಂತೆ ಪಾಲಿಸಿ, ಅಪಾರ್ಟ್ಮೆಂಟ್, ಎಸ್ ಯುವಿ ಖರೀದಿಸಿದ್ದ ಟೆಕ್ಕಿಗಳು ನೆಮ್ಮದಿಯಿಂದಿದ್ದಾರೆ. ಆದರೆ, ಉದ್ಯೋಗ ಭದ್ರತೆ, ಸಂಬಳ, ಬಡ್ತಿ ಚಿಂತೆ ಕಾಡುತ್ತಿದೆ.
ಏಪ್ರಿಲ್ 20ರ ನಂತರ ಐಟಿ ಉದ್ಯಮಕ್ಕೆ ವಿನಾಯಿತಿ
ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ವಾಹನ ಸಂಚಾರಕ್ಕೆ ಸಂಬಂಧಿಸಿದಂತೆ ಸರ್ಕಾರ ಸೂಚನೆಗಳನ್ನು ಐಟಿ ಕಂಪನಿಗಳು ಪಾಲಿಸುತ್ತಿವೆ. ಐಟಿ ಕಂಪನಿಗಳು ಸರ್ಕಾರಿ ವಾಹನ ಇಲ್ಲದಿರುವಾಗ ಖಾಸಗಿ ವಾಹನ ಬಳಸಬಹುದಾಗಿದ್ದು, 50 ಸೀಟುಗಳ ಬಸ್ ಇದ್ದರೆ 20 ಮಂದಿ ಮಾತ್ರ ಒಮ್ಮೆಗೆ ಸಂಚರಿಸಲು ಅನುಮತಿ ನೀಡಲಾಗಿದೆ. ನಮ್ಮ ಮೆಟ್ರೋ, ಬಿಎಂಟಿಸಿ ಸದ್ಯಕ್ಕಂತೂ ಕಾರ್ಯಾಚರಣೆ ಇರುವುದಿಲ್ಲ.
ಸರ್ಕಾರಕ್ಕೆ ಐಟಿ ವೃತ್ತಿಪರರು ಕೂಡಾ ನೆರವಾಗುತ್ತಿದ್ದಾರೆ
ಕೊರೊನಾ ವಿರುದ್ಧದ ಹೋರಾಟದಲ್ಲಿ ಸರ್ಕಾರಕ್ಕೆ ಐಟಿ ವೃತ್ತಿಪರರು ಕೂಡಾ ನೆರವಾಗುತ್ತಿದ್ದಾರೆ. ಸರ್ಕಾರ ಮಾತ್ರವಲ್ಲ, ಸಂಸ್ಥೆಗಳು ಕೂಡಾ ಉದ್ಯೋಗಿಗಳ ಸುರಕ್ಷತ್ಗೆ ಹೆಚ್ಚಿನ ಒತ್ತು ನೀಡುತ್ತಿರುವುದರಿಂದ ವಿನಾಯಿತಿಯಿಂದ ಸಂಪೂರ್ಣ ಲಾಕ್ಡೌನ್ ಮುಗಿಯುವ ತನಕ ವರ್ಕ್ ಫ್ರಂ ಹೋಂ ಆಯ್ಕೆಯೇ ಸೂಕ್ತ ಎನಿಸುತ್ತದೆ.
ಗೃಹ ಸಚಿವಾಲಯ ಮಾರ್ಗಸೂಚಿಯನ್ನು ನೀಡಿದೆ
ಮಾರ್ಚ್ 23ರಿಂದ ಏಪ್ರಿಲ್ 14ರ ತನಕ ಮೊದಲ ಅವಧಿಯಲ್ಲಿ 21 ದಿನಗಳ ಲಾಕ್ಡೌನ್ ಅವಧಿಯನ್ನು ದೇಶ ಎದುರಿಸಿದೆ. ಈಗ ಮೇ 3ರ ತನಕ 19 ದಿನಗಳ ಲಾಕ್ಡೌನ್ ವಿಸ್ತರಣೆಯಾಗಿದೆ. ಜೊತೆಗೆ ಏಪ್ರಿಲ್ 20ರ ತನಕ ರೆಡ್ ಅಲರ್ಟ್ ಇರುವ ಹಾಟ್ ಸ್ಪಾಟ್ ಪ್ರದೇಶಗಳಲ್ಲಿ ತೀವ್ರವಾಗಿ ಅವಲೋಕನಕ್ಕೆ ಕರೆ ನೀಡಲಾಗಿದೆ. ಪರಿಸ್ಥಿತಿ ಸುಧಾರಿಸಿದರೆ ಮಾತ್ರ ಹೊಸ ಮಾರ್ಗಸೂಚಿಯ ಅನ್ವಯ ವಿನಾಯಿತಿ ನೀಡಲಾಗುತ್ತದೆ ಎಂದು ಮೋದಿ ಎಚ್ಚರಿಸಿದರು. ಮೋದಿ ಹೇಳಿದಂತೆ ಏಪ್ರಿಲ್ 15ರಂದು ಗೃಹ ಸಚಿವಾಲಯ ಮಾರ್ಗಸೂಚಿಯನ್ನು ನೀಡಿದೆ.
ವಿನಾಯಿತಿ ಸಿಕ್ಕಿರುವ ಐಟಿ, ಸಾರಿಗೆ ಸೇವೆಗಳು:
ದೂರಸಂಪರ್ಕ, ಇಂಟರ್ನೆಟ್ ಸೇವೆಗಳು, ಪ್ರಸಾರ ಮತ್ತು ಕೇಬಲ್ ಸೇವೆಗಳು. ಐಟಿ ಮತ್ತು ಐಟಿ ಸಕ್ರಿಯಗೊಳಿಸಿದ ಸೇವೆಗಳಿಗೆ ಮಾತ್ರ (ಅಗತ್ಯ ಸೇವೆಗಳಿಗೆ) ಮತ್ತು ಸಾಧ್ಯವಾದಷ್ಟು ಮನೆಯಿಂದ ಕೆಲಸ.
ಎಲ್ಲಾ ಸಾರಿಗೆ ಸೇವೆಗಳು - ವಾಯು, ರೈಲು, ರಸ್ತೆಮಾರ್ಗಗಳು - ಸ್ಥಗಿತಗೊಳ್ಳುತ್ತವೆ. ಅಗತ್ಯ ಸರಕುಗಳಿಗೆ ಮಾತ್ರ ಸಾರಿಗೆ. ಒಳನಾಡು ಮತ್ತು ರಫ್ತುಗಾಗಿ ಸರಕು / ಸರಕುಗಳ ಅಂತರ-ರಾಜ್ಯ ಚಾಲನೆ ನೀಡಲಾಗಿದೆ. ಮಿಕ್ಕಂತೆ ಸಾರ್ವಜನಿಕ ಉಪಯುಕ್ತತೆಗಳು (ಪೆಟ್ರೋಲಿಯಂ, ಸಿಎನ್ಜಿ, ಎಲ್ಪಿಜಿ, ಪಿಎನ್ಜಿ ಸೇರಿದಂತೆ), ವಿದ್ಯುತ್ ಉತ್ಪಾದನೆ ಮತ್ತು ಪ್ರಸರಣ ಘಟಕಗಳು, ಅಂಚೆ ಕಚೇರಿಗಳು, ವಿಪತ್ತು ನಿರ್ವಹಣೆ ಮತ್ತು ಮುಂಚಿನ ಎಚ್ಚರಿಕೆ ಏಜೆನ್ಸಿಗಳಿಗೆ ಮಾತ್ರ ಅನುಮತಿ ಇದೆ.